Mandya ಹೈವೋಲ್ಟೇಜ್ ನಾಗಮಂಗಲ ಕ್ಷೇತ್ರದಲ್ಲಿ ತ್ರಿಕೋನ ಸ್ಪರ್ಧೆ, ಶಿವರಾಮೇಗೌಡ ಭರ್ಜರಿ ಸಿದ್ದತೆ
ಜೆಡಿಎಸ್ನಿಂದ ಉಚ್ಚಾಟನೆಗೊಂಡ ಬಳಿಕ ಮಾಜಿ ಸಂಸದ ಶಿವರಾಮೇಗೌಡ ಮತ್ತಷ್ಟು ರೆಬಲ್ ಆಗಿದ್ದಾರೆ. ಉಚ್ಚಾಟನೆ ಬಳಿಕ ಸ್ವತಂತ್ರ ಸ್ಪರ್ಧೆಗೆ ನಿರ್ಧರಿಸಿದ್ದಾರೆ. ಇದಕ್ಕಾಗಿ ಭರ್ಜರಿ ತಯಾರಿ ನಡೆಸುತ್ತಿದ್ದಾರೆ.
ವರದಿ : ನಂದನ್ ರಾಮಕೃಷ್ಣ, ಏಷ್ಯಾನೆಟ್ ಸುವರ್ಣ ನ್ಯೂಸ್,
ಮಂಡ್ಯ(ಎ.26): ಜೆಡಿಎಸ್ನಿಂದ (JDS) ಉಚ್ಚಾಟನೆಗೊಂಡ ಬಳಿಕ ಮಾಜಿ ಸಂಸದ ಶಿವರಾಮೇಗೌಡ ( Shivarame Gowda) ಮತ್ತಷ್ಟು ರೆಬಲ್ ಆಗಿದ್ದಾರೆ. ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಪಕ್ಷೇತರ ಸ್ಪರ್ಧೆಗೆ ಶಿವರಾಮೇಗೌಡ ನಿರ್ಧರಿಸಿದ್ದು, ನಾಗಮಂಗಲದಲ್ಲಿ ಜೆಡಿಎಸ್ - ಕಾಂಗ್ರೆಸ್ (JDS-congress) ನಾಯಕರಿಗೆ ಟಕ್ಕರ್ ನೀಡಲಿದ್ದಾರೆ.
ಸ್ವಗೃಹ ನಿರ್ಮಾಣ, ನಿತ್ಯ ಕ್ಷೇತ್ರ ಪ್ರವಾಸ : ದಳಪತಿಗಳ ವಿರುದ್ಧ ಶಿವರಾಮೇಗೌಡ ಮಾತನಾಡಿದ್ದರು ಎನ್ನಲಾದ ಆಡಿಯೋ ವೈರಲ್ ಬಳಿಕ ಶಿವರಾಮೇಗೌಡರನ್ನ ಪಕ್ಷದಿಂದ ಉಚ್ಚಾಟಿಸಿ ಜೆಡಿಎಸ್ ನಾಯಕರು ಆದೇಶಿಸಿದ್ದರು. ಅಲ್ಲಿವರೆಗೂ ಮುಂದಿನ ಚುನಾವಣೆಗೆ ಜೆಡಿಎಸ್ನಿಂದ ನಾನು ಆಕಾಂಕ್ಷಿ ಎನ್ನುತ್ತಿದ್ದ ಶಿವರಾಮೇಗೌಡ ಉಚ್ಚಾಟನೆ ಬಳಿಕ ಸ್ವತಂತ್ರ ಸ್ಪರ್ಧೆಗೆ ನಿರ್ಧರಿಸಿದ್ದಾರೆ.
ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ - ಜೆಡಿಎಸ್ಗೆ ಮಣ್ಣು ಮುಕ್ಕಿಸಲು ಪ್ಲಾನ್ ಮಾಡಿರುವ LRS ಕ್ಷೇತ್ರಾದ್ಯಂತ ಭರ್ಜರಿ ಪ್ರವಾಸ ಮಾಡ್ತಿದ್ದಾರೆ. ಪ್ರತಿನಿತ್ಯ ಹಳ್ಳಿ ಹಳ್ಳಿಗೆ ಭೇಟಿ ನೀಡುತ್ತಿರುವ ಅವರು ನಾಗಮಂಗಲದಲ್ಲಿ ಸ್ವಗೃಹ ನಿರ್ಮಿಸಿ ಕ್ಷೇತ್ರದಲ್ಲೇ ಟಿಕಾಣಿ ಹೂಡಲು ತೀರ್ಮಾನಿಸಿದ್ದಾರೆ. ಅದರಂತೆ ನಾಗಮಂಗಲ ಹೊರಹೊಲಯದಲ್ಲಿ ಸ್ವಗೃಹ ನಿರ್ಮಾಣಕ್ಕೆ ಭೂಮಿ ಪೂಜೆಯನ್ನು ನೆರವೇರಸಿದ್ದಾರೆ.
ಡಿಕೆಶಿ ಜತೆಗೆ ದಿವ್ಯಾ ಹಾಗರಗಿ ಫೋಟೋ ವೈರಲ್: ಸಾಮಾಜಿಕ ಜಾಲತಾಣದಲ್ಲಿ ಬಿಸಿ-ಬಿಸಿ ಚರ್ಚೆ
ತ್ರಿಕೋನ ಸ್ಪರ್ಧೆಯತ್ತ ನಾಗಮಂಗಲ: ಮಂಡ್ಯ ಜಿಲ್ಲೆಯ ವಿಧಾನಸಭಾ ಕ್ಷೇತ್ರಗಳ ಪೈಕಿ ನಾಗಮಂಗಲ ಕ್ಷೇತ್ರ ಬಹಳ ವಿಶೇಷ. ಇಲ್ಲಿನ ರಾಜಕಾರಣ ಹಲವಾರು ವಿಷಯಗಳಿಗೆ ಗಮನ ಸೆಳೆಯುತ್ತದೆ. ಇಷ್ಟು ವರ್ಷಗಳ ಕಾಲ ನೇರಾ ನೇರ ಸ್ಪರ್ಧೆ ಏರ್ಪಡುತ್ತಿದ್ದ ನಾಗಮಂಗಲದಲ್ಲಿ ಈ ಬಾರಿ ತ್ರಿಕೋನ ಸ್ಪರ್ಧೆ ಎದರುರಾಗುವ ಸಾಧ್ಯತೆ ಇದೆ. ಯಾಕೆಂದರೆ ಕಾಂಗ್ರೆಸ್ ಜೆಡಿಎಸ್ ಅಭ್ಯರ್ಥಿಗಳ ವಿರುದ್ಧ ಪಕ್ಷೇತರವಾಗಿ 2 ಬಾರಿ ಆಯ್ಕೆಯಾಗಿದ್ದ ಶಿವರಾಮೇಗೌಡ ಮತ್ತೆ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕೆ ಇಳಿಯಲಿದ್ದಾರೆ. ಶಿವರಾಮೇಗೌಡ ಸ್ಪರ್ಧೆ ಉಭಯ ಪಕ್ಷಗಳಿಗೆ ಸವಾಲು ಒಡ್ಡುವ ಸಾಧ್ಯತೆಗಳು ಹೆಚ್ಚಾಗಿವೆ.
ಬಿಜೆಪಿ ಮೆಗಾ ಪ್ಲಾನ್, ಗೌಡರ ಕೋಟೆ ಗೆಲ್ಲೋದಕ್ಕೆ ಮಂಡ್ಯ ಗೌಡ್ತಿಯೇ ಸೇನಾಧಿಪತಿ?
ಚಲುವರಾಯಸ್ವಾಮಿ, ಸುರೇಶ್ ಗೌಡ ನನಗೆ ರಾಜಕೀಯ ಬದ್ಧ ವೈರಿಗಳು: ಮುಂದಿನ ಚುನಾವಣೆಯಲ್ಲಿ ಸ್ವತಂತ್ರ ಸ್ಪರ್ಧೆಗೆ ನಿರ್ಧರಿಸಿರುವ LRS ಚೆಲುವರಾಯಸ್ವಾಮಿ (N Cheluvarayaswamy) , ಸುರೇಶ್ ಗೌಡ ನನಗೆ ರಾಜಕೀಯ ಬದ್ಧ ವೈರಿಗಳು ಎಂದಿದ್ದಾರೆ. ನಾಗಮಂಗಲದಲ್ಲಿ ಮಾತನಾಡಿರುವ ಅವರು ಏಕಕಾಲದಲ್ಲಿ ಬದ್ಧ ವೈರಿಗಳನ್ನ ಸೋಲಿಸುವ ಅವಕಾಶ ನನಗೀಗ ಬಂದಿದೆ. ನಾನು ಈಗ ಫ್ರೀ ಬರ್ಡ್, ನನಗೆ ಪಕ್ಷ ಸೂಟ್ ಆಗಲ್ಲ ಅಂತ ಜನರೇ ಹೇಳ್ತಿದ್ದಾರೆ. ಪ್ರತಿ ಹಳ್ಳಿಯಲ್ಲೂ ಕಾಂಗ್ರೆಸ್-ಜೆಡಿಎಸ್ ಎರಡು ಪಕ್ಷದ ಕಾರ್ಯಕರ್ತರೂ ಬೆಂಬಲ ಕೊಡ್ತಿದ್ದಾರೆ. ಪಕ್ಷೇತರ ಸ್ಪರ್ಧೆ ಮಾಡುವುದು ನಿರ್ಧಾರವಾಗಿದೆ. ನನ್ನ ಸ್ಪರ್ಧೆ ಕೆಲವರಿಗೆ ಲಾಭ ಆಗಬಹುದು ಎಂದು ತಿಳಿದಿದ್ದಾರೆ.
ನಾನು ಚೆಲುವರಾಯಸ್ವಾಮಿ, ಸುರೇಶ್ ಗೌಡ ಇಬ್ಬರ ಮತವನ್ನು ಪಡೆಯುತ್ತೇನೆ. ಪ್ರತಿ ಊರಲ್ಲೂ ಮೂರು ತಂಡ ರಚಿಸುತ್ತೇನೆ. ಅವರಿಬ್ಬರಂತೆ ನನ್ನ ತಂಡ ಇರುವಂತೆ ಮಾಡುತ್ತೇನೆ. ಅವರ ತಂಡ ಇಲ್ಲದಿದ್ರು ನನ್ನ ಪರವಾದ ತಂಡ ಇರಲೆಬೇಕು. ಈ ಕ್ಷೇತ್ರ ಬಿಟ್ಟು ಹೋಗಲ್ಲ ಎಂದು ಹೇಳಲು ನಾನು ಮನೆ ಮಾಡ್ತಿರೋದು. ಚುನಾವಣೆ ಮುಗಿಯುವವರೆಗೂ ನಿದ್ದೆ ಮಾಡುವುದಿಲ್ಲ, ಹೋರಾಟ ನಿರಂತರ ಎಂದರು.