Asianet Suvarna News Asianet Suvarna News

ಮೂರೇ ದಿನಕ್ಕೆ ವಿಪಕ್ಷಗಳ ಮೈತ್ರಿ ಠುಸ್‌! ಪರಸ್ಪರ ಕಚ್ಚಾಡಿಕೊಂಡ ಕಾಂಗ್ರೆಸ್‌, ಟಿಎಂಸಿ, ಸಿಪಿಎಂ

ಪರಸ್ಪರ ಒಂದಾಗಬೇಕಿದ್ದ ಕಾಂಗ್ರೆಸ್‌, ಟಿಎಂಸಿ ಮತ್ತು ಸಿಪಿಎಂ ಪಕ್ಷಗಳು ತಮ್ಮ ತಮ್ಮ ಪಕ್ಷಗಳ ಹಿತದೃಷ್ಟಿ ಮುಂದಿಟ್ಟುಕೊಂಡು ಎದುರಾಳಿಗಳ ವಿರುದ್ಧ ತೀವ್ರ ವಾಗ್ದಾಳಿ ನಡೆಸಿವೆ.

rift in opposition unity congress tmc cpm and aap rift ash
Author
First Published Jun 27, 2023, 10:52 AM IST | Last Updated Jun 27, 2023, 10:52 AM IST

ನವದೆಹಲಿ/ಕೂಚ್‌ಬೆಹಾರ್‌ (ಜೂನ್ 27, 2023): 2024ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ವಿರುದ್ಧ ಬೃಹತ್‌ ಮೈತ್ರಿಕೂಟ ಕಟ್ಟುವ ಉದ್ದೇಶದಿಂದ 3 ದಿನಗಳ ಹಿಂದಷ್ಟೇ ಬಿಹಾರದ ರಾಜಧಾನಿ ಪಟನಾದಲ್ಲಿ ಬೃಹತ್‌ ಸಭೆ ನಡೆಸಿದ್ದ ವಿಪಕ್ಷಗಳ ಒಗ್ಗಟ್ಟು, ಮೂರೇ ದಿನದಲ್ಲಿ ಠುಸ್‌ ಆಗಿದೆ. ಪರಸ್ಪರ ಒಂದಾಗಬೇಕಿದ್ದ ಕಾಂಗ್ರೆಸ್‌, ಟಿಎಂಸಿ ಮತ್ತು ಸಿಪಿಎಂ ಪಕ್ಷಗಳು ತಮ್ಮ ತಮ್ಮ ಪಕ್ಷಗಳ ಹಿತದೃಷ್ಟಿ ಮುಂದಿಟ್ಟುಕೊಂಡು ಸೋಮವಾರ ಎದುರಾಳಿಗಳ ವಿರುದ್ಧ ತೀವ್ರ ವಾಗ್ದಾಳಿ ನಡೆಸಿವೆ.

ಇದು ಇನ್ನು ಕೇವಲ 10 ತಿಂಗಳಲ್ಲಿ ನಡೆಯಲಿರುವ ಲೋಕಸಭಾ ಚುನಾವಣೆಗೆ ವಿಪಕ್ಷಗಳು ಅದೆಷ್ಟರ ಮಟ್ಟಿಗೆ ಒಗ್ಗಟ್ಟು ಪ್ರದರ್ಶಿಸಬಹುದು ಎಂಬ ಅನುಮಾನಗಳನ್ನು ಹುಟ್ಟುಹಾಕಿದೆ. ಸೋಮವಾರ ದೆಹಲಿಯಲ್ಲಿ ಕೇರಳ ಕಾಂಗ್ರೆಸ್‌ ಘಟಕದ ಅಧ್ಯಕ್ಷ ಕೆ.ಸುಧಾಕರನ್‌ ಅವರನ್ನು ಭೇಟಿ ಮಾಡಿದ ಪಕ್ಷದ ಹಿರಿಯ ನಾಯಕ ರಾಹುಲ್‌ ಗಾಂಧಿ, ನಾವು ಬೆದರಿಕೆ ಮತ್ತು ದ್ವೇಷದ ರಾಜಕೀಯಕ್ಕೆ ಬೆದರುವುದಿಲ್ಲ ಎಂದು ಕೇರಳದ ಆಡಳಿತಾರೂಢ ಸಿಪಿಎಂಗೆ ನೇರ ಎಚ್ಚರಿಕೆ ನೀಡಿದ್ದಾರೆ. ಸುಧಾಕರನ್‌ ವಿರುದ್ಧ ಇತ್ತೀಚೆಗೆ ಕೇರಳ ಸರ್ಕಾರ ವಂಚನೆ ಕೇಸು ದಾಖಲಿಸಿತ್ತು. ಈ ಹಿನ್ನೆಲೆಯಲ್ಲಿ ರಾಹುಲ್‌ ಈ ಎಚ್ಚರಿಕೆ ನೀಡಿದ್ದಾರೆ.

ಇದನ್ನು ಓದಿ: ಬಿಜೆಪಿ ಮಣಿಸಲು ಪಣ ತೊಟ್ಟ 17 ವಿಪಕ್ಷಗಳು: ಮುಂದಿನ ಸಭೆಗೆ ಬರಲು ಕಾಂಗ್ರೆಸ್‌ಗೆ ಆಪ್‌ ಷರತ್ತು

ಮತ್ತೊಂದೆಡೆ ಬಂಗಾಳದಲ್ಲಿ ಮಾತನಾಡಿದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ಬಿಜೆಪಿ ವಿರುದ್ಧ ಬೃಹತ್‌ ಮೈತ್ರಿಕೂಟ ಕಟ್ಟುವ ತಮ್ಮ ಭಾರೀ ಯತ್ನಕ್ಕೆ ರಾಜ್ಯದಲ್ಲಿ ಕೆಲ ಪಕ್ಷಗಳ ಒಳಮೈತ್ರಿ ಅಡ್ಡಿ ಮಾಡಿದೆ. ಈ ಕುತಂತ್ರವನ್ನು ತಾವು ಬಯಲಿಗೆಳೆಯುವುದಾಗಿ ಸಿಪಿಎಂ ಮತ್ತು ಕಾಂಗ್ರೆಸ್‌ ವಿರುದ್ಧ ಹರಿಹಾಯ್ದಿದ್ದಾರೆ.

ಮತ್ತೊಂದೆಡೆ ಸಿಪಿಎಂ ನಾಯಕ ಸೀತಾರಾಂ ಯೆಚೂರಿ ಮಾತನಾಡಿ, ಬಿಜೆಪಿಯನ್ನು ಅಧಿಕಾರದಿಂದ ಕೆಳಗಿಳಿಸುವ ಮೂಲಕ ಪ್ರಜಾಪ್ರಭುತ್ವ ಉಳಿಸುವುದಾಗಿ ಹೇಳುತ್ತಿರುವ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ಮತ್ತೊಂದೆಡೆ ಬಂಗಾಳದಲ್ಲಿ ಹಿಂಸಾಚಾರಕ್ಕೆ ಕುಮ್ಮಕ್ಕು ನೀಡುವ ಮೂಲಕ ಇಬ್ಬಗೆಯ ನೀತಿ ಅನುಸರಿಸುತ್ತಿದ್ದಾರೆ ಎಂದು ಕಿಡಿಕಾರಿದ್ದಾರೆ.

ಇದನ್ನೂ ಓದಿ: 2024 ಚುನಾವಣೆಯಲ್ಲಿ ಬಿಜೆಪಿ ವಿರುದ್ಧ ರಣತಂತ್ರ: ಜೂನ್‌ 12ಕ್ಕೆ ಪಟನಾದಲ್ಲಿ ವಿಪಕ್ಷ ನಾಯಕರ ಬೃಹತ್‌ ‘ಲೋಕ’ಸಭೆ!

ಈ ನಡುವೆ ಮೈತ್ರಿಕೂಟದ ಮುಂದಿನ ಸಭೆಯಲ್ಲಿ ಭಾಗಿಯಾಗಬೇಕಾದರೆ ಕೇಂದ್ರ ಸರ್ಕಾರ ದೆಹಲಿ ಮೇಲಿನ ಅಧಿಕಾರ ಉಳಿಸಿಕೊಳ್ಳಲು ಹೊರಡಿಸಿದ ಸುಗ್ರೀವಾಜ್ಞೆಯನ್ನು ಕಾಂಗ್ರೆಸ್‌ ವಿರೋಧಿಸಬೇಕೆಂಬ ಆಪ್‌ ಸಂಚಾಲಕ ಕೇಜ್ರಿವಾಲ್‌ ಷರತ್ತಿನ ಬಗ್ಗೆ ಕಿಡಿಕಾರಿರುವ ಕಾಂಗ್ರೆಸ್‌ ನಾಯಕ ಅಜಯ್ ಮಾಕೆನ್‌, ಇಂಥ ನಡೆ ವಿಪಕ್ಷಗಳ ಒಗ್ಗಟ್ಟಿಗಾಗಿ ಅಲ್ಲ ಬದಲಾಗಿ ಮೈತ್ರಿಯನ್ನು ವಿಫಲಗೊಳಿಸಲು ಹೂಡಿದ ಯೋಜಿತ ಸಂಚು ಎಂದಿದ್ದಾರೆ.

ಇದನ್ನೂ ಓದಿ:  ನೂತನ ಸಂಸತ್‌ ಭವನ ಉದ್ಘಾಟನೆ ರಾಜನ ಪಟ್ಟಾಭಿಷೇಕದಂತಿತ್ತು: ವಿಪಕ್ಷಗಳ ಟೀಕೆ

Latest Videos
Follow Us:
Download App:
  • android
  • ios