20 ತಿಂಗಳು ಸಚಿವರಾದವರ ಕೈ ಬಿಟ್ಟು ಆಗುತ್ತಾ ಹೊಸ ಸಚಿವ ಸಂಪುಟ..?
ರಾಜ್ಯದಲ್ಲಿ ನೂತನ ಸಚಿವ ಸಂಪುಟಕ್ಕೆ ಈ ಬಾರಿ ಬೇಡಿಕೆ ಇಡಲಾಗಿದೆ. 20 ತಿಂಗಳು ಸಚಿವರಾದವರನ್ನು ಕೈ ಬಿಟ್ಟು ಹೊಸಬರಿಂದ ಸಂಪುಟ ರಚನೆ ಮಾಡುವ ಬಗ್ಗೆ ಬೇಡಿಕೆ ಮುಂದಿಡಲಾಗಿದೆ.
ಬೆಂಗಳೂರು (ಜ.20): ರಾಜ್ಯದಲ್ಲಿ ಸಚಿವಾಕಾಂಕ್ಷಿಗಳ ಅಸಮಾಧಾನ ಇನ್ನೂ ನಿಂತಿಲ್ಲ. ಶಾಸಕರಾದ ತಿಪ್ಪಾರೆಡ್ಡಿ, ಶಿವನಗೌಡ ನಾಯಕ್ ತಮಗೆ ಸಚಿವ ಸ್ಥಾನ ಸಿಗದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದು, ಇಪ್ಪತ್ತು ತಿಂಗಳು ಸಚಿವರಾದವರನ್ನು ಕೈಬಿಟ್ಟು ಹೊಸ ಸಂಚಿವ ಸಂಪುಟ ರಚಿಸಬೇಕೆಂದು ಆಗ್ರಹಿಸಿದ್ದಾರೆ.
ವಿಧಾನಸೌಧದಲ್ಲಿ ಮಂಗಳವಾರ ಪ್ರತ್ಯೇಕವಾಗಿ ಸುದ್ದಿಗಾರರೊಂದಿಗೆ ಮಾತನಾಡಿದ ಈ ಇಬ್ಬರೂ ಶಾಸಕರು ಹಳಬರನ್ನು ಸಂಪುಟದಿಂದ ಕೈಬಿಟ್ಟು ಹೊಸಬರಿಗೆ ಅವಕಾಶ ನೀಡಿದರೆ ಮಾತ್ರ ಸರ್ಕಾರವೂ ಉತ್ತಮವಾಗಿ ನಡೆಯುತ್ತೆ. ಜೊತೆಗೆ ಮುಂದಿನ ಚುನಾವಣೆಯಲ್ಲೂ ಬಿಜೆಪಿ 150 ಸ್ಥಾನ ಗೆಲ್ಲಲು ಸಹಕಾರಿಯಾಗಲಿದೆ ಎಂದು ಹೇಳಿದ್ದಾರೆ.
ಶಿವನಗೌಡ ನಾಯಕ್ ಮಾತನಾಡಿ, ಇಪ್ಪತ್ತು ತಿಂಗಳು ಸಚಿವರಾದವರನ್ನು ಕೈಬಿಟ್ಟು, ಇಡೀ ಸಂಪುಟವನ್ನೇ ಹೊಸದಾಗಿ ರಚಿಸಬೇಕು. ಸಚಿವ ಸ್ಥಾನದಿಂದ ಕೈಬಿಟ್ಟವರಿಗೆ ಪಕ್ಷ ಸಂಘಟನೆ ಜವಾಬ್ದಾರಿ ಕೊಡಬೇಕು. ಹೊಸಬರಿಗೆ ಸಂಪುಟದಲ್ಲಿ ಹಿರಿತನದ ಆಧಾರದ ಮೇಲೆ ಅವಕಾಶ ಕೊಡಬೇಕು. ಪಕ್ಷ ನಿಷ್ಠೆ, ಜಿಲ್ಲಾ ಪ್ರಾತಿನಿಧ್ಯ ಹಾಗೂ ಸಾಮಾಜಿಕ ನ್ಯಾಯದಡಿ ಕೊಡಬೇಕೆಂಬುದು ನಮ್ಮ ಎಲ್ಲಾ ಶಾಸಕರ ಅಭಿಪ್ರಾಯವಾಗಿದೆ. ಇದಕ್ಕೆ ನನ್ನ ಸಹಮತವೂ ಇದೆ ಎಂದರು.
ನಿರಾಣಿಗೆ ಮಂತ್ರಿಗಿರಿ ಕೊಡಿಸಿದ್ದೇ ಇವರು, ಕೇಸರಿ ಕೋಟೆಯೊಳಗೆ ರೋಚಕ ಆಪರೇಶನ್..!
ತಿಪ್ಪಾರೆಡ್ಡಿ ಮಾತನಾಡಿ, ಹೊಸಬರಿಗೆ ಸಂಪುಟದಲ್ಲಿ ಅವಕಾಶ ನೀಡಿದರೆ ಮಾತ್ರ ಸರ್ಕಾರ ಉತ್ತಮವಾಗಿ ನಡೆಯುತ್ತದೆ. ಜೊತೆಗೆ ಮುಂದಿನ ಚುನಾವಣೆಯಲ್ಲಿ ಪಕ್ಷ 150 ಸ್ಥಾನ ಗೆಲ್ಲಲು ಸಾಧ್ಯ ಎಂದರು.
ಇದೇ ವೇಳೆ ಚಿತ್ರದುರ್ಗ ಜಿಲ್ಲಾ ಉಸ್ತುವಾರಿ ಸಚಿವರೂ ಆದ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಚಿವ ಶ್ರೀರಾಮುಲು ಕಾರ್ಯವೈಖರಿ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ ತಿಪ್ಪಾರೆಡ್ಡಿ, ನಮ್ಮ ಜಿಲ್ಲಾ ಉಸ್ತುವಾರಿ ಸಚಿವರು ಕೇವಲ ಸರ್ಕಾರದ ಕಾರ್ಯಕ್ರಮಗಳಲ್ಲಿ ಭಾಗಿಯಾಗುತ್ತಾರೆ. ಬೇರೆ ಕಾರ್ಯಕ್ರಮಗಳಲ್ಲಿ ಮುತುವರ್ಜಿ ವಹಿಸುತ್ತಿಲ್ಲ. ಅವರಿಗೆ ಬಳ್ಳಾರಿ ಜಿಲ್ಲೆಯ ಮೇಲಿರುವಷ್ಟುಆಸಕ್ತಿ ನಮ್ಮ ಜಿಲ್ಲೆಯ ಮೇಲಿಲ್ಲ ಎಂದರು.