ಪಿಇಎಸ್‌ ಎಂಜಿನಿಯರಿಂಗ್‌ ಕಾಲೇಜು ಮೈದಾನದಿಂದ ಗೆಜ್ಜಲಗೆರೆವರೆಗೆ ರೋಡ್‌ಶೋ, ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ ವೇ ಉದ್ಘಾಟನೆ ಬಳಿಕ ಬೃಹತ್‌ ಸಮಾವೇಶ. 

ಮಂಡ್ಯ(ಮಾ.08): ಪ್ರಧಾನಿ ನರೇಂದ್ರ ಮೋದಿಯವರು ಮಾ.12ರಂದು ರಾಜ್ಯಕ್ಕೆ ಭೇಟಿ ನೀಡಲಿದ್ದು, ಮಂಡ್ಯದಲ್ಲಿ ಮೈ-ಬೆಂ ಹೆದ್ದಾರಿ ಉದ್ಘಾಟನೆ, ರೋಡ್‌ ಶೋ ಮತ್ತು ಬೃಹತ್‌ ಸಮಾವೇಶ ನಡೆಸಲಿದ್ದಾರೆ. ಬಳಿಕ, ಹುಬ್ಬಳ್ಳಿಯಲ್ಲಿ ಐಐಟಿಯ ನೂತನ ಕಟ್ಟಡ ಉದ್ಘಾಟಿಸಿ, ಬೃಹತ್‌ ಸಮಾವೇಶ ನಡೆಸಲಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಬೆಳಗ್ಗೆ ಮಂಡ್ಯದ ಪಿಇಎಸ್‌ ಇಂಜಿನಿಯರಿಂಗ್‌ ಕಾಲೇಜು ಕ್ರೀಡಾಂಗಣಕ್ಕೆ ಹೆಲಿಕಾಪ್ಟರ್‌ ಮೂಲಕ ಆಗಮಿಸುವ ಮೋದಿ, ಪಿಇಎಸ್‌ ಕಾಲೇಜಿನಿಂದ ಗೆಜ್ಜಲಗೆರೆಯವರೆಗೆ ರೋಡ್‌ ಶೋ ನಡೆಸಲಿದ್ದಾರೆ. ಬಳಿಕ ಗೆಜ್ಜಲಗೆರೆಯ ಕೈಗಾರಿಕಾ ಪ್ರದೇಶದಲ್ಲಿ ಸಾರ್ವಜನಿಕ ಸಭೆಯಲ್ಲಿ ಭಾಗವಹಿಸಲಿದ್ದಾರೆ. ಇದೇ ವೇಳೆ, ಬೆಂಗಳೂರು-ಮೈಸೂರು ದಶಪಥ ಹೆದ್ದಾರಿಯನ್ನು ಮೋದಿ ಉದ್ಘಾಟಿಸಲಿದ್ದಾರೆ.

ಡಿ.ಕೆ.ಶಿವಕುಮಾರ್‌, ಕುಮಾರಸ್ವಾಮಿಯಿಂದ ಜಾತಿ ರಾಜಕಾರಣ: ಸಿ.ಟಿ.ರವಿ

ಈ ಹಿನ್ನೆಲೆಯಲ್ಲಿ ಮಾ.12ರ ಬೆಳಗ್ಗೆ 6 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ವಾಹನಗಳ ಸಂಚಾರ ಮಾರ್ಗವನ್ನು ಬದಲಾಯಿಸಲಾಗಿದೆ ಎಂದು ಮಂಡ್ಯ ಜಿಲ್ಲಾ ಪೊಲೀಸ್‌ ಅಧೀಕ್ಷಕ ಎನ್‌.ಯತೀಶ್‌ ತಿಳಿಸಿದ್ದಾರೆ. ಮೈಸೂರಿನಿಂದ ಬೆಂಗಳೂರಿಗೆ ಮಂಡ್ಯ ಮಾರ್ಗವಾಗಿ ಸಂಚರಿಸಲಿರುವ ಎಲ್ಲಾ ರೀತಿಯ ವಾಹನಗಳಿಗೆ ಮೈಸೂರು-ಬನ್ನೂರು-ಕಿರುಗಾವಲು - ಮಳವಳ್ಳಿ -ಹಲಗೂರು - ಕನಕಪುರ - ಬೆಂಗಳೂರು ಮಾರ್ಗವಾಗಿ ಸಂಚರಿಸಲು ಅವಕಾಶ ಮಾಡಿಕೊಡಲಾಗಿದೆ. ಬೆಂಗಳೂರಿನಿಂದ ಮೈಸೂರಿಗೆ ಮಂಡ್ಯ ಮಾರ್ಗವಾಗಿ ಸಂಚರಿಸಲಿರುವ ವಾಹನಗಳಿಗೆ ಬೆಂಗಳೂರು-ಚನ್ನಪಟ್ಟಣ- ಹಲಗೂರು-ಮಳವಳ್ಳಿ-ಕಿರುಗಾವಲು-ಬನ್ನೂರು-ಮೈಸೂರು ಮಾರ್ಗವಾಗಿ ಸಂಚರಿಸಲು ಅವಕಾಶ ಮಾಡಿಕೊಡಲಾಗಿದೆ. ಬೆಂಗಳೂರಿನಿಂದ ಮದ್ದೂರು ಮಾರ್ಗವಾಗಿ ಕೊಳ್ಳೇಗಾಲ ಮಹದೇಶ್ವರ ಬೆಟ್ಟಕ್ಕೆ ತೆರಳುವ ಎಲ್ಲಾ ರೀತಿಯ ವಾಹನಗಳನ್ನು ಬೆಂಗಳೂರು-ಚನ್ನಪಟ್ಟಣ ಮಾರ್ಗವಾಗಿ ಸಂಚರಿಸಲು ಅನುವು ಮಾಡಿಕೊಡಲಾಗಿದೆ ಎಂದು ಅವರು ತಿಳಿಸಿದರು.