ಗ್ಯಾರಂಟಿ ಯೋಜನೆ ಜನರ ಪರವಾಗಿವೆ. ಬಿಜೆಪಿಯವರು ಇದನ್ನು ವಿರೋಧ ಮಾಡ್ತಿದ್ದಾರೆ, ಏಕಂದ್ರೆ ಮಹಿಳೆಯರಿಗೆ, ದಲಿತರಿಗೆ, ಹಿಂದುಳಿದವರಿಗೆ, ಅಲ್ಪಸಂಖ್ಯಾತರಿಗೆ ಶಕ್ತಿ ಕೊಡುತ್ತಿದ್ದೇವೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.

ಬಾಗಲಕೋಟೆ (ಮಾ.23): ನಮ್ಮ ಗ್ಯಾರಂಟಿ ಯೋಜನೆ ಜನರ ಪರವಾಗಿವೆ. ಬಿಜೆಪಿಯವರು ಇದನ್ನು ವಿರೋಧ ಮಾಡ್ತಿದ್ದಾರೆ, ಏಕಂದ್ರೆ ಮಹಿಳೆಯರಿಗೆ, ದಲಿತರಿಗೆ, ಹಿಂದುಳಿದವರಿಗೆ, ಅಲ್ಪಸಂಖ್ಯಾತರಿಗೆ ಶಕ್ತಿ ಕೊಡುತ್ತಿದ್ದೇವೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು. ಬಾಗಲಕೋಟೆ ಉಪಚುನಾವಣೆ ನಿಮಿತ್ತ ಆಯೋಜಿಸಿದ್ದ ಕಾಂಗ್ರೆಸ್ ಬಹಿರಂಗ ಸಭೆಯಲ್ಲಿ ಮಾತನಾಡಿದ ಅವರು, ಗ್ಯಾರಂಟಿಗೆ ₹1.21 ಲಕ್ಷ ಕೋಟಿ ಖರ್ಚು ಮಾಡಿದ್ದೇವೆ, ಬಿಜೆಪಿಯವರು ಏನೂ ಮಾಡಲಿಲ್ಲ, ಮುಳುಗಡೆ ಜನರಿಗೆ 3ನೇ ಹಂತದಲ್ಲಿ ಪರಿಹಾರ ಕೊಡಲಿಲ್ಲ, ಅಪಪ್ರಚಾರ ಮಾಡೋದರಲ್ಲಿ ಬಿಜೆಪಿಯವರು ನಿಸ್ಸೀಮರು. ಯಡಿಯೂರಪ್ಪ, ಜಗದೀಶ ಶೆಟ್ಟರ್ ಸೇರಿ ಬಿಜೆಪಿಗರು ಸಿಎಂ ಆಗಿ ಕೆಲಸ ಮಾಡಿದರು.

ನುಡಿದಂತೆ ನಡೆದ್ರಾ, ಬಿಜೆಪಿಯವರು ಕೇವಲ 10 ಪರ್ಸೆಂಟ್್ ಭರವಸೆ ಜಾರಿ ಮಾಡಲಿಲ್ಲ, ಬಿಜೆಪಿ ಅಧಿಕಾರಿದ್ದಾಗ ಯಾಕೆ ಜಾರಿ ಮಾಡಲಿಲ್ಲ ಎಂದು ಪ್ರಶ್ನೆ ಮಾಡಿದರು. ಈ ಕಾಲೇಜ್ (ವೈದ್ಯಕೀಯ ಕಾಲೇಜು) ಮಾಡಲು ಮೇಟಿ ಅವರೇ ಕಾರಣ. ಕಾಲೇಜು ಬಿಟ್ರೆ ಮೇಟಿ ಏನೂ ಕೇಳಲಿಲ್ಲ. ಕಾಲೇಜಿಗೆ ಈಗ ಶಂಕು ಸ್ಥಾಪನೆ ಮಾಡಿದ್ದೇವೆ. ಆದರೆ ದುರ್ದೈವ ಈಗ ಮೇಟಿ ಅವರಿಲ್ಲ. ನಮ್ಮ ಶಾಸಕರ ಜೊತೆ ಚರ್ಚೆ ಮಾಡಿ ಮುಳುಗಡೆ ಸಂತ್ರಸ್ತರಿಗೆ ಪರಿಹಾರ ಘೋಷಿಸಿದ್ದೇವೆ. ನೀರಾವರಿಗೆ ₹40 ಲಕ್ಷ, ಒಣಭೂಮಿಗೆ ₹30 ಲಕ್ಷ ಘೋಷಣೆ ಮಾಡಿದ್ದೇವೆ. ಈ ವರ್ಷ ಎಷ್ಟು ದುಡ್ಡು ಬೇಕಾಗುತ್ತೋ ಅಷ್ಟು ಪರಿಹಾರ ಕೊಟ್ಟೆ ಕೊಡುತ್ತೇವೆ. ಬಿಜೆಪಿಗೆ ಯಾವ ನೈತಿಕತೆ ಇದೆ? ಕಾಂಗ್ರೆಸ್‌ ಮಾತ್ರ ಜನರ ಪಕ್ಷ ಎಂದು ಹೇಳಿದರು.

ತಬ್ಬಲಿ ಮಗ ನಿಮ್ಮ ಜೋಳಿಗೆಗೆ ಹಾಕ್ತಿದ್ದೀವಿ

ತಬ್ಬಲಿ ಮಗ ಇವನನ್ನ (ಉಮೇಶ್‌ನ ಕಡೆ ನೋಡುತ್ತಾ) ನಿಮ್ಮ ಜೋಳಿಗೆಗೆ ಹಾಕ್ತಾ ಇದ್ದೇವೆ. ಇವರಿಗೆ ಆಶೀರ್ವಾದ ಮಾಡೋದು ನಿಮ್ಮ ಜವಾಬ್ದಾರಿ. ಬಿಜೆಪಿಯ ಚರಂತಿಮಠ ಬಳಿ ದುಡ್ಡಿರಬಹುದು. ನೀವೆಲ್ಲಾ ಯಾವ ಆಮಿಷಕ್ಕೆ ಒಳಗಾಗಬೇಡಿ. ಚರಂತಿಮಠರ ಸಹೋದರ ಮಲ್ಲಿಕಾರ್ಜುನ ಈ ಬಾರಿ ಉಮೇಶ ಗೆಲ್ಲಿಸಬೇಕೆಂದು ಪಣ ತೊಟ್ಟಿದ್ದಾರೆ. ಉಮೇಶ ಗೆಲ್ಲಿಸಿ ವಿಧಾನಸಭಗೆ ಕಳಿಸಿ ಮೇಟಿ ಅವರ ಆತ್ಮಕ್ಕೆ ಶಾಂತಿ ಸಿಗುವಂತೆ ಮಾಡಬೇಕು. ನಾಲ್ಕೈದು ದಿನ ಇಲ್ಲೇ ಇರತ್ತೇನೆ. ಹಳ್ಳಿ ಹಳ್ಳಿಗೂ ಬರ್ತೀನಿ, ಪ್ರತಿ ವಾರ್ಡ್‌ಗೂ ಬರ್ತೀನಿ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದರು.

ರಾಜ್ಯದಲ್ಲಿ ಎರಡು ಉಪಚುನಾವಣೆ ನಡೆಯುತ್ತಿವೆ. ಎರಡೂ ಕ್ಷೇತ್ರದಲ್ಲಿ ಕಳೆದ ಚುನಾವಣೆಯಲ್ಲಿ ನಾವು ಗೆದ್ದಿದ್ದೇವು. ಶಾಮನೂರ ಶಿವಶಂಕರಪ್ಪ ಮತ್ತು ಎಚ್.ವೈ. ಮೇಟಿ ಗೆದ್ದಿದ್ದರು. ಇಬ್ಬರು ಅಕಾಲಿಕವಾಗಿ ಅಗಲಿದ್ದಾರೆ. ಆಸ್ಪತ್ರೆಯಲ್ಲಿ ಮೇಟಿ ಹೇಳಿದ್ರು, ನಾನು ಸಾಯಲ್ಲ, ಇರ್ತೇನೆ ಎಂದು, ನಾನು ನಿರೀಕ್ಷೆ ಮಾಡಿರಲಿಲ್ಲ. ಮೇಟಿ ಅವರು 5 ಸಾರಿ ಶಾಸಕ, ಒಮ್ಮೆ ಸಂಸದ, ಎರಡು ಬಾರಿ ಸಚಿವರಾಗಿದ್ದರು. ಯಾವಾಗಲೂ ಬಡವರ, ಹಿಂದುಳಿದ, ದಲಿತ, ರೈತರ ಪರವಾಗಿದ್ದರು. ಜಾತ್ಯತೀತ ವ್ಯಕ್ತಿ ಎನ್ನುವುದಕ್ಕೆ ಹೆಮ್ಮೆ ಅನಿಸುತ್ತಿದೆ. ಸಮಾಜದ ದುರ್ಬಲರ ಪರ ಧ್ವನಿ ಎತ್ತುವ ಕೆಲಸ ಮಾಡಿದ್ದರು ಎಂದು ಹೇಳಿದರು.

ಮೇಟಿ ಅವರು ಲಾಯಲ್ ಆಗಿ ಇದ್ದ ವ್ಯಕ್ತಿ. ಅಂತಹ ವ್ಯಕ್ತಿ ಕಳೆದುಕೊಂಡು ಉಪಚುನಾವಣೆ ಬಂದಿದೆ. ಕ್ಯಾಂಡಿಡೇಟ್ ಮಾಡಬೇಕೆಂದಾಗ ಮೇಟಿ ಮನೆತನಕ್ಕೆ ಟಿಕೆಟ್ ಕೊಡಬೇಕೆಂದು ನಿರ್ಧಾರ ಮಾಡಿದೆವು. ಹೈಕಮಾಂಡ್ ಹೇಳೋರು ಅಭ್ಯರ್ಥಿ ಆಗಬೇಕು ಅಂದೆ. ಅದಕ್ಕೆ ನಾಲ್ವರು ಒಪ್ಪಿಕೊಂಡರು. ಕೊನೆಯಲ್ಲಿ ಉಮೇಶ ಮೇಟಿಗೆ ಕೊಡೋಣ ಎಂದು ನಿರ್ಧಾರ ಮಾಡಿದ್ದೇವೆ. ಮೇಟಿ ಅವರಿಗೆ ಗೌರವ ಬರಬೇಕಾದರೆ, ಶಾಂತಿ ಸಿಗಬೇಕಾದರೆ, ನೀವೆಲ್ಲ ಕೂಡಿ ಉಮೇಶ್ ಗೆಲ್ಲಿಸಿದಾಗ ಮಾತ್ರ ಮೇಟಿ ಅವರ ಆತ್ಮಕ್ಕೆ ಶಾಂತಿ ಸಿಗುತ್ತದೆ ಎಂದು ಹೇಳಿದರು.