ಭ್ರಷ್ಟಾಚಾರ ಸಂಕಟದಲ್ಲಿ ಆಮ್ ಆದ್ಮಿ ಪಾರ್ಟಿ, ಮಾನ್ ಸರ್ಕಾರದ ಮತ್ತೊಂದು ವಿಕೆಟ್ ಪತನ!
ಆಮ್ ಆದ್ಮಿ ಸರ್ಕಾರದ ವಿರುದ್ದದ ಸತತ ಭ್ರಷ್ಟಾಚಾರ ಆರೋಪ ಕೇಳಿಬರುತ್ತಿದೆ. ದೆಹಲಿಯ ಕೆಲ ಸಚಿವರು ಜೈಲು ವಾಸ ಅನುಭವಿಸಿದ್ದಾರೆ. ಇದೀಗ ಪಂಜಾಬ್ ಸರ್ಕಾರದ ಬುಡ ಅಲುಗಾಡುತ್ತಿದೆ. ಭ್ರಷ್ಟಾಚಾರ ಆರೋಪ ಕುರಿತು ಆಡಿಯೋ ಟೇಪ್ ಬಹಿರಂಗವಾದ ಬೆನ್ನಲ್ಲೇ ಇದೀಗ ಪ್ರಮುಖ ಸಚಿವ ರಾಜೀನಾಮೆ ನೀಡಿದ್ದಾರೆ.
ಚಂಡಿಘಡ(ಜ.07): ಆಮ್ ಆದ್ಮಿ ಸರ್ಕಾರದ ಮೇಲಿನ ಭ್ರಷ್ಟಾಚಾರ ಆರೋಪ ಪಕ್ಷಕ್ಕೆ ಮುಳುವಾಗುತ್ತಿದೆ. ದೆಹಲಿಯ ಕೆಲ ಸಚಿವರು ಜೈಲು ವಾಸ ಅನುಭವಿಸಿದ್ದರೆ, ಇದೀಗ ಪಂಜಾಬ್ನ ಭಗವಂತ್ ಮಾನ್ ಸರ್ಕಾರ ಸಂಕಷ್ಟಕ್ಕೆ ಸಿಲುಕಿದೆ. ತೋಟಗಾರಿಕೆ ಸಚಿವ ಫೌಜ್ ಸಿಂಗ್ ನಡೆಸಿದ್ದಾರೆ ಎನ್ನಲಾದ ಸುಲಿಗೆ ಹಾಗೂ ಭ್ರಷ್ಟಾಚಾರ ಕುರಿತು ಆಡಿಯೋ ಟೇಪ್ ಬಿಡುಗಡೆಯಾಗಿ ಭಾರಿ ಸಂಚಲನ ಸೃಷ್ಟಿಸಿದೆ. ಇದು ಆಮ್ ಆದ್ಮಿ ಪಾರ್ಟಿಗೆ ತೀವ್ರ ಹಿನ್ನಡೆ ತಂದಿತ್ತು. ಇಷ್ಟೇ ಪಂಜಾಬ್ನಲ್ಲಿ ಭಾರಿ ಸಂಚಲನ ಸೃಷ್ಟಿಸಿತ್ತು. ದೆಹಲಿ ಬಳಿಕ ಆಮ್ ಆದ್ಮಿ ಪಾರ್ಟಿ ಪಂಜಾಬ್ ಕೊಳ್ಳೆ ಹೊಡೆಯುತ್ತಿದೆ ಅನ್ನೋ ಗಂಭೀರ ಆರೋಪ ಕೇಳಿಬಂದಿತ್ತು. ಸರ್ಕಾರದ ಮೇಲೆ ಒತ್ತಡ ಹೆಚ್ಚಾಗುತ್ತಿದ್ದಂತೆ ತೋಟಗಾರಿಕೆ ಸಚಿವ ಫೌಜ್ ಸಿಂಗ್ ಇದೀಗ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಈ ಮೂಲಕ ಪಂಜಾಬ್ನಲ್ಲಿ ಭ್ರಷ್ಟಚಾರ ಆರೋಪದಡಿ ಆಪ್ ಸರ್ಕಾರದ ಒಂದೊಂದೆ ವಿಕೆಟ್ ಪತನಗೊಳ್ಳಲು ಆರಂಭಗೊಂಡಿದೆ.
ಫೌಜ್ ಸಿಂಗ್ ತಮ್ಮ ರಾಜೀನಾಮೆ ಪತ್ರವನ್ನು ಮುಖ್ಯಮಂತ್ರಿ ಭಗವಂತ್ ಸಿಂಗ್ ಮಾನ್ಗೆ ಸಲ್ಲಿಸಿದ್ದಾರೆ. ಇತ್ತ ಸರ್ಕಾರಕ್ಕೆ ತೀವ್ರ ಮುಜುಗರ ತಂದಿರುವ ಫೌಜ್ ಸಿಂಗ್ ರಾಜೀನಾಮೆಯನ್ನು ಮರುಕ್ಷಣದಲ್ಲೇ ಮುಖ್ಯಮಂತ್ರಿ ಸ್ವೀಕರಿಸಿದ್ದಾರೆ. ಫೌಜ್ ಸಿಂಗ್ ಹಾಗೂ ಆಪ್ತ ಸೇರಿ ಕೆಲ ಕಾಂಟ್ರಾಕ್ಟರ್ಗಳಿಂದ ಸುಲಿಗೆ ಮಾಡಲು ಪ್ಲಾನ್ ಮಾಡಿದ್ದರು. ಈ ಕುರಿತ ಆಡಿಯೋ ಟೇಪ್ ಬಹಿರಂಗವಾಗಿತ್ತು. ಸರ್ಕಾರದ ಅಧಿಕಾರಿಗಳ ನೆರವು ಪಡೆದು ಕಾಂಟ್ರಾಕ್ಟರ್ಗಳಿಂದ ಒಂದಷ್ಟು ಹಣ ವಸೂಲಿ ಮಾಡಲು ಪ್ಲಾನ್ ಮಾಡಿದ್ದರು.
ಆಪ್ ಬಿಜೆಪಿ ನಡುವೆ ಮಾರಾಮಾರಿ, ದೆಹಲಿ ಮೇಯರ್ ಚುನಾವಣೆ ರದ್ದಾಯ್ತು ಮೊದಲ ಬಾರಿ!
ಭ್ರಷ್ಟಾಚಾರ, ಸುಲಿಗೆ ಆರೋಪದಡಿ ಪಂಜಾಬ್ ಆಮ್ ಆದ್ಮಿ ಸರ್ಕಾರದಿಂದ ಹೊರಬಿದ್ದ ಸಚಿವರ ಸಂಖ್ಯೆ 2ಕ್ಕೇರಿದೆ. ಫೌಜ್ ಸಿಂಗ್ಗೂ ಮೊದಲು ಆರೋಗ್ಯ ಸಚಿವ ಡಾ. ವಿಜಯ್ ಸಿಂಗ್ಲಾ ವಿರುದ್ದ ಭ್ರಷ್ಟಾಚಾರ ಆರೋಪ ಕೇಳಿಬಂದಿತ್ತು. ಆರೋಪ ತೀವ್ರಗೊಳ್ಳುತ್ತಿದ್ದಂತೆ ಭಗವಂತ್ ಮಾನ್ ಸಂಪುಟದಿಂದ ಡಾ. ವಿಜಯ್ ಸಿಂಗ್ಲಾ ವಜಾ ಮಾಡಿದ್ದರು. ಇದೀಗ ಸುಲಿಗೆ ಆರೋಪದಡಿ ಫೌಜ್ ಸಿಂಗ್ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.
ಕೇಜ್ರಿವಾಲ್ ಆಪ್ ಪಕ್ಷಕ್ಕೆ ಸಂಕಷ್ಟ: 97 ಕೋಟಿ ವಸೂಲಿಗೆ ಗವರ್ನರ್ ಆದೇಶ
ಬಂಧನ ಮುಖಭಂಗ ತಪ್ಪಿಸಲು ವಜಾ
ಪಂಜಾಬ್ ಆರೋಗ್ಯ ಸಚಿವ ವಿಜಯ ಸಿಂಘ್ಲಾ ಅವರನ್ನು ಭ್ರಷ್ಟಾಚಾರದ ಆರೋಪದ ಮೇಲೆ ಬಂಧಿಸಲಾಗಿತ್ತು. ಈ ಮುಖಭಂಗ ತಪ್ಪಿಸಲು ಭಗವಂತ್ ಮಾನ್ ಸರ್ಕಾರ ಸಿಂಗ್ಲಾ ಅವರನ್ನು ಸಂಪುಟದಿಂದ ವಜಾ ಮಾಡಿತ್ತು. ಆರೋಗ್ಯ ಸಚಿವ ಸಿಂಘ್ಲಾ ಅವರು ಇಲಾಖೆಯ ಟೆಂಡರ್ ಹಾಗೂ ಖರೀದಿಗಳ ಮೇಲೆ ಶೇ.1 ರಷ್ಟುಕಮಿಷನ್ಗಾಗಿ ಬೇಡಿಕೆಯಿಟ್ಟಬಗ್ಗೆ ನನಗೆ ಮಾಹಿತಿ ದೊರಕಿದ ಹಿನ್ನೆಲೆಯಲ್ಲಿ ಈ ನಿರ್ಧಾರ ಕೈಗೊಂಡಿದ್ದೇನೆ. ಈ ವಿಚಾರವಾಗಿ ಮಾಧ್ಯಮ ಅಥವಾ ವಿರೋಧ ಪಕ್ಷಗಳಿಗಾಗಲೀ ತಿಳಿದಿರಲಿಲ್ಲ. ನಾನೇ ಸಿಂಘ್ಲಾ ವಿರುದ್ಧ ಪ್ರಕರಣ ದಾಖಲಿಸುವಂತೆ ಪೊಲೀಸರಿಗೆ ನಿರ್ದೇಶನ ನೀಡಿದ್ದೇನೆ’ ಎಂದು ಮಾನ್ ವಿಡಿಯೋ ಸಂದೇಶದಲ್ಲಿ ತಿಳಿಸಿದ್ದಾರೆ. ಈ ನಂತರ ಪೊಲೀಸರು ಮಾನ್ಸಾದ ಶಾಸಕರಾದ ಸಿಂಘ್ಲಾ ಅವರನ್ನು ಬಂಧಿಸಲಾಗಿತ್ತು.ಇತ್ತ ಭ್ರಷ್ಟಾಚಾರದ ವಿರುದ್ಧದ ತಮ್ಮ ಪಕ್ಷದವರ ವಿರುದ್ಧವೇ ಕಠಿಣ ಕ್ರಮ ಕೈಗೊಂಡಿದ್ದಕ್ಕೆ ಮಾನ್ ಅವರನ್ನು ಆಪ್ ಮುಖ್ಯಸ್ಥ ಹಾಗೂ ದೆಹಲಿಯ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಪ್ರಶಂಸಿಸಿದ್ದರು.