ಶಾಸಕ ಶರಣಗೌಡ ಕಂದಕೂರ ಜೊತೆಗೆ ಮಾತುಕತೆ ನಡೆಸಿದ್ದೇನೆ. ಅವರ ಭಾವನೆ ವ್ಯಕ್ತಪಡಿಸಿದ್ದಾರೆ. ಅದನ್ನು ಪಕ್ಷದ ವರಿಷ್ಠರ ಗಮನಕ್ಕೂ ಸಹ ತಂದಿದ್ದೇನೆ. ಎಚ್‌.ಡಿ.ಕುಮಾರಸ್ವಾಮಿ ಸಹ ಶರಣಗೌಡ ಜೊತೆಗೆ ಮಾತಾಡಿದರು. ಕೆಲವು ಆತಂಕಗಳ ಬಗ್ಗೆ ಚರ್ಚೆಯಾಗಿದ್ದು, ಎಲ್ಲಾ ಸುಖಾಂತ್ಯ ಆಗಿದೆ: ನಿಖಿಲ್‌ ಕುಮಾರಸ್ವಾಮಿ 

ಬೆಂಗಳೂರು(ಸೆ.29):  ಲೋಕಸಭೆ ಚುನಾವಣೆಗೆ ಬಿಜೆಪಿ ಜತೆ ಮೈತ್ರಿಗೆ ಅಸಮಾಧಾನ ವ್ಯಕ್ತಪಡಿಸಿದ್ದ ಯಾದಗಿರಿ ಜಿಲ್ಲೆಯ ಗುರುಮಿಟ್ಕಲ್‌ ವಿಧಾನಸಭಾ ಕ್ಷೇತ್ರದ ತಮ್ಮ ಪಕ್ಷದ ಯುವ ಶಾಸಕ ಶರಣಗೌಡ ಕಂದಕೂರ ಅವರ ಮನವೊಲಿಕೆಗೆ ಜೆಡಿಎಸ್‌ ಯುವಘಟಕ ರಾಜ್ಯಾಧ್ಯಕ್ಷ ನಿಖಿಲ್‌ ಕುಮಾರಸ್ವಾಮಿ ಪ್ರಯತ್ನಿಸಿದರು.

Add Asianetnews Kannada as a Preferred SourcegooglePreferred

ನಗರದ ಖಾಸಗಿ ಹೊಟೇಲ್‌ನಲ್ಲಿ ಗುರುವಾರ ಶರಣಗೌಡ ಕಂದಕೂರ ಅವರೊಂದಿಗೆ ನಿಖಿಲ್‌ ಸಂಧಾನ ಸಭೆ ನಡೆಸಿದರು. ಈ ವೇಳೆ ಶರಣಗೌಡ ಅವರು ಬಿಜೆಪಿ ಜತೆ ಮೈತ್ರಿ ಮಾಡಿಕೊಳ್ಳಲು ಅಸಮಾಧಾನಕ್ಕೆ ಇರುವ ಕಾರಣಗಳನ್ನು ವಿವರಿಸಿದರು. ಕ್ಷೇತ್ರದಲ್ಲಿ ಬಿಜೆಪಿ ಪ್ರಮುಖ ಎದುರಾಳಿ ಆಗಿದ್ದು, ಚುನಾವಣೆ ಸಮಯದಲ್ಲಿ ಅಭ್ಯರ್ಥಿ ಯಾರಾಗಲಿದ್ದಾರೆ ಎಂಬುದರ ಮೇಲೆ ಮುಂದಿನ ನಿರ್ಣಯ ಕೈಗೊಳ್ಳಲಾಗುವುದು ಎಂಬ ಮಾಹಿತಿ ನೀಡಿದ್ದಾರೆ ಎಂದು ಮೂಲಗಳು ಹೇಳಿವೆ.

ಬಿಜೆಪಿ- ದಳ ಮೈತ್ರಿಗೆ ಅಲ್ಪಸಂಖ್ಯಾತರ ಅಸಮಾಧಾನ: ಜೆಡಿಎಸ್‌ ಬಿಡ್ಬೇಕಾ?, ಕುತೂಹಲ ಮೂಡಿಸಿದ ಇಬ್ರಾಹಿಂ ನಡೆ

ಸುಧೀರ್ಘ ಕಾಲ ನಡೆದ ಸಂಧಾನಸಭೆಯಲ್ಲಿ ನಿಖಿಲ್‌ ಅವರು ಸಹ ಪಕ್ಷದ ಸಿದ್ಧಾಂತಕ್ಕೆ ಯಾವುದೇ ಸಮಸ್ಯೆಯಾಗದಂತೆ ಮೈತ್ರಿ ಮಾಡಿಕೊಳ್ಳಲಾಗುತ್ತದೆ. ಯಾವುದೇ ರೀತಿಯ ಆತುರ ತೀರ್ಮಾನಗಳನ್ನು ಕೈಗೊಳ್ಳದಂತೆ ಸಲಹೆ ನೀಡಿದ್ದಾರೆ ಎಂದು ಹೇಳಲಾಗಿದೆ.

ಸಂಧಾನ ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ನಿಖಿಲ್‌ ಕುಮಾರಸ್ವಾಮಿ, ಶಾಸಕ ಶರಣಗೌಡ ಕಂದಕೂರ ಜೊತೆಗೆ ಮಾತುಕತೆ ನಡೆಸಿದ್ದೇನೆ. ಅವರ ಭಾವನೆ ವ್ಯಕ್ತಪಡಿಸಿದ್ದಾರೆ. ಅದನ್ನು ಪಕ್ಷದ ವರಿಷ್ಠರ ಗಮನಕ್ಕೂ ಸಹ ತಂದಿದ್ದೇನೆ. ಎಚ್‌.ಡಿ.ಕುಮಾರಸ್ವಾಮಿ ಸಹ ಶರಣಗೌಡ ಜೊತೆಗೆ ಮಾತಾಡಿದರು. ಕೆಲವು ಆತಂಕಗಳ ಬಗ್ಗೆ ಚರ್ಚೆಯಾಗಿದ್ದು, ಎಲ್ಲಾ ಸುಖಾಂತ್ಯ ಆಗಿದೆ ಎಂದು ಹೇಳಿದರು.

ಶಾಸಕ ಶರಣಗೌಡ ಮಾತನಾಡಿ, ಮೈತ್ರಿಗೆ ಸಂಬಂಧಿಸಿದಂತೆ ಎಲ್ಲಾ ವಿಚಾರ ಚರ್ಚೆ ಮಾಡಿದ್ದೇವೆ. ನನ್ನ ಅಭಿಪ್ರಾಯ ಕೇಳಿ ಪಕ್ಷದ ವರಿಷ್ಠರು ಯುವನಾಯಕರನ್ನು ಕಳುಹಿಸಿದ್ದಾರೆ. ಮಾತುಕತೆ ವೇಳೆ ಅಭಿಪ್ರಾಯ ತಿಳಿಸಿದ್ದೇನೆ. ನನಗೆ ಸಮಾಧಾನ ಆಗಿದೆ ಎನ್ನುವುದಕ್ಕಿಂತ ಪಕ್ಷದ ನಾಯಕರ ಮಾತು ಸಹ ಕೇಳುತ್ತೇನೆ ಎಂದು ತಿಳಿಸಿದರು.