ಡಿಕೆಶಿ ಸೂಚನೆ :ಶಿರಾದಲ್ಲಿ ಇವರಿಗೆ ಕಾಂಗ್ರೆಸ್ ಟಿಕೆಟ್ ಪಕ್ಕಾ?
ಶೀಘ್ರದಲ್ಲೇ ತುಮಕೂರು ಉಪ ಚುನಾವಣೆ ನಡೆಯುವ ಸಾಧ್ಯತೆ ಇದ್ದು, ಟಿಕೆಟ್ ಹಂಚಿಕೆ ಈ ವ್ಯಕ್ತಿಗೆ ಬಹುತೇಕ ಪಕ್ಕಾ ಆದಂತಿದೆ.. ಯಾರಿಗೆ ಸಿಗಲಿದೆ ಕೈ ಟಿಕೆಟ್?
ಬೆಂಗಳೂರು (ಸೆ.15): ತುಮಕೂರು ಜಿಲ್ಲೆಯ ಶಿರಾ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಯಾರೇ ಕಾಂಗ್ರೆಸ್ ಅಭ್ಯರ್ಥಿಯಾದರೂ ಅವರಿಗೆ ಬೆಂಬಲ ನೀಡುವಂತೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ಮಧುಗಿರಿ ಮಾಜಿ ಶಾಸಕ ಕೆ.ಎನ್. ರಾಜಣ್ಣ ಅವರಿಗೆ ಸೂಚನೆ ನೀಡಿದ್ದಾರೆ.
ಕೊರೋನಾ ಸೋಂಕಿನಿಂದ ಗುಣಮುಖರಾಗಿ ಸದಾಶಿವನಗರ ನಿವಾಸದಲ್ಲಿ ಕ್ವಾರಂಟೈನ್ನಲ್ಲಿರುವ ಶಿವಕುಮಾರ್ ಅವರು ತಮ್ಮ ನಿವಾಸದಲ್ಲೇ ಕೆ.ಎನ್. ರಾಜಣ್ಣ ಅವರೊಂದಿಗೆ ಸಭೆ ನಡೆಸಿದರು. ಈ ವೇಳೆ, ‘ಪಕ್ಷದ ಅಭ್ಯರ್ಥಿಗೆ ಎಲ್ಲಾ ರೀತಿಯ ಸಹಕಾರ ನೀಡಬೇಕು’ ಎಂದು ತಿಳಿಸಿದರು.
ಶಿರಾ ಭಿನ್ನಮತ ಕಾಂಗ್ರೆಸ್ಗೆ ತಲೆನೋವು ...
ಶಿರಾ ಕ್ಷೇತ್ರದಲ್ಲಿ ಪರಾಜಿತಗೊಂಡಿರುವ ಮಾಜಿ ಸಚಿವ ಟಿ.ಬಿ. ಜಯಚಂದ್ರ ಅವರಿಗೆ ಬಹುತೇಕ ಕಾಂಗ್ರೆಸ್ ಟಿಕೇಟ್ ಅಂತಿಮ ಎನ್ನಲಾಗುತ್ತಿದೆ. ಆದರೆ, ಇದಕ್ಕೆ ರಾಜಣ್ಣ ಆಕ್ಷೇಪ ವ್ಯಕ್ತಪಡಿಸುವ ಸೂಚನೆಯಿದ್ದ ಕಾರಣ ಅವರನ್ನು ಕರೆಸಿ ಶಿವಕುಮಾರ್ ಈ ಸೂಚನೆ ನೀಡಿದ್ದಾರೆ ಎಂದು ತಿಳಿದುಬಂದಿದೆ.
ಈ ವೇಳೆ ರಾಜಣ್ಣ ಸಹ ಜಯಚಂದ್ರ ಅವರ ಕುರಿತು ತಮ್ಮ ಅಸಮಾಧಾನ ಹೊರ ಹಾಕಿದರು ಎಂದು ತಿಳಿದುಬಂದಿದೆ.