ರಾಜ್ಯದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದ್ದ 545 ಪಿಎಸ್ಸೈ ನೇಮಕಾತಿಗೆ ಸಂಬಂಧಿಸಿದ ಮರುಪರೀಕ್ಷೆ ವಿಚಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಸರ್ಕಾರವನ್ನು ಅಗ್ನಿಪರೀಕ್ಷೆಗೆ ಗುರಿಪಡಿಸಿದಂತಿದೆ.

ಆನಂದ್‌ ಎಂ. ಸೌದಿ

Add Asianetnews Kannada as a Preferred SourcegooglePreferred

ಯಾದಗಿರಿ (ಆ.28): ರಾಜ್ಯದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದ್ದ 545 ಪಿಎಸ್ಸೈ ನೇಮಕಾತಿಗೆ ಸಂಬಂಧಿಸಿದ ಮರುಪರೀಕ್ಷೆ ವಿಚಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಸರ್ಕಾರವನ್ನು ಅಗ್ನಿಪರೀಕ್ಷೆಗೆ ಗುರಿಪಡಿಸಿದಂತಿದೆ. ಅಕ್ರಮದ ಆರೋಪ ಕೇಳಿಬಂದ ಹಿನ್ನೆಲೆಯಲ್ಲಿ ಅಂದಿನ ಬಿಜೆಪಿ ಸರ್ಕಾರ ಮರುಪರೀಕ್ಷೆ ಘೋಷಿಸಿದ್ದು, ಇದು ಈಗ ಸಿದ್ದರಾಮಯ್ಯ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಿದೆ.

ಮರು ಪರೀಕ್ಷೆ ಆದೇಶ ವಿರೋಧಿಸಿ, ಕಳಂಕಿತರ ಪ್ರತ್ಯೇಕಿಸಿ ಉಳಿದವರಿಗೆ ಆದೇಶ ಪ್ರತಿ ನೀಡುವಂತೆ ತಾತ್ಕಾಲಿಕ ಆಯ್ಕೆಪಟ್ಟಿಯಲ್ಲಿ ಹೆಸರಿದ್ದ ಕೆಲವರು ಹೈಕೋರ್ಟ್‌ ಮೊರೆ ಹೋಗಿದ್ದಾರೆ. ಆದರೆ, ನೇಮಕಾತಿಯಲ್ಲಿ ಭಾರೀ ಅಕ್ರಮದ ಹಿನ್ನೆಲೆಯಲ್ಲಿ ಮರುಪರೀಕ್ಷೆ ಅನಿವಾರ‍್ಯ ಎಂದು ಸರ್ಕಾರ ತನ್ನ ವಾದವನ್ನು ಈಗಾಗಲೇ ಮಂಡಿಸಿದೆ. ಇದೇ ಆ.30 ರಂದು ಹೈಕೋರ್ಟಲ್ಲಿ ಈ ಕುರಿತ ರಿಟ್‌ ಅರ್ಜಿ ವಿಚಾರಣೆಗೂ ಬರಲಿದೆ. ಸರ್ಕಾರ ಈ ಪ್ರಕರಣದ ಕುರಿತು ಹೈಕೋರ್ಟ್‌ ನಿವೃತ್ತ ನ್ಯಾಯಮೂರ್ತಿ ಬಿ.ವೀರಪ್ಪ ನೇತೃತ್ವದಲ್ಲಿ ನ್ಯಾಯಾಂಗ ತನಿಖೆಗೂ ಆದೇಶಿಸಿದೆ.

ಸಿದ್ದರಾಮಯ್ಯ ಸರ್ಕಾರಕ್ಕೆ ಯಶಸ್ವಿ 100 ದಿನ ಸಂಭ್ರಮ: ನುಡಿದಂತೆ ನಡೆದಿದ್ದೇವೆಂದ ಸಿಎಂ

ಮಠಾಧೀಶರ ಮಧ್ಯಸ್ಥಿಕೆ?: ಕೆಪಿಎಸ್ಸಿ ಅಕ್ರಮದ ಸಂದರ್ಭದಲ್ಲಿ ಮಠಾಧೀಶರೊಬ್ಬರು ಮಧ್ಯಸ್ಥಿಕೆ ವಹಿಸಿದಂತೆ ಈ ಪ್ರಕರಣದ ಮರು ಪರೀಕ್ಷೆ ವಿಚಾರದಲ್ಲೂ ಸ್ವಾಮೀಜಿಗಳ ಮಧ್ಯಸ್ಥಿಕೆ ಪ್ರಯತ್ನಗಳು ನಡೆದಿವೆ ಎಂಬ ಮಾತುಗಳಿವೆ. ಮರು ಪರೀಕ್ಷೆ ನಡೆಯುವುದು ಬೇಡ ಎಂಬ ಬೇಡಿಕೆ ಅವರಿಂದ ಬರುತ್ತಿದೆ ಎನ್ನಲಾಗುತ್ತಿದೆ. ಆದರೆ ಮರು ಪರೀಕ್ಷೆ ನಡೆಸಿದರೆ ಮಾತ್ರ ಪ್ರಾಮಾಣಿಕರಿಗೆ ನ್ಯಾಯ ಸಿಗಲಿದೆ ಎಂದು ವಾದ ಮಂಡಿಸುವ ನೊಂದ ಅಭ್ಯರ್ಥಿಗಳು, ವಿರೋಧ ಪಕ್ಷದಲ್ಲಿದ್ದಾಗ ಸಿದ್ದರಾಮಯ್ಯ ತಾವಾಡಿದ್ದ ಮಾತು ಉಳಿಸಿಕೊಳ್ಳುವಂತೆ ಪಟ್ಟು ಹಿಡಿದಿದ್ದಾರೆ. ಬಿಜೆಪಿ ಸರ್ಕಾರದ ಅವಧಿಯಲ್ಲಿ ಪ್ರತಿಪಕ್ಷ ನಾಯಕರಾಗಿದ್ದ ಸಿದ್ದರಾಮಯ್ಯ ಮರುಪರೀಕ್ಷೆಯ ಸರ್ಕಾರದ ಆದೇಶವನ್ನು ಬೆಂಬಲಿಸಿದ್ದರು.

ಎಡಿಜಿಪಿ ದರ್ಜೆಯ ಹಿರಿಯ ಐಪಿಎಸ್‌ ಅಧಿಕಾರಿ ಸೇರಿ ನೂರಾರು ಮಂದಿ ಬಂಧನದಿಂದಾಗಿ ರಾಷ್ಟ್ರಮಟ್ಟದಲ್ಲೂ ತೀವ್ರ ಚರ್ಚೆಗೆ ಗ್ರಾಸವಾಗಿದ್ದ ಈ ಅಕ್ರಮವನ್ನು ಚುನಾವಣೆಯಲ್ಲಿ ಬಿಜೆಪಿ ಹಣಿಯಲು ಕಾಂಗ್ರೆಸ್‌ ಪ್ರಮುಖ ಅಸ್ತ್ರವಾಗಿ ಬಳಸಿಕೊಂಡಿತ್ತು. ಅಕ್ರಮದ ಹಿಂದೆ ಬಿದ್ದಿದ್ದ ಹಾಲಿ ಐಟಿ ಬಿಟಿ ಸಚಿವ ಪ್ರಿಯಾಂಕ್‌ ಖರ್ಗೆಗೆ ಆಗ ಬೆದರಿಕೆಗಳೂ ಬಂದಿದ್ದವು. ಈ ಅಕ್ರಮವನ್ನು ಕನ್ನಡಪ್ರಭ ಪತ್ರಿಕೆ ಮೊದಲಿಗೆ ಬಯಲಿಗೆಳೆದಿತ್ತು.

40% ಕಮಿಷನ್‌ ತನಿಖೆ ಹಿಂದೆ ರಾಜಕೀಯ ಸೇಡು: ಬೊಮ್ಮಾಯಿ ಕಿಡಿ

ಪತ್ರಿಕೆ-1 ತನಿಖೆಯಾದರೆ ಮತ್ತಷ್ಟು ಬಣ್ಣ ಬಯಲು?: ಪಿಎಸ್ಸೈ ನೇಮಕಾತಿ ಅಕ್ರಮದಲ್ಲಿ ಈವರೆಗೆ ಓಎಂಆರ್‌ ಶೀಟ್‌ ಹಾಗೂ ಬ್ಲೂಟೂತ್‌ ತನಿಖೆ ಮಾತ್ರ ಅಗಿದೆ. ಆದರೆ, ಪತ್ರಿಕೆ-1 (ಪ್ರಬಂಧ ಹಾಗೂ ಭಾಷಾಂತರ)ರ ಮೇಲೆ ಕಣ್ಣಾಡಿಸಿದರೆ ಮತ್ತಷ್ಟುಮಂದಿಯ ಬಣ್ಣ ಬಯಲಾಗಲಿದೆ ಎನ್ನುವ ಮಾತುಗಳಿವೆ. ಜೊತೆಗೆ, ಕಲಬುರಗಿ ಹೊರತುಪಡಿಸಿ ಉಳಿದೆಡೆ ಬಂಧಿತ ಆರೋಪಿಗಳು ಪರೀಕ್ಷೆ ಬರೆದಿದ್ದ ಕೇಂದ್ರಗಳ ಬಗ್ಗೆ ತನಿಖೆ ಆಗಿಲ್ಲ. ಸಿಐಡಿ ಈ ಪ್ರಮುಖ ಅಂಶಗಳ ಬಗ್ಗೆ ಚಾಜ್‌ರ್‍ಶೀಟಿನಲ್ಲಿ ಉಲ್ಲೇಖಿಸಿದ್ದು, ತನಿಖೆ ಇನ್ನೂ ಮುಂದುವರೆಯಲಿದೆ ಎಂದು ತಿಳಿಸಿದೆ.