ಪ್ರಜ್ವಲ್ ರೇವಣ್ಣ ಪ್ರಕರಣದಲ್ಲಿ ಎಸ್ಐಟಿ ಅಧಿಕಾರಿಗಳಿಗೆ ಫ್ರೀ ಹ್ಯಾಂಡ್‌ ಸಿಕ್ಕಿಲ್ಲ. ಸಿಎಂ, ಡಿಸಿಎಂ ಹೇಳಿದ ಹಾಗೆ ಕೆಲಸ ಮಾಡುತ್ತಿದ್ದಾರೆ. ಹೀಗಾಗಿ ಪಾರದರ್ಶಕವಾಗಿ ತನಿಖೆ ನಡೆಯಲು ಈ ಪ್ರಕರಣವನ್ನು ಸಿಬಿಐಗೆ ಒಪ್ಪಿಸಬೇಕು ಎಂದು ಮಾಜಿ ಗೃಹ ಸಚಿವ ಆರಗ ಜ್ಞಾನೇಂದ್ರ ಒತ್ತಾಯಿಸಿದರು.

ಶಿವಮೊಗ್ಗ (ಮೇ.09): ಪ್ರಜ್ವಲ್ ರೇವಣ್ಣ ಪ್ರಕರಣದಲ್ಲಿ ಎಸ್ಐಟಿ ಅಧಿಕಾರಿಗಳಿಗೆ ಫ್ರೀ ಹ್ಯಾಂಡ್‌ ಸಿಕ್ಕಿಲ್ಲ. ಸಿಎಂ, ಡಿಸಿಎಂ ಹೇಳಿದ ಹಾಗೆ ಕೆಲಸ ಮಾಡುತ್ತಿದ್ದಾರೆ. ಹೀಗಾಗಿ ಪಾರದರ್ಶಕವಾಗಿ ತನಿಖೆ ನಡೆಯಲು ಈ ಪ್ರಕರಣವನ್ನು ಸಿಬಿಐಗೆ ಒಪ್ಪಿಸಬೇಕು ಎಂದು ಮಾಜಿ ಗೃಹ ಸಚಿವ ಆರಗ ಜ್ಞಾನೇಂದ್ರ ಒತ್ತಾಯಿಸಿದರು. ಸುದ್ದಿಗಾರರೊಂದಿಗೆ ಮಾತನಾಡಿ, ಸಂತ್ರಸ್ತ ಮಹಿಳೆಯರ ಮಾನ ಹರಾಜು ಹಾಕುವ ಕೆಲಸ ಮಾಡುತ್ತಿದ್ದಾರೆ. ಇದು ಹಳೆಯ ಪ್ರಕರಣ. ಕಾಂಗ್ರೆಸ್, ಜೆಡಿಎಸ್ ಮೈತ್ರಿ ಇದ್ದಾಗಲೇ ಈಗಿನ ಸಿಎಂ, ಡಿಸಿಎಂಗೆ ಅರಿವಿತ್ತು. ಆಗ ಸುಮ್ಮನಿದ್ದು, ಈಗ ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಎನ್‌ಡಿಎ ಮೈತ್ರಿಕೂಟಕ್ಕೆ ಹಾನಿ ಮಾಡುವ ಉದ್ದೇಶದಿಂದ ಚುನಾವಣೆಯ ಮುನ್ನಾ ದಿನ ಸಾವಿರಾರು ಪೆನ್‍ಡ್ರೈವ್ ಗಳನ್ನು ಹಂಚಿ ರಾಜಕಾರಣ ಮಾಡಲು ಹೊರಟಿದ್ದಾರೆ ಎಂದು ದೂರಿದರು.

Add Asianetnews Kannada as a Preferred SourcegooglePreferred

ಈ ಪ್ರಕರಣದ ಹಿಂದೆ ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿ.ಕೆ.ಶಿವಕುಮಾರ್ ಭಾಗಿಯಾಗಿದ್ದಾರೆ. ನೈಜ ಅಪರಾಧಿಗಳನ್ನು ರಕ್ಷಿಸಲಾಗುತ್ತಿದೆ. ಪೆನ್ ಡ್ರೈವ್ ಹಂಚುವುದು ಮತ್ತು ಮಹಿಳೆಯರ ಬಗ್ಗೆ ಅಪಪ್ರಚಾರ ಮಾಡುವುದು ಕೂಡ ಶಿಕ್ಷಾರ್ಹ ಅಪರಾಧ. ಮಲೇಷ್ಯಾದಲ್ಲಿ ಪೆನ್ ಡ್ರೈವ್ ಗಳು ತಯಾರಾಗಿವೆ ಎಂಬ ಮಾತು ಕೇಳಿ ಬರುತ್ತಿದ್ದು, ಈ ಪ್ರಕರಣದ ಕಬಂಧಬಾಹುಗಳು ದೇಶ ವಿದೇಶಗಳಲ್ಲಿ ಹರಡಿರುವುದರಿಂದ ಮತ್ತು ಇದೊಂದು ಅತ್ಯಂತ ದೊಡ್ಡ ಪ್ರಕರಣವಾಗಿರುವುದರಿಂದ ಕೂಡಲೇ ಸಿಬಿಐಗೆ ಒಪ್ಪಿಸುವುದು ಸೂಕ್ತ ಎಂದರು.

ವಕೀಲ ದೇವರಾಜೇಗೌಡ ಮೊದಲೇ ಬಿಜೆಪಿ ರಾಜ್ಯಾಧ್ಯಕ್ಷರಿಗೆ ಬರೆದ ಪತ್ರದ ಬಗ್ಗೆ ನನಗೆ ಮಾಹಿತಿ ಇಲ್ಲ. ಆದರೆ, ಕಾಂಗ್ರೆಸ್ ನವರಿಗೆ ಈ ವಿಚಾರ ಮೊದಲೇ ತಿಳಿದಿತ್ತು ಎಂಬ ಮಾಹಿತಿ ಇದೆ. ನಾಲ್ಕು ವರ್ಷ ಸುಮ್ಮನಿದ್ದು ಈಗ ಯಾಕೆ ಬಿಡುಗಡೆಗೊಳಿಸಿದರು ಎಂಬುದು ಪ್ರಶ್ನೆ. ಒಕ್ಕಲಿಗರ ನಾಯಕತ್ವದ ಹಿನ್ನೆಲೆಯಲ್ಲಿ ಕೂಡ ಈ ರೀತಿಯ ಒಂದು ಆಟ ಆಡಿದ್ದಾರೆ. ಪ್ರಕರಣ ಗಂಭೀರವಾಗಿದ್ದು, ಸರ್ಕಾರ ಪಾರದರ್ಶಕ ತನಿಖೆ ನಡೆಸಬೇಕು. ಅಪರಾಧಿಗಳು ಎಷ್ಟೇ ಪ್ರಭಾವಿಗಳಿದ್ದರೂ ಶಿಕ್ಷಗೊಳಪಡಿಸಬೇಕು ಎಂದರು.

ದೇಶದ ಸಂವಿಧಾನ ಅರಿಯದೇ ವರ್ತಿಸುವ ಪ್ರಧಾನಿ ಮೋದಿ: ಸಚಿವ ಮಹದೇವಪ್ಪ

ಸಿಎಂ, ಡಿಸಿಎಂರಿಂದ ಷಡ್ಯಂತ್ರ: ಮಹಿಳೆಯರ ಮೇಲೆ ಅತ್ಯಾಚಾರ, ದೌರ್ಜನ್ಯ ಮಾಡಿದ ಅಪರಾಧಿಯನ್ನು ಬೆಂಬಲಿಸುವುದಿಲ್ಲ. ಅವರಿಗೆ ಶಿಕ್ಷೆಯಾಗಲೇಬೇಕು. ಅಮಿತ್ ಶಾ ಮತ್ತು ನರೇಂದ್ರ ಮೋದಿ ಕೂಡ ಇದೇ ಮಾತು ಹೇಳಿದ್ದಾರೆ. ಮಾಜಿ ಪ್ರಧಾನಿ ದೇವೇಗೌಡರ ಇಳಿ ವಯಸ್ಸಿನಲ್ಲಿ ಅವರ ಘನತೆ, ಗೌರವ ಕುಗ್ಗಿಸಲು ಸಿಎಂ, ಡಿಸಿಎಂ ಸೇರಿ ಷಡ್ಯಂತ್ರ ಮಾಡಿದ್ದಾರೆ. ಅವರಿಗೆ ಮಾನಸಿಕವಾಗಿ ನೋವುಂಟು ಮಾಡಿದ್ದಾರೆ.