‘ಕಾಂಗ್ರೆಸ್ಸಿಗರಿಗೆ ರಾಮನ ಹೆಸರಿದ್ದರೆ ಅಪಥ್ಯ, ಹಾಗಾಗಿ ನರೇಗಾ ಬದಲಿಗೆ ವಿಬಿಜಿ ರಾಮ್‌ ಜಿ ಹೆಸರಿಗೆ ಆಕ್ಷೇಪ ವ್ಯಕ್ತಪಡಿಸುತ್ತಾರೆ’ ಎಂದು ತುಮಕೂರು ಗ್ರಾಮಾಂತರ ಕ್ಷೇತ್ರದ ಶಾಸಕ ಬಿ.ಸುರೇಶ್ ಗೌಡ ವಾಗ್ದಾಳಿ ನಡೆಸಿದರು.

ಮಧುಗಿರಿ : ‘ಕಾಂಗ್ರೆಸ್ಸಿಗರಿಗೆ ರಾಮನ ಹೆಸರಿದ್ದರೆ ಅಪಥ್ಯ, ಹಾಗಾಗಿ ನರೇಗಾ ಬದಲಿಗೆ ವಿಬಿಜಿ ರಾಮ್‌ ಜಿ ಹೆಸರಿಗೆ ಆಕ್ಷೇಪ ವ್ಯಕ್ತಪಡಿಸುತ್ತಾರೆ’ ಎಂದು ತುಮಕೂರು ಗ್ರಾಮಾಂತರ ಕ್ಷೇತ್ರದ ಶಾಸಕ ಬಿ.ಸುರೇಶ್ ಗೌಡ ವಾಗ್ದಾಳಿ ನಡೆಸಿದರು.

Add Asianetnews Kannada as a Preferred SourcegooglePreferred

ಇಲ್ಲಿನ ವೇಮನ ಸಮುದಾಯ ಭವನದಲ್ಲಿ ಇತ್ತೀಚೆಗೆ ನಡೆದ ವಿಬಿ ಜಿ ರಾಂ ಜಿ ಯೋಜನೆ ಕುರಿತು ಜಾಗೃತಿ ಸಭೆಯಲ್ಲಿ ಕಾರ್ಯಕರ್ತರನ್ನುದ್ದೇಶಿಸಿ ಸೋಮವಾರ ಮಾತನಾಡಿದರು.

ರಾಮ ಎಂದರೆ ಕಾಂಗ್ರೆಸ್ಸಿಗರಿಗೆ ಅಲರ್ಜಿ

‘ರಾಮ ಎಂದರೆ ಕಾಂಗ್ರೆಸ್ಸಿಗರಿಗೆ ಅಲರ್ಜಿ, ವಿಬಿ ಜಿ ರಾಂ ಜಿ ಎಂದರೆ ವಿಕಸಿತ ಭಾರತ ಗ್ರಾಮೀಣ ರೂರಲ್‌ ಡವಲಪ್‌ಮೆಂಟ್ ಮತ್ತು ಜೀವನೋಪಾಯ ಮಿಷನ್‌ ಎಂದರ್ಥ, ಅದಕ್ಕೆ ಶ್ರೀರಾಮನ ಹೆಸರಿದ್ದಕ್ಕೆ ಕಾಂಗ್ರೆಸ್ಸಿಗರಿಗೆ ಆಗುತ್ತಿಲ್ಲ. ರಾಮ ಎಂದರೆ ಪರಿಶ್ರಮ, ರಾಮ ಎಂದರೆ ಪ್ರಮಾಣಿಕ, ರಾಮ ಎಂದರೆ ನಾವು ನಂಬಿರುವ ದೇವರು. ಇಂತಹ ಆದರ್ಶ ಪುರುಷನ ಹೆಸರಿದ್ದರೆ ಇವರಿಗೆ ಹೊಟ್ಟೆ ಉರಿ. ಇವರು ಇಂದಿರಾ ಗಾಂಧಿ, ರಾಜೀವ್‌ ಗಾಂಧಿ ಹೆಸರನ್ನು ಹಲವಾರು ಯೋಜನೆಗೆ ಇಟ್ಟಿಲ್ಲವೇ’ ಎಂದು ಪ್ರಶ್ನಿಸಿದರು.

ವಿಬಿ ಜಿ ರಾಂ ಜಿ ಯೋಜನೆ ಬಗ್ಗೆ ಕಾಂಗ್ರೆಸ್ ಅಪಪ್ರಚಾರ ಮಾಡುತ್ತಿದ್ದು, ಹಿಂದಿನ ನರೇಗಾ ಯೋಜನೆಗಿಂತ ಹೆಚ್ಚು ಕೂಲಿ ದಿನಗಳು ಹಾಗೂ ಕೂಲಿಯ ವೆಚ್ಚವನ್ನು ಹೆಚ್ಚಿಸಿದ್ದು, ಗ್ರಾಮೀಣ ಜನತೆಗೆ ಲಾಭ ತರುವ ಈ ಯೋಜನೆ ಬಗ್ಗೆ ಜನ ಜಾಗೃತಿ ಮೂಡಿಸಬೇಕು ಎಂದರು.

ರೈತರಿಗೆ ಗೋದಾಮು, ಕಟ್ಟಡ ಕಟ್ಟಲು ಹಣ

ರೈತರಿಗೆ ಗೋದಾಮು, ಕಟ್ಟಡ ಕಟ್ಟಲು ಹಣ ನೀಡಲಿದೆ. ಎಲ್ಲೂ ಸಹ ಗಾಂಧೀಜಿಯವರ ಬಗ್ಗೆ ನಿರ್ಲಕ್ಷ್ಯ ತೋರಿಲ್ಲ, ಸ್ವತಂತ್ರ ಬಂದಾಗಲೇ ಕಾಂಗ್ರೆಸ್ ಪಕ್ಷವನ್ನು ವಿಸರ್ಜಿಸುವಂತೆ ಗಾಂಧೀಜಿ ಹೇಳಿದ್ದರು. ಆದರೆ ಕಾಂಗ್ರೆಸ್‌ನ ನಕಲಿ ಗಾಂಧಿಗಳು ಸ್ವಾರ್ಥಿಗಳು, ಅಧಿಕಾರಕ್ಕೆ ಅಂಟಿಕೊಂಡು ಅವರ ಮಾತನ್ನು ಧಿಕ್ಕರಿಸಿ ಅವರ ಹೆಸರಲ್ಲಿ ಸರ್ಕಾರ ರಚಿಸಿದ್ದು, 60 ವರ್ಷಗಳ ಕಾಲ ದೇಶವನ್ನು ಲೂಟಿ ಹೊಡೆದರು. ಆದರೆ ಈಗ ಪ್ರಧಾನಿ ನರೇಂದ್ರ ಮೋದಿ ಅವರು ದೇಶವನ್ನು ಸಮರ್ಥವಾಗಿ ಮುನ್ನಡೆಸುತ್ತಿದ್ದು, ವಿಶ್ವ ಗುರುವಾಗುತ್ತಾ ಸಾಗುತ್ತಿದೆ’ ಎಂದರು.

ಎಂಎಲ್‌ಸಿ ಚಿದಾನಂದಗೌಡ ಮಾತನಾಡಿ, ಹಿಂದಿದ್ದ ನರೇಗಾ ಯೋಜನೆಯಲ್ಲಿ ರಾಜ್ಯ ಸರ್ಕಾರ ಹಲವು ಅಕ್ರಮವೆಸಗಿತ್ತು. ಈ ಯೋಜನೆಯ ಹಣ ಕೃಷಿಕರಿಗೆ ತಲುಪದೆ ಗುತ್ತಿಗೆದಾರರ ಜೇಬಿಗೆ ಬೀಳುತ್ತಿತ್ತು. ಕೇಂದ್ರ ಶೇ.90ರಷ್ಟು ಹಣ ನೀಡುತ್ತಿದ್ದ ಕಾರಣ ನರೇಗಾ ಬಗ್ಗೆ ನಿರ್ಲಕ್ಷ್ಯ ವಹಿಸಿದ್ದರು. ಅದಕ್ಕಾಗಿ ಬಿಜೆಪಿ ಸರ್ಕಾರ ರಾಜ್ಯ ಸರ್ಕಾರಕ್ಕೆ ಜವಾಬ್ದಾರಿ ಇರಲಿ ಎಂದು 60-40 ಅನುಪಾತದಲ್ಲಿ ಯೋಜನೆ ರೂಪಿಸಿದ್ದು, ಕಡ್ಡಾಯವಾಗಿ ಕಾರ್ಮಿಕರಿಗೆ ಕೂಲಿ ಹಣ ತಲುಪುವಂತೆ ಕಾನೂನು ಮಾರ್ಪಾಡು ಮಾಡಿದ್ದು, ಕೆಲಸದ ದಿನಗಳನ್ನು 100ರಿಂದ 125ಕ್ಕೆ ಏರಿಸಲಾಗಿದೆ’ ಎಂದರು.

ಜಿಲ್ಲಾ ಉಪಾಧ್ಯಕ್ಷ ಕೆ.ಎಸ್‌.ಪಾಂಡುರಂಗಾ ರೆಡ್ಡಿ ಮಾತನಾಡಿ, ‘ಜಿ ರಾಂ ಜಿ ಯೋಜನೆಯು ನಿಜವಾಗಿ ಜನರಿಗೆ ತಲುಪುವ ಯೋಜನೆ, ಕೇಂದ್ರ ನೀಡಿದ್ದ ಈ ಯೋಜನೆಗೆ ಹಣ ನೀಡುವ ಯೋಗ್ಯತೆ ಇಲ್ಲದೆ ಕಾಂಗ್ರಸ್ ವಿರೋಧಿಸುತ್ತಿದೆ. ಮುಂದಿನ ಚುನಾವಣೆಗೆ ಕಾರ್ಯಕರ್ತರು ಸಂಘಟಿತರಾಗಬೇಕು’ ಎಂದರು.

ಕಾರ್ಯಕ್ರಮದಲ್ಲಿ ತಾಲೂಕು ಅಧ್ಯಕ್ಷ ಹನುಮಂತರೆಡ್ಡಿ, ಕಾರ್ಯದರ್ಶಿ ನಾಗರಾಜಪ್ಪ, ಮೋಹನ್‌ ರಾಜ್, ರಮೇಶ್‌ ಪದಾಧಿಕಾರಿಗಳು ಭಾಗವಹಿಸಿದ್ದರು.

- ಜಿ ರಾಂ ಜಿ ಯೋಜನೆಗೆ ರಾಮನ ಹೆಸರಿಟ್ಟರೆ ಹೊಟ್ಟಿಯುರಿ: ಶಾಸಕ

- ಕಾಂಗ್ರೆಸ್‌ನ ಯೋಜನೆಗಳಿಗೆ ಇಂದಿರಾ, ರಾಜೀವ್‌ ಹೆಸರು ಸರಿಯೇ

- ಜಿ ರಾಂ ಜಿಯಿಂದಾಗಿ ಕೆಲಸದ ದಿನಗಳು ಮತ್ತು ಕೂಲಿಯೂ ಹೆಚ್ಚಳ

- ಗ್ರಾಮೀಣ ಜನತೆಗೆ ಲಾಭ ತರುವ ಯೋಜನೆಗೆ ಜನಜಾಗೃತಿ ಅಗತ್ಯ