*   ಮೋದಿಗೆ ಲೋಕಸಭೆಯಲ್ಲಿ 330ಕ್ಕಿಂತ ಹೆಚ್ಚು ಸ್ಥಾನ ಬಂದು, ಅನೇಕ ರಾಜ್ಯಗಳಲ್ಲಿ ಅಧಿಕಾರದಲ್ಲಿದ್ದರೂ ತೃಪ್ತಿಯಿಲ್ಲ *  ಮಹಾರಾಷ್ಟ್ರದಲ್ಲಿ ಶಿವಸೇನೆ, ಎನ್‌ಸಿಪಿ ಮತ್ತು ಕಾಂಗ್ರೆಸ್‌ ಸರ್ಕಾರ ಪತನಕ್ಕೆ ಬಿಜೆಪಿ ಕುತಂತ್ರವೇ ಕಾರಣ*  ಮಹಾರಾಷ್ಟ್ರದಲ್ಲಿ ನಮ್ಮ ಮೈತ್ರಿಕೂಟ ಜನರಿಂದ ಅಧಿಕಾರ ಕಳೆದುಕೊಂಡಿಲ್ಲ 

ಕಲಬುರಗಿ(ಜು.02):  ಪಕ್ಷಾಂತರ ನಿಷೇಧ ಕಾಯ್ದೆಯನ್ನು ಮತ್ತಷ್ಟು ಕಠಿಣಗೊಳಿಸಬೇಕಿದೆ. ಇದು ಎಲ್ಲ ರಾಜಕೀಯ ಪಕ್ಷಗಳು ಒಗ್ಗಟ್ಟಾಗಿ ಮಾಡಬೇಕಾದ ಕೆಲಸ. ಈ ವಿಚಾರದ ಬಗ್ಗೆ ಸಂಸತ್ತಿನಲ್ಲಿ ಧ್ವನಿ ಎತ್ತುವುದಾಗಿ ರಾಜ್ಯಸಭೆಯಲ್ಲಿ ವಿರೋಧಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ.

ಶುಕ್ರವಾರ ಸುದ್ದಿಗಾರರ ಜತೆಗೆ ಮಾತನಾಡಿ, ಶಾಸಕರನ್ನು ಪಕ್ಷಾಂತರಗೊಳಿಸುವ ಕೆಲಸ ಯಾರೂ ಮಾಡಬಾರದು. ಇಂಥ ಕೆಲಸದಿಂದ ಇಂದಲ್ಲ, ನಾಳೆ ದೇಶದ ಪ್ರಜಾಪ್ರಭುತ್ವ ವ್ಯವಸ್ಥೆಗೆ ಹೊಡೆತ ಬೀಳುತ್ತದೆ ಎಂದು ತಿಳಿಸಿದರು.

ಅಗ್ನಿಪಥ್ ಕೈಬಿಡಲು ಆಗ್ರಹಿಸಿ ನಾಳೆ ಜಂತರ್ ಮಂತರ್ ಮುಂದೆ ಕಾಂಗ್ರೆಸ್ ಪ್ರತಿಭಟನೆ: ಮಲ್ಲಿಕಾರ್ಜುನ್ ಖರ್ಗೆ

ಮಹಾರಾಷ್ಟ್ರದಲ್ಲಿ ಶಿವಸೇನೆ, ಎನ್‌ಸಿಪಿ ಮತ್ತು ಕಾಂಗ್ರೆಸ್‌ ಸರ್ಕಾರ ಪತನಕ್ಕೆ ಬಿಜೆಪಿ ಕುತಂತ್ರವೇ ಕಾರಣ ಎಂಬುದು ಗುಟ್ಟೇನಲ್ಲ. ಮಹಾರಾಷ್ಟ್ರ ಒಂದೇ ಅಲ್ಲ, ದೇಶದ ಬಹುತೇಕ ಕಡೆ ಕುತಂತ್ರದಿಂದಲೇ ಬಿಜೆಪಿ ಅಧಿಕಾರಕ್ಕೆ ಬಂದಿದೆ. ಮಹಾರಾಷ್ಟ್ರದಲ್ಲಿ ನಮ್ಮ ಮೈತ್ರಿಕೂಟ ಜನರಿಂದ ಅಧಿಕಾರ ಕಳೆದುಕೊಂಡಿಲ್ಲ. ಬಿಜೆಪಿ ಕುತಂತ್ರದಿಂದ ಅಧಿಕಾರ ಕಳೆದುಕೊಂಡಿದೆ. ಇದು ಪ್ರಜಾಪ್ರಭುತ್ವಕ್ಕೆ ಬಹುದೊಡ್ಡ ಹೊಡೆತ ಎಂದರು. ಮೋದಿಯವರಿಗೆ ಲೋಕಸಭೆಯಲ್ಲಿ 330ಕ್ಕಿಂತ ಹೆಚ್ಚು ಸ್ಥಾನ ಬಂದರೂ, ಅನೇಕ ರಾಜ್ಯಗಳಲ್ಲಿ ಅಧಿಕಾರದಲ್ಲಿದ್ದರೂ ತೃಪ್ತಿಯಿಲ್ಲ ಎಂದು ತಿವಿದರು.