NEET-UG ಮರುಪರೀಕ್ಷೆ ಹಿನ್ನೆಲೆಯಲ್ಲಿ ಟೆಲಿಗ್ರಾಂ ಆ್ಯಪ್‌ ಅನ್ನು ತಾತ್ಕಾಲಿಕವಾಗಿ ಬ್ಯಾನ್ ಮಾಡಿದ ಕೇಂದ್ರ ಸರ್ಕಾರದ ನಿರ್ಧಾರವನ್ನು ಕರ್ನಾಟಕ ಸಚಿವ ಪ್ರಿಯಾಂಕ್ ಖರ್ಗೆ. ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ತೀವ್ರವಾಗಿ ಟೀಕಿಸಿದ್ದಾರೆ. ಇದು NTA ವೈಫಲ್ಯವನ್ನು ಮರೆಮಾಚಲು ಈ ಕ್ರಮ ಎಂದು ಅರೋಪಿಸಿದ್ದಾರೆ.

NEET-UG ಮರುಪರೀಕ್ಷೆಗೂ ಮುನ್ನ ಟೆಲಿಗ್ರಾಂ ಆ್ಯಪ್‌ ಅನ್ನು ತಾತ್ಕಾಲಿಕವಾಗಿ ಬ್ಯಾನ್ ಮಾಡಲು ಮುಂದಾದ ಕೇಂದ್ರ ಸರ್ಕಾರದ ನಿರ್ಧಾರವನ್ನು ಕರ್ನಾಟಕ ಗೃಹ ಸಚಿವ ಪ್ರಿಯಾಂಕ್ ಖರ್ಗೆ(Priyank kharge) ತೀವ್ರವಾಗಿ ಟೀಕಿಸಿದ್ದಾರೆ. ಇದೊಂದು 'ಬೇಜಾಬ್ದಾರಿ, ಅಸಮರ್ಥ ನಿರ್ಧಾರ ಎಂದು ಟೀಕಿಸಿದ್ದಾರೆ. ರಾಷ್ಟ್ರೀಯ ಪರೀಕ್ಷಾ ಏಜೆನ್ಸಿ (NTA)ಯಲ್ಲಿನ ವ್ಯವಸ್ಥಿತ ಸಮಸ್ಯೆಗಳನ್ನು ಸರಿಪಡಿಸುವ ಬದಲು, ಕೇಂದ್ರ ಸರ್ಕಾರ ತನ್ನ ತಪ್ಪನ್ನು ಬೇರೆಯವರ ಮೇಲೆ ಹಾಕಲು ಪ್ರಯತ್ನಿಸುತ್ತಿದೆ ಎಂದು ಅವರು ಆರೋಪಿಸಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಈ ಬಗ್ಗೆ ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ಖರ್ಗೆ, ಮೆಸೇಜಿಂಗ್ ಪ್ಲಾಟ್‌ಫಾರ್ಮ್ ಅನ್ನು ನಿಷೇಧಿಸುವುದರಿಂದ ಶೈಕ್ಷಣಿಕ ಉದ್ದೇಶಗಳಿಗಾಗಿ ಅದನ್ನು ಅವಲಂಬಿಸಿರುವ ವಿದ್ಯಾರ್ಥಿಗಳಿಗೆ ಅನ್ಯಾಯವಾಗುತ್ತದೆ ಎಂದು ಹೇಳಿದ್ದಾರೆ. 'ಟೆಲಿಗ್ರಾಂ ಬ್ಯಾನ್ ಮಾಡುವುದು ಒಂದು ಬೇಜಾಬ್ದಾರಿ, ಹೊಣೆಗೇಡೀತನದ ನಿರ್ಧಾರ. ಇದು ನಿಜವಾದ ಸಮಸ್ಯೆಯನ್ನು ಸರಿಪಡಿಸುವ ಬದಲು ವಿದ್ಯಾರ್ಥಿಗಳನ್ನು ಶಿಕ್ಷಿಸುತ್ತದೆ. ಲಕ್ಷಾಂತರ ವಿದ್ಯಾರ್ಥಿಗಳು ಸ್ಟಡಿ ಮೆಟೀರಿಯಲ್, ಅಪ್‌ಡೇಟ್‌ಗಳು, ಗೆಳೆಯರೊಂದಿಗೆ ಚರ್ಚೆ ಮತ್ತು ಪರೀಕ್ಷಾ ತಯಾರಿಗಾಗಿ ಟೆಲಿಗ್ರಾಂ ಬಳಸುತ್ತಾರೆ. NTA ಮತ್ತು ಕೇಂದ್ರ ಸರ್ಕಾರ ಪದೇ ಪದೇ ಪರೀಕ್ಷೆಗಳನ್ನು ಸರಿಯಾಗಿ ನಡೆಸಲು ವಿಫಲವಾದರೆ ವಿದ್ಯಾರ್ಥಿಗಳು ಯಾಕೆ ಕಷ್ಟಪಡಬೇಕು?' ಎಂದು ಕರ್ನಾಟಕ ಸಚಿವರು ಪ್ರಶ್ನಿಸಿದ್ದಾರೆ.

ಪದೇ ಪದೇ ನಡೆಯುತ್ತಿರುವ ಪೇಪರ್ ಲೀಕ್ ಮತ್ತು ಪರೀಕ್ಷೆಗೆ ಸಂಬಂಧಿಸಿದ ಅಕ್ರಮಗಳು, ವಿದ್ಯಾರ್ಥಿಗಳು ಬಳಸುವ ಡಿಜಿಟಲ್ ಪ್ಲಾಟ್‌ಫಾರ್ಮ್‌ಗಳ ತಪ್ಪಲ್ಲ, ಬದಲಾಗಿ ಆಡಳಿತಾತ್ಮಕ ವೈಫಲ್ಯಗಳನ್ನು ತೋರಿಸುತ್ತವೆ ಎಂದು ಅವರು ಆರೋಪಿಸಿದರು. 'ಪೇಪರ್ ಲೀಕ್, ವಿಳಂಬ, ದುರಾಡಳಿತ ಮತ್ತು ಪಾರದರ್ಶಕತೆ ಇಲ್ಲದಿರುವುದು NTAಯ ಟ್ರೇಡ್‌ಮಾರ್ಕ್ ಆಗಿದೆ. ಏಜೆನ್ಸಿಯನ್ನು ಹೊಣೆಗಾರರನ್ನಾಗಿ ಮಾಡುವ ಬದಲು, ಸರ್ಕಾರ ಪ್ಲಾಟ್‌ಫಾರ್ಮ್‌ಗಳನ್ನು ನಿಷೇಧಿಸಲು, ಚಾನೆಲ್‌ಗಳನ್ನು ಮೌನಗೊಳಿಸಲು ಮತ್ತು ಆರೋಪವನ್ನು ಬೇರೆಯವರ ಮೇಲೆ ವರ್ಗಾಯಿಸಲು ಬಯಸುತ್ತದೆ. ಇಲ್ಲಿ ಸಮಸ್ಯೆ ಟೆಲಿಗ್ರಾಂ ಅಲ್ಲ, ಸಮಸ್ಯೆ ಕೇಂದ್ರ ಸರ್ಕಾರ ಮತ್ತು NTAಯ ಅಸಮರ್ಥತೆ' ಎಂದು ಖರ್ಗೆ ಕಿಡಿಕಾರಿದ್ದಾರೆ.

ಮಾಫಿಯಾ ಮೇಲೆ ದಾಳಿ ಮಾಡಿ, ವಿದ್ಯಾರ್ಥಿಗಳ ಮೇಲಲ್ಲ: ರಾಹುಲ್ ಗಾಂಧಿ

ಇದಕ್ಕೂ ಮುನ್ನ, ಕಾಂಗ್ರೆಸ್ ನಾಯಕ ಮತ್ತು ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಕೂಡ NEET-UG ಪೇಪರ್ ಲೀಕ್ ಹಿನ್ನೆಲೆಯಲ್ಲಿ ಟೆಲಿಗ್ರಾಂ ಮೇಲಿನ ನಿರ್ಬಂಧಗಳ ಬಗ್ಗೆ ಕೇಂದ್ರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದರು. ಸರ್ಕಾರವು ಪೇಪರ್ ಲೀಕ್ ಮಾಫಿಯಾವನ್ನು ಗುರಿಯಾಗಿಸುವ ಬದಲು ವಿದ್ಯಾರ್ಥಿಗಳನ್ನು ಗುರಿಯಾಗಿಸುತ್ತಿದೆ ಎಂದು ಅವರು ಆರೋಪಿಸಿದ್ದರು. ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದ ರಾಹುಲ್, 'ಟೆಲಿಗ್ರಾಂ ಬ್ಯಾನ್' - ಪೇಪರ್ ಲೀಕ್ ತಡೆಯಲು ಮೋದಿ ಸರ್ಕಾರದ ಹೊಸ ತಂತ್ರ. ಅಂದರೆ, ಕಳ್ಳನನ್ನು ಹಿಡಿಯುವ ಬದಲು, ಸಂತ್ರಸ್ತರ ಮನೆಗೇ ಬೀಗ ಹಾಕಿದ ಹಾಗೆ ಎಂದು ವ್ಯಂಗ್ಯವಾಡಿದ್ದರು.

ಲಕ್ಷಾಂತರ ವಿದ್ಯಾರ್ಥಿಗಳು ವರ್ಷಗಳಿಂದ ಟೆಲಿಗ್ರಾಂನಲ್ಲಿ ನೋಟ್ಸ್, ಟೆಸ್ಟ್ ಸರಣಿ, ಚರ್ಚೆಗಳ ಮೂಲಕ ಅಧ್ಯಯನ ಮಾಡುತ್ತಿದ್ದಾರೆ ಮತ್ತು ಈ ಸೌಲಭ್ಯವನ್ನು ಕಸಿದುಕೊಳ್ಳುವುದು ಪೇಪರ್ ಲೀಕ್‌ಗೆ ಪರಿಹಾರವಲ್ಲ ಎಂದು ಅವರು ಒತ್ತಿ ಹೇಳಿದ್ದರು. "ಲಕ್ಷಾಂತರ ವಿದ್ಯಾರ್ಥಿಗಳು ವರ್ಷಗಳಿಂದ ಟೆಲಿಗ್ರಾಂನಲ್ಲಿ ಓದುತ್ತಿದ್ದಾರೆ. ಆ ಸೌಲಭ್ಯವನ್ನು ಕಸಿದುಕೊಂಡರೆ ಪೇಪರ್ ಲೀಕ್‌ಗೆ ಪರಿಹಾರ ಸಿಗುತ್ತದೆಯೇ?" ಎಂದು ಪೋಸ್ಟ್‌ನಲ್ಲಿ ಪ್ರಶ್ನಿಸಿದ್ದರು.

ಇಂತಹ ಕ್ರಮಗಳ ಪರಿಣಾಮಕಾರಿತ್ವವನ್ನು ಪ್ರಶ್ನಿಸಿದ ಅವರು, ಇದು ಸಂಪೂರ್ಣ ಸುರಕ್ಷಿತವೂ ಅಲ್ಲ - ದೇಶದ ಪ್ರತಿಯೊಬ್ಬ ವಿದ್ಯಾರ್ಥಿಗೂ ಇದು ಗೊತ್ತು, ಪೇಪರ್ ಲೀಕ್ ಮಾಫಿಯಾಗೂ ಗೊತ್ತು. ಹಾಗಾದರೆ, ಮುಂದಿನ ನಿಷೇಧ ಯಾರ ಮೇಲೆ? ವಾಟ್ಸಾಪ್ ಮೇಲಾ? ಎಂದು ಬರೆದಿದ್ದರು.

ಪರೀಕ್ಷಾ ದಿನದ ವ್ಯವಸ್ಥೆಗಳ ಬಗ್ಗೆ ಲೇವಡಿ ಮಾಡಿದ ಗಾಂಧಿ, ಪರೀಕ್ಷೆಯ ದಿನ, ವಿದ್ಯಾರ್ಥಿಗಳನ್ನು ತಪಾಸಣೆ ಮಾಡಲಾಗುತ್ತದೆ. ಕತ್ತರಿಯಿಂದ ಜೇಬುಗಳನ್ನು ಕತ್ತರಿಸಲಾಗುತ್ತದೆ. ವಾಯುಪಡೆಯ ಮೂಲಕ ಪ್ರಶ್ನೆಪತ್ರಿಕೆಗಳನ್ನು ಕಳುಹಿಸಲಾಗುತ್ತದೆ. ಇಂತಹ ನಾಟಕಗಳಿಗೆ ಯಾವುದೇ ಕೊರತೆಯಿಲ್ಲ. ಆದರೆ ರೋಗದ ಮೂಲಕ್ಕೆ ಒಂದೇ ಒಂದು ಹೊಡೆತ ಬೀಳುವುದಿಲ್ಲ - ಏಕೆಂದರೆ ಈ ಸರ್ಕಾರದ ಕಣ್ಗಾವಲಿನಲ್ಲೇ ಪೇಪರ್ ಲೀಕ್ ಮಾಫಿಯಾ ಬೆಳೆಯುತ್ತಿದೆ ಮತ್ತು ಯುವಕರ ಕಣ್ಣಲ್ಲಿ ರಕ್ತ ಬರಿಸುತ್ತಿದೆ ಎಂದಿದ್ದರು. ಮೋದಿ ಜೀ - ಈ ನಾಟಕಗಳನ್ನು ಬಿಡಿ. ಮಾಫಿಯಾ ಮೇಲೆ ದಾಳಿ ಮಾಡಿ, ವಿದ್ಯಾರ್ಥಿಗಳ ಮೇಲಲ್ಲ. 'ವಿದ್ಯಾರ್ಥಿಗಳ ಧ್ವನಿ'ಯನ್ನು ಆಲಿಸಿ - ಇಲ್ಲದಿದ್ದರೆ, ದೇಶದ ಯುವಕರಿಗೆ ತಮ್ಮ ಹಕ್ಕುಗಳನ್ನು ಹೇಗೆ ಪಡೆಯಬೇಕೆಂದು ತಿಳಿದಿದೆ ಎಂದು ಅವರು ಎಚ್ಚರಿಸಿದ್ದರು.

ಕೇಂದ್ರದ ಆದೇಶ ಮತ್ತು ಟೆಲಿಗ್ರಾಂನ ಕಾನೂನು ಹೋರಾಟ

ಜೂನ್ 21 ರಂದು ನಿಗದಿಯಾಗಿದ್ದ NEET-UG 2026ರ ಮರುಪರೀಕ್ಷೆಗೆ ಹಾಜರಾಗುವ ಅಭ್ಯರ್ಥಿಗಳನ್ನು ದಾರಿ ತಪ್ಪಿಸಲು ಮತ್ತು ವಂಚಿಸಲು ಸಂಘಟಿತ ನಕಲು ಜಾಲಗಳು ಈ ಪ್ಲಾಟ್‌ಫಾರ್ಮ್ ಅನ್ನು ಬಳಸುತ್ತಿವೆ ಎಂದು NTA ಆರೋಪಿಸಿತ್ತು. NTAಯ ಮನವಿಯ ಮೇರೆಗೆ ಕೇಂದ್ರ ಸರ್ಕಾರವು ಜೂನ್ 16 ರಂದು ಟೆಲಿಗ್ರಾಂ ಅನ್ನು ಬ್ಲಾಕ್ ಮಾಡಲು ಆದೇಶಿಸಿತ್ತು. ಮೇ 3 ರ ಪರೀಕ್ಷೆಯು ಪೇಪರ್ ಲೀಕ್ ವಿವಾದಗಳಿಂದಾಗಿ ರದ್ದಾದ ನಂತರ NTA ಮರುಪರೀಕ್ಷೆಯನ್ನು ನಿಗದಿಪಡಿಸಿತ್ತು.

ಈ ಮಧ್ಯೆ, ಮುಂಬರುವ NEET-UG 2026ರ ಮರುಪರೀಕ್ಷೆಗೆ ಸಂಬಂಧಿಸಿದಂತೆ ಭಾರತದಲ್ಲಿ ತನ್ನ ಕಾರ್ಯಾಚರಣೆಯನ್ನು ಜೂನ್ 22 ರವರೆಗೆ ತಾತ್ಕಾಲಿಕವಾಗಿ ನಿರ್ಬಂಧಿಸುವ ಕೇಂದ್ರ ಸರ್ಕಾರದ ನಿರ್ಧಾರವನ್ನು ಪ್ರಶ್ನಿಸಿ ಟೆಲಿಗ್ರಾಂ ದೆಹಲಿ ಹೈಕೋರ್ಟ್ ಮೆಟ್ಟಿಲೇರಿದೆ. (ANI)

(ಶೀರ್ಷಿಕೆ ಹೊರತುಪಡಿಸಿ, ಈ ಸುದ್ದಿಯನ್ನು ಏಷ್ಯಾನೆಟ್ ನ್ಯೂಸಬಲ್ ಇಂಗ್ಲಿಷ್ ಸಿಬ್ಬಂದಿ ಸಂಪಾದಿಸಿಲ್ಲ ಮತ್ತು ಸಿಂಡಿಕೇಟೆಡ್ ಫೀಡ್‌ನಿಂದ ಪ್ರಕಟಿಸಲಾಗಿದೆ.)