ಪಂಚರತ್ನದಿಂದ ಎದುರಾಳಿಗಳಿಗೆ ನಡುಕ: ಎಚ್‌ಡಿಕೆ ಯಾತ್ರೆ ಸಂಚರಿಸಿದ 19 ಕ್ಷೇತ್ರಗಳ ಪೈಕಿ 17ರಲ್ಲಿ ಜೆಡಿಎಸ್‌ ಗೆಲ್ಲುತ್ತೆ ಕಾಟಾಚಾರಕ್ಕೆ ಅಭ್ಯರ್ಥಿಯಾಗಬೇಡಿ, ಗೆಲ್ಲುವ ಅವಕಾಶಗಳು ಇವೆ

ಬೆಂಗಳೂರು (ಡಿ.16) : ಕಾಟಾಚಾರಕ್ಕೆ ಅಭ್ಯರ್ಥಿ ಆಗುವುದು ಬೇಡ. ಚುನಾವಣೆಯಲ್ಲಿ ಜೆಡಿಎಸ್‌ ಗೆಲ್ಲುವ ಎಲ್ಲಾ ಅವಕಾಶಗಳಿದ್ದು, ಪ್ರತಿ ಅಭ್ಯರ್ಥಿಯೂ ಗೆಲ್ಲಲೇಬೇಕು ಎಂದು ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಸೂಚನೆ ನೀಡಿದ್ದಾರೆ.

ಗುರುವಾರ ಪಕ್ಷದ ಕಚೇರಿ ಜೆ.ಪಿ.ಭವನದಲ್ಲಿ ಶಾಸಕರು ಮತ್ತು ಚುನಾವಣೆಗೆ ಸ್ಪರ್ಧಿಸುವ ಆಕಾಂಕ್ಷಿಗಳ ಜತೆ ಸಭೆ ನಡೆಸಿದ ಬಳಿಕ ಸುದ್ದಿಗಾರರ ಜತೆ ಮಾತನಾಡಿದ ಅವರು, ಕುಗ್ರಾಮದ ಕಾರ್ಯಕರ್ತರನ್ನೂ ನಿರ್ಲಕ್ಷ್ಯ ಮಾಡಬಾರದು. ಪಕ್ಷಕ್ಕೆ ಗೆಲ್ಲುವ ಎಲ್ಲಾ ಅವಕಾಶಗಳಿವೆ. ಜಯಗಳಿಸುವ ವಾತಾವರಣವನ್ನು ಸದ್ಬಳಕೆ ಮಾಡಿಕೊಳ್ಳಬೇಕು. ಕಾಟಾಚಾರಕ್ಕೆ ಅಭ್ಯರ್ಥಿಗಳಾಗಬಾರದು ಎಂದು ತಾಕೀತು ಮಾಡಿದರು.

Assembly election: ಚುನಾವಣೆಯಲ್ಲಿ ಕಾಂಗ್ರೆಸ್‌ 60-70, ಬಿಜೆಪಿ 50 ಸ್ಥಾನ ಮಾತ್ರ ಗೆಲ್ಲುತ್ತೆ!

ಪಂಚರತ್ನ ರಥಯಾತ್ರೆ ಆರಂಭವಾದ ಬಳಿಕ ಆಡಳಿತಾರೂಢ ಬಿಜೆಪಿ, ಪ್ರತಿಪಕ್ಷ ಕಾಂಗ್ರೆಸ್‌ನಲ್ಲಿ ನಡುಕ ಉಂಟಾಗಿದೆ. ಪ್ರಸ್ತುತ ಬರುತ್ತಿರುವ ಸಮೀಕ್ಷೆಗಳಲ್ಲಿ ಇವೆರಡೂ ಪಕ್ಷಗಳಿಗಿಂತ ಹೆಚ್ಚು ಸ್ಥಾನಗಳಲ್ಲಿ ಜೆಡಿಎಸ್‌ ಗೆಲುವು ಸಾಧಿಸಲಿದೆ ಎಂಬುದು ಗೊತ್ತಾಗಿದೆ. ರಥಯಾತ್ರೆಯು ಯಶಸ್ವಿಯಾಗಿ ಸಾಗುತ್ತಿದ್ದು, ಯಾತ್ರೆ ಕೈಗೊಂಡಿರುವ 19 ಕ್ಷೇತ್ರದಲ್ಲಿ 17 ಕ್ಷೇತ್ರದಲ್ಲಿ ಗೆಲುವು ಸಾಧಿಸುತ್ತೇವೆ. ಇನ್ನು ಎರಡು ಕ್ಷೇತ್ರದಲ್ಲಿಯೂ ಜಯ ಗಳಿಸುವ ವಿಶ್ವಾಸ ಇದೆ. ನಮ್ಮ ಅಭ್ಯರ್ಥಿಗಳು ರಣರಂಗದಲ್ಲಿದ್ದಾರೆ. ಕಾಂಗ್ರೆಸ್‌-ಬಿಜೆಪಿಯಲ್ಲಿ ಇನ್ನೂ ಯಾವ ಪರಿಸ್ಥಿತಿ ಇದೆ ಎಂಬುದನ್ನು ನಾನು ನೋಡುತ್ತಿದ್ದೇನೆ. ಪಾಪ, ಕಾಂಗ್ರೆಸ್‌ ಅಧ್ಯಕ್ಷರು, 15-20 ಮಂದಿ ಪಕ್ಷಕ್ಕೆ ಬರುತ್ತಾರೆ ಎಂದಿದ್ದಾರೆ. ಅವರ ಪಕ್ಷದಿಂದ ಯಾರು ಹೊರಗೆ ಹೋಗುತ್ತಾರೆ ಎನ್ನುವ ಪಟ್ಟಿನನ್ನ ಹತ್ತಿರ ಇದೆ. ಕೆಲವರು ನಮಗೆ ಶಾಕ್‌ ಕೊಡಲು ಹೋಗಿ ಅವರೇ ಶಾಕ್‌ ಹೊಡೆಸಿಕೊಳ್ಳಬಹುದು. ಯಾರು ಯಾರ ಜತೆ ಟಚ್‌ನಲ್ಲಿ ಇದ್ದಾರೆ ಎನ್ನುವುದು ಮುಂದಿನ ದಿನದಲ್ಲಿ ಗೊತ್ತಾಗುತ್ತದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ಗೆ ಟಾಂಗ್‌ ಕೊಟ್ಟರು.

ಕಾಂಗ್ರೆಸ್‌-ಬಿಜೆಪಿ ಮನೆ ಬಾಗಿಲಿಗೆ ಹೋಗುವ ಸ್ಥಿತಿಯನ್ನು ನನಗೆ ಜನರು ತರುವುದಿಲ್ಲ. ಕಾಂಗೆಸ್‌ ಏನೇ ಮಾಡಿದರೂ ನಮ್ಮ ಭದ್ರಕೋಟೆ ಒಡೆಯಲು ಸಾಧ್ಯವಿಲ್ಲ. ಯಾವುದೇ ಕಾರ್ಯತಂತ್ರ, ಜಾತಿವಾರು ಸಭೆ-ಸಮಾವೇಶ ಮಾಡಿದರೂ ಅಸಾಧ್ಯ ಎಂದರು.

ಎರಡೂ ರಾಷ್ಟ್ರೀಯ ಪಕ್ಷಗಳನ್ನು ಈ ಬಾರಿ ಜನರು ದೂರ ಇಡುತ್ತಾರೆ. 1997ರಲ್ಲಿ ಜೆಡಿಎಸ್‌ ಇಬ್ಭಾಗ ಆಗಿದ್ದರಿಂದ ಕಾಂಗ್ರೆಸ್‌ ಅಧಿಕಾರಕ್ಕೆ ಬಂತು. 2008ರಲ್ಲಿ ನಮ್ಮ ಮತ್ತು ಬಿಜೆಪಿ ನಡುವಿನ ವಿಚಾರದಲ್ಲಿ ಕಾಂಗ್ರೆಸ್‌ಗೆ 89 ಸ್ಥಾನ ಬಂತು. 2013ರಲ್ಲಿ ಕೆಜೆಪಿ, ಬಿಎಸ್‌ಆರ್‌ ಪಕ್ಷ ಸ್ಥಾಪನೆ ಆಗಿದ್ದಕ್ಕೆ ಕಾಂಗ್ರೆಸ್‌ ಅಧಿಕಾರಕ್ಕೆ ಬಂತು. 2018ರಲ್ಲಿ ಅವರು ದೊಡ್ಡ ಅಭಿವೃದ್ಧಿ ಮಾಡಿದ್ದೇನೆ ಎಂದರೂ ಕೊನೆಗೆ ಎಷ್ಟುಸ್ಥಾನ ಬಂತು? ಎಂದು ಕಾಂಗ್ರೆಸ್‌ಗೆ ಚಾಟಿ ಬೀಸಿದರು.

Ramanagara: ಕುಮಾರಸ್ವಾಮಿ ಜನ್ಮದಿನ ಪ್ರಯುಕ್ತ ಶ್ರೀನಿವಾಸ ಕಲ್ಯಾಣೋತ್ಸವ ಆಯೋಜನೆ

ಅಭ್ಯರ್ಥಿಗಳ ಪಟ್ಟಿಬಿಡುಗಡೆ:

ರಾಮನಗರದಲ್ಲಿ ಶುಕ್ರವಾರ ಶ್ರೀನಿವಾಸ ಕಲ್ಯಾಣ ಮಹೋತ್ಸವ ಹಮ್ಮಿಕೊಳ್ಳಲಾಗಿದೆ. ಕಲ್ಯಾಣೋತ್ಸವ ಮುಗಿದ ನಂತರ ದೇವರ ಅನುಗ್ರಹ ಪಡೆದು 97ರಿಂದ 116 ಸಂಭವನೀಯ ಅಭ್ಯರ್ಥಿಗಳ ಪಟ್ಟಿಬಿಡುಗಡೆ ಮಾಡಲಾಗುವುದು. ದೇವರ ಆರ್ಶೀವಾದ ಪಡೆದು ಪಟ್ಟಿಯನ್ನು ಬಿಡುಗಡೆ ಮಾಡಲಾಗುವುದು ಎಂದರು.