ಪ್ರಧಾನಮಂತ್ರಿ ನರೇಂದ್ರ  ಮೋದಿ ಅವರು ಕಾಂಗ್ರೆಸ್‌ ಸರ್ಕಾರ ಪ್ರಮುಖ ಖಾತೆಗಳನ್ನು ಹೊಂದಿದ ಸಚಿವರಾದ ಬೆಂಗಳೂರಿನ ಬ್ಯಾಟರಾಯನಪುರದ ಕೃಷ್ಣಬೈರೇಗೌಡ ಹಗೂ ಹೆಬ್ಬಾಳದ ಬೈರತಿ ಸುರೇಶ್‌ ಕ್ಷೇತ್ರಗಲ್ಲಿಯೇ ರೋಡ್‌ ಶೋ ಮಾಡಲಿದ್ದಾರೆ. 

ಬೆಂಗಳೂರು (ಏ.09): ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಲೋಕಸಭಾ ಚುನಾವಣಾ ಪ್ರಚಾರದ ಅಂಗವಾಗಿ ಭರ್ಜರಿ 3 ಕಿ.ಮೀ. ರೋಡ್‌ ಶೋ ನಡೆಸಲಿದ್ದಾರೆ. ಇದಕ್ಕಾಗಿ ಸ್ಥಳೀಯ ಬಿಜೆಪಿ ನಾಯಕರು ರೋಡ್‌ ಮ್ಯಾಪ್‌ ಸಿದ್ಧಪಡಿಸಿ ಹೈಕಮಾಂಡ್‌ ಹಾಗೂ ಭದ್ರತಾ ಪಡೆಗೆ ನೀಡಲಿದ್ದಾರೆ.

ಪ್ರಧಾನಮಂತ್ರಿ ನರೇಂದ್ರ ಮೋದಿ ಎಂದರೆ ಜನಸಾಮಾನ್ಯರಿಗೆ ನೋಡಲು ಭಾರೀ ಕುತೂಹಲ. ಕೆಲವರು ಮೋದಿ ಅವರನ್ನು ಎಷ್ಟು ಸಾರಿ ನೋಡಿದರೂ, ಎಲ್ಲಿಯಾದರೀ ರೋಡ್‌ ಶೋ ಮಾಡುತ್ತಾರೆಂದರೆ ಪುನಃ ಅಲ್ಲಿಗೆ ಹೋಗಿ ನಿಲ್ಲುತ್ತಾರೆ. ಇನ್ನು ಕಳೆದ ಕರ್ನಾಟಕ ವಿಧಾನಸಭಾ ಚುನಾವಣೆ ವೇಳೆ ಬೆಂಗಳೂರಿನಲ್ಲಿ ಅತಿದೊಡ್ಡ ರೋಡ್‌ ಶೋ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದರು. ಆದರೆ, ಮತದಾರರು ಕೆಲವು ಕ್ಷೇತ್ರಗಳಲ್ಲಿ ಬಿಜೆಪಿ ಅಭ್ಯರ್ಥಿಗಳ ಕೈ ಹಿಡಿಯಲಿಲ್ಲ. ಆದರೆ, ಲೋಕಸಭಾ ಚುನಾವಣೆಯೇ ಬೇರೆ. ಇಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಮುಖವನ್ನು ನೋಡಿಕೊಂಡು ಮತ ಹಾಕುವವರ ಸಂಖ್ಯೆಯೇ ಹೆಚ್ಚಾಗಿರುತ್ತದೆ. ಈ ಹಿನ್ನೆಲೆಯಲ್ಲಿ ಲೋಕಸಭಾ ಚುನಾವಣೆ ಅಂಗವಾಗಿ ಏಪ್ರಿಲ್‌ 14ರಂದು ಪ್ರಧಾನಿ ಮೋದಿ ಬೆಂಗಳೂರಿನಲ್ಲಿ ರೋಡ್‌ ಶೋ ನಡೆಸಲಿದ್ದಾರೆ.

ಲೋಕಸಭೆ ಚುನಾವಣೆ 2024: ಏ.14ರಂದು ಪ್ರಧಾನಿ ಮೋದಿ ಮಂಗಳೂರಿಗೆ

ಅದು ಕೂಡ ಬೆಂಗಳೂರಿನಲ್ಲಿ ಕಾಂಗ್ರೆಸ್‌ನಿಂದ ಗೆದ್ದು ಕಂದಾಯ ಸಚಿವ ಆಗಿರುವ ಕೃಷ್ಣಬೈರೇಗೌಡರ ಬ್ಯಾಟರಾಯನಪುರ ವಿಧಾನಸಭಾ ಕ್ಷೇತ್ರದಲ್ಲಿ ಪ್ರಧಾನಿ ಮೋದಿ ರೋಡ್‌ ಶೋ ನಡೆಸಲಿದ್ದಾರೆ. ರಾಜ್ಯಕ್ಕೆ ಬರ ಪರಿಹಾರವನ್ನು ಕೊಟ್ಟಿಲ್ಲವೆಂದು ಕೇಂದ್ರ ಸರ್ಕಾರದ ವಿರುದ್ಧ ಕರ್ನಾಟಕ ಸರ್ಕಾರವು ಸುಪ್ರೀಂ ಕೋರ್ಟ್‌ ಮೊರೆ ಹೋಗಿತ್ತು. ಇನ್ನು ಕಂದಾಯ ಸಚಿವರೇ ಸರ್ಕಾರದ ಪರವಾಗಿ ಸುಪ್ರೀಂ ಕೋರ್ಟ್‌ಗೆ ಮೊರೆ ಹೋಗಿದ್ದು, ಸ್ವತಃ ವಿಚಾರಣೆ ವೇಳೆ ಹಾಜರಾಗಿ ಕಲಾಪವನ್ನು ವೀಕ್ಷಣೆ ಮಾಡಿದ್ದರು. ಈಗ ಸ್ವತಃ ಕೇಂದ್ರ ಸರ್ಕಾರದ ಮುಖ್ಯಸ್ಥ ಪ್ರಧಾನಿ ಮೋದಿ ಅವರೇ ಕಂದಾಯ ಸಚಿವರ ಕ್ಷೇತ್ರದಲ್ಲಿ ರೋಡ್‌ ಶೋ ಮೂಲಕ ಲೋಕಸಭಾ ಚುನಾವಣೆಯ ಬಿಜೆಪಿ ಅಭ್ಯರ್ಥಿ ಪರವಾಗಿ ಮತಯಾಚನೆ ಮಾಡಲಿದ್ದಾರೆ.

ಜೊತೆಗೆ, ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್‌ ಅವರ ಕ್ಷೇತ್ರ ಹೆಬ್ಬಾಳದಲ್ಲಿಯೂ ಪ್ರಧಾನಿ ಮೋದಿ ಪ್ರಚಾರ ರೋಡ್‌ ಶೋ ಮಾಡಲಿದ್ದಾರೆ. ಈ ಎರಡು ಎರಡು ಮಾರ್ಗಗಳಲ್ಲಿ ರೋಡ್‌ ಶೋ ಮಾಡಬೇಕಾಗಿ ರಾಜ್ಯ ಬಿಜೆಪಿ ನಾಯಕರು ಪ್ರಧಾನಿ ಕಚೇರಿಗೆ ನೀಡಿದ್ದಾರೆ. ಬರೋಬ್ಬರಿ 3 ಕಿ.ಮೀ ರೋಡ್ ಷೋ ಮಾಡಲು ಲೆಕ್ಕಾಚಾರ ಹಾಕಲಾಗಿದೆ. ಪ್ರಧಾನಿ ರೋಡ್ ಷೋ ಮೂಲಕ ನಗರ ಈ ಕ್ಷೇತ್ರಗಳಲ್ಲಿನ ಮತದಾರರ ಸೆಳೆಯಲು ಬಿಜೆಪಿ ಪ್ಲಾನ್ ಮಾಡಿದೆ. ಪ್ರಧಾನಿ ಮೋದಿ ಅವರು ಏ.14ರಂದು ಮಂಗಳೂರಿನಲ್ಲಿ ಏರ್ಪಡಿಸಲಾಗಿರವ ಬಿಜೆಪಿ ಸಮಾವೇಶವನ್ನು ಮುಗಿಸಿ ಅಲ್ಲಿಂದ ದೇವನಹಳ್ಳಿಗೆ ಬರುತ್ತಾರೆ. ಅಲ್ಲಿಂದ ಸೀದಾ ಬಿಜೆಪಿ ನಾಯಕರು ಕಳಿಸಿದ ಮಾರ್ಗದಲ್ಲಿ ರೋಡ್‌ ಶೋ ಮಾಡಲಿದ್ದಾರೆ ಎಂದು ತಿಳಿದುಬಂದಿದೆ. ಆದರೆ, ಇದಿನ್ನೂ ಪ್ರಾಥಮಿಕ ಮಾಹಿತಿ ಆಗಿದ್ದು, ಪ್ರಧಾನಿ ಕಛೇರಿಯಿಂದಲೇ ಅಂತಿಮ ರೋಡ್‌ ಮ್ಯಾಪ್‌ ಸಿದ್ಧಪಡಿಸಲಾಗುತ್ತದೆ.

ಮಂಡ್ಯದ ಸ್ಟಾರ್ ಚಂದ್ರು ಪರ ಪ್ರಚಾರಕ್ಕೆ ನಟಿ ರಮ್ಯಾ, ರಾಹುಲ್‌ಗಾಂಧಿಯೂ ಬರ್ತಾರೆ; ಶಾಸಕ ರವಿಕುಮಾರ್ ಗಣಿಗ ಮಾಹಿತಿ

ಮೋದಿ ಅವರು ರೋಡ್‌ ಮ್ಯಾಪ್‌ ಹೀಗಿದೆ: ಮಾರ್ಗ ಒಂದು - ಕೋಡಿಗೆಹಳ್ಳಿ ಗಣೇಶ ದೇವಸ್ಥಾನದಿಂದ ಗುಂಡಾಂಜನೇಯ ದೇವಾಲಯದವರೆಗೆ. ಮಾರ್ಗ ಎರಡು - ಮುತ್ತುರಾಯ ಸ್ವಾಮಿ ದೇವಾಲಯದಿಂದ ಅಶ್ವಥನಗರ ಸರ್ಕಲ್ ವರೆಗೆ ರೋಡ್‌ ಶೋ ನಡೆಸಲು ಮ್ಯಾಪ್‌ ಸಿದ್ಧಪಡಿಸಲಾಗಿದೆ. ಪ್ರಧಾನಿ ಕಚೇರಿಯ ಸಂದೇಶದ ಬಳಿಕ ರೂಟ್ ಮ್ಯಾಪ್ ಸಿದ್ಧವಾಗಲಿದೆ ಎಂದು ಬಿಜೆಪಿ ನಾಯಕರು ಏಷ್ಯಾನೆಟ್ ಸುವರ್ಣ ನ್ಯೂಸ್‌ಗೆ ಮಾಹಿತಿ ನೀಡಿದ್ದಾರೆ.