ಬಿಜೆಪಿ ವಿರುದ್ಧ ಕೂಟ ರಚನೆ ಪ್ರಕ್ರಿಯೆ ಚುರುಕುಗೊಂಡಿದ್ದು, ಹರ್ಯಾಣದ ಫತೇಹಾಬಾದ್‌ನಲ್ಲಿ ವಿಪಕ್ಷಗಳು ಶಕ್ತಿ ಪ್ರದರ್ಶನ ನಡೆಸಿವೆ. ಈ ವೇಳೆ ಮಾತನಾಡಿದ ನಿತೀಶ್‌ ಕುಮರ್ ಬಿಜೆಪಿ ಸೋಲಿಸಲು ತೃತೀಯ ರಂಗ ಬೇಕಿಲ್ಲ, ಎಲ್ಲರೂ ಒಟ್ಟಾಗಿ ಎಂದು ಕರೆ ನೀಡಿದ್ದಾರೆ. 

ಫತೇಹಾಬಾದ್‌ : 2024ರ ಲೋಕಸಭಾ ಚುನಾವಣೆಯಲ್ಲಿ (LokSabha Election) ಬಿಜೆಪಿಯನ್ನು ಎದುರಿಸಲು ವಿಪಕ್ಷಗಳ ಬೃಹತ್‌ ಮೈತ್ರಿಕೂಟ ರಚಿಸುವ (Opposition Alliance) ಯತ್ನಗಳಿಗೆ ಭಾನುವಾರ ಮತ್ತೊಂದಿಷ್ಟು ಯಶಸ್ಸು ಸಿಕ್ಕಿದೆ. ಮಾಜಿ ಉಪಪ್ರಧಾನಿ ದೇವಿ ಲಾಲ್‌ ಜನ್ಮದಿನದ ಅಂಗವಾಗಿ ಎನ್‌ಎನ್‌ಎಲ್‌ಡಿ ಭಾನುವಾರ ಹರ್ಯಾಣದ ಫತೇಹಾಬಾದ್‌ನಲ್ಲಿ ಆಯೋಜಿಸಿದ್ದ ಸಮಾವೇಶದಲ್ಲಿ 6 ಪ್ರಮುಖ ಪಕ್ಷಗಳ ನಾಯಕರು ಭಾಗಿಯಾಗುವ ಮೂಲಕ, 2024ರಲ್ಲಿ ಒಂದಾಗಿ ಹೋರಾಡುವ ಮುನ್ಸೂಚನೆ ನೀಡಿದ್ದಾರೆ. ವಿಪಕ್ಷಗಳ ಮೈತ್ರಿಯನ್ನು ಸಾರಲೆಂದೇ ಈ ಸಮಾವೇಶಕ್ಕೆ ಇಂಡಿಯನ್‌ ನ್ಯಾಷನಲ್‌ ಲೋಕದಳ (Indian National Lok Dal) (ಐಎನ್‌ಎಲ್‌ಡಿ) ವಿವಿಧ ಪಕ್ಷಗಳ ನಾಯಕರನ್ನು ಆಹ್ವಾನಿಸಿತ್ತು. ಎನ್‌ಸಿಪಿ ನಾಯಕ ಶರದ್‌ ಪವಾರ್‌, ಜೆಡಿಯು ನಾಯಕ ನಿತೀಶ್‌ ಕುಮಾರ್‌, ಆರ್‌ಜೆಡಿ ನಾಯಕ ತೇಜಸ್ವಿ ಯಾದವ್‌, ಸಿಪಿಎಂನ ಸೀತಾರಾಂ ಯೆಚೂರಿ, ಶಿರೋಮಣಿ ಅಕಾಲಿದಳದ ಸುಖ್‌ಬೀರ್‌ ಸಿಂಗ್‌ ಬಾದಲ್‌, ಶಿವಸೇನೆಯ ಅರವಿಂದ್‌ ಸಾವಂತ್‌ ಮತ್ತು ಕಾರ್ಯಕ್ರಮ ಆಯೋಜಿಸಿದ್ದ ಎನ್‌ಎಲ್‌ಎಲ್‌ಡಿ ನಾಯಕ ಪ್ರಕಾಶ್‌ ಚೌತಾಲಾ ಭಾಗಿಯಾಗಿದ್ದರು.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಸಮಾಜವಾದಿ ಪಕ್ಷ, ಟಿಎಂಸಿಗೆ ಆಹ್ವಾನ ನೀಡಲಾಗಿತ್ತಾದರೂ, ಆ ಪಕ್ಷಗಳ ಹಿರಿಯ ನಾಯಕರು ಸಭೆಗೆ ಗೈರಾಗಿದ್ದರು. ಕಾಂಗ್ರೆಸ್‌ಗೆ ಕಾರ್ಯಕ್ರಮಕ್ಕೆ ಆಹ್ವಾನ ನೀಡಲಾಗಿರಲಿಲ್ಲ ಎನ್ನಲಾಗಿದೆ.

ಇದನ್ನು ಓದಿ: ಬಿಜೆಪಿಯೇತರ ಕೂಟ ಅಧಿಕಾರಕ್ಕೆ ಬಂದರೆ ಹಿಂದುಳಿದ ರಾಜ್ಯಗಳಿಗೆ ವಿಶೇಷ ಸ್ಥಾನ: ನಿತೀಶ್‌ ಎಲೆಕ್ಷನ್‌ ಆಫರ್‌

ಬಿಜೆಪಿ ಸೋಲಿಸಲು ಎಲ್ಲರೂ ಒಟ್ಟಾಗಿ: ನಿತೀಶ್‌ ಕರೆ
2024ರ ಚುನಾವಣೆ ಎದುರಿಸಲು ತೃತೀಯ ರಂಗ (Third Front) ರಚಿಸುವ ಅವಶ್ಯಕತೆ ಇಲ್ಲ. ಹಿಂದೂ- ಮುಸ್ಲಿಂ ಹೆಸರಲ್ಲಿ ದೇಶವನ್ನು ವಿಭಜನೆ ಮಾಡುತ್ತಿರುವ ಬಿಜೆಪಿಯನ್ನು ಹೀನಾಯವಾಗಿ ಸೋಲಿಸಲು ಎಲ್ಲಾ ಪಕ್ಷಗಳು ಒಂದಾಗಬೇಕು. ಒಂದೇ ರಂಗ ಮಾಡಿಕೊಂಡು ಬಿಜೆಪಿ ಸೋಲಿಸಬೇಕು ಎಂದು ಬಿಜೆಪಿ ವಿರುದ್ಧ ವಿಪಕ್ಷಗಳನ್ನು ಒಂದೂಗೂಡಿಸುವಲ್ಲಿ ನಿರತರಾಗಿರುವ ಬಿಹಾರ ಮುಖ್ಯಮಂತ್ರಿ ನಿತೀಶ್‌ ಕುಮಾರ್‌ ಕರೆಕೊಟ್ಟಿದ್ದಾರೆ.

ಇಂಡಿಯನ್‌ ನ್ಯಾಷನಲ್‌ ಲೋಕದಳ ಭಾನುವಾರ ಹರ್ಯಾಣದ ಫತೇಹಾಬಾದ್‌ನಲ್ಲಿ ಆಯೋಜಿಸಿದ್ದ ವಿಪಕ್ಷಗಳ ಬೃಹತ್‌ ರ‍್ಯಾಲಿ (Rally) ಉದ್ದೇಶಿಸಿ ಮಾತನಾಡಿದ ನಿತೀಶ್‌ ಕುಮಾರ್‌, ‘ಕಾಂಗ್ರೆಸ್‌ ಮತ್ತು ಎಡಪಕ್ಷಗಳನ್ನು ಹೊರತುಪಡಿಸಿದ ವಿಪಕ್ಷಗಳ ಮೈತ್ರಿಕೂಟವನ್ನು ನಾವು ಊಹಿಸಿಕೊಳ್ಳಲಾಗದು. ಹೀಗಾಗಿ ನಾವು 2024ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯನ್ನು ಸೋಲಿಸಲು ವಿಶಾಲ ಐಕ್ಯತೆಗೆ ಮುಂದಾಗಬೇಕು. ಎಲ್ಲರನ್ನೂ ಈ ಹೋರಾಟದಲ್ಲಿ ಸೇರಿಸಿಕೊಳ್ಳಬೇಕು’ ಎಂದು ಸಭೆಯಲ್ಲಿದ್ದ ಹಲವು ಕಟ್ಟಾ ಕಾಂಗ್ರೆಸ್‌ ವಿರೋಧಿ ಪಕ್ಷಗಳಿಗೆ ನಿತೀಶ್‌ ಕುಮಾರ್‌ ಕರೆ ಕೊಟ್ಟರು.

ಇದನ್ನೂ ಓದಿ: ಪ್ರಶಾಂತ್‌ ಕಿಶೋರ್‌ ಗುಪ್ತವಾಗಿ ಬಿಜೆಪಿಗೆ ಸಹಾಯ ಮಾಡುತ್ತಿರಬಹುದು: ನಿತೀಶ್‌ ಕುಮಾರ್‌

ಇದೇ ವೇಳೆ 2024ರ ಲೋಕಸಭಾ ಚುನಾವಣೆ ಬಳಿಕ ಪ್ರಧಾನಿಯಾಗುವ ಆಕಾಂಕ್ಷೆ ತಮಗಿಲ್ಲ ಎಂದು ನಿತೀಶ್‌ ಕುಮಾರ್‌ ಹೇಳಿದರು. ‘ರಾಜಕೀಯ ಲಾಭಕ್ಕಾಗಿ ಬಿಜೆಪಿ, ಸಮಾಜದಲ್ಲಿ ಹಿಂದೂ- ಮುಸ್ಲಿಂ ಕಲಹ ಉಂಟು ಮಾಡುತ್ತಿದೆ. ವಾಸ್ತವವಾಗಿ ಸಮಾಜದಲ್ಲಿ ಅಂಥ ಯಾವುದೇ ಕಲಹಗಳಿಲ್ಲ. 1947ರ ದೇಶ ವಿಭಜನೆ (Partition of India) ವೇಳೆ ಹಲವು ಮುಸ್ಲಿಮರು ಭಾರತದಲ್ಲೇ ಉಳಿದುಕೊಳ್ಳಲು ನಿರ್ಧರಿಸಿದ್ದರು ಎಂಬುದನ್ನು ಮರೆಯಬಾರದು’ ಎಂದು ಹೇಳಿದರು.