Asianet Suvarna News Asianet Suvarna News

ಸಂವಿಧಾನದ ರಕ್ಷಣೆ ಮಾಡಿದರೆ ಜನರ ರಕ್ಷಣೆ ಮಾಡಿದಂತೆ: ಸಿಎಂ ಸಿದ್ದರಾಮಯ್ಯ

ರಾಜ್ಯ ಸರ್ಕಾರವು ಸಂವಿಧಾನ ಮತ್ತು ರಾಷ್ಟ್ರೀಯ ಏಕ್ಯತೆ ಕುರಿತು ಜ. 26 ರಿಂದ ಫೆ.26 ರವರೆಗೆ ರಾಜ್ಯಾದ್ಯಂತ ಜಾಗೃತಿ ಜಾಥಾ ಆಯೋಜಿಸಿದ್ದು, ಫೆ.24 ಮತ್ತು 25ರಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ ವಿಚಾರ ಸಂಕಿರಣ ಮತ್ತು ಸಂವಾದ ಆಯೋಜಿಸಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು. 
 

Protecting the Constitution is like protecting the people Says CM Siddaramaiah gvd
Author
First Published Jan 26, 2024, 11:03 PM IST

ಮೈಸೂರು (ಜ.26): ರಾಜ್ಯ ಸರ್ಕಾರವು ಸಂವಿಧಾನ ಮತ್ತು ರಾಷ್ಟ್ರೀಯ ಏಕ್ಯತೆ ಕುರಿತು ಜ. 26 ರಿಂದ ಫೆ.26 ರವರೆಗೆ ರಾಜ್ಯಾದ್ಯಂತ ಜಾಗೃತಿ ಜಾಥಾ ಆಯೋಜಿಸಿದ್ದು, ಫೆ.24 ಮತ್ತು 25ರಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ ವಿಚಾರ ಸಂಕಿರಣ ಮತ್ತು ಸಂವಾದ ಆಯೋಜಿಸಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು. ಮೈಸೂರಿನ ತಮ್ಮ ನಿವಾಸದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಂವಿಧಾನ ಜಾರಿಯಾಗಿ 75 ವರ್ಷವಾಗಿದೆ. ಈ ವೇಳೆ ಸಂವಿಧಾನವು ಇಷ್ಟು ವರ್ಷ ಹೇಗೆ ಕೆಲಸ ಮಾಡಿದೆ ಮತ್ತು ಸಂವಿಧಾನ ಜಾರಿಯ ಹಾದಿಯಲ್ಲಿ ಮುಂದೆ ಇರುವ ಸವಾಲುಗಳು ಎಂತವು ಎಂಬುದನ್ನು ನಾವು ಅರಿಯಬೇಕಿದೆ ಎಂದರು.

ಒಂದು ತಿಂಗಳವರೆಗೆ ರಾಜ್ಯಾದ್ಯಂತ ಜಾಥಾ ನಡೆಸುವುದು, ಒಂದು ವಾಹನದ ಮೇಲೆ ಸ್ತಬ್ಧಚಿತ್ರದೊಂದಿಗೆ ಎಲ್‌.ಇ.ಡಿ ಪರದೆ ಜೋಡಿಸುವ ಮೂಲಕ ಸಂವಿಧಾನ ಮಹತ್ವ ಏನು? ಅದು ರೂಪುಗೊಂಡು ಜಾರಿಯಾದ ಬಗೆ ಹೇಗೆ ಎಂಬ ವಿವರವನ್ನು ಜನರಿಗೆ ತೋರಿಸಲಾಗುತ್ತದೆ. ಜಾಥಾವು ಸ್ಥಳೀಯ ಜನ ಪ್ರತಿನಿಧಿಗಳ ಜತೆಗೂಡಿ ಜಿಲ್ಲೆಯ ಎಲ್ಲಾ ಗ್ರಾಪಂ ಸಂಚರಿಸುತ್ತದೆ. 27 ದಿನಗಳಲ್ಲಿ ಈ ವಾಹನವು ಇಡೀ ಜಿಲ್ಲೆಯನ್ನು ಸಂಚರಿಸುತ್ತದೆ. ಒಂದು ವೇಳೆ ದೊಡ್ಡ ಜಿಲ್ಲೆಯಾಗಿದ್ದರೆ ಅಲ್ಲಿ ಎರಡು ಸ್ತಬ್ಧಚಿತ್ರ ಹಾಗೂ ವಾಹನದ ವ್ಯವಸ್ಥೆ ಮಾಡುವ ಬಗ್ಗೆಯೂ ಜಿಲ್ಲಾಡಳಿತ ಕ್ರಮವಹಿಸುವುದಾಗಿ ಹೇಳಿದರು.

ಆಯುಷ್ಮಾನ್, ಯಶಸ್ವಿನಿ ಮತ್ತು ಇಎಸ್‌ಐ ಆರೋಗ್ಯ ಸೇವಾ ದರ ಹೆಚ್ಚಿಸಿ: ಸಿಎಂಗೆ ಯೋಗಣ್ಣ ಮನವಿ

ಜಾಥಾ ಸಾಗುವ ವೇಳೆ ಸ್ಥಳೀಯ ಶಾಸಕರು, ಸಂಸದರು ಪಾಲ್ಗೊಳ್ಳುವರು. ಸರ್ಕಾರದ ಗ್ಯಾರಂಟಿ,ಇತರೆ ಸೌಲಭ್ಯ ದೊರಕದ ಜನರ ಸಂಕಷ್ಟ ಆಲಿಸಿ ಪರಿಹಾರ ಒದಗಿಸುವ ಕೆಲಸ ಮಾಡಲಿದೆ. ಯಾವ ಗ್ರಾಮದಲ್ಲಿ ಜಾಥಾ ಉಳಿಯಲಿದೆಯೋ ಅಲ್ಲಿ ಸ್ಥಳೀಯ ಜಾನಪದ ಕಲಾಪ್ರಕಾರದ ಸಹಾಯದಿಂದ ಸಂವಿಧಾನ ಕುರಿತು ಇನ್ನಷ್ಟು ಜಾಗೃತಿ ಮೂಡಿಸುವ ಕೆಲಸ ಮಾಡುವುದಾಗಿ ಹೇಳಿದರು. ಈ ಜಾಥಾಕ್ಕೆ ಜ.26ರಂದು ಧ್ವಜಾರೋಹಣದ ಬಳಿಕ ಆಯಾ ಜಿಲ್ಲಾ ವ್ಯಾಪ್ತಿಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವರು ಚಾಲನೆ ನೀಡುವರು. ಜಾಥಾ ಹೋಗುವ ಮಾರ್ಗದ ಕುರಿತು ಇದಕ್ಕಾಗಿಯೇ ರಚಿಸಲಾದ ವೆಬ್‌ ಸೈಟ್‌ ಮೂಲಕ ಪಡೆಯಬಹುದು. 

ಎರಡನೇ ಭಾಗದಲ್ಲಿ ಫೆ. 24 ಮತ್ತು 25 ರಂದು ಶಿಕ್ಷಣ ತಜ್ಞರು ಮತ್ತು ವಿಷಯ ತಜ್ಞರಿಂದ ಅರಮನೆ ಮೈದಾನದಲ್ಲಿ ಎರಡು ದಿನಗಳ ಕಾಲ ವಿಚಾರ ಸಂಕಿರಣ ಮತ್ತು ಬೃಹತ್‌ ಸಮಾವೇಶ ಆಯೋಜಿಸಲಾಗುತ್ತಿದೆ ಎಂದು ತಿಳಿಸಿದರು. ಈ ವಿಚಾರ ಸಂಕಿರಣವನ್ನು ನ್ಯಾಷನಲ್‌ ಲಾ ಸ್ಕೂಲ್‌ ಆಫ್‌ ಇಂಡಿಯಾ ಯೂನಿವರ್ಸಿಟಿ, ಇನ್‌ಸ್ಟಿಟ್ಯೂಟ್‌ಆಫ್‌ ಸೋಷಿಯಲ್‌ ಅಂಡ್‌ ಎಕನಾಮಿಕ್‌ ಚೇಂಜ್‌, ಕರ್ನಾಟಕ ಕಾನೂನು ವಿವಿ ಸಹಯೋಗದಲ್ಲಿ ಜರುಗಲಿದ್ದು, ಸಮಾಜ ಕಲ್ಯಾಣ ಇಲಾಖೆಯು ಕಾರ್ಯಕ್ರಮ ಆಯೋಜಿಸಿದೆ ಎಂದರು.

ಸಮಾವೇಶದಲ್ಲಿ ಸಂವಿಧಾನ ರಚನಾ ಸಭೆಯಲ್ಲಿ ನಡೆದ ಅರ್ಥಪೂರ್ಣ ಚರ್ಚೆಗಳ 10 ಸಂಪುಟಗಳ ಪುಸ್ತಕಗಳು ಮುದ್ರಿತವಾಗಿದ್ದು ಪುಸ್ತಕಗಳ ಬಿಡುಗಡೆಯೂ ಇರಲಿದೆ. ಸಂವಿಧಾನದ ಅಂಗೀಕಾರದ ಮುನ್ನಾದಿನ ಅಂಬೇಡ್ಕರರು ಮಾಡಿದ ಅಮೋಘ ಭಾಷಣವನ್ನೂ ಪುಸ್ತಕ ಒಳಗೊಂಡಿದೆ. ಡಾ. ಬಾಬು ರಾಜೇಂದ್ರ ಪ್ರಸಾದ್, ರಾಜಾಜಿ ಅಂತಹವರೂ ಸೇರಿದಂತೆ ಸಂವಿಧಾನ ರಚನಾ ಸಭೆಯ ಮುತ್ಸದ್ದಿಗಳ ಮಾತುಗಳು ಪುಸ್ತಕದಲ್ಲಿರಲಿವೆ ಎಂದರು. ಪ್ರಮುಖವಾಗಿ ಸಂವಿಧಾನ ಜಾರಿಗೆ ಬಂದ 75 ವರ್ಷಗಳಲ್ಲಿ ಸಂವಿಧಾನದ ಆಶಯ ಹಾಗೂ ಧ್ಯೇಯೋದ್ದೇಶ ಎಷ್ಟರ ಮಟ್ಟಿಗೆ ಈಡೇರಿದೆ ಎಂಬ ಅಂಶವೂ ಪ್ರಮುಖವಾಗಿ ಚರ್ಚೆಯಾಗಲಿದೆ ಎಂದರು.

ಸಂವಿಧಾನವನ್ನು ದುರ್ಬಲಗೊಳಿಸಲು ಪಟ್ಟಭದ್ರ ಹಿತಾಸಕ್ತಿಗಳು ಹವಣ ಹವಣಿಸುತಿದ್ದು,ಸಂವಿಧಾನಕ್ಕೆ ವಿರುದ್ದವಾದ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ. ಅಂತಹವರಿಗೆ ಸಂವಿಧಾನ ಜಾಥಾ ಉತ್ತರ ಕೊಡಲಿದೆ ಎಂದು ಅವರು ಹೇಳಿದರು. ಸಂವಿಧಾನವು ಜಾತ್ಯತೀತ, ಧರ್ಮ ನಿರಪೇಕ್ಷ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಎತ್ತಿ ಹಿಡಿದಿದೆ. ಆಗಿಂದಾಗ್ಗೆ ಅನೇಕ ತಿದ್ದುಪಡಿ ತರಲಾಗಿದೆ. ಜನರ ಸಮಸ್ಯೆ ಪರಿಹರಿಸಲು ಜನರ ಬಯಕೆಗೆ ಅನುಗುಣವಾಗಿ ತಿದ್ದುಪಡಿ ಆಗಬೇಕಿದೆ. ಸಂವಿಧಾನದ ಬಗ್ಗೆ ಗೌರವ ಇಲ್ಲದವರು ಅದರ ಆಶಾಯಕ್ಕೆ ವಿರುದ್ಧವಾಗಿ ಇದ್ದಾರೆ.

ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ಮುಂದಿನ ಕೆಡಿಪಿ ಸಭೆ: ಸಚಿವ ಜಮೀರ್‌ ಅಹ್ಮದ್‌

ಸಂವಿಧಾನ ಬದಲಿಸುತ್ತೇವೆ ಎನ್ನುತ್ತಾರೆ. ಕೆಲವರು ಸಂವಿಧಾನ ಮನುಶಾಸ್ತ್ರಕ್ಕೆ ಅನುಗುಣವಾಗಿಲ್ಲ ಎನ್ನುತ್ತಾರೆ. ಇದಕ್ಕೆಲ್ಲ ಉತ್ತರ ಕೊಡಬೇಕಲ್ಲ. ಅದಕ್ಕಾಗಿ ಈ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದರು. ಸುದ್ದಿಗೋಷ್ಠಿಯಲ್ಲಿ ಸಮಾಜ ಕಲ್ಯಾಣ ಸಚಿವ ಡಾ.ಎಚ್‌.ಸಿ. ಮಹದೇವಪ್ಪ, ರೇಷ್ಮೆ ಮತ್ತು ಪಶುಸಂಗೋಪನ ಸಚಿವ ಕೆ. ವೆಂಕಟೇಶ್‌, ನಗರಾಭಿವೃದ್ಧಿ ಭೈರತಿ ಸುರೇಶ್‌, ಶಾಸಕರಾದ ತನ್ವೀರ್‌ಸೇಠ್‌, ಎ.ಆರ್‌. ಕೃಷ್ಣಮೂರ್ತಿ, ಡಿ. ರವಿಶಂಕರ್‌, ಕೆ. ಹರೀಶ್‌ಗೌಡ, ಮಾಜಿ ಸಂಸದ ಕಾಗಲವಾಡಿ ಶಿವಣ್ಣ, ಮಾಜಿ ಶಾಸಕರಾದ ಎಚ್‌.ಪಿ. ಮಂಜುನಾಥ್‌, ಎಂ.ಕೆ. ಸೋಮಶೇಖರ್‌ ಮೊದಲಾದವರು ಇದ್ದರು.

Follow Us:
Download App:
  • android
  • ios