Asianet Suvarna News Asianet Suvarna News

Dharwad| ಪರಿಷತ್‌ ಚುನಾವಣಾ ಕಣಕ್ಕೆ ಶಂಕರಣ್ಣ ಮುನವಳ್ಳಿ: ಯಾವ ಪಕ್ಷದಿಂದ ಸ್ಪರ್ಧೆ?

*   ಶಂಕರಣ್ಣ ಉತ್ತರ ಕರ್ನಾಟಕ ಭಾಗದ ಲಿಂಗಾಯತರ ಪ್ರಮುಖ ಮುಖಂಡ
*   ಪರಿಷತ್ ಚುನಾವಣೆ ಮೂಲಕ ಮತ್ತೆ ಮುನ್ನೆಲೆಗೆ ಬರಲಿರುವ ಶಂಕರಣ್ಣ 
*   ಯಾವ ಪಕ್ಷದಿಂದ ಕಣಕ್ಕಿಳಿಯುತ್ತಾರೆ ಎಂಬುದೇ ದೊಡ್ಡ ಪ್ರಶ್ನೆ
 

Shankaranna Munavalli Contest from Which Party in Vidhan Parishat Election grg
Author
Bengaluru, First Published Nov 18, 2021, 2:10 PM IST

ಹುಬ್ಬಳ್ಳಿ(ನ.18):  ಸ್ಥಳೀಯ ಸಂಸ್ಥೆಗಳಿಂದ ವಿಧಾನ ಪರಿಷತ್‌ಗೆ(Vidhan Parishat) ನಡೆಯುವ ಚುನಾವಣೆ ದಿನದಿಂದ ದಿನಕ್ಕೆ ರಂಗೇರುತ್ತಿದೆ. ಅಚ್ಚರಿಯ ಬೆಳವಣಿಗೆಯೊಂದರಲ್ಲಿ ಕೆಎಲ್‌ಇ ಸಂಸ್ಥೆಯ ನಿರ್ದೇಶಕ, ಲಿಂಗಾಯತ ಸಮುದಾಯ ಪ್ರಮುಖ ಮುಖಂಡ ಶಂಕರಣ್ಣ ಮುನವಳ್ಳಿ(Shankaranna Munavalli) ಚುನಾವಣಾ ಕಣಕ್ಕಿಳಿಲಿದ್ದಾರೆ ಎಂಬ ಸುದ್ದಿಯೊಂದು ಭಾರೀ ಬಿರುಗಾಳಿ ಎಬ್ಬಿಸಿದೆ.

ಉತ್ತರ ಕರ್ನಾಟಕ(North Karnataka) ಭಾಗದ ಲಿಂಗಾಯತ(Lingayat) ಪ್ರಮುಖ ಮುಖಂಡರ ಪೈಕಿ ಶಂಕರಣ್ಣ ಮುನವಳ್ಳಿ ಒಬ್ಬರಾಗಿ ಗುರುತಿಸಿಕೊಂಡವರು. ಕೆಎಲ್‌ಇ ಸಂಸ್ಥೆಯ(KLE Institute) ನಿರ್ದೇಶಕ ಮಂಡಳಿಯಲ್ಲೂ ಇದ್ದಾರೆ. ಸದ್ಯ ಬಿಜೆಪಿಯಲ್ಲಿ(BJP) ಗುರುತಿಸಿಕೊಂಡಿದ್ದಾರೆ. ಸಾಮಾಜಿಕ ಸೇವೆಗಳಲ್ಲಿ ತೊಡಗಿಸಿಕೊಂಡವರು. ಅವಿಭಿಜಿತ ಧಾರವಾಡ(Dharwad) ಜಿಲ್ಲೆಯ ಸ್ಥಳೀಯ ಸಂಸ್ಥೆಗಳಿಂದ ಪರಿಷತ್‌ಗೆ ನಡೆಯಲಿರುವ ಚುನಾವಣೆಯಲ್ಲಿ ಈ ಸಲ ಕಣಕ್ಕಿಳಿಯಲಿದ್ದಾರೆ ಎಂದು ಹೇಳಲಾಗುತ್ತಿದೆ. ಸದ್ಯಕ್ಕೆ ಈ ಚುನಾವಣೆಯಲ್ಲಿ ರಾಷ್ಟ್ರೀಯ ಪಕ್ಷಗಳಾದ ಬಿಜೆಪಿ ಮತ್ತು ಕಾಂಗ್ರೆಸ್‌(Congress) ಇನ್ನೂ ತಮ್ಮ ಅಭ್ಯರ್ಥಿಯನ್ನು ಘೋಷಿಸದೇ ಇರುವುದು ಈವರೆಗಿನ ಲೆಕ್ಕಾಚಾರವೆಲ್ಲ ಬುಡಮೇಲಾಗುವ ಸಾಧ್ಯತೆ ಇದೆ.

ಪರಿಷತ್‌ ಚುನಾವಣೆ: ಕಾಂಗ್ರೆಸ್‌ ಟಿಕೆಟ್‌ ಅಲ್ಪಸಂಖ್ಯಾತರಿಗೆ?

ಯಾವ ಪಕ್ಷ:

ದ್ವಿಸದಸ್ಯತ್ವ ಸ್ಥಾನದ ಕ್ಷೇತ್ರವಿದು. ಬಿಜೆಪಿ ಹಾಗೂ ಕಾಂಗ್ರೆಸ್‌ನಲ್ಲೂ ಟಿಕೆಟ್‌ಗಾಗಿ ಮಾತುಕತೆ ನಡೆದಿದೆ. ಬಿಜೆಪಿ ಈ ಸಲ ಇಬ್ಬರನ್ನು ಕಣಕ್ಕಿಳಿಸಲಿದೆ ಎಂಬ ಗುಸುಗುಸು ಶುರುವಾಗಿದೆ. ಸದ್ಯ ಬಿಜೆಪಿಯಿಂದ ಪ್ರದೀಪ ಶೆಟ್ಟರ್‌(Pradeep Shettar) ಹಾಲಿ ಸದಸ್ಯ. ಪ್ರದೀಪ ಜತೆಗೆ ಶಂಕರಣ್ಣ ಅವರನ್ನೂ ಎರಡನೆಯ ಅಭ್ಯರ್ಥಿಯನ್ನಾಗಿ ಬಿಜೆಪಿ ಕಣಕ್ಕಿಳಿಸುತ್ತಿದೆಯೋ ಅಥವಾ ಪ್ರದೀಪ ಶೆಟ್ಟರ್‌ ಅವರ ಬದಲಿಗೆ ಶಂಕರಣ್ಣ ಅವರಿಗೆ ಟಿಕೆಟ್‌ ನೀಡುತ್ತದೆಯೋ? ಎಂಬ ಬಗ್ಗೆಯೂ ಚರ್ಚೆ ನಡೆಯುತ್ತಿದೆ. ಪ್ರದೀಪಗೆ ಟಿಕೆಟ್‌ ಖಚಿತ ಎಂದು ಹೇಳಲಾಗುತ್ತಿದೆಯಾದರೂ ಬಿಜೆಪಿ ಹೈಕಮಾಂಡ್‌ ಕುಟುಂಬ ರಾಜಕಾರಣಕ್ಕೆ(Family Politics) ಕತ್ತರಿ ಹಾಕುವ ಉದ್ದೇಶದಿಂದ ಇವರಿಗಷ್ಟೇ ಟಿಕೆಟ್‌(Ticket) ನೀಡಿದರೂ ಅಚ್ಚರಿಯಿಲ್ಲ ಎಂದು ಮೂಲಗಳು ಹೇಳುತ್ತವೆ.

ಈ ನಡುವೆ ಶಂಕರಣ್ಣ ಮುನವಳ್ಳಿ ಹಲವು ದಶಕಗಳ ಕಾಲ ಕಾಂಗ್ರೆಸ್‌ನಲ್ಲಿದ್ದವರು. ಕಾಂಗ್ರೆಸ್‌ ಪಕ್ಷ ಸದ್ಯಕ್ಕೆ ಈ ಸ್ಥಾನಕ್ಕೆ ಅಲ್ಪಸಂಖ್ಯಾತರಿಗೆ ಟಿಕೆಟ್‌ ನೀಡಲು ನಿರ್ಧರಿಸಿದೆ. ಆದರೂ ಶಂಕರಣ್ಣ ಮುನವಳ್ಳಿ ಅವರತ್ತಲೂ ಒಂದು ಆಶೆಯ ಕಣ್ಣನ್ನು ನೆಟ್ಟಿದೆ. ಈ ಬಗ್ಗೆ ಕಾಂಗ್ರೆಸ್ಸಿಗರು ಶಂಕರಣ್ಣ ಜತೆಗೆ ಮಾತುಕತೆ ನಡೆಸಿದ್ದಾರೆ ಎಂದು ಹೇಳಲಾಗುತ್ತಿದೆ. ಬಿಜೆಪಿ ಟಿಕೆಟ್‌ ಒಂದು ವೇಳೆ ಸಿಗದಿದ್ದರೆ ಕಾಂಗ್ರೆಸ್‌ನಿಂದ ಸ್ಪರ್ಧಿಸಿದರೂ ಅದು ಅಚ್ಚರಿಯೇ ಆಗಲಿದೆ.

ಇನ್ನೂ ಇವೆರಡು ಪಕ್ಷಗಳು ಜತೆಗೆ ಜೆಡಿಎಸ್‌(JDS) ಕೂಡ ಶಂಕರಣ್ಣ ಮುನವಳ್ಳಿ ಅವರತ್ತ ಚಿತ್ತ ಹರಿಸಿದೆ. ಈವರೆಗೂ ಜೆಡಿಎಸ್‌ ಈ ಕ್ಷೇತ್ರದಿಂದ ಯಾರೊಬ್ಬರೂ ಆಯ್ಕೆಯಾಗಿಲ್ಲ. ಈ ಸಲ ಹೇಗಾದರೂ ತನ್ನ ಅಸ್ತಿತ್ವ ತೋರಿಸಬೇಕೆಂಬ ಹಂಬಲ ಜೆಡಿಎಸ್‌ನದ್ದು. ಈ ಹಿನ್ನೆಲೆಯಲ್ಲಿ ಶಂಕರಣ್ಣ ಅವರಿಗೆ ತಮ್ಮ ಪಕ್ಷದಿಂದ ಕಣಕ್ಕಿಳಿಯುವಂತೆ ಈ ಪಕ್ಷ ದುಂಬಾಲು ಬಿದ್ದಿದೆ.

Hubballi| ಭಾರತ ಜಾಗತಿಕ ಆಹಾರ ಪೂರೈಕೆ ಕೇಂದ್ರವಾಗಲಿದೆ: ಕೇಂದ್ರ ಸಚಿವ ಗೋಯಲ್‌

ಹಿಂದೆ ಜಗದೀಶ ಶೆಟ್ಟರ್‌(Jagadish Shettar) ವಿರುದ್ಧ ಹುಬ್ಬಳ್ಳಿ ಸೆಂಟ್ರಲ್‌ (ಹಿಂದೆ ಹುಬ್ಬಳ್ಳಿ ಗ್ರಾಮೀಣ) ಕ್ಷೇತ್ರದಿಂದ ಸ್ಪರ್ಧಿಸಿ ಸೋಲನ್ನುಭವಿಸಿದವರು ಶಂಕರಣ್ಣ. ಆಗಿನಿಂದ ರಾಜಕಾರಣದಲ್ಲಿದ್ದರೂ ಸಾಮಾಜಿಕ ಚಟುವಟಿಕೆಗಳಲ್ಲಿ ಹೆಚ್ಚಾಗಿ ತೊಡಗಿಸಿಕೊಂಡವರು. ಇದೀಗ ಸ್ಥಳೀಯ ಸಂಸ್ಥೆಗಳಿಂದ ಪರಿಷತ್‌ಗೆ ಚುನಾವಣೆ ಮೂಲಕ ಮತ್ತೆ ಮುನ್ನೆಲೆಗೆ ಬರಲಿದ್ದಾರೆ ಎಂಬ ಮಾತು ಜೋರಾಗಿ ಕೇಳಿ ಬರುತ್ತಿರುವುದಂತೂ ಸತ್ಯ.

ಒಟ್ಟಿನಲ್ಲಿ ಪರಿಷತ್‌ ಚುನಾವಣೆಯಲ್ಲಿ ಶಂಕರಣ್ಣ ಮುನವಳ್ಳಿ ಕಣಕ್ಕಿಳಿಯಲಿದ್ದಾರೆ ಎಂಬ ಸುದ್ದಿ ಮಾತ್ರ ಮೂರು ಜಿಲ್ಲೆಯ ರಾಜಕಾರಣದಲ್ಲಿ(Politics) ಬಿರುಗಾಳಿ ಎಬ್ಬಿಸಿರುವುದಂತೂ ಸತ್ಯ. ಯಾವ ಪಕ್ಷದಿಂದ ಕಣಕ್ಕಿಳಿಯುತ್ತಾರೆ. ಅಥವಾ ಪಕ್ಷೇತರರಾಗಿ ಕಣಕ್ಕಿಳಿಯುತ್ತಾರೆಯೋ? ಎಂಬುದನ್ನು ಕಾಯ್ದು ನೋಡಬೇಕಷ್ಟೇ!
 

Follow Us:
Download App:
  • android
  • ios