ಬಿಜೆಪಿಯವರಿಗೆ ಕೃತಜ್ಞತೆ ಇಲ್ಲ. ಗಾಂಧೀಜಿಯವರ ಕೊಡುಗೆ ಬಗ್ಗೆ ಜ್ಞಾನ ಇಲ್ಲ. ಅದಕ್ಕಾಗಿಯೇ ನರೇಗಾದಲ್ಲಿರುವ ಗಾಂಧೀಜಿ ಅವರ ಹೆಸರು ಬದಲಾವಣೆ ಮಾಡುವ ಕಾರ್ಯಕ್ಕೆ ಮುಂದಾಗಿದ್ದಾರೆ ಎಂದು ಸಚಿವ ರಾಮಲಿಂಗಾರೆಡ್ಡಿ ವಾಗ್ದಾಳಿ ನಡೆಸಿದರು.

ಮಾಗಡಿ (ಡಿ.26): ಬಿಜೆಪಿಯವರಿಗೆ ಕೃತಜ್ಞತೆ ಇಲ್ಲ. ಗಾಂಧೀಜಿಯವರ ಕೊಡುಗೆ ಬಗ್ಗೆ ಜ್ಞಾನ ಇಲ್ಲ. ಅದಕ್ಕಾಗಿಯೇ ನರೇಗಾದಲ್ಲಿರುವ ಗಾಂಧೀಜಿ ಅವರ ಹೆಸರು ಬದಲಾವಣೆ ಮಾಡುವ ಕಾರ್ಯಕ್ಕೆ ಮುಂದಾಗಿದ್ದಾರೆ ಎಂದು ಜಿಲ್ಲಾ ಉಸ್ತುವಾರಿ ಸಚಿವರಾದ ರಾಮಲಿಂಗಾರೆಡ್ಡಿ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು. ಪಟ್ಟಣದ ಎನ್‌ಇಎಸ್ ಸರ್ಕಲ್‌ನಲ್ಲಿ ನೂತನವಾಗಿ ನಿರ್ಮಾಣವಾಗಿರುವ ಗಾಂಧಿ ಪ್ರತಿಮೆ ಅನಾವರಣಗೊಳಿಸಿ ಮಾತನಾಡಿದ ಅವರು, ಬಿಜೆಪಿಯವರ ದುಷ್ಟತನದ ಬುದ್ದಿ ಇದರಿಂದಲೇ ಗೊತ್ತಾಗಿದೆ. ಗಾಂಧೀಜಿ ಅವರನ್ನು ಕೊಲ್ಲಲು 6 ಬಾರಿ ಗೂಡ್ಸೆ ಸಂಚು ಮಾಡಿದ್ದನು. 7ನೇ ಬಾರಿಗೆ ಅವರನ್ನು ಕೊಲೆ ಮಾಡಿದರು. ಈಗ ಬಿಜೆಪಿಯವರು ಮತ್ತೊಮ್ಮೆ ಮಹಾತ್ಮ ಗಾಂಧಿಯನ್ನು ಕೊಲೆ ಮಾಡಿದ್ದಾರೆ. ಹೆಸರು ಬದಲಾವಣೆ ಮೂಲಕ ಗಾಂಧೀಜಿಗೆ ಅವಮಾನ ಮಾಡಿದ್ದಾರೆ ಎಂದು ಆಕ್ರೋಶ ವ್ಯಕ್ತ ಪಡಿಸಿದರು.

Add Asianetnews Kannada as a Preferred SourcegooglePreferred

2 ವರ್ಷಕ್ಕೊಮ್ಮೆ ಕೆಂಪೇಗೌಡ ಉತ್ಸವ: ಶಾಸಕ ಎಚ್.ಸಿ.ಬಾಲಕೃಷ್ಣ ಮಾತನಾಡಿ, ಎರಡು ವರ್ಷಕ್ಕೊಮ್ಮೆ ಮಾಗಡಿಯಲ್ಲಿ ಕೆಂಪೇಗೌಡ ಉತ್ಸವವನ್ನು ಮಾಡಲಾಗುವುದು. ಈ ಬಾರಿ ಆರಂಭವಾಗಿದ್ದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹಾಗೂ ಬಮೂಲ್ ಅಧ್ಯಕ್ಷ ಡಿ.ಕೆ.ಸುರೇಶ್ ಸಹಕಾರದಿಂದ ಕಾರ್ಯಕ್ರಮ ಯಶಸ್ವಿಯಾಗಿ ನಡೆಯುತ್ತಿದೆ ಎಂದರು. ಮೂರು ದಿನಗಳ ಕಾಲ ಮ್ಯಾರಥಾನ್, ರಂಗೋಲಿ ಸ್ಪರ್ಧೆ, ರೈತರಿಗೆ ಸನ್ಮಾನ, ವೇಷ ಭೂಷಣ ಸ್ಪರ್ಧೆ ವಿಶೇಷವಾಗಿ ತಿರುಪತಿ ತಿರುಮಲ ದೇವಸ್ಥಾನದ ವತಿಯಿಂದ ಕಲ್ಯಾಣೋತ್ಸವ ಮಾಡಲಾಗುತ್ತಿದ್ದು 70ಸಾವಿರ ತಿರುಪತಿ ಲಡ್ಡನ್ನು ವಿತರಣೆ ಮಾಡಲಾಗುತ್ತಿದೆ.

ಕೊನೆಯ ದಿನ ಕನ್ನಡ ಚಲನಚಿತ್ರ ಹಿನ್ನೆಲೆ ಗಾಯಕಿಯರಿಂದ ವಿಶೇಷ ರಸ ಸಂಜೆ ಕಾರ್ಯಕ್ರಮ ಏರ್ಪಡಿಸಲಾಗಿದ್ದು, ಎಲ್ಲಾ ವರ್ಗದವರಿಗೂ ಅವಕಾಶ ಕಲ್ಪಿಸಿಕೊಡಲಾಗಿದೆ ಎಂದು ಹೇಳಿದರು. ಗಾಂಧಿ ಪ್ರತಿಮೆ ನಿರ್ಮಾಣ ಮಾಡಲಾಗಿದ್ದು ಈ ಜಾಗದಲ್ಲಿ ಸರ್ಕಾರಿ ಕಟ್ಟಡಗಳು ಬರುವುದರಿಂದ ಮಾಜಿ ಶಾಸಕರಾದ ಏ ಮಂಜುನಾಥ್ ರವರ ಹೆಸರನ್ನು ಕೂಡ ಕಲ್ಲಿನಲ್ಲಿ ಹಾಕಿಸಲಾಗಿದೆ. ಈ ಬಗ್ಗೆ ಅವರ ಅಭಿಪ್ರಾಯವನ್ನು ಮಾಧ್ಯಮಗಳು ಸಂಗ್ರಹಿಸಬೇಕು. ಇನ್ನೂ ಒಂದು ವರ್ಷದಲ್ಲಿ ಮಾಗಡಿ ಪತ್ರಿಕಾ ಭವನ ಹಾಗೂ ಕನ್ನಡ ಭವನ ನಿರ್ಮಾಣ ಮಾಡಿ ಸಮರ್ಪಣೆ ಮಾಡುವ ಕೆಲಸ ಮಾಡುತ್ತೇವೆ ಎಂದು ಬಾಲಕೃಷ್ಣ ತಿಳಿಸಿದರು.

ಮ್ಯಾರಥಾನ್ ಗೆ ಚಾಲನೆ: ಶಾಸಕ ಬಾಲಕೃಷ್ಣ ಸೋಮೇಶ್ವರ ದೇವಸ್ಥಾನದ ಮುಂಭಾಗದಿಂದ ಶ್ರೀರಂಗನಾಥ ಸ್ವಾಮಿ ದೇವಸ್ಥಾನದವರೆಗೂ ನಮ್ಮ ನೀರು ನಮ್ಮ ಹಕ್ಕು ಘೋಷಣೆಯೊಂದಿಗೆ ಮ್ಯಾರಥಾನಿಗೆ ಚಾಲನೆ ನೀಡಲಾಯಿತು. ನೂರಾರು ಯುವಕರು ಹಾಗೂ ಮುಖಂಡರುಗಳು ಮ್ಯಾರಥಾನ್ ನಲ್ಲಿ ಉತ್ಸಾಹದಿಂದ ಭಾಗವಹಿಸಿದ್ದು ಕಂಡು ಬಂದಿತು. ಮಾಗಡಿ ಕೋಟೆ ಮೈದಾನದಲ್ಲಿ ವಿವಿಧ ಸಂಸ್ಕೃತಿಕ ಕಾರ್ಯಕ್ರಮಗಳು ನೆರವೇರಿದ್ದು ಕಾರ್ಯಕ್ರಮದಲ್ಲಿ ತಾಲ್ಲೂಕು ಮಟ್ಟದ ಅಧಿಕಾರಿಗಳು ಮುಖಂಡರುಗಳು ಭಾಗವಹಿಸಿದ್ದರು.

ಬಸ್ ದುರಂತ: ಲಾರಿ ಚಾಲಕನ ಅಜಾಗರೂಕತೆ ಕಾರಣ

ಚಿತ್ರದುರ್ಗದಲ್ಲಿ ಗೋಕರ್ಣಕ್ಕೆ ಹೋಗುತ್ತಿದ್ದ ಸೀಬರ್ಡ್ ಬಸ್‌ಗೆ ಲಾರಿ ಡಿಕ್ಕಿಯಾಗಿ ಅವಘಡ ಸಂಭವಿಸಿದೆ. ಡಿವೈಡರ್ ದಾಟಿ ಬಂದು ಬಸ್ ಗೆ ಲಾರಿ ಗುದ್ದಿದೆ. ಲಾರಿ ಚಾಲಕನ ರ್ಯಾಷ್ ಡ್ರೈವ್ ಹಾಗೂ ಅಜಾಗರೂಕತೆಯೇ ಅವಘಡಕ್ಕೆ ಕಾರಣ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಪ್ರತಿಕ್ರಿಯಿಸಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈಗಾಗಲೇ ಸಾರಿಗೆ ಇಲಾಖೆ ಕಮಿಷನರ್ ಸ್ಥಳಕ್ಕೆ ಹೋಗಿದ್ದಾರೆ. ಯಾವ ಕಾರಣಕ್ಕೆ ಬೆಂಕಿ ಹೊತ್ತಿಕೊಂಡಿದೆ ಎಂಬ ಬಗ್ಗೆ ತನಿಖೆ ನಡೆಸಬೇಕಿದೆ. ಮಾಹಿತಿ ಪ್ರಕಾರ 11 ಜನ ಮೃತೊಟ್ಟಿದ್ದಾರೆ ಎಂದು ಗೊತ್ತಾಗಿದೆ. ಮೊನ್ನೆಯೂ ಒಂದು ಬಸ್ ದುರಂತ ಸಂಭವಿಸಿದ ಮೇಲೆ ಸಾರಿಗೆ ಇಲಾಖೆ ಸಾಕಷ್ಟು ಕ್ರಮವಹಿಸಿದೆ ಎಂದರು.

ಬಸ್ ನಲ್ಲಿ ಯಾವುದೇ ರೀತಿಯ ಸ್ಪೋಟಕ ವಸ್ತುಗಳನ್ನ ಸಾಗಿಸದಂತೆ ಎಚ್ಚರ ವಹಿಸಿದ್ದೇವೆ. 2013ರಲ್ಲೂ ನಾನು ಸಾರಿಗೆ ಸಚಿವನಾಗಿದ್ದಾಗ ಒಂದು ಬಸ್ ಅಗ್ನಿ ದುರಂತ ಆಗಿತ್ತು. ಆಗಲೂ ಎಲ್ಲಾ ಬಸ್ ಗಳಿಗೆ ಕಡ್ಡಾಯ ಎಮರ್ಜೆನ್ಸಿ ಡೋರ್ ಮಾಡಿದ್ದೇವೆ. ಈಗಲೂ ಎಲ್ಲಾ ಬಸ್ ಗಳಲ್ಲೂ ಎಮರ್ಜೆನ್ಸಿ ಡೋರ್ ಕಡ್ಡಾಯ ಮಾಡಲಾಗಿದೆ. ಚಾಲಕರ ಅಜಾಗರೂಕತೆಯಿಂದ ಅಪಘಾತ ಆಗಿದೆ. ಈಗಾಗಲೇ ಮುಖ್ಯಮಂತ್ರಿಗಳು ಎಲ್ಲಾ ರೀತಿಯ ಕ್ರಮ ಕೈಗೊಳ್ಳುವಂತೆ ಜಿಲ್ಲಾಡಳಿತಕ್ಕೆ ಸೂಚನೆ ನೀಡಿದ್ದಾರೆ. ಮುಖ್ಯಮಂತ್ರಿಗಳ ಕಚೇರಿ ಜೊತೆ ಸಂಪರ್ಕದಲ್ಲಿದ್ದೇವೆ. ಮೃತರ ಕುಟುಂಬಗಳಿಗೆ ರಾಜ್ಯ ಸರ್ಕಾರದಿಂದಲೂ ಪರಿಹಾರ ಘೋಷಣೆ ಮಾಡಲಾಗುತ್ತದೆ ಎಂದು ರಾಮಲಿಂಗಾರೆಡ್ಡಿ ತಿಳಿಸಿದರು.