Asianet Suvarna News Asianet Suvarna News

Bharat Jodo Yatra: ಕರ್ನಾಟಕದ್ದು ದೇಶದಲ್ಲೇ ಭ್ರಷ್ಟ ಸರ್ಕಾರ: ರಾಹುಲ್‌ ಗಾಂಧಿ

ಕರ್ನಾಟಕದ ಬಿಜೆಪಿ ಸರ್ಕಾರ ದೇಶದಲ್ಲಿಯೇ ಅತ್ಯಂತ ಭ್ರಷ್ಟ ಸರ್ಕಾರ. ಬಿಜೆಪಿಯವರು 40 ಪರ್ಸೆಂಟ್‌ ಕಮಿಷನ್‌ ಕಳ್ಳರು. ಕರ್ನಾಟಕದ ಗುತ್ತಿಗೆದಾರರ ಸಂಘದವರೇ ಈ ಬಗ್ಗೆ ಪ್ರಧಾನಿಗೆ ಪತ್ರ ಬರೆದು ದೂರಿದ್ದಾರೆ.

Rahul Gandhi Outraged Against Karnataka BJP Government Over Bharat Jodo Yatra gvd
Author
First Published Oct 2, 2022, 4:26 AM IST

ಮೈಸೂರು (ಅ.02): ಕರ್ನಾಟಕದ ಬಿಜೆಪಿ ಸರ್ಕಾರ ದೇಶದಲ್ಲಿಯೇ ಅತ್ಯಂತ ಭ್ರಷ್ಟ ಸರ್ಕಾರ. ಬಿಜೆಪಿಯವರು 40 ಪರ್ಸೆಂಟ್‌ ಕಮಿಷನ್‌ ಕಳ್ಳರು. ಕರ್ನಾಟಕದ ಗುತ್ತಿಗೆದಾರರ ಸಂಘದವರೇ ಈ ಬಗ್ಗೆ ಪ್ರಧಾನಿಗೆ ಪತ್ರ ಬರೆದು ದೂರಿದ್ದಾರೆ. ಆದರೂ, ಮೋದಿಯವರು ಈ ಬಗ್ಗೆ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಆರೋಪಿಸಿದ್ದಾರೆ. ಭಾರತ ಐಕ್ಯತಾ ಯಾತ್ರೆ ಅಂಗವಾಗಿ ನಂಜನಗೂಡು ತಾಲೂಕಿನ ಚಿಕ್ಕಯ್ಯನ ಛತ್ರದಲ್ಲಿ ಶನಿವಾರ ಸಂಜೆ ನಡೆದ ಸಾರ್ವಜನಿಕ ಸಭೆಯಲ್ಲಿ ಮಾತನಾಡಿದ ಅವರು, ರಾಜ್ಯ ಹಾಗೂ ಕೇಂದ್ರ ಸರ್ಕಾರದ ವಿರುದ್ಧ ಟೀಕಾಪ್ರಹಾರ ನಡೆಸಿದರು. 

ಎರಡನೇ ದಿನವಾದ ಶನಿವಾರ ಭಾರತ ಐಕ್ಯತಾ ಯಾತ್ರೆ ಗುಂಡ್ಲುಪೇಟೆಯಿಂದ ಮೈಸೂರು ಜಿಲ್ಲೆಯನ್ನು ಪ್ರವೇಶಿಸಿತು. ಮಳೆಯಿಂದಾಗಿ ಯಾತ್ರೆ ಶನಿವಾರ ಬೆಳಗ್ಗೆ 45 ನಿಮಿಷಗಳಷ್ಟು ತಡವಾಗಿ ಆರಂಭವಾಯಿತು. ಅಲ್ಲದೆ, ಯಾತ್ರೆಯನ್ನು ಚಾಮರಾಜನಗರದ ಬೇಗೂರು ಬದಲು ತೊಂಡವಾಡಿ ಗೇಟ್‌ನಿಂದ ಆರಂಭಿಸಲಾಯಿತು. ಬಳಿಕ, ನಂಜನಗೂಡು ತಾಲೂಕಿನ ಎಲಚಗೆರೆ ಬೋರೆ ಮೂಲಕ ಮೈಸೂರು ಜಿಲ್ಲೆಯನ್ನು ಪ್ರವೇಶಿಸಿದ ಯಾತ್ರೆಗೆ ಅದ್ಧೂರಿ ಸ್ವಾಗತ ಕೋರಲಾಯಿತು. ಯಾತ್ರೆಯಲ್ಲಿ ಸುಮಾರು 30 ಸಾವಿರ ಮಂದಿ ಪಾಲ್ಗೊಂಡಿದ್ದರು.

ರಾಹುಲ್‌ ಗಾಂಧಿ ಮುಂದೆ ಅಪ್ಪನ ಕಳೆದುಕೊಂಡ ಪುಟಾಣಿ ಕಣ್ಣೀರು!

ಆರ್‌ಎಸ್‌ಎಸ್‌ ಜನರಲ್ಲಿ ದ್ವೇಷ ಬಿತ್ತುತ್ತಿದೆ: ಬಳಿಕ, ಕಳಲೆಗೇಟ್‌ ಬಳಿ ರೈತ ಮುಖಂಡರು ಮತ್ತು ವಿವಿಧ ಕ್ಷೇತ್ರದ ಗಣ್ಯರೊಂದಿಗೆ ಸಂವಾದ ನಡೆಸಿದ ರಾಹುಲ್‌, ಮೋದಿ ಮತ್ತು ಆರ್‌ಎಸ್‌ಎಸ್‌ ವಿರುದ್ಧ ಟೀಕಾಪ್ರಹಾರ ನಡೆಸಿದರು. ಆರ್‌ಎಸ್‌ಎಸ್‌ ಮೊದಲಿಗೆ ಜನರಲ್ಲಿ ಭಯವನ್ನು ಹುಟ್ಟು ಹಾಕುತ್ತದೆ. ನಂತರ ದ್ವೇಷವನ್ನು ಬಿತ್ತುತ್ತದೆ. ಹೀಗಾಗಿ, ಗ್ರಾಮೀಣ ಭಾಗದಲ್ಲೂ ಈಗ ಜನರಿಗೆ ಸುರಕ್ಷತೆ ಎಂಬುದು ಇಲ್ಲವಾಗಿದೆ ಎಂದು ಆರೋಪಿಸಿದರು. 

ಸಂಜೆ ನಂಜನಗೂಡು ತಾಲೂಕಿನ ಚಿಕ್ಕಯ್ಯನ ಛತ್ರದ ಬಳಿ ನಡೆದ ಸಾರ್ವಜನಿಕ ಸಭೆಯಲ್ಲಿ ಮಾತನಾಡಿದ ರಾಹುಲ್‌, ರಾಜ್ಯದ ಬಿಜೆಪಿ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು. ಕರ್ನಾಟಕದ ಗುತ್ತಿಗೆದಾರರ ಸಂಘದವರು ಪ್ರಧಾನಿಗೆ ಪತ್ರ ಬರೆದು, ರಾಜ್ಯ ಸರ್ಕಾರದ ವಿರುದ್ಧ 40 ಪರ್ಸೆಂಟ್‌ ಕಮಿಷನ್‌ ಆರೋಪ ಮಾಡಿದ್ದಾರೆ. ಆದರೆ, ಪ್ರಧಾನಿಯವರು ಈ ಬಗ್ಗೆ ಯಾವುದೇ ತನಿಖೆ ನಡೆಸಲಿಲ್ಲ. ಕಮಿಷನ್‌ ಹೊಡೆತ ತಾಳಲಾರದೆ ಬಿಜೆಪಿಯ ವ್ಯಕ್ತಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. 

ಈ ವಿಷಯದಲ್ಲಿಯೂ ಪ್ರಧಾನಿ ಹಾಗೂ ಮುಖ್ಯಮಂತ್ರಿ ಏನನ್ನೂ ಮಾಡಲಿಲ್ಲ. ಸಹೋದರರಂತೆ ಬಾಳುತ್ತಿರುವ ರಾಜ್ಯದ ಜನರನ್ನು ಬಿಜೆಪಿಯವರು ಎತ್ತಿ ಕಟ್ಟುತ್ತಿದ್ದಾರೆ. ಇಂತವರು ದೇಶಭಕ್ತರೂ ಅಲ್ಲ, ಧರ್ಮ ರಕ್ಷಕರೂ ಅಲ್ಲ ಎಂದು ಆರೋಪಿಸಿದರು. ಕೇಂದ್ರ ಹಾಗೂ ಕರ್ನಾಟಕದ ಸರ್ಕಾರಗಳು ಕೆಲವರಿಗೋಸ್ಕರ ಕೆಲಸ ಮಾಡುತ್ತಿವೆ. ರೈತರು, ಕಾರ್ಮಿಕರು, ಬಡವರಿಗಾಗಿ ಕೆಲಸ ಮಾಡುತ್ತಿಲ್ಲ. ಜನರು ಕಚ್ಚಾಡುವಂತೆ ಮಾಡಿ, ಕೆಲವರ ಜೇಬಿಗೆ ದುಡ್ಡು ಹಾಕಿ, ಕೆಲವರನ್ನು ಮಾತ್ರ ಉದ್ಧಾರ ಮಾಡುತ್ತಿದ್ದಾರೆ ಎಂದು ಟೀಕಿಸಿದರು.

Bharat Jodo Yatra: ರಾಹುಲ್‌ ಸ್ವಾಗತಕ್ಕೆ ರಾಜ್ಯದ ಗಡೀಲಿ ಕಾಂಗ್ರೆಸ್ ನಾಯಕರೇ ಇರಲಿಲ್ಲ!

ಹಗರಣಗಳ ತನಿಖೆಯಾಗುತ್ತಿಲ್ಲ: ರಾಜ್ಯದಲ್ಲಿ 2.50 ಲಕ್ಷ ಸರ್ಕಾರಿ ಹುದ್ದೆಗಳು ಖಾಲಿ ಇವೆ. ಇದೇ ವೇಳೆ, ಪಿಎಸ್‌ಐ ನೇಮಕಾತಿಯಲ್ಲಿ ಹಗರಣ ನಡೆದಿದೆ. ಕೆಪಿಎಸ್ಸಿಯಲ್ಲೂ ಹಗರಣ ಆಗಿದೆ. ಸಹಾಯಕ ಪ್ರಾಧ್ಯಾಪಕರ ನೇಮಕಾತಿಯಲ್ಲೂ ಹಗರಣ ನಡೆದಿದೆ. ಆದರೆ, ಇದಾವುದರ ಬಗ್ಗೆಯೂ ಯಾವುದೇ ತನಿಖೆ ಆಗುತ್ತಿಲ್ಲ. ಲಂಚದ ಹಣವೆಲ್ಲಾ ಒಂದು ಕಡೆ ಹೋಗಿ ಸೇರುತ್ತಿರುವುದೇ ಈ ಹಗರಣಗಳು ಮುಚ್ಚಿಹೋಗಲು ಕಾರಣ ಎಂದು ಗಂಭೀರ ಆರೋಪ ಮಾಡಿದರು.

Follow Us:
Download App:
  • android
  • ios