ರಾಜ್ಯ ರಾಜಕಾರಣದಲ್ಲಿ ನೀವಂದುಕೊಂಡಂತೆ ಏನು ನಡೆದಿಲ್ಲ. ನಿಮ್ಮ ಟಿವಿ ಮಾಧ್ಯಮದಲ್ಲಿ ಮಾತ್ರ ನಡೆದಿದೆ ಎಂದು ಹೇಳಿರುವ ಅಬಕಾರಿ ಸಚಿವ ಆರ್.ಬಿ.ತಿಮ್ಮಾಪೂರ ಅವರು, ಯಾರ್‍ಯಾರು ಎಲ್ಲಿ ಇದ್ಧಾರೆ ಅನ್ನೋದು ಇಂಪಾರ್ಟೆಂಟ್ ಅಲ್ಲ.

ಬಾಗಲಕೋಟೆ (ನ.26): ರಾಜ್ಯ ರಾಜಕಾರಣದಲ್ಲಿ ನೀವಂದುಕೊಂಡಂತೆ ಏನು ನಡೆದಿಲ್ಲ. ನಿಮ್ಮ ಟಿವಿ ಮಾಧ್ಯಮದಲ್ಲಿ ಮಾತ್ರ ನಡೆದಿದೆ ಎಂದು ಹೇಳಿರುವ ಅಬಕಾರಿ ಸಚಿವ ಆರ್.ಬಿ.ತಿಮ್ಮಾಪೂರ ಅವರು, ಯಾರ್‍ಯಾರು ಎಲ್ಲಿ ಇದ್ಧಾರೆ ಅನ್ನೋದು ಇಂಪಾರ್ಟೆಂಟ್ ಅಲ್ಲ, ಏನು ಸಹ ಆಗೋದಿಲ್ಲ. ಸರ್ಕಾರ ಭದ್ರವಾಗಿದೆ, ಸಿಎಂ ಬದಲಾವಣೆಯ ಯಾವುದೇ ಸುಳಿವು ಸದ್ಯಕ್ಕೆ ಇಲ್ಲ ಎಂದು ಹೇಳಿದ್ದಾರೆ. ಬಾಗಲಕೋಟೆಯಲ್ಲಿ ಅಬಕಾರಿ ಸಚಿವ ಆರ್.ಬಿ.ತಿಮ್ಮಾಪೂರ ಅವರು ಸುದ್ದಿಗಾರರೊಂದಿಗೆ ಮಾತನಾಡಿ, ಹೈಕಮಾಂಡ್ ಹಾಗೇನಾದ್ರೂ ಇದ್ಧರೆ ತಿಳಿಸುತ್ತಿತ್ತು.

Add Asianetnews Kannada as a Preferred SourcegooglePreferred

ಆದರೆ, ನಮಗೆ ತಿಳಿಸಿಲ್ಲ ಎಂದು ಹೇಳಿದರು. ಹೈಕಮಾಂಡ್ ಮಾತಿಗೆ ನಾನು ಬದ್ಧ ಎಂಬ ಸಿಎಂ ಹೇಳಿಕೆಗೆ ನಮ್ಮ ಪಕ್ಷದಲ್ಲಿ ಹೈಕಮಾಂಡೇ ಫೈನಲ್, ಅದಕ್ಕೆಲ್ಲರೂ ಬದ್ಧರಾಗಿರುತ್ತಾರೆ, ಅದನ್ನೇ ಸಿಎಂ ಹೇಳಿದ್ದಾರೆ ಎಂದರಲ್ಲದೇ, ಜಿ.ಪರಮೇಶ್ವರ ನಾನು ಸಿಎಂ ಆಕಾಂಕ್ಷಿ, ಸಿಎಂ ರೇಸ್ ನಲ್ಲಿ ನಾನು ಯಾವಾಗಲೂ ಇರುತ್ತೇನೆ ಎಂದು ಹೇಳರಿವು ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ್ದು, ಅದು ಯಾಕಿರಬಾರದು ?. ಒಂದು ವೇಳೆ ಚೇಂಜ್ ಮಾಡಿದ್ರೆ ನಾನು ರೇಸ್‌ನಲ್ಲಿರುತ್ತೇನೆ ಅಂತ ಹೇಳಿದ್ದಾರೆ ಅಷ್ಟೆ ಎಂದರು.

ನಿಮ್ಮನ್ನೂ ಸೇರಿ ಕೆಲವು ಸಚಿವರನ್ನು ಸಂಪುಟದಿಂದ ಕೈ ಬಿಡುತ್ತಾರೆ ಎನ್ನುವ ವಿಚಾರದ ಬಗ್ಗೆ ಮಾತನಾಡಿದ ಅವರು, ನಿಮ್ಮಿಂದಲೇ ನಾ ವಿಷಯ ಕೇಳಿದ್ದೇನೆ, ನನಗೇನು ಈ ಬಗ್ಗೆ ಗೊತ್ತಿಲ್ಲ. ದಲಿತ ಸಿಎಂ ವಿಚಾರ, ಯಾವುದೂ ಇಲ್ಲ, ಹೈಕಮಾಂಡ್ ಯಾರನ್ನ ಮಾಡುತ್ತಾರೆ ಅವರೇ ಸಿಎಂ ಆಗೋದು ಎಂದು ಹೇಳಿದರು. ಶಾಸಕರ ಬಣ ಕಟ್ಟಿಕೊಂಡು ಕೆಲವರು ದೆಹಲಿಗೆ ಹೋಗುತ್ತಿರುವ ಬಗ್ಗೆ ಮಾತನಾಡಿ, ದೆಹಲಿಗೆಲ್ಲ ಹೋದವರು ಅದಕ್ಕೆ ಹೋಗ್ತಾರಾ ಎಂದು ಸಚಿವ ತಿಮ್ಮಾಪೂರ ಮರು ಪ್ರಶ್ನೆ ಮಾಡಿದರು.

ಸರ್ಕಾರಿ ಶಾಲಾ ಮಕ್ಕಳಿಗೆ ಶಾಲಾ ಬ್ಯಾಗ್ ವಿತರಣೆ

ನನ್ನ ಹುಟ್ಟುಹಬ್ಬದ ಪ್ರಯುಕ್ತ ಒಂಟಗೋಡಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಎಲ್ಲಾ ಸರ್ಕಾರಿ ಶಾಲಾ ಮಕ್ಕಳಿಗೆ ಉಚಿತ ಶಾಲಾ ಬ್ಯಾಗ್ ವಿತರಿಸಿದ ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಮಹಾಲಿಂಗಪ್ಪ ತಟ್ಟಿಮನಿ ಅವರ ಕಾರ್ಯ ಶ್ಲಾಘನೀಯವಾದುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ. ತಿಮ್ಮಾಪೂರ ಹೇಳಿದರು. ಆರ್.ಬಿ. ತಿಮ್ಮಾಪುರ ಅವರ ಜನ್ಮದಿನ ಪ್ರಯುಕ್ತ ತಾಪಂ ಮಾಜಿ ಅಧ್ಯಕ್ಷ ಮಹಾಲಿಂಗಪ್ಪ ತಟ್ಟಿಮನಿ ಹಮ್ಮಿಕೊಂಡಿದ್ದ ಒಂಟಗೋಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚನ್ನಾಳ, ಒಂಟಗೋಡಿ, ಮಿರ್ಜಿ, ಮಲ್ಲಾಪುರ ಪಿಜೆ ಗ್ರಾಮಗಳ ಸರ್ಕಾರಿ ಪ್ರೌಢ ಶಾಲೆ ಮತ್ತು ಪ್ರಾಥಮಿಕ ಶಾಲೆಗಳ 900ಕ್ಕೂ ಅಧಿಕ ಮಕ್ಕಳಿಗೆ ಉಚಿತ ಶಾಲಾ ಬ್ಯಾಗ್ ವಿತರಣೆ ಸಮಾರಂಭದಲ್ಲಿ ಮಾತನಾಡಿದರು.

ಸರ್ಕಾರಿ ಶಾಲೆಗಳ ಬಡ ಮಕ್ಕಳ ಶಿಕ್ಷಣಕ್ಕೆ ಸಹಾಯ ಮಾಡುವ ಮಹಾಲಿಂಗಪ್ಪ ತಟ್ಟಿಮನಿಯವರ ಗುಣ ಮಾದರಿ ಮತ್ತು ಅನುಕರಣನೀಯ. ಇಡೀ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸರ್ಕಾರಿ ಶಾಲೆಯ ಮಕ್ಕಳ ಮುಖದಲ್ಲಿ ಮಂದಹಾಸ ಕಂಡು ನನ್ನ ಜನ್ಮ ಸಾರ್ಥಕವಾಯಿತು ಎನಿಸುತ್ತದೆ. ಖಾಸಗಿ ಶಾಲೆಗಳ ಹಾವಳಿ ಮಧ್ಯೆಯೂ ಇಂಥ ಕಾರ್ಯ ನಡೆದಿರುವುದು ಉತ್ತಮ ಬೆಳವಣಿಗೆ. ಇಂತಹ ಶ್ರೇಷ್ಠ ಕಾರ್ಯಗಳನ್ನು ಮಾಡಿ ದಿನಾಚರಣೆಗಳನ್ನು ಸ್ಮರಣೀಯ ಮತ್ತು ಸಾರ್ಥಕವಾಗಿಸಬಹುದು ಎಂದರು. ಬಿಇಒ ಎಸ್.ಎಂ.ಮುಲ್ಲಾ, ಮುಖಂಡರು, ಪಾಲಕರು, ಶಾಲಾ ಮಕ್ಕಳು ಸೇರಿದಂತೆ ಸಾರ್ವಜನಿಕರು ಉಪಸ್ಥಿತರಿದ್ದರು.