ಕರ್ನಾಟಕ ಕಾಂಗ್ರೆಸ್ನಲ್ಲಿ ಅಧಿಕಾರ ಹಂಚಿಕೆ ಮತ್ತು ಮುಖ್ಯಮಂತ್ರಿ ಬದಲಾವಣೆ ಚರ್ಚೆ ತೀವ್ರಗೊಂಡಿದೆ. ಡಿಸಿಎಂ ಡಿಕೆ ಶಿವಕುಮಾರ್ ಅವರು ಜೈಲಿನಲ್ಲಿರುವ ಶಾಸಕರನ್ನು ಭೇಟಿಯಾಗಿ, ಬೆಂಬಲಿಗ ಶಾಸಕರ ಸಹಿ ಸಂಗ್ರಹಕ್ಕೆ ಮುಂದಾಗಿದ್ದಾರೆ ಎನ್ನಲಾಗಿದ್ದು, ಇದು ರಾಜಕೀಯ ವಲಯದಲ್ಲಿ ಹೊಸ ಕುತೂಹಲಕ್ಕೆ ಕಾರಣವಾಗಿದೆ.
ಬೆಂಗಳೂರು: ರಾಜ್ಯ ರಾಜಕೀಯದಲ್ಲಿ ಮಹತ್ವದ ಬೆಳವಣಿಗೆಗಳು ನಡೆಯುತ್ತಿದೆ. ಅಧಿಕಾರ ಹಂಚಿಕೆ ವಿಚಾರವಾಗಿ ಮತ್ತು ಮುಖ್ಯಮಂತ್ರಿ ಬದಲಾವಣೆ ಕುರಿತಾಗಿ ವ್ಯಾಪಕ ರಾಜಕೀಯ ಚಟುವಟಿಕೆಗಳು ನಡೆಯುತ್ತಿವೆ. ಒಂದೆಡೆ ಡಿಸಿಎಂ ಡಿಕೆ ಶಿವಕುಮಾರ್ ಬಣ ಮತ್ತೊಂದು ಕಡೆ ಸಿಎಂ ಸಿದ್ದರಾಮಯ್ಯ ಅವರ ಬಣ ಹೀಗೆ ರಾಜ್ಯದಲ್ಲಿ ಕಾಂಗ್ರೆಸ್ ನಾಯಕರ ನಡೆ ಕುತೂಹಲ ಮೂಡಿಸಿದೆ. ಇದರ ನಡುವೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಬೆಂಗಳೂರಿಗೆ ಶುಕ್ರವಾರ ಆಗಮಿಸಿದ್ದಾರೆ. ಇವೆಲ್ಲ ರಾಜಕೀಯ ಚಟುವಟಿಗಳ ಮಧ್ಯೆ ನಿನ್ನೆ ಡಿಸಿಎಂ ಡಿಕೆ ಶಿವಕುಮಾರ್ ಬೆಂಗಳೂರಿನ ಪರಪ್ಪನ ಅಗ್ರಹಾರಕ್ಕೆ ಭೇಟಿ ನೀಡಿ ಜೈಲಿನಲ್ಲಿರುವ ಶಾಸಕ ವಿರೇಂದ್ರ ಪಪ್ಪಿ ಮತ್ತು ವಿನಯ ಕುಲಕರ್ಣಿ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದರು. ಇದೀಗ ಈ ವಿಚಾರವಾಗಿ ಮಹತ್ವದ ವಿಚಾರ ಹೊರಬರುತ್ತಿದೆ.
ಡಿಕೆಶಿ ಪಕ್ಷದಲ್ಲಿ ಬಲ ವರ್ಧನೆ ಮಾಡಿಕೊಳ್ಳುವ ಪ್ರಯತ್ನ ಮಾಡುತ್ತಿದ್ದಾರಾ? ಇದರ ಜೊತೆಗೆ ಶಾಸಕರ ಬಲವನ್ನ ಹೆಚ್ಚಿಸಿಕೊಳ್ಳುವ ಪ್ರಯತ್ನಕ್ಕೆ ಮುಂದಾದರಾ? ಸಹಿ ಸಂಗ್ರಹ ಮಾಡಲು ಮುಂದಾದರಾ? ಎಂಬ ಹಲವು ಅನುಮಾನಗಳು ಮೂಡಿದೆ. ಯಾಕೆಂದರೆ ಈಗಾಗಲೇ ಡಿಕೆಶಿ ಶಾಸಕರ ಸಹಿ ಸಂಗ್ರಹ ಆರಂಭಿಸಿದ್ದಾರಂತೆ. ಬೆಂಬಲ ನೀಡುವ ಶಾಸಕರ ಸಹಿ ಪಡೆಯುತ್ತಿದ್ದು, ಎಲ್ಲಾ ಶಾಸಕರ ಸಹಿ ಪಡೆದು ಹೈಕಮಾಂಡ್ ಗೆ ತಲುಪಿಸುವ ಲೆಕ್ಕಾಚಾರ ಹಾಕಲಾಗಿದೆಯಂತೆ.
ನಿನ್ನೆ ಜೈಲಿಗೂ ಹೋಗಿದ್ದ ಡಿಕೆಶಿ, ಅಲ್ಲಿರುವ ಶಾಸಕರಾದ ಶಾಸಕ ವಿರೇಂದ್ರ ಪಪ್ಪಿ, ವಿನಯ ಕುಲಕರ್ಣಿ ಸಹಿ ಪಡೆಯುವ ಮುಳಕ ಜೈಲಿನಲ್ಲಿ ಇರುವ ಶಾಸಕರ ಬೆಂಬಲವನ್ನು ಪಡೆದಿದ್ದಾರೆನ್ನಲಾಗಿದೆ. ಇನ್ನು ಸಹಿ ಸಂಗ್ರಹದಲ್ಲಿ ಒಕ್ಕಲಿಗ ಶಾಸಕರೇ ಟಾರ್ಗೆಟ್ ಆಗಿದ್ದು, ಹಳೆ ಮೈಸೂರು ಭಾಗದ ಶಾಸಕರ ಸಂಪರ್ಕ ಮುಗಿಸಿ, ಸಿಎಂ ತವರು ಜಿಲ್ಲೆಯ ಶಾಸಕರ ಸಹಿ ಪಡೆದಿದ್ದಾರೆನ್ನಲಾಗಿದೆ.
ಡಿಕೆಶಿ ಮನೆಯಲ್ಲಿ ವಿಶೇಷ ಪೂಜೆ
ಇನ್ನು ಪವರ್ ಶೇರಿಂಗ್ ಸುದ್ದಿಯ ಬೆನ್ನಲ್ಲೇ ಡಿಸಿಎಂ ಡಿಕೆಶಿ ಮನೆಯಲ್ಲಿ ವಿಶೇಷ ಪೂಜೆ ನಡೆದಿದೆ. ಸಿದ್ದೇಶ್ವರ ಪಲ್ಲಕ್ಕಿ ವಾಹನ ನಿನ್ನೆ ರಾತ್ರಿ ಸುಮಾರು 9.30ರ ಸಮಯದಲ್ಲಿ ಬಂದ್ದಿದ್ದು, ಸದಾಶಿವನಗರದಲ್ಲಿರುವ ಮನೆಯಲ್ಲಿ ಐವರು ಪೂಜಾರಿಗಳಿಂದ ಪೂಜೆ ನಡೆದಿದೆ. ಸುಮಾರು 1 ಗಂಟೆ ಕಾಲ ದೇವರ ಪಾದುಕಾ ಪೂಜೆ ನಡೆಯಿತು. ಪೂಜೆ ಮುಗಿದ ಬಳಿಕ ಸ್ವತಃ ಹೊರಗಡೆ ಬಂದ ಡಿಸಿಎಂ ಪತ್ನಿ ವಾಹನ ಬಿಳ್ಕೊಟ್ಟರು.
ಸಿಎಂ ಮನೆಗೆ ಶಾಸಕರ ದಂಡು
ಇನ್ನು ಶನಿವಾರ ಸಿಎಂ ಸಿದ್ದರಾಮಯ್ಯ ನಿವಾಸಕ್ಕೆ ಯೋಗೇಶ್ವರ್, ಬಿ ಕೆ ಸಂಗಮೇಶ, ಶಾಸಕ ಯಾಸೀರ್ ಖಾನ್ ಪಠಾಣ್, ಶ್ರೀನಿವಾಸ ಮಾನೆ, ಸಚಿವ ಸತೀಶ್ ಜಾರಕಿಹೊಳಿ ಅಜಯಸಿಂಗ್ ಆಗಮಿಸಿದರು. ನಿನ್ನೆ ಯಾಸೀನ್ ಖಾನ್ ಪಠಾಣ್ ಡಿಕೆಶಿ ಮನೆಯಲ್ಲಿದ್ದರು.


