ಭಾರತ್ ಜೋಡೋ ಯಾತ್ರೆ ಯಶಸ್ವಿಯಾದ ಬಳಿಕ ಎಐಸಿಸಿ ನಾಯಕ ರಾಹುಲ್ ಗಾಂಧಿ ಅವರು ಇದೇ ಮೊದಲ ಬಾರಿಗೆ ಎರಡು ದಿನಗಳ ಪ್ರವಾಸಕ್ಕಾಗಿ ರಾಜ್ಯಕ್ಕೆ ಭಾನುವಾರ ಆಗಮಿಸಲಿದ್ದಾರೆ.
ಬೆಂಗಳೂರು (ಏ.16): ಭಾರತ್ ಜೋಡೋ ಯಾತ್ರೆ ಯಶಸ್ವಿಯಾದ ಬಳಿಕ ಎಐಸಿಸಿ ನಾಯಕ ರಾಹುಲ್ ಗಾಂಧಿ ಅವರು ಇದೇ ಮೊದಲ ಬಾರಿಗೆ ಎರಡು ದಿನಗಳ ಪ್ರವಾಸಕ್ಕಾಗಿ ರಾಜ್ಯಕ್ಕೆ ಭಾನುವಾರ ಆಗಮಿಸಲಿದ್ದಾರೆ. ಭಾನುವಾರ ಮುಂಜಾನೆ ದೆಹಲಿಯಿಂದ ಹೊರಟು ಬೆಳಗ್ಗೆ 10 ಗಂಟೆ ವೇಳೆಗೆ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಂದಿಳಿಯುವ ರಾಹುಲ್ ಬಳಿಕ ಅಲ್ಲಿಂದ ರಸ್ತೆ ಮೂಲಕ ಕೋಲಾರಕ್ಕೆ ತೆರಳಲಿದ್ದಾರೆ. ಅಲ್ಲಿ ಬೆಳಗ್ಗೆ 11 ಗಂಟೆಗೆ ಪಕ್ಷವು ಆಯೋಜಿಸಿರುವ ಜೈ ಭಾರತ ಸಮಾವೇಶದಲ್ಲಿ ಪಾಲ್ಗೊಂಡು ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಕೂಡ ಸಮಾವೇಶದಲ್ಲಿ ಉಪಸ್ಥಿತರಿದ್ದು ಮಾತನಾಡಲಿದ್ದಾರೆ.
2018ರಲ್ಲಿ ಕೋಲಾರದಲ್ಲಿ ಲೋಕಸಭಾ ಚುನಾವಣೆ ಪ್ರಚಾರದ ವೇಳೆ ಆಡಿದ ಮಾತಿನ ಪ್ರಕರಣದಲ್ಲಿ ಇತ್ತೀಚೆಗಷ್ಟೇ ರಾಹುಲ್ ಗಾಂಧಿ 2 ವರ್ಷ ಜೈಲು ಶಿಕ್ಷೆ ಗುರಿಯಾಗಿದ್ದರು. ಅಲ್ಲದೆ ಲೋಕಸಭಾ ಸದಸ್ಯತ್ವವನ್ನು ಕಳೆದುಕೊಂಡಿದ್ದರು. ಹೀಗಾಗಿ ಮರಳಿ ಕೋಲಾರಕ್ಕೆ ಅವರ ಭೇಟಿ ಸಾಕಷ್ಟುಕುತೂಹಲ ಕೆರಳಿಸಿದೆ. ಕೋಲಾರ ಸಮಾವೇಶ ಮುಗಿಸಿಕೊಂಡು ಸಂಜೆ ವೇಳೆಗೆ ಬೆಂಗಳೂರು ನಗರಕ್ಕೆ ವಾಪಸ್ಸಾಗಲಿರುವ ರಾಹುಲ್ ಗಾಂಧಿ ಅವರು, ಸಂಜೆ 6.10ರ ಸುಮಾರಿಗೆ ಬೆಂಗಳೂರಿನ ಕ್ವೀನ್ಸ್ ರಸ್ತೆಯ ಕಾಂಗ್ರೆಸ್ ಭವನದ ಹಿಂಭಾಗದಲ್ಲಿ ನಿರ್ಮಿಸಿರುವ ನೂತನ ಕಟ್ಟಡ ‘ಇಂದಿರಾ ಗಾಂಧಿ ಭವನ’ದ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ.
ಕಾಂಗ್ರೆಸ್ನಿಂದ ಮಾತ್ರ ಸಂವಿಧಾನ ರಕ್ಷಣೆ: ಶಾಸಕ ಎಚ್.ಕೆ.ಪಾಟೀಲ್
ಈ ಭವನವನ್ನು ಮಲ್ಲಿಕಾರ್ಜುನ ಖರ್ಗೆ ಅವರು ಉದ್ಘಾಟಿಸಲಿದ್ದು, ರಾಹುಲ್ ಮುಖ್ಯ ಅತಿಥಿಯಾಗಿ ಪಾಲ್ಗೊಳ್ಳುವರು. ಬಳಿಕ ಭಾನುವಾರ ನಗರದಲ್ಲೇ ಉಳಿಯುವ ಅವರು ಸೋಮವಾರ ಬಾಲ್ಕಿ ಮತ್ತು ಹುಮ್ನಾಬಾದ್ಗೆ ತೆರಳಿ ಅಲ್ಲಿ ಪಕ್ಷದ ಅಭ್ಯರ್ಥಿಗಳ ನಾಮಪತ್ರ ಸಲ್ಲಿಕೆಯಲ್ಲಿ ಭಾಗಿಯಾಗಲಿದ್ದಾರೆ. ಬಳಿಕ ದೆಹಲಿಗೆ ಹಿಂತಿರುಗುವರು ಎಂದು ಪಕ್ಷದ ಮೂಲಗಳು ತಿಳಿಸಿವೆ. ರಾಹುಲ್ ಗಾಂಧಿ ಆಗಮಿಸುವ ಹಿನ್ನೆಲೆಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಸೇರಿದಂತೆ ಹಲವು ಪ್ರಮುಖ ನಾಯಕರು ಈಗಾಗಲೇ ಕೋಲಾರಕ್ಕೆ ತೆರಳಿದ್ದು ಸಮಾವೇಶ ಯಶಸ್ವಿಗೊಳಿಸಲು ಪಕ್ಷದ ಜಿಲ್ಲಾ ನಾಯಕರೊಂದಿಗೆ ಸೇರಿ ಎಲ್ಲ ರೀತಿಯ ಸಿದ್ಧತೆಗಳನ್ನು ಕೈಗೊಂಡಿದ್ದಾರೆ.
17ಕ್ಕೆ ಭಾಲ್ಕಿ, ಹುಮನಾಬಾದ್ಗೆ ಭೇಟಿ: ಹುಮನಾಬಾದ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ರಾಜಶೇಖರ ಪಾಟೀಲ… ಅವರ ಪರ ಪ್ರಚಾರಕ್ಕೆ ಏ.17ರಂದು ಬೆಳಗ್ಗೆ ಭಾಲ್ಕಿ ಹಾಗೂ ಮಧ್ಯಾಹ್ನ ಹುಮನಾಬಾದ್ಗೆ ರಾಹುಲ್ ಗಾಂಧಿ ಆಗಮಿಸಲಿದ್ದಾರೆ ಎಂದು ಎಐಸಿಸಿ ಕಾರ್ಯದರ್ಶಿ ಹಾಗೂ ಬೀದರ ಜಿಲ್ಲಾ ಚುನಾವಣೆ ಉಸ್ತವಾರಿ ಶ್ರೀಧರರೆಡ್ಡಿ ಮಾಹಿತಿ ನೀಡಿದರು. ಕಾಂಗ್ರೆಸ್ ಅಭ್ಯರ್ಥಿ ರಾಜಶೇಖರ ಪಾಟೀಲ ಅವರ ಗೃಹ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಏ.17ಕ್ಕೆ ಸೋಮವಾರ ಪಟ್ಟಣದ ರಥ ಮೈದಾನದಲ್ಲಿ ಮಧ್ಯಾಹ್ನ 1 ಗಂಟೆಗೆ ರಾಹುಲ್ ಗಾಂಧಿ ಆಗಮಿಸಲಿದ್ದು, ಕಾಂಗ್ರೆಸ್ ಕಾರ್ಯಕರ್ತರು, ಅಭಿಮಾನಿಗಳು ಕಾರ್ಯಕ್ರಮಕ್ಕೆ ಆಗಮಿಸಿ ರಾಜಶೇಖರ ಪಾಟೀಲ ಪರವಾಗಿ ತಮ್ಮ ಶಕ್ತಿ ತೋರಿಸಬೇಕು ಎಂದರು.
ಕ್ಷೇತ್ರ ವ್ಯಾಪ್ತಿ ವಿವಿಧ ಯೋಜನೆ ಮೂಲಕ ಮನೆ, ರಸ್ತೆ, ಚರಂಡಿ, ವಸತಿ ಶಾಲೆ ಸೇರಿದಂತೆ ಅಭಿವೃದ್ಧಿ ಕೆಲಸಗಳನ್ನು ಜನತೆ ಮನಗಂಡಿದ್ದಾರೆ. 2018ಕ್ಕಿಂತಲೂ ಹೆಚ್ಚಿನ ಮತಗಳನ್ನುಈ ಬಾರಿ ಕ್ಷೇತ್ರದ ಜನತೆ ನೀಡುವ ನೀರಿಕ್ಷೆ ಇದೆ. ರಾಜ್ಯದಲ್ಲಿ ಮತ್ತೊಮ್ಮೆ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರಲಿದ್ದು, ಭ್ರಷ್ಟಾಚಾರ ಮುಕ್ತ ರಾಜ್ಯವಾಗಲಿದೆ. ಮತದಾರರು 40% ಪ್ರತಿಶತ ಸರ್ಕಾರದಿಂದ ಬೇಸತ್ತಿದ್ದಾರೆ ಎಂದು ಹೇಳಿದ ಅವರು, 17ರಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಸುರ್ಜೇವಾಲಾ, ಜಮ್ಮಿರ ಅಹ್ಮದ್ ಸೇರಿದಂತೆ ಕೇಂದ್ರ, ರಾಜ್ಯ ಸೇರಿದಂತೆ ಅನೇಕ ಮುಖಂಡರು ಆಗಮಿಸಲಿದ್ದಾರೆ ಎಂದು ಹೇಳಿದರು.
ಬಿಜೆಪಿಯಂತಹ ಕೆಟ್ಟ ಸರ್ಕಾರವನ್ನು ನನ್ನ ಜೀವನದಲ್ಲಿ ನೋಡಿಲ್ಲ: ಸಿದ್ಧರಾಮಯ್ಯ
ಜಿಲ್ಲಾ ಚುನಾವಣಾ ನೀರಿಕ್ಷಕಿ ಹಾಗೂ ಎಐಸಿಸಿ ಸದಸ್ಯೆ ಉಸಮ್ಮಾ ಶಾಕೀರ ಮಾತನಾಡಿ. ಜೆಡಿಎಸ್ ಪಕ್ಷ ಅಭ್ಯರ್ಥಿ ಬಲಿ-ಕಾ-ಬಕ್ರಾ ಮಾಡಿದ್ದಾರೆ. ಬಿಜೆಪಿ ಅಭ್ಯರ್ಥಿ ರಾಜಕೀಯವಾಗಿ ಎಲ್ಲಿಂದ ಬೆಳೆದಿದ್ದಾರೆ ಎನ್ನುವುದು ಅವರೆ ಹೇಳಲ್ಲಿ. ರಾಜಶೇಖರ ಪಾಟೀಲ ನಾಮಪತ್ರ ಸಲ್ಲಿಕೆ ಸಮಯದಲ್ಲಿ ಪ್ರತಿಯೊಬ್ಬರು ಭಾಗವಹಿಸಬೇಕು ಎಂದರು. ಇನ್ನು ಕರ್ನಾಟಕದಲ್ಲಿ ಒಂದೇ ಹಂತದಲ್ಲಿ ಮೇ 10ರಂದು ಮತದಾನ ನಡೆಯಲಿದ್ದು, ಮೇ 13ಕ್ಕೆ ಮತ ಎಣಿಕೆ ನಡೆಯಲಿದೆ. ಏಪ್ರಿಲ್ 13ಕ್ಕೆ ಚುನಾವಣೆ ಅಧಿಸೂಚನೆ ಹೊರಡಿಸಲಿದ್ದು, ಏಪ್ರಿಲ್ 13ರಿಂದ ನಾಮಪತ್ರ ಸಲ್ಲಿಕೆ ಆರಂಭವಾಗಲಿದೆ. ನಾಮಪತ್ರ ಹಿಂಪಡೆಯಲು ಏಪ್ರಿಲ್ 24 ಕಡೆಯ ದಿನಾಂಕ.
