ಮಾಜಿ ಸಂಸದ ಪ್ರತಾಪ್ ಸಿಂಹ ಅವರನ್ನು 'ಪೇಪರ್ ಸಿಂಹ' ಎಂದು ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ ಟೀಕಿಸಿದ್ದಾರೆ. ಲೋಕಸಭಾ ಚುನಾವಣೆಯಲ್ಲಿ ಟಿಕೆಟ್ ಕೊಡದೆ ಪ್ರತಾಪ್ ಸಿಂಹ ಅವರನ್ನು ಕೊಚ್ಚೆಯಲ್ಲಿ ಎಸೆದಿದ್ದಾರೆ ಎಂದು ರೇಣುಕಾಚಾರ್ಯ ಹೇಳಿದ್ದಾರೆ.

ಕನ್ನಡಪ್ರಭ ವಾರ್ತೆ ಬೆಂಗಳೂರು
ಮೈಸೂರಿನ 'ಪೇಪರ್‌ ಸಿಂಹ' ಅವರಿಗೆ ಕಳೆದ ಲೋಕಸಭಾ ಚುನಾವಣೆಯಲ್ಲಿ ಟಿಕೆಟ್ ಕೊಡದೆ ಕೊಚ್ಚೆಯಲ್ಲಿ ಎಸೆದಿದ್ದಾರೆ ಎಂದು ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಅವರು ಮೈಸೂರು ಕ್ಷೇತ್ರದ ಮಾಜಿ ಸಂಸದ ಪ್ರತಾಪ್ ಸಿಂಹ ಅವರ ವಿರುದ್ಧ ಹರಿಹಾಯ್ದಿದ್ದಾರೆ. ತಿರಸ್ಕೃತರಾದವರ ಕುರಿತು ಮಾತನಾಡಲ್ಲ ಎಂಬ ಪ್ರತಾಪ್ ಸಿಂಹ ಹೇಳಿಕೆಗೆ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿ ಪ್ರತಿಕ್ರಿಯಿಸಿದ ರೇಣುಕಾಚಾರ್ಯ, ಪೇಪರ್‌ಸಿಂಹ ಒಂದು ಹೇಳಿಕೆ ನೀಡಿದ್ದಾರೆ. ನಮ್ಮ ನಮ್ಮ ಕ್ಷೇತ್ರದಲ್ಲಿ ನಮಗೆ ಸಾಮರ್ಥ್ಯವಿದೆ. ನಮ್ಮದೇ ಆದ ಸಂಘಟನೆ ಬಲವಿದೆ. ಒಳಮೀಸಲಾತಿ ಮತ್ತಿತರ ಯಾವುದೋ ಕಾರಣಕ್ಕೆ ನಾವು ಸೋತಿದ್ದೇವೆ. ನಮ್ಮನ್ನು ಜನ ಸೋಲಿಸಿಲ್ಲ. ನಮ್ಮನ್ನು ತಿಪ್ಪೆಗೆ ಎಸೆದಿಲ್ಲ. ಇವತ್ತೂ ರಾಜಕೀಯವಾಗಿ ಸಕ್ರಿಯವಾಗಿದ್ದೇವೆ ಎಂದರು.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಆದರೆ, ನಿಮ್ಮಂತೆ ನಾವು ಪೇಪರ್‌ಸಿಂಹ ಅಲ್ಲ, ಮೈಸೂರು ಮತ್ತು ಕೊಡಗು ಜಿಲ್ಲೆಗಳ ಸಂಸದರಾಗಿ ಎಷ್ಟು ಬೂತ್‌ಗಳಲ್ಲಿ ಬಿಜೆಪಿಯ ಬಾವುಟ ಹಾರಿಸಿದ್ದೀರಿ? ಎಷ್ಟು ಸಮಯ ಕಾರ್ಯಕರ್ತರಿಗೆ ಕೊಟ್ಟಿದ್ದೀರಿ? ಎಷ್ಟು ಗ್ರಾ.ಪಂ. ಸದಸ್ಯರನ್ನು ಆಯ್ಕೆ ಮಾಡಿದ್ದೀರಿ? ಸ್ಥಳೀಯ ಸಂಸ್ಥೆಗಳ ಚುನಾವಣೆಗಳಲ್ಲಿ ಎಷ್ಟು ಜನರನ್ನು ಗೆಲ್ಲಿಸಿದ್ದೀರಿ? ಲೋಕಸಭಾ ಚುನಾವಣೆಯಲ್ಲಿ ನಿಮಗೆ ಟಿಕೆಟ್ ಅನ್ನೇ ಕೊಡಲಿಲ್ಲ. ಕೊಚ್ಚೆಯಲ್ಲಿ ಎಸೆದಿದ್ದಾರೆ. ಸುಮ್ಮನೆ ಹುಲಿ ಬಂತು ಹುಲಿ ಎಂಬಂತೆ ಸ್ವಯಂಘೋಷಿತ ನಾಯಕರು ಇವರು. ಇಂಥವರನ್ನು ಎಸೆದು ಬಿಡಬೇಕು ಎಂದು ಹರಿಹಾಯ್ದರು.

ವಕ್ಫ ಅನ್ಯಾಯ ವಿರುದ್ದ ಕೇಂದ್ರ ಸಮಿತಿಗೆ ವರದಿ: ಪ್ರತಾಪ್
ಬೆಳಗಾವಿ: ದೆಹಲಿಗೆ ತೆರಳಿ ವಕ್ಫ ಅನ್ಯಾಯದ ವಿರುದ್ಧ ಕೇಂದ್ರ ಸಮಿತಿಗೆ ವರದಿ ನೀಡುತ್ತೇವೆ ಎಂದು ಮಾಜಿ ಸಂಸದ ಪ್ರತಾಪ್ ಸಿಂಹ ತಿಳಿಸಿದ್ದಾರೆ. ನಗರದ ಗಾಂಧಿಭವನದಲ್ಲಿ ವಕ್ಫ ವಿರುದ್ಧದ ಜನಜಾಗೃತಿ ಸಮಾವೇಶದಲ್ಲಿ ಮಾತನಾಡಿ, ವಕ್ಫ ಹಠಾವೋ, ದೇಶ ಬಚಾವೋ ಹೋರಾಟ ಚುನಾವಣೆಗಾಗಿ ಅಲ್ಲ. ಈ ಹೋರಾಟದಿಂದ ಬಸನಗೌಡ ಪಾಟೀಲ ಯತ್ನಾಳ ಮತ್ತು ರಮೇಶ ಜಾರಕಿಹೊಳಿ ಅವರನ್ನು ಲೀಡರ್ ಮಾಡಲು ಹೊರಟಿಲ್ಲ. ಅವರಿಬ್ಬರೂ ಈಗಾಗಲೇ ಲೀಡರ್ ಆಗಿದ್ದಾರೆ. ಅವರನ್ನು ಲೀಡರ್ ಮಾಡುವ ಅಗತ್ಯ ಇಲ್ಲ. ರೈತರ ಪರವಾಗಿ ಹೋರಾಟ ಮಾಡಿದರೆ ಯತ್ನಾಳ ಅವರನ್ನು ಉಚ್ಚಾಟನೆ ಮಾಡಬೇಕಾ? ಇದರ ವಿರುದ್ಧ ಎಲ್ಲರೂ ಪ್ರತಿಭಟನೆ ಮಾಡಬೇಕು ಎಂದು ಕರೆ ನೀಡಿದರು.

ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ತಾಲಿಬಾನ್ ಸರ್ಕಾರ ಆಗಿದೆ. ಹಿಂದುಗಳಿಗೆ ರಕ್ಷಣೆ ಇಲ್ಲ. ವಕ್ಫ ವಿರುದ್ಧದ ಹೋರಾಟವನ್ನು ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ಯಬೇಕಿದೆ. ಇಸ್ಲಾಂ, ಕ್ರೈಸ್ತರು ಬೇರೆ ದೇಶಗಳಲ್ಲಿ ತಮ್ಮ ನೆಲೆ ಕಳೆದುಕೊಂಡು ಬಂದಿದ್ದಾರೆ. ನಿಮ್ಮ ಪ್ರವಾದಿಗೂ, ನಮ್ಮ ದೇಶಕ್ಕೂ ಏನೂ ಸಂಬಂಧ ಇಲ್ಲ. ಇಲ್ಲಿರುವುದು ರಾಮನ ಭೂಮಿ, ಕೃಷ್ಣನ ಭೂಮಿ, ಶಿವಾಜಿ ಮಹಾರಾಜ, ಚನ್ನಮ್ಮನ ಭೂಮಿ. ಭಾರತ ಹಿಂದು ಧರ್ಮದ ನೆಲೆಬೀಡು. ಹಿಂದುಗಳು ಸಂಘಟಿತರಾಗಬೇಕಿದೆ ಎಂದರು.

ಇದನ್ನೂ ಓದಿ:ಒಳ ಒಪ್ಪಂದದ ದಾಖಲೆ ಇದ್ರೆ ಬಿಡುಗಡೆ ಮಾಡಿ: ಯತ್ನಾಳ್ ವಿರುದ್ಧ ವಿಜಯೇಂದ್ರ ಆಕ್ರೋಶ

ಇದನ್ನೂ ಓದಿ:ಯತ್ನಾಳ ಒಬ್ಬ ಜೋಕರ್, ಮಾನಸಿಕ ರೋಗಿ: ಸಚಿವ ಖಂಡ್ರೆ ಕಿಡಿ