ಗೋವನ್ನು ದೇಶದ ಎರಡನೇ ರಾಷ್ಟ್ರೀಯ ಪ್ರಾಣಿ ಎಂದು ಘೋಷಣೆ ಮಾಡಿ ನೊಡೋಣ ಎಂದು ಸವಾಲು ಹಾಕಿರುವ ಸಚಿವ ಸಂತೋಷ್ ಲಾಡ್ , ಗೋಮಾಂಸ ಮಾರಾಟದ ಚಂದಾದಿಂದಲೇ ಬಿಜೆಪಿ ಕಚೇರಿಗಳನ್ನು ಕಟ್ಟಿದ್ದಾರೆ ಎಂದು ಆರೋಪಿಸಿದರು.
ಬಾಗಲಕೋಟೆ (ಏ.03): ಬಿಜೆಪಿ ಗೋವು ರಕ್ಷಣೆ ಬಗ್ಗೆ ಮಾತನಾಡಿ ಚುನಾವಣೆಗಳನ್ನು ಗೆಲ್ಲುತ್ತಿದೆ. ಮೋದಿಯವರು ಹಲಾಲ್ ಸರ್ಟಿಫಿಕೇಟ್ ಕೊಡುತ್ತಿದ್ದಾರೆ. ಗೋವನ್ನು ದೇಶದ ಎರಡನೇ ರಾಷ್ಟ್ರೀಯ ಪ್ರಾಣಿ ಎಂದು ಘೋಷಣೆ ಮಾಡಿ ನೊಡೋಣ ಎಂದು ಸವಾಲು ಹಾಕಿರುವ ಸಚಿವ ಸಂತೋಷ್ ಲಾಡ್ , ಗೋಮಾಂಸ ಮಾರಾಟದ ಚಂದಾದಿಂದಲೇ ಬಿಜೆಪಿ ಕಚೇರಿಗಳನ್ನು ಕಟ್ಟಿದ್ದಾರೆ ಎಂದು ಆರೋಪಿಸಿದರು. ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.
ಬಿಜೆಪಿಯವರ ಬಳಿ ₹10 ಸಾವಿರ ಕೋಟಿ ದುಡ್ಡಿದೆ. 800 ಬಿಜೆಪಿ ಕಚೇರಿ ಕಟ್ಟಿದ್ದಾರೆ, ಬೀಫ್ ರಪ್ತು ಮಾಡಿ ಹಣ ಮಾಡಿದ್ದಾರೆ, ವಿರಾಧಿವೀರ, ಶೂರರಾದ ಬಿಜೆಪಿಯವರು ಬಾಂಗ್ಲಾದವರನ್ನು ದೇಶದಿಂದ ಹೊರಗೆ ಹಾಕಲು ಆಗಿಲ್ಲ ಟೀಕಿಸಿದರು. ಕತಾರ್ನಲ್ಲಿ 20 ಜನ ಸತ್ತಿದ್ದಾರೆ, ಯಾವುದೇ ಟಿವಿಯಲ್ಲಿ ಬಂದಿಲ್ಲ, ಯುದ್ಧ ನಡಿತೀದೆ, ಚುನಾವಣೆ ಪ್ರಚಾರ ನಿಂತಿಲ್ಲ, ಬೇರೆ ಬೇರೆ ರಾಜ್ಯದ ಜನರ ಬಟ್ಟೆ ಧರಿಸಿ ಮೋದಿ ಅಡ್ಡಾಡುತ್ತಿದ್ದಾರೆ ಎಂದು ಹೇಳಿದರು.
ನೀವು ಸಿದ್ದರಾಮಯ್ಯನವರ ಬಗ್ಗೆ ಮಾತನಾಡುತ್ತೀರಿ. ಮುಸ್ಲಿಂ, ಪಾಕಿಸ್ತಾನ, ಬಾಂಗ್ಲಾದೇಶ ಇದನ್ನು ಬಿಟ್ಟರೆ ಬೇರೆ ಮಾತನಾಡೋದಿಲ್ಲ. ಈ ದೇಶದ ಹಿಂದೂಗಳ ದಾರಿ ತಪ್ಪಿಸಿ, ಬಿಜೆಪಿಯವರ ಮಕ್ಕಳು ವಿದೇಶದಲ್ಲಿ ಓದುತ್ತಿದ್ದಾರೆ. ಬಿಜೆಪಿಯವರ ಕೆಲ ಮಕ್ಕಳು ಭಾರತೀಯ ನಾಗರಿಕತ್ವ ಹೊಂದಿಲ್ಲ. ನಮ್ಮ ಹಿಂದೂ ಮಕ್ಕಳು ಹೊಡೆದಾಡಿ ಅವರು ಕೇಸ್ ಹಾಕಿಸಿಕೊಳ್ಳುವಂತಾಗಿದೆ ಎಂದರು.
ಸಿಎಂಗೆ ಸೋಲಿನ ಭಯ ಕಾಡ್ತಿದೆ ಎಂಬ ಬಿಜೆಪಿಗರ ಆರೋಪಕ್ಕೆ ತಿರುಗೇಟು ನೀಡಿದ ಲಾಡ್ ಅವರು, ರಾಜ್ಯದ ಸಿಎಂ ಯಾಕೆ ಪ್ರಚಾರ ಮಾಡಬಾರದು? ಹಲವು ವರ್ಷದಿಂದ ಮೋದಿ ಬಿಟ್ಟರೆ ಯಾರಾದರೂ ಇದ್ದಾರಾ? ಮುಂದೆ ಗ್ರಾಪಂ, ಜಿಪಂ, ತಾಪಂ ಮುನ್ಸಿಪಾಲಿಟಿಗೂ ಮೋದಿ ಪ್ರಚಾರಕ್ಕೆ ಬರಬೇಕು, ಬರಬೇಕೆಂದು ಕೇಳಿಕೊಳ್ಳುತ್ತೇನೆ ಎಂದು ವ್ಯಂಗ್ಯವಾಡಿದರು. ಮೇಕ್ ಇನ್ ಇಂಡಿಯಾ ಅಂತಿದ್ದಾರೆ, ಒಂದು ಗುಂಡು ಪಿನ್ನು, ಸೂಜಿಯನ್ನೂ ತಯಾರು ಮಾಡಿಲ್ಲ, ದೇಶವನ್ನ ಆದಾನಿ ಅಂಬಾನಿಗೆ ಮಾರಿದ್ದಾರೆ.
ಆರ್ಥಿಕತೆಯಲ್ಲಿ ಕರ್ನಾಟಕ ನಂ.1 ಆಗಲು ಗ್ಯಾರಂಟಿ ಸೇರಿ ಕಾಂಗ್ರೆಸ್ ಯೋಜನೆಗಳೇ ಕಾರಣವಾಗಿವೆ. ಬಿಜೆಪಿಯಲ್ಲಿ ಪ್ರಧಾನಿ ಇಲ್ಲಿಗೆ ಪ್ರಚಾರಕ್ಕೆ ಬಂದಿದ್ದರು. ಚುನಾವಣೆ ನಡೀತಿದೆ , ಟಿವಿಯಲ್ಲಿ ಅವರದೇ ನೋಡಬೇಕು, ಶೂರಾಧಿಶೂರ, ಭೂಪ ಮೋದಿ ಸೋಷಿಯಲ್ ಮೀಡಿಯಾದ ಹುಡುಗರು ಹಾಕಿದ ವಿಡಿಯೋ ಯಾಕೆ ಡಿಲಿಟ್ ಮಾಡಬೇಕಿತ್ತು ಎಂದು ಪ್ರಶ್ನಿಸಿದರು. ಚರಂತಿಮಠ ಪರ ಯತ್ನಾಳ ಪ್ರಚಾರ ಮಾಡುತ್ತಿರುವ ವಿಚಾರದ ಕುರಿತು ಮಾತನಾಡಿದ ಸಚಿವರು, ಯತ್ನಾಳ ಅವರು ಫ್ರೀ ಇದ್ದಾರೆ, ಏನು ಬೇಕಾದ್ರೂ ಮಾಡಬಹುದು ಎಂದರು.
ಸಚಿನ್, ಕೊಹ್ಲಿ, ಲಾರಾ ಎಲ್ಲರಿಗೂ ಒಬ್ಬ ಸಿದ್ದರಾಮಯ್ಯ ಸಮ
ಸಿಎಂ ಅವರ ಬಗ್ಗೆ ಬಿಜೆಪಿಯವರು ಹಗುರವಾಗಿ ಮಾತನಾಡುತ್ತಿದ್ದಾರೆ, ನಮ್ಮ ಸಿಎಂ ಅಧಿವೇಶನದಲ್ಲಿ 8 ತಾಸು ಉತ್ತರ ಕೊಟ್ಟಿದ್ದಾರೆ. ಕ್ರಿಕೆಟ್ನಲ್ಲಿ ಸಚಿನ್, ಕೊಹ್ಲಿ, ಲಾರಾ ಎಲ್ಲರೂ ಸೇರಿ ಒಬ್ಬ ಸಿದ್ದರಾಮಯ್ಯ ಇದ್ದಂತೆ. ರಾಜ್ಯದಲ್ಲಿ ಸಿಂಹಪಾಲು ಆಡಳಿತವನ್ನು ಕಾಂಗ್ರೆಸ್ ಮಾಡಿದೆ. ಸಿಎಂ ಸಿದ್ದರಾಮಯ್ಯ ಹೆಚ್ಚು ಬಜೆಟ್ ಮಂಡಿಸಿದ್ದಾರೆ, ಬಿಜೆಪಿಯವರು ಗುಜರಾತ್ ನಂ.1 ಅಂತಿದ್ದಾರೆ, ಆದರೆ ಎಲ್ಲದರಲ್ಲೂ ಕರ್ನಾಟಕ ಮೊದಲ ಸ್ಥಾನದಲ್ಲಿದೆ. ಕಾಂಗ್ರೆಸ್ ಕಾರ್ಯಕ್ರಮಗಳೇ ಇದಕ್ಕೆ ಕಾರಣವಾಗಿದೆ, ಬಿಜೆಪಿ ಕಾಂಗ್ರೆಸ್ ಆಡಳಿತ ಹೋಲಿಕೆ ಮಾಡಿದರೆ ಕಾಂಗ್ರೆಸ್ ಆಡಳಿತದ ರಾಜ್ಯ ಉತ್ತಮವಾಗಿವೆ ಎಂದು ಸಮರ್ಥಿಸಿಕೊಂಡರು.

