ಚಿಕ್ಕಮಗಳೂರು ಮೀಸಲು ವಿಧಾನಸಭಾ ಕ್ಷೇತ್ರ ಮೂಡಿಗೆರೆಯಲ್ಲಿ ಟಿಕೆಟ್‌ಗೆ ವಿವಿಧ ಪಕ್ಷಗಳಲ್ಲಿ ಪೈಪೋಟಿ ತೀವ್ರಗೊಂಡಿದ್ದು, ಟಿಕೆಟ್‌ಗಾಗಿ ಕಸರತ್ತು ನಡೆಸಲು ಆಕಾಂಕ್ಷಿಗಳು ಮುಂದಾಗುತ್ತಿದ್ದಾರೆ. ಕ್ಷೇತ್ರದ ದಾರಿಯುದ್ದಕ್ಕೂ ಬ್ಯಾನರ್, ಕಟೌಟ್ ಹಾಕಿ ಟಿಕೆಟ್ ಆಕಾಂಕ್ಷಿಗಳು ಜನರನ್ನು ಸೆಳೆಯುವ ಕಸರತ್ತು ನಡೆಸುತ್ತಿದ್ದಾರೆ.

ವರದಿ : ಆಲ್ದೂರು ಕಿರಣ್ ಏಷ್ಯಾನೆಟ್ ಸುವರ್ಣ ನ್ಯೂಸ್ 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಚಿಕ್ಕಮಗಳೂರು (ಜ.14): ಕಾಫಿನಾಡೆಂದು ಪ್ರಸಿದ್ಧಿ ಪಡೆದಿರುವ ಮೀಸಲು ವಿಧಾನಸಭಾ ಕ್ಷೇತ್ರ ಮೂಡಿಗೆರೆಯಲ್ಲಿ ಟಿಕೆಟ್ಗೆ ವಿವಿಧ ಪಕ್ಷಗಳಲ್ಲಿ ಪೈಪೋಟಿ ತೀವ್ರಗೊಂಡಿದ್ದು, ಟಿಕೆಟ್‌ ಗಾಗಿ ಕಸರತ್ತು ನಡೆಸಲು ಆಕಾಂಕ್ಷಿಗಳು ಮುಂದಾಗುತ್ತಿದ್ದಾರೆ. ಕ್ಷೇತ್ರದ ದಾರಿಯುದ್ದಕ್ಕೂ ಬ್ಯಾನರ್, ಕಟೌಟ್ ಹಾಕಿ ಟಿಕೆಟ್ ಆಕಾಂಕ್ಷಿಗಳು ಜನರನ್ನು ಸೆಳೆಯುವ ಕಸರತ್ತು ನಡೆಸುತ್ತಿದ್ದಾರೆ. ಈಗಾಗಲೇ ಕೆಲವು ಗುಂಪುಗಳು ತಮ್ಮ ಬೆಂಬಲಿಗರನ್ನು ಕಟ್ಟಿಕೊಂಡು ಬೆಂಗಳೂರಿಗೂ ಒಂದು ಸುತ್ತು ಹೋಗಿ ಬಂದಿದ್ದಾರೆ.

ಮೂರು ಪಕ್ಷದಲ್ಲೂ ಟಿಕೆಟ್ ಗಾಗಿ ಪೈಪೋಟಿ: 
ಜಾತ್ಯತೀತ ಜನತಾದಳದಿಂದ ಈಗಾಗಲೇ ಬಿ.ಬಿ.ನಿಂಗಯ್ಯ ಅವರಿಗೆ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಬಿಡುಗಡೆಗೊಳಿಸಿದ ಮೊದಲ ಪಟ್ಟಿಯಲ್ಲಿ ಹೆಸರು ಪ್ರಕಟಗೊಂಡಿದ್ದು, ಅವರು ಈಗಾಗಲೇ ಕ್ಷೇತ್ರದಾದ್ಯಂತ ಪಕ್ಷದ ಮುಖಂಡರೊಂದಿಗೆ ಪ್ರವಾಸ ಕೈಗೊಂಡಿದ್ದಾರೆ. ಆದರೂ ರುದ್ರೇಶ ಕಹಳೆ ಎಂಬುವರು ಟಿಕೆಟ್ ಪಡೆಯಲು ತಮ್ಮ ಪ್ರಯತ್ನವನ್ನು ಮುಂದುವರೆಸಿದ್ದು, ಟಿಕೆಟ್‌ ನೀಡಿದರೆ ಕ್ಷೇತ್ರ ಅಭಿವೃದ್ಧಿ ಪಡಿಸುವುದಾಗಿ ಹೇಳಿಕೊಂಡು ಓಡಾಡುತ್ತಿದ್ದಾರೆಂದು ಸ್ಥಳೀಯರು ಹೇಳುತ್ತಾರೆ.ಕಾಂಗ್ರೆಸ್ನಿಂದ ನಯನಮೋಟಮ್ಮ, ನಾಗರತ್ನ, ಬಿನ್ನಡಿ ಪ್ರಭಾಕರ್, ಶ್ರೀರಂಗಯ್ಯ, ಹೂವಪ್ಪ ಅವರುಗಳು ಟಿಕೆಟ್‌ ಗಾಗಿ ಅರ್ಜಿ ಸಲ್ಲಿಸಿದ್ದಾರೆ.

ಇತ್ತೀಚೆಗೆ ನಡೆದ ಕಾಂಗ್ರೆಸ್ ಪಕ್ಷದ ಮುಖಂಡರ ಸಭೆಯಲ್ಲಿ ನಯನ ಅವರಿಗೆ ಯಾವುದೇ ಕಾರಣಕ್ಕೂ ಟಿಕೆಟ್ ನೀಡುವುದು ಬೇಡವೆಂಬ ಕೂಗು ಎದ್ದಿದೆ.ಇತ್ತ ನಾಗರತ್ನ ಅಥವಾ ಚಿಕ್ಕಮಗಳೂರು ಜಿಲ್ಲೆಯಲ್ಲಿ ಜಿಲ್ಲಾಧಿಕಾರಿಯಾಗಿ ಕೆಲಸ ನಿರ್ವಹಿಸಿ ನಿವೃತ್ತಿಗೊಂಡಿರುವ ಶ್ರೀರಂಗಯ್ಯ ಅವರಿಗೆ ಟಿಕೆಟ್ ಸಿಗಬಹುದು ಎನ್ನುವ ಮಾತುಗಳು ಕೇಳಿಬರುತ್ತಿವೆ. ಒಂದು ಗುಂಪು ಈಗಾಗಲೇ ಶ್ರೀರಂಗಯ್ಯನವರ ಪರವಾಗಿ ಕೆಲಸಮಾಡುತ್ತಿದ್ದು, ಅವರಿಗೆ ಟಿಕೆಟ್ನೀಡಬೇಕೆಂದು ಪಕ್ಷದ ವರಿಷ್ಟರ ಮೇಲೆ ಒತ್ತಡ ಹೇರುತ್ತಿದ್ದಾರೆಂಬ ಮಾತುಗಳು ಕ್ಷೇತ್ರದಲ್ಲಿ ಕೇಳಿಬರುತ್ತಿವೆ. ಕಾಂಗ್ರೆಸ್ ಪಕ್ಷದ ಮಹಿಳಾವಿಭಾಗದ ರಾಜ್ಯ ಕಾರ್ಯದರ್ಶಿಯಾಗಿ ಕೆಲಸ ಮಾಡುತ್ತಿರುವ ನಯನ ಮೋಟಮ್ಮ ಕಾಂಗ್ರೆಸ್ ಪಕ್ಷದ ಮುಖಂಡರಿಗೆ ಪರಿಚಿತರಾಗಿರುವುದರಿಂದ ಟಿಕೆಟ್ ಸುಲಭವಾಗಿ ಧಕ್ಕಬಹುದೆನ್ನುವ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ.

ಟಿಕೆಟ್‌ ನೀಡುವ ಬಗ್ಗೆ ಪಕ್ಷದ ವರಿಷ್ಠರ ತೀರ್ಮಾನ ಅಂತಿಮ: ಸಚಿವ ಎಂಟಿಬಿ ನಾಗರಾಜ್‌

ಹಾಲಿ ಶಾಸಕರ ನಡುವೆ ಬಿಜೆಪಿಯಲ್ಲಿ ಆಕ್ಷಾಂಕಿಗಳ ದಂಡು:
ಭಾರತೀಯ ಜನತಾ ಪಕ್ಷದಲ್ಲಿ ಶಾಸಕರಾಗಿ ಮೂರು ಬಾರಿ ಆಯ್ಕೆಯಾಗಿರುವ ಎಂ.ಪಿ.ಕುಮಾರಸ್ವಾಮಿ ಅವರಿಗೆ ಟಿಕೆಟ್ ಸಿಗಬಹುದೆನ್ನುವ ಮಾತುಗಳು ಕೇಳಿಬರುತ್ತಿವೆಯಾದರೂ ಪಕ್ಷದ ಒಂದು ಗುಂಪು ಟಿಕೆಟ್ ತಪ್ಪಿಸಲು ಇವರ ವಿರುದ್ಧ ಕೆಲಸ ಮಾಡುತ್ತಿದೆ ಎಂದು ಹೇಳಲಾಗುತ್ತಿದೆ. ದೀಪಕ್ದೊಡ್ಡಯ್ಯ, ಬೆಂಗಳೂರಿನ ಸುಷ್ಮಾ, ಎಸ್ಸಿ ಮೋರ್ಚಾದ ಅಧ್ಯಕ್ಷ ಸುಜೀತ್ಕುಮಾರ್, ಎಸ್ಸಿಮೋರ್ಚಾದ ಪ್ರಧಾನಕಾರ್ಯದರ್ಶಿ ಎಚ್.ಬಿ.ಜಯಪ್ರಕಾಶ್,ಸಾಫ್ಟ್ವೇರ್ ಇಂಜಿನಿಯರ್ ವಿಜಯಪ್ರಕಾಶ್, ಡಾ.ಶಿವಪ್ರಕಾಶ್ ಅವರುಗಳು ಟಿಕೆಟ್ ಆಕಾಂಕ್ಷಿಗಳಾಗಿದ್ದಾರೆ.

ಈ ಚುನಾವಣೆಯಲ್ಲಿ ಮಹಿಳೆಯರಿಗೆ ಹೆಚ್ಚು ಟಿಕೆಟ್‌ ನೀಡಲು ಮನವಿ ಇಡ್ತೇವೆ: ಉಮಾಶ್ರೀ

ಬ್ಯಾನರ್ ಮತ್ತು ಕಟೌಟ್ ಹಾಕುವಲ್ಲಿ ಪೈಪೋಟಿ : 
 ಟಿಕೆಟ್ ಆಕಾಂಕ್ಷಿಗಳೆಲ್ಲ ಹಬ್ಬಹರಿದಿನ ನೆಪದಲ್ಲಿ ಕ್ಷೇತ್ರದ ಜನರಿಗೆ ಶುಭಾಶಯಗಳನ್ನು ಕೋರುವ ಬ್ಯಾನರ್ಗಳನ್ನು ಕ್ಷೇತ್ರದಾದ್ಯಂತ ಹಾಕಿದ್ದಾರೆ. ಟಿಕೆಟ್‌ ಗಾಗಿ ಎದುರು ನೋಡುತ್ತಿದ್ದಾರೆ. ಮೂರು ಪಕ್ಷಗಳಿಂದಲೂ ಬ್ಯಾನರ್ ಮತ್ತು ಕಟೌಟ್ ಹಾಕುವಲ್ಲಿ ಪೈಪೋಟಿ ಏರ್ಪಟ್ಟಂತೆ ಕಂಡು ಬರುತ್ತಿದೆ. ಒಂದು ಹಂತದಲ್ಲಿ ಮೂಡಿಗೆರೆ ಪಟ್ಟಣ ಪಂಚಾಯಿತಿಯವರು ಬಸ್ನಿಲ್ದಾಣದ ಬಳಿ ಹಾಕಿದ್ದ ಬ್ಯಾನರ್ಗಳನ್ನು ಈಗಾಗಲೇ ತೆರವುಗೊಳಿಸುತ್ತಿದ್ದಾರೆ.ಸದ್ಯದಲ್ಲೆ ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷದಿಂದ ಅಭ್ಯರ್ಥಿಗಳ ಘೋಷಣೆಯಾಗುವ ಸಾಧ್ಯತೆಗಳಿದ್ದು, ಯಾರಿಗೆ ಟಿಕೆಟ್ಸಿಗುತ್ತದೆ. ಬಿಜೆಪಿ, ಕಾಂಗ್ರೆಸ್, ಜೆಡಿಎಸ್ನಿಂದ ಯಾರು ಗೆಲುವುಸಾಧಿಸುತ್ತಾರೆಂಬುದನ್ನು ಮುಂದಿನ ದಿನಗಳಲ್ಲಿ ಕಾದುನೋಡಬೇಕಿದೆ.