Asianet Suvarna News Asianet Suvarna News

ಶಾಸಕರ ಶಿಫಾರಸು ಆಧರಿಸಿ ಪೊಲೀಸ್‌ ವರ್ಗಾವಣೆ: ಸಚಿವ ಪರಮೇಶ್ವರ್‌

ಶಾಸಕರ ಶಿಫಾರಸು ಪತ್ರ ಪರಿಶೀಲನೆ ಮಾಡಿ ಅವುಗಳ ಆಧಾರದ ಮೇಲೆ ವರ್ಗಾವಣೆ ಪ್ರಕ್ರಿಯೆ ನಡೆಸಲಾಗುವುದು. ಒಂದು ವಾರದೊಳಗೆ ಪೊಲೀಸ್‌ ವರ್ಗಾವಣೆ ಪ್ರಕ್ರಿಯೆ ಮುಗಿಸುತ್ತೇವೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್‌ ಹೇಳಿದ್ದಾರೆ. 

Police transfer based on MLAs recommendation Says Minister Dr G Parameshwar gvd
Author
First Published Aug 8, 2023, 3:20 AM IST | Last Updated Aug 8, 2023, 3:20 AM IST

ಬೆಂಗಳೂರು (ಆ.08): ಶಾಸಕರ ಶಿಫಾರಸು ಪತ್ರ ಪರಿಶೀಲನೆ ಮಾಡಿ ಅವುಗಳ ಆಧಾರದ ಮೇಲೆ ವರ್ಗಾವಣೆ ಪ್ರಕ್ರಿಯೆ ನಡೆಸಲಾಗುವುದು. ಒಂದು ವಾರದೊಳಗೆ ಪೊಲೀಸ್‌ ವರ್ಗಾವಣೆ ಪ್ರಕ್ರಿಯೆ ಮುಗಿಸುತ್ತೇವೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್‌ ಹೇಳಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವರ್ಗಾವಣೆ ವಿಚಾರದಲ್ಲಿ ಯಾವುದೇ ಗೊಂದಲಗಳಿಲ್ಲ. ಬಹುಶಃ ಇನ್ನೊಂದು ವಾರದಲ್ಲಿ ಪೊಲೀಸ್‌ ಇಲಾಖೆಯಲ್ಲಿ ವರ್ಗಾವಣೆ ಪೂರ್ಣವಾಗಲಿದೆ. ವರ್ಗಾವಣೆಗೆ ಶಾಸಕರ ಶಿಫಾರಸು ಪತ್ರವೂ ಒಂದು ಹಂತ. ಹೀಗಾಗಿ ಶಾಸಕರ ಶಿಫಾರಸು ಪತ್ರ ಪರಿಶೀಲನೆ ಮಾಡಿ ವರ್ಗಾವಣೆ ಮಾಡಲಾಗುತ್ತದೆ ಎಂದು ಅವರು ಸ್ಪಷ್ಟಪಡಿಸಿದರು. ಸದಾಶಿವ ಆಯೋಗದ ವರದಿ ಜಾರಿಗೆ ನಾವು ಬದ್ಧರಾಗಿದ್ದೇವೆ. 

ಯಾವ ರೀತಿ ಮಾಡಬೇಕು ಎಂಬುದನ್ನು ಕುಳಿತು ಚರ್ಚೆ ಮಾಡಿ ಕಾರ್ಯರೂಪಕ್ಕೆ ತರುತ್ತೇವೆ ಎಂದು ಪರಮೇಶ್ವರ್‌ ಭರವಸೆ ನೀಡಿದರು. ಬಿಜೆಪಿಯವರು ಹಿಂದೆ ಶೇ.2ರಷ್ಟುಮೀಸಲಾತಿ ಹಂಚಿಕೆ ಮಾಡಿದ್ದರು. ಅದನ್ನು ಅವರ ಪಕ್ಷದ ಕೇಂದ್ರ ಸಚಿವ ನಾರಾಯಣಸ್ವಾಮಿ ಅವರೇ ಸಾಧ್ಯವಿಲ್ಲ ಎಂದಿದ್ದರು. ಹೀಗಾಗಿ ಮೀಸಲಾತಿ ವಿಚಾರದಲ್ಲಿ ಬಿಜೆಪಿಯವರು ರಾಜಕೀಯ ಲಾಭ ಪಡೆಯಲು ಪ್ರಯತ್ನಿಸಿದರು. ಈ ರೀತಿ ಆಗದಂತೆ ನಾವು ಕುಳಿತು ಚರ್ಚೆ ಮಾಡುತ್ತೇವೆ. ಯಾರಿಗೆ ಎಷ್ಟೆಷ್ಟುಮೀಸಲಾತಿ ಹಂಚಿಕೆ ಮಾಡಬೇಕು ಎಂದು ತೀರ್ಮಾನ ಮಾಡುತ್ತೇವೆ ಎಂದರು.

ಬಿಜೆಪಿ ತಡೆದ ಯೋಜನೆಗೆ ಮತ್ತೆ ಚಾಲನೆ ನೀಡುವೆ: ಸಚಿವ ಮಲ್ಲಿಕಾರ್ಜುನ

ನೈತಿಕ ಪೋಲೀಸ್‌ಗಿರಿಗೆ ಕಡಿವಾಣ ಹಾಕಿದ ಡಾ.ಪರಮೇಶ್ವರ್‌: ಅಖಿಲ ಕರ್ನಾಟಕ ಡಾ.ಜಿ. ಪರಮೇಶ್ವರ್‌ ಯುವ ಸೈನ್ಯ, ಡಾ.ಜಿ. ಪರಮೇಶ್ವರ್‌ ಅಭಿಮಾನಿಗಳ ಬಳಗದವರು ಗೃಹ ಸಚಿವ ಡಾ.ಜಿ. ಪರಮೇಶ್ವರ್‌ ಹುಟ್ಟುಹಬ್ಬ ಅಂಗವಾಗಿ ನಗರದ ಕೋಟೆ ಆಂಜನೇಯಸ್ವಾಮಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿದರು. ನಂತರ ಸಾರ್ವಜನಿಕರಿಗೆ ಸಿಹಿ ವಿತರಿಸಿದರು. ಈ ವೇಳೆ ಕೆಪಿಸಿಸಿ ವಕ್ತಾರ ಹಾಗೂ ಮೈಲ್ಯಾಕ್‌ ಮಾಜಿ ಅಧ್ಯಕ್ಷ ಎಚ್‌.ಎ. ವೆಂಕಟೇಶ್‌ ಮಾತನಾಡಿ, ಶಿಕ್ಷಣ ಕ್ಷೇತ್ರಕ್ಕೆ ಡಾ.ಜಿ. ಪರಮೇಶ್ವರ್‌ ಅವರ ಕೊಡುಗೆ ಅಪಾರ. ಸಾವಿರಾರು ಶೋಷಿತ ವಿದ್ಯಾರ್ಥಿಗಳಿಗೆ ವಿದ್ಯಾದಾನ ಮಾಡಿದ್ದಾರೆ. 

ರಾಜ್ಯದಲ್ಲಿ 3 ಬಾರಿ ಗೃಹ ಸಚಿವರಾಗಿ ಕೆಲಸ ಮಾಡಿದ್ದಾರೆ. ತಮ್ಮ ರಾಜಕೀಯ ಜೀವನದಲ್ಲಿ ಒಂದು ಕಪ್ಪು ಚುಕ್ಕೆ ಇಲ್ಲದೆ ಪಾರದರ್ಶಕ ಆಡಳಿತ ಕೊಟ್ಟಿದ್ದಾರೆ ಎಂದು ಹೇಳಿದರು. ಬಿಜೆಪಿಯವರು ನೈತಿಕ ಪೊಲೀಸ್‌ಗಿರಿಗೆ ಮುಂದಾಗಿದ್ದರು. ಡಾ. ಪರಮೇಶ್ವರ್‌ ಅವರು ಗೃಹ ಸಚಿವರಾದ ಬಳಿಕ ನೈತಿಕ ಪೋಲಿಸ್‌ಗಿರಿಗೆ ಕಡಿವಾಣ ಹಾಕಿದ್ದಾರೆ. ಅನ್ಯಾಯಕ್ಕೆ ಒಳಗಾದವರಿಗೆ ತಕ್ಷಣ ನ್ಯಾಯ ಕೊಡಿಸಲು ಪೋಲಿಸ್‌ ಇಲಾಖೆಗೆ ಸೂಚನೆ ನೀಡಿದ್ದಾರೆ. ಭವಿಷ್ಯದಲ್ಲಿ ಅವರಿಗೆ ಉನ್ನತ ಸ್ಥಾನ ಸಿಗಲಿ ಎಂಬುದು ನಮ್ಮ ಆಶಯ ಎಂದರು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸಂಪುಟದಲ್ಲಿ ಹಿರಿಯ ಸಚಿವರಾಗಿ ಅತ್ಯುತ್ತಮ ಕಾರ್ಯಗಳನ್ನು ಮಾಡುತ್ತಿದ್ದಾರೆ. 

ಲೋಕಸಭೆ ಚುನಾವಣೆಗೆ ಸನ್ನದ್ಧರಾಗಿ: ಸಚಿವ ಸಂತೋಷ್‌ ಲಾಡ್‌

ಕಾಂಗ್ರೆಸ್‌ ಸರ್ಕಾರದಲ್ಲಿ ಯಾವುದೇ ಕಾನೂನು ಸುವ್ಯವಸ್ಥೆಗೆ ಭಂಗ ತರದಂತೆ ನೋಡಿಕೊಳ್ಳಲು ಕೆಲಸ ಮಾಡುತ್ತಿರುವುದನ್ನು ವಿರೋಧ ಪಕ್ಷದ ನಾಯಕರು ಗಮನಿಸಬೇಕು ಎಂದು ಅವರು ಸಲಹೆ ನೀಡಿದರು. ಕಳೆದ ಚುನಾವಣೆಯಲ್ಲಿ ಸೋತು ಅಧಿಕಾರ ಕಳೆದುಕೊಂಡ ಬಿಜೆಪಿ ಪಿಎಸ್‌ಐ ನೇಮಕಾತಿಯಲ್ಲಿ ಮಾಡಿರುವ ಅಕ್ರಮಗಳ ತನಿಖೆಗೆ ಆದೇಶ ನೀಡಿದ್ದರಿಂದ ಭಯಭೀತರಾಗಿದ್ದಾರೆ. ಹೀಗಾಗಿಯೇ ಈಗ ಇಲ್ಲದ ವಿಚಾರಗಳನ್ನು ಪ್ರಸ್ತಾಪಿಸುತ್ತಿರುವುದು ನಾಚಿಕೆಗೇಡಿನ ಸಂಗತಿಯಾಗಿದೆ ಎಂದು ಅವರು ಖಂಡಿಸಿದರು. ಅಖಿಲ ಕರ್ನಾಟಕ ಡಾ.ಜಿ. ಪರಮೇಶ್ವರ್‌ ಯುವಸೈನ್ಯ ಜಿಲ್ಲಾಧ್ಯಕ್ಷ ಸಿ. ಮಂಜುನಾಥ್‌, ಡಾ.ಜಿ. ಪರಮೇಶ್ವರ್‌ ಅಭಿಮಾನಿಗಳ ಬಳಗದ ಕಾರ್ಯಾಧ್ಯಕ್ಷ ಕೆ. ಮಹೇಶ್‌, ವಕೀಲ ಕಾಂತರಾಜ್‌, ಮುಖಂಡರಾದ ಮಣಿಕಂಠ, ಮಹೇಂದ್ರ, ದಡದಳ್ಳಿ ನಿಂಗರಾಜು, ಪ್ರಕಾಶ್‌, ಅವಿನಾಶ್‌, ಜಿ.ಆರ್‌. ಮಂಜು, ಮಧು, ಅಶೋಕ್‌, ಪ್ರಜ್ವಲ್‌, ಕೋಟೆ ಮಂಜು, ಪ್ರಸನ್ನ, ಮರಿದೇವಯ್ಯ, ಜ್ಞಾನೇಶ್‌, ಮಹೇಶ್‌, ಪ್ರವೀಣ್‌ ಮೊದಲಾದವರು ಇದ್ದರು.

Latest Videos
Follow Us:
Download App:
  • android
  • ios