ಈ ಹಿಂದೆ ಪೇ ಸಿಎಂ ಪೋಸ್ಟರ್ ಅಂಟಿಸಿದ್ದು ಬಾರೀ ಸುದ್ದಿಯಾಗಿತ್ತು. ಅದೇ ಮಾದರಿಯಲ್ಲಿ ಇದೀಗ ತುಮಕೂರಿನಲ್ಲಿ ಶಾಸಕ ಜ್ಯೋತಿ ಗಣೇಶ್ ವಿರುದ್ಧ ಪೇ ಎಂಎಲ್‌ಎ ಅಭಿಯಾನ ಶುರುವಾಗಿದೆ.

ತುಮಕೂರು (ಫೆ.25): ಈ ಹಿಂದೆ ಪೇ ಸಿಎಂ ಪೋಸ್ಟರ್ ಅಂಟಿಸಿದ್ದು ಬಾರೀ ಸುದ್ದಿಯಾಗಿತ್ತು. ಅದೇ ಮಾದರಿಯಲ್ಲಿ ಇದೀಗ ತುಮಕೂರಿನಲ್ಲಿ ಪೇ ಎಂಎಲ್‌ಎ ಅಭಿಯಾನ ಶುರುವಾಗಿದೆ. ಹೌದು! ತುಮಕೂರು ನಗರ ಶಾಸಕ ಜ್ಯೋತಿ ಗಣೇಶ್ ವಿರುದ್ಧ ಪೇ ಎಂಎಲ್ಎ ಪೋಸ್ಟರ್ ಅಭಿಯಾನ ಆರಂಭವಾಗಿದ್ದು, ತುಮಕೂರು‌ ನಗರದ ತುಂಬ ಕಾಂಗ್ರೆಸ್ ಪೋಸ್ಟರ್ ಅಂಟಿಸಿದೆ. ಕಾಂಗ್ರೆಸ್ ಮುಖಂಡ ಶಶಿ ಹುಲಿಕುಂಟೆಯಿಂದ ಹಾಗೂ ಕಾರ್ಯಕರ್ತರಿಂದ ಪೋಸ್ಟರ್ ಅಭಿಯಾನ ಶುರುವಾಗಿದ್ದು, ಬಿಜೆಪಿ ಶಾಸಕ ಜ್ಯೋತಿ ಗಣೇಶ್ ಪೋಟೊ ಒಳಗೊಂಡಿರೋ ಪೇ ಎಂಎಲ್ಎ ಪೋಸ್ಟರ್‌ಗಳನ್ನು ಅಂಟಿಸಲಾಗಿದೆ. 

Add Asianetnews Kannada as a Preferred SourcegooglePreferred

ನಿಮಗೆ ಕೆಲಸ ಆಗಬೇಕೆ, ನನಗೆ ಪೇ ಮಾಡಿ. ಭ್ರಷ್ಟಚಾರ ನನ್ನ ಮೊದಲ ಆದ್ಯತೆ. ಈ ರೀತಿ ಸ್ಲೋಗನ್ ಬರೆದಿರೋ ಪೋಸ್ಟರ್‌ಗಳನ್ನು ತುಮಕೂರು‌ ನಗರದ ಟೌನ್ ಹಾಲ್ ಸರ್ಕಲ್‌, ಬಿ.ಎಚ್.ರಸ್ತೆ, ಹೊರಪೇಟೆಯಲ್ಲಿ ಕಾಂಗ್ರೆಸ್ ಅಂಟಿಸಿದೆ. ತುಮಕೂರು‌ ನಗರದ ಸ್ಮಾರ್ಟ್ ಸಿಟಿ ಕಾಮಗಾರಿ ಸೇರಿದಂತೆ ಹಲವು ಅಭಿವೃದ್ಧಿ ಕಾಮಗಾರಿಯಲ್ಲಿ ಲಂಚದ ಡೀಲ್ ಹಾಗೂ ಕಾಮಗಾರಿಯಲ್ಲಿ ಶಾಸಕ ಜ್ಯೋತಿ ಗಣೇಶ್ ಪರ್ಸೆಂಟೇಜ್‌ನ್ನು ಪಡೆಯುತ್ತಿದ್ದಾರೆಂಬ ಆರೋಪದ ಹಿನ್ನೆಲೆಯಲ್ಲಿ ಕಾಂಗ್ರೆಸ್ ಪೋಸ್ಟರ್ ಅಂಟಿಸಿದೆ. ಇನ್ನು ಪೋಸ್ಟರ್‌ ಅಂಟಿಸಿದ ಹುಡುಗರನ್ನು ತಿಲಕ್ ಪಾರ್ಕ್ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಚುನಾವಣಾ ರಾಜಕೀಯಕ್ಕಷ್ಟೆ ವಿದಾಯ: ಬಿ.ಎಸ್‌.ಯಡಿಯೂರಪ್ಪ

ಕಾಂಗ್ರೆಸ್‌ನಿಂದ ಪೋಸ್ಟರ್‌ ಅಭಿಯಾನ ಶುರು: ಪೇ-ಸಿಎಂ ಪೋಸ್ಟರ್‌ ಅಭಿಯಾನದ ಬಳಿಕ ರಾಜ್ಯ ಕಾಂಗ್ರೆಸ್‌ ಪಕ್ಷವು ಮತ್ತೊಂದು ಪೋಸ್ಟರ್‌ ಅಭಿಯಾನಕ್ಕೆ ಚಾಲನೆ ನೀಡಿದ್ದು, ಶುಕ್ರವಾರ ರಾತ್ರೋ ರಾತ್ರಿ ಕಾರ್ಯಕರ್ತರ ಮೂಲಕ ಬೆಂಗಳೂರು ಹಾಗೂ ಮಂಗಳೂರಿನ ಹಲವೆಡೆ ಬಜೆಟ್‌ ಘೋಷಣೆಗಳನ್ನು ಅಣಕಿಸುವ ‘ಬೇಡಪ್ಪ ಬೇಡ, ಕಿವಿ ಮೇಲೆ ಹೂವು’ ಹೆಸರಿನ ಪೋಸ್ಟರ್‌ಗಳನ್ನು ಅಂಟಿಸಿದೆ.

ಅಷ್ಟೇ ಅಲ್ಲದೆ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಹಾಗೂ ವಿಧಾನಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಸೇರಿದಂತೆ ಹಿರಿಯ ನಾಯಕರು ಸ್ವತಃ ಪೋಸ್ಟರ್‌ಗಳನ್ನು ಅಂಟಿಸಲು ನಿರ್ಧರಿಸಿದ್ದಾರೆ ಎಂದು ತಿಳಿದುಬಂದಿದೆ. ಶುಕ್ರವಾರ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಂಡಿಸಿದ ಬಜೆಟ್‌ ವಿರುದ್ಧ ವಿನೂತನವಾಗಿ ಪ್ರತಿಭಟಿಸಿದ್ದ ಕಾಂಗ್ರೆಸ್‌ ನಾಯಕರು ಉಭಯ ಸದನಗಳಲ್ಲಿ ಕಿವಿ ಮೇಲೆ ಹೂವು ಇಟ್ಟುಕೊಂಡು ಅಧಿವೇಶನದಲ್ಲಿ ಭಾಗವಹಿಸಿದ್ದರು. ಇದು ರಾಜ್ಯಾದ್ಯಂತ ಜನರ ಗಮನ ಸೆಳೆದಿತ್ತು.

ರಾಮಾಯಣದಿಂದ ಪುರುಷಾರ್ಥ ಪ್ರಾಪ್ತಿ: ರಾಘವೇಶ್ವರ ಸ್ವಾಮೀಜಿ

ಇದರಿಂದ ಪ್ರೇರಿತರಾದ ಕೈ ಕಾರ್ಯಕರ್ತರು ರಾತ್ರೋ ರಾತ್ರಿ ತಮ್ಮ ಕೈ ಚಳಕ ತೋರಿ ಬೆಳಗಾಗುವಷ್ಟದಲ್ಲಿ ಬೆಂಗಳೂರು ಹಾಗೂ ಮಂಗಳೂರು ನಗರದ ವಿವಿಧೆಡೆ ಕಿವಿ ಮೇಲೆ ಹೂವು ಪೋಸ್ಟರ್‌ಗಳು ರಾರಾಜಿಸುವಂತೆ ಮಾಡಿದ್ದರು. ಬಿಜೆಪಿ ತನ್ನ ಸಾಧನೆಗಳನ್ನು ಬಿಂಬಿಸಿಕೊಳ್ಳಲು ನರೇಂದ್ರ ಮೋದಿ, ಜೆ.ಪಿ.ನಡ್ಡಾ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯಂತಹ ನಾಯಕರ ಫೋಟೋಗಳ ಸಹಿತ ಅಂಟಿಸಿದ್ದ ಪೋಸ್ಟರ್‌ಗಳನ್ನೇ ಗುರಿಯಾಗಿಸಿಕೊಂಡು ‘ಕಿವಿ ಮೇಲೆ ಹೂವು’ ಪೋಸ್ಟರ್‌ಗಳನ್ನು ಅಂಟಿಸಲಾಗಿದೆ.