ರಾಜಸ್ಥಾನದಲ್ಲಿ ಗವರ್ನರ್‌ ವರ್ಸಸ್‌ ಗೌರ್ನಮೆಂಟ್‌ ಹೈಡ್ರಾಮಾ| ಅಧಿವೇಶನ ಕರೆಯದ ಗೌರ್ನರ್‌ ನಡೆ ಖಂಡಿಸಿ ರಾಜಭವನದ ಆವರಣದಲ್ಲೇ ಧರಣಿ

ಜೈಪುರ(ಜು.25): ಸಚಿನ್‌ ಪೈಲಟ್‌ ಬಂಡಾಯದಿಂದ ರಾಜಸ್ಥಾನ ರಾಜಕೀಯದಲ್ಲಿ ಅನಿಶ್ಚಿತ ಪರಿಸ್ಥಿತಿ ಸೃಷ್ಟಿಆಗಿರುವ ನಡುವೆಯೇ ಮುಖ್ಯಮಂತ್ರಿ ಅಶೋಕ್‌ ಗೆಹ್ಲೋಟ್‌ ಹಾಗೂ ರಾಜ್ಯಪಾಲ ಕಲ್‌ರಾಜ್‌ ಮಿಶ್ರಾ ಮಧ್ಯೆ ಈಗ ‘ಸಂಘರ್ಷ’ ಆರಂಭವಾಗಿದೆ. ವಿಧಾನಸಭಾ ಅಧಿವೇಶವನ್ನು ರಾಜ್ಯಪಾಲರು ಕೂಡಲೇ ಕರೆಯಬೇಕು ಎಂದು ಆಗ್ರಹಿಸಿ ರಾಜಭವನದಲ್ಲಿ ಕಾಂಗ್ರೆಸ್‌ ಶಾಸಕರು ಧರಣಿ ಆರಂಭಿಸಿದ್ದಾರೆ.

Add Asianetnews Kannada as a Preferred SourcegooglePreferred

ವಿಧಾನಸಭೆ ಅಧಿವೇಶನ ದಿನಾಂಕ ಪ್ರಕಟವಾಗುವವರೆಗೂ ನಾವು ಸ್ಥಳದಿಂದ ಕದಲುವುದಿಲ್ಲ ಎಂದು ಶಾಸಕರು ಪಟ್ಟು ಹಿಡಿದಿದ್ದಾರೆ. ಕೆಲ ಗಂಟೆಗಳ ಧರಣಿ ಬಳಿಕ ಸರ್ಕಾರದಿಂದ ಕೇಳಿರುವ ಕೆಲವು ಸ್ಪಷ್ಟನೆಗಳಿಗೆ ಉತ್ತರ ಸಿಕ್ಕಿದ ಬಳಿಕ ಅಧಿವೇಶನ ಕರೆಯುವ ಬಗ್ಗೆ ನಿರ್ಧಾರ ಕೈಗೊಳ್ಳುವುದಾಗಿ ರಾಜ್ಯಪಾಲರು ಭರವಸೆ ನೀಡಿದ್ದಾರೆ. ಹೀಗಾಗಿ ಕಾಂಗ್ರೆಸ್‌ ಶಾಸಕರು ಧರಣಿ ಕೈಬಿಟ್ಟು ಸ್ಥಳದಿಂದ ತೆರಳಿದ್ದಾರೆ.

ರಾಜಸ್ಥಾನ ರಾಜಕೀಯ: ಜುಲೈ 27ರವರೆಗೆ ಸಚಿನ್ ಪೈಲಟ್ ನಿರಾಳ..!

ತಮ್ಮ ಬಳಿ ಸಂಖ್ಯಾಬಲ ಇದೆ ಎಂದು ತೋರಿಸಿಕೊಳ್ಳಲು ಗೆಹ್ಲೋಟ್‌ ಅವರ ಬೆಂಬಲಿಗ ಸುಮಾರು 100 ಶಾಸಕರು ಶುಕ್ರವಾರ ಮಧ್ಯಾಹ್ನ ರಾಜಭವನಕ್ಕೆ ಬಂದರು. ಅತ್ತ ಗೆಹ್ಲೋಟ್‌ ಅವರು ರಾಜ್ಯಪಾಲರನ್ನು ಭೇಟಿಯಾಗಲು ಒಳಗೆ ತೆರಳುತ್ತಿದ್ದಂತೆಯೇ, ಇತ್ತ ವಿಧಾನಸಭೆ ಅಧಿವೇಶನ ದಿನಾಂಕ ಘೋಷಣೆ ಆಗುವವರೆಗೆ ನಾವು ಇಲ್ಲಿಂದ ಕದಲಲ್ಲ ಎಂದು ರಾಜಭವನದ ಪ್ರಾಂಗಣದ ಹುಲ್ಲುಹಾಸಿನ ಮೇಲೆಯೇ ಕುಳಿತು ಧರಣಿ ಆರಂಭಿಸಿದರು.

ಇದಕ್ಕೂ ಮುನ್ನ ಮಾತನಾಡಿದ ಅಶೋಕ್‌ ಗೆಹ್ಲೋಟ್‌, ‘ವಿಧಾನಸಭೆ ಅಧಿವೇಶನ ಕರೆಯಿರಿ ಎಂದು ಗುರುವರವೇ ನಾನು ರಾಜ್ಯಪಾಲರಿಗೆ ಕೋರಿದ್ದೆ. ಆದರೆ ಇದಕ್ಕೆ ಅವರು ಉತ್ತರವನ್ನೇ ನೀಡಿಲ್ಲ’ ಎಂದು ಕಿರಿಕಾರಿದರು. ‘ರಾಜಸ್ಥಾನ ಬಂಡಾಯ ಶಾಸಕರ ಅನರ್ಹತೆ ವಿಷಯ ಸುಪ್ರೀಂ ಕೋರ್ಟ್‌ನಲ್ಲಿದೆ. ಹೀಗಾಗಿ ಈ ಹಂತದಲ್ಲಿ ಅಧಿವೇಶನ ಕರೆಯಲು ಆಗದು’ ಎಂದು ಮಿಶ್ರಾ ಹೇಳಿದ್ದಾರೆ ಎಂದು ವರದಿಗಳು ತಿಳಿಸಿವೆ.

ರಾಜಸ್ಥಾನ ರಾಜಕಾರಣ ಎಲ್ಲಿಗೆ ಬಂದು ನಿಂತಿದೆ? ಪೈಲಟ್ 'ಹಾರಾಟ'ಕ್ಕೆ ಅವಕಾಶ ಸಿಗಲೇ ಇಲ್ಲ!

‘ಒಂದು ವೇಳೆ ನಮ್ಮ ಬೇಡಿಕೆ ಈಡೇರದಿದ್ದರೆ ಜನರು ರಾಜಭವನಕ್ಕೆ ಮುತ್ತಿಗೆ ಹಾಕುವ ಸಾಧ್ಯತೆ ಇದ್ದು, ಇದಕ್ಕೆ ನಾವು ಹೊಣೆಗಾರ ಆಗುವುದಿಲ್ಲ’ ಎಂದು ಎಚ್ಚರಿಸಿದರು. ‘ಮೇಲಿನವರ’ (ಕೇಂದ್ರ ಸರ್ಕಾರ) ಒತ್ತಡದಿಂದ ಅವರು ಅಧಿವೇಶನ ಕರೆಯುತ್ತಿಲ್ಲ’ ಎಂದು ಆರೋಪಿಸಿದರು.

ಈ ನಡುವೆ, ಅಧಿವೇಶನ ಕರೆಯಬೇಕು ಎಂಬ ಸಂಪುಟದ ಶಿಫಾರಸನ್ನು ರಾಜ್ಯಪಾಲರು ಒಪ್ಪಲೇಬೇಕು. ಅವರಿಗೆ ತಿರಸ್ಕರಿಸಲು ಅವಕಾಶವಿಲ್ಲ ಎಂದು ತಜ್ಞರು ಹೇಳಿದ್ದಾರೆ.