Asianet Suvarna News Asianet Suvarna News

ಉಡುಪಿ ಕಾಲೇಜು ಕೇಸ್‌ನಲ್ಲಿ ಎಸ್‌ಐಟಿ ತನಿಖೆ ಇಲ್ಲ: ಸಿದ್ದರಾಮಯ್ಯ

ಉಡುಪಿ ಕಾಲೇಜಿನ ವಿಡಿಯೋ ಚಿತ್ರೀಕರಣ ಪ್ರಕರಣದ ಬಗ್ಗೆ ಪೊಲೀಸರು ಸ್ವಯಂ ಪ್ರೇರಣೆಯಿಂದ ಎಫ್‌ಐಆರ್‌ ದಾಖಲಿಸಿದ್ದಾರೆ. ಡಿವೈಎಸ್ಪಿ ನೇತೃತ್ವದಲ್ಲಿ ತನಿಖೆಯೂ ನಡೆಯುತ್ತಿದೆ. ತನಿಖಾ ವರದಿ ಬರಲಿ. 

No SIT investigation in Udupi college case Says Siddaramaiah gvd
Author
First Published Aug 2, 2023, 7:23 AM IST

ಮಂಗಳೂರು/ಉಡುಪಿ (ಆ.02): ಉಡುಪಿ ಕಾಲೇಜಿನ ವಿಡಿಯೋ ಚಿತ್ರೀಕರಣ ಪ್ರಕರಣದ ಬಗ್ಗೆ ಪೊಲೀಸರು ಸ್ವಯಂ ಪ್ರೇರಣೆಯಿಂದ ಎಫ್‌ಐಆರ್‌ ದಾಖಲಿಸಿದ್ದಾರೆ. ಡಿವೈಎಸ್ಪಿ ನೇತೃತ್ವದಲ್ಲಿ ತನಿಖೆಯೂ ನಡೆಯುತ್ತಿದೆ. ತನಿಖಾ ವರದಿ ಬರಲಿ. ಈಗಾಗಲೇ ಡಿವೈಎಸ್ಪಿ ಮಟ್ಟದ ಅಧಿಕಾರಿಯಿಂದ ತನಿಖೆ ನಡೆಯುತ್ತಿರುವಾಗ ಎಸ್‌ಐಟಿ ತನಿಖೆ ಪ್ರಶ್ನೆಯೇ ಉದ್ಭವಿಸುವುದಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. ಮುಖ್ಯಮಂತ್ರಿಯಾದ ಬಳಿಕ ಮೊದಲ ಬಾರಿ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳ ಪ್ರಗತಿ ಪರಿಶೀಲನೆಗೆ ಆಗಮಿಸಿದ್ದ ಅವರು ಮಂಗಳವಾರ ಮಾತನಾಡಿದರು.

ಕಾಲೇಜು ಶೌಚಾಲಯದಲ್ಲಿ ಕ್ಯಾಮೆರಾ ಇಟ್ಟಿರಲಿಲ್ಲ ಎಂದು ರಾಷ್ಟ್ರೀಯ ಮಹಿಳಾ ಆಯೋಗವೇ ಹೇಳಿದೆ. ಕಾಲೇಜು ವಿದ್ಯಾರ್ಥಿಗಳು ತಮಾಷೆಗಾಗಿ ಅದನ್ನು ಮಾಡಿರಬಹುದು ಎಂದು ಗೃಹ ಸಚಿವರು ಹೇಳಿರಬಹುದು. ಆದರೆ ಪ್ರಕರಣದ ಕುರಿತು ಈಗ ತನಿಖೆ ನಡೆಯುತ್ತಿದೆ. ಅದರ ವರದಿ ಬಂದ ನಂತರ ಆ ಕುರಿತು ಮಾತನಾಡುವುದಾಗಿ ತಿಳಿಸಿದರು. ಅಲ್ಲದೆ ಪ್ರಕರಣದಲ್ಲಿ ಯಾರೂ ದೂರು ನೀಡಿಲ್ಲ. ಆದರೂ ಪೊಲೀಸರು ಸುಮೋಟೋ ಕೇಸ್‌ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ. ತನಿಖೆಯ ವರದಿ ಬಂದ ಬಳಿಕ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದರು.

ರಾಜ್ಯದಲ್ಲಿ ಆನ್‌ಲೈನ್‌ ಗೇಮ್‌, ಬೆಟ್ಟಿಂಗ್‌ ನಿಷೇಧ ಚಿಂತನೆ: ಸಿಎಂ ಸಿದ್ದರಾಮಯ್ಯ

ಸುಧಾರಣೆ ಆಗದಿದ್ರೆ ಡಿಎಚ್‌ಒ, ಡಿಡಿಪಿಐ ಮನೆಗೆ: ಬಿಜೆಪಿ ಸರ್ಕಾರದ ಅವಧಿಯಲ್ಲಿ ಉಡುಪಿ ಜಿಲ್ಲೆ ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರದಲ್ಲಿ ಸಂಪೂರ್ಣ ಕುಸಿದಿದ್ದು, ಈ ಪರಿಸ್ಥಿತಿಯನ್ನು ಸುಧಾರಿಸದಿದ್ದಲ್ಲಿ ಜಿಲ್ಲಾ ಶಿಕ್ಷಣಾಧಿಕಾರಿ ಮತ್ತು ಆರೋಗ್ಯಾಧಿಕಾರಿಗಳನ್ನು ಮನಗೆ ಕಳುಹಿಸುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಖಡಕ್‌ ಎಚ್ಚರಿಕೆ ನೀಡಿದ್ದಾರೆ. ಅವರು ಮಂಗಳವಾರ ಉಡುಪಿ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಜಿಲ್ಲಾ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದರು. ಉಡುಪಿ ಜಿಲ್ಲೆ ಶಿಕ್ಷಣ ಕ್ಷೇತ್ರದಲ್ಲಿ 2014ರಲ್ಲಿ 14ನೇ ಸ್ಥಾನ, 2015 ಮತ್ತು 2016ರಲ್ಲಿ 2ನೇ ಸ್ಥಾನ, 2017 ಮತ್ತು 2018ರಲ್ಲಿ 1ನೇ ಸ್ಥಾನಗಳಲ್ಲಿತ್ತು. 

2020ರಲ್ಲಿ 7ನೇ ಸ್ಥಾನ, 22ರಲ್ಲಿ 16ನೇ ಸ್ಥಾನ, 23ರಲ್ಲಿ 13ನೇ ಸ್ಥಾನಕ್ಕೆ ಕುಸಿದಿದೆ. ಈ ಕುಸಿತ ನಿಮಗೆ ನಾಚಿಕೆ, ಬೇಸರ ತರುವುದಿಲ್ಲವೇ ಎಂದು ಸಿಎಂ ಜಿಲ್ಲಾ ಶಿಕ್ಷಣಾಧಿಕಾರಿ ಅವರನ್ನು ಸಭೆಯಲ್ಲಿಯೇ ತರಾಟೆಗೆ ತೆಗೆದುಕೊಂಡರು. ಈ ವರ್ಷ ನಿಮ್ಮ ಕಾರ್ಯಕ್ಷಮತೆ ಹೆಚ್ಚಾಗದಿದ್ದರೆ, ಶಿಕ್ಷಣದಲ್ಲಿ ಜಿಲ್ಲೆಯಲ್ಲಿ ಪ್ರಗತಿ ಕಾಣದಿದ್ದರೆ ನಿಮ್ಮನ್ನು ಶಾಶ್ವತವಾಗಿ ಮನೆಗೆ ಕಳಹಿಸಬೇಕಾಗುತ್ತದೆ ಎಂದು ಸಿಎಂ ಹೇಳಿದರು. ರಾಜ್ಯ ಆರೋಗ್ಯ ಸೂಚ್ಯಾಂಕದಲ್ಲಿ 2015ರಲ್ಲಿ 1ನೇ ಸ್ಥಾನದಲ್ಲಿದ್ದ ಉಡುಪಿ ಜಿಲ್ಲೆ ಈಗ 19ನೇ ಸ್ಥಾನಕ್ಕೆ ಇಳಿದಿರುವುದನ್ನು ಗಮನಿಸಿದ ಸಿಎಂ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. 

2015- 16ನೇ ಸಾಲಿನಲ್ಲಿ ಸಾವಿರಕ್ಕೆ 14 ಮಂದಿ ತಾಯಂದಿರು ಮತ್ತು 51 ನವಜಾತ ಶಿಶುಗಳು ಮರಣ ಹೊಂದಿದ್ದರೆ, 2022- 23ನೇ ಸಾಲಿನಲ್ಲಿ 51 ತಾಯಂದಿರು ಮತ್ತು 166 ನವಜಾತ ಮಕ್ಕಳು ಮೃತಪಟ್ಟಿರುವುದನ್ನು ಗಮನಿಸಿದ ಸಿಎಂ, ಜಿಲ್ಲಾ ಆರೋಗ್ಯಾಧಿಕಾರಿಗಳಿಂದ ಸಮಜಾಯಿಷಿ ಕೇಳಿದರು. ಅಧಿಕಾರಿಗಳಿಂದ ಸರಿಯಾದ ಉತ್ತರ ಬಾರದಿದ್ದಾಗ, ಪಕ್ಕದಲ್ಲಿದ್ದ ಉಸ್ತುವಾರಿ ಸಚಿವೆ ಲಕ್ಷ್ಮೇ ಹೆಬ್ಬಾಳ್ಕರ್‌ ಅವರಿಗೆ, ಈ ಬಗ್ಗೆ ನಿಗಾ ವಹಿಸಿ, ಸುಧಾರಣೆ ಕಾಣದಿದ್ದರೆ ಡಿಎಚ್‌ಒ ಅವರನ್ನು ಮುಲಾಜಿಲ್ಲದೆ ಸಸ್ಪೆಂಡ್‌ ಮಾಡಿ ಎಂದು ಸೂಚಿಸಿದರು.

Gruha Jyoti Scheme: ಆಗಸ್ಟ್‌ ಮೊದಲನೇ ದಿನದಿಂದಲೇ ಶೂನ್ಯ ಬಿಲ್‌ ವಿತರಣೆ ಶುರು

ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಿದ್ದರಾಮಯ್ಯ, ಉಡುಪಿ ಜಿಲ್ಲೆ ಅತ್ಯಂತ ಪ್ರಗತಿಪರವಾದ ಜಿಲ್ಲೆ, ಆದರೆ ಕಾಂಗ್ರೆಸ್‌ ಸರ್ಕಾರದ ಅವಧಿಗಿಂತ ಬಿಜೆಪಿ ಸರ್ಕಾರದ ಅವಧಿಯಲ್ಲಿ ಉಡುಪಿ ಜಿಲ್ಲೆ ಎಲ್ಲ ಕ್ಷೇತ್ರಗಳಲ್ಲಿ ಗಣನೀಯವಾಗಿ ಕುಸಿದಿದೆ ಎಂದರು. ಜಿಲ್ಲೆಯಲ್ಲಿ ಕಳೆದ ಸಾಲಿಗಿಂತ ಈ ಸಾಲಿನಲ್ಲಿ ಬಿತ್ತನೆ ಪ್ರಮಾಣ ಕಡಿಮೆಯಾಗಿರುವುದಕ್ಕೆ ಕೃಷಿ ಇಲಾಖೆಯ ಅಧಿಕಾರಿಗಳಲ್ಲಿ ಕಾರಣ ಕೇಳಿದಾಗ, ತಡವರಿಸಿದ ಅಧಿಕಾರಿಯನ್ನು ಸಿಎಂ ತರಾಟೆಗೆ ತೆಗೆದುಕೊಂಡರು.

Follow Us:
Download App:
  • android
  • ios