ರಾಜಸ್ಥಾನ ರಾಜಕೀಯ ಹಂಗಾಮದಲ್ಲಿ ಕಾಂಗ್ರೆಸ್ ಬಂಡಾಯ ನಾಯಕ ಸಚಿನ್ ಪೈಲಟ್ ಹಾಗೂ ಮತ್ತವರ ತಂಡಕ್ಕೆ ಜುಲೈ 27ರವರೆಗೆ ಸುಪ್ರೀಂ ಕೋರ್ಟ್ ರಿಲೀಫ್ ನೀಡಿದೆ. ಗುರುವಾರ ಸರ್ವೋಚ್ಚ ನ್ಯಾಯಾಲಯ ಏನಂತು ಎನ್ನುವುದರ ಕಂಪ್ಲೀಟ್ ಡೀಟೈಲ್ಸ್ ಇಲ್ಲಿದೆ ನೋಡಿ.

ನವದೆಹಲಿ(ಜು.24): ತಮ್ಮ ಶಾಸಕತ್ವದ ಅನರ್ಹತೆ ಪ್ರಕ್ರಿಯೆ ಪ್ರಶ್ನಿಸಿ ರಾಜಸ್ಥಾನ ಹೈಕೋರ್ಟ್‌ ಮೊರೆ ಹೋಗಿರುವ ಕಾಂಗ್ರೆಸ್‌ ಬಂಡುಕೋರ ನಾಯಕ ಸಚಿನ್‌ ಪೈಲಟ್‌ ಸೇರಿದಂತೆ 19 ಕಾಂಗ್ರೆಸ್‌ ಶಾಸಕರಿಗೆ ಜುಲೈ 27ರವರೆಗೆ ಸುಪ್ರೀಂ ಕೋರ್ಟ್‌ ತಾತ್ಕಾಲಿಕ ನಿರಾಳತೆ ಒದಗಿಸಿದೆ. 

ರಾಜಸ್ಥಾನ ಹೈಕೋರ್ಟ್‌ಗೆ ಈ ಕುರಿತು ಆದೇಶ ಪಾಸು ಮಾಡಲು ಅದು ಅಸ್ತು ಎಂದಿದೆ. ಇದೇ ವೇಳೆ, ಆದರೆ ಈ ಆದೇಶವು ಸುಪ್ರೀಂ ಕೋರ್ಟ್‌ನ ಅಂತಿಮ ಆದೇಶಕ್ಕೆ ಒಳಪಟ್ಟಿರುತ್ತದೆ’ ಎಂದು ಸ್ಪಷ್ಟಪಡಿಸಿದೆ. ಜೊತೆಗೆ ‘ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಭಿನ್ನ ದನಿಯನ್ನು ಹತ್ತಿಕ್ಕಲು ಆಗುವುದಿಲ್ಲ’ ಎಂಬ ಮಹತ್ವದ ಅನಿಸಿಕೆಯನ್ನು ಅದು ವ್ಯಕ್ತಪಡಿಸಿದೆ.

ಶಾಸಕರು ತಮ್ಮ ಅನರ್ಹತೆ ಪ್ರಕ್ರಿಯೆ ಪ್ರಶ್ನಿಸಿ ಹೈಕೋರ್ಟ್‌ ಮೊರೆ ಹೋಗಿದ್ದರು. ಜುಲೈ 24ರವರೆಗೆ ಯಾವುದೇ ಕ್ರಮ ಜರುಗಿಸಬಾರದು ಎಂದು ಇತ್ತೀಚೆಗೆ ಹೈಕೋರ್ಟ್‌ ಸೂಚಿಸಿತ್ತು. ಆದರೆ ‘ಅನರ್ಹತೆ ಎಂಬುದು ವಿಧಾನಸಭೆಯ ಕಲಾಪಕ್ಕೆ ಸಂಬಂಧಿಸಿದ ವಿಚಾರ. ಈ ವಿಷಯದಲ್ಲಿ ಹೈಕೋರ್ಟ್‌ ಮಧ್ಯ ಪ್ರವೇಶಿಸುಂತಿಲ್ಲ. ಇದರಿಂದ ಸಾಂವಿಧಾನಿಕ ಬಿಕ್ಕಟ್ಟು ಸೃಷ್ಟಿಯಾಗುತ್ತದೆ’ ಎಂದು ರಾಜಸ್ಥಾನ ವಿಧಾನಸಭೆ ಅಧ್ಯಕ್ಷ ಸಿ.ಪಿ. ಜೋಶಿ ಸುಪ್ರೀಂ ಕೋರ್ಟ್‌ ಮೊರೆ ಹೋಗಿದ್ದರು. ಆದರೆ ಜೋಶಿ ಅವರಿಗೆ ‘ಮಧ್ಯಂತರ ಪರಿಹಾರ’ ನೀಡಲು ನಿರಾಕರಿಸಿದ ನ್ಯಾ

ಅರುಣ್‌ ಮಿಶ್ರಾ ನೇತೃತ್ವದ ತ್ರಿಸದಸ್ಯ ಪೀಠ, ‘ಹೈಕೋರ್ಟ್‌ಗೆ ಆದೇಶ ಪಾಸು ಮಾಡಲು ನಾವು ಅಡ್ಡಿಪಡಿಸುವುದಿಲ್ಲ. ಆದರೆ ಈ ಆದೇಶವು ಸುಪ್ರೀಂ ಕೋರ್ಟ್‌ನ ಅಂತಿಮ ಆದೇಶಕ್ಕೆ ಒಳಪಟ್ಟಿರುತ್ತದೆ’ ಎಂದು ಹೇಳಿ ಜುಲೈ 27ಕ್ಕೆ ಮುಂದಿನ ವಿಚಾರಣೆ ನಿಗದಿಪಡಿಸಿತು.

ರಾಜಸ್ಥಾನ ರಾಜಕಾರಣ ಎಲ್ಲಿಗೆ ಬಂದು ನಿಂತಿದೆ? ಪೈಲಟ್ 'ಹಾರಾಟ'ಕ್ಕೆ ಅವಕಾಶ ಸಿಗಲೇ ಇಲ್ಲ!

‘ಶಾಸಕರ ಅನರ್ಹತೆ ಎಂದರೆ ಸಾಮಾನ್ಯ ವಿಷಯವಲ್ಲ. ಅವರು ಚುನಾಯಿತ ಜನಪ್ರತಿನಿಧಿಗಳು. ಪ್ರಜಾಸತ್ತೆಯಲ್ಲಿ ಭಿನ್ನದನಿಗೆ ಅವಕಾಶವಿದೆ. ಆದರೆ ಅನರ್ಹತೆ ಪ್ರಕ್ರಿಯೆಗೆ ಅವಕಾಶ ಇದೆಯೇ ಇಲ್ಲವೇ ಎಂಬುದನ್ನು ನಾವು ನೋಡಬೇಕು’ ಎಂದು ಪೀಠವು ಸ್ಪೀಕರ್‌ ಜೋಶಿ ಉದ್ದೇಶಿಸಿ ಮಹತ್ವದ ಅಭಿಪ್ರಾಯ ವ್ಯಕ್ತಪಡಿಸಿತು.

ಪೈಲಟ್‌ ಹಾಗೂ 18 ಬೆಂಬಲಿಗ ಶಾಸಕರು ಕಾಂಗ್ರೆಸ್‌ನಿಂದ ಬಂಡೆದ್ದು, ಶಾಸಕಾಂಗ ಪಕ್ಷದ ಸಭೆಗೆ ಬಂದಿರಲಿಲ್ಲ. ಈ ಕಾರಣ ಕಾಂಗ್ರೆಸ್‌ ವಿಪ್‌ ಉಲ್ಲಂಘನೆ ದೂರು ದಾಖಲಿಸಿತ್ತು. ಇದರ ಅನ್ವಯ ರಾಜಸ್ಥಾನ ಸ್ಪೀಕರ್‌ ಅನರ್ಹತೆ ಪ್ರಕ್ರಿಯೆ ಆರಂಭಿಸಿದ್ದಾರೆ. ಇದನ್ನು ಪ್ರಶ್ನಿಸಿ ಪೈಲಟ್‌ ಹಾಗೂ ಬೆಂಬಲಿಗರು ಹೈಕೋರ್ಟ್‌ ಮೆಟ್ಟಿಲೇರಿದ್ದರು.