ಉತ್ತರ ಕನ್ನಡ ಜಿಲ್ಲೆಯಲ್ಲಿ  ನಾಮಧಾರಿ ಹಾಗೂ ಹವ್ಯಕ ಬ್ರಾಹ್ಮಣ ಸಮುದಾಯದ ನಡುವೆ ತೀವ್ರ ಪೈಪೋಟಿ ಶುರುವಾಗಿದ್ದು, ವಿಧಾನಸಭೆ ಚುನಾವಣೆಗೆ ಇನ್ನು ಕೇವಲ ಬೆರಳೆಣಿಕೆಯ ದಿನಗಳು ಬಾಕಿ ಇರುವಾಗಲೇ ಇಂಥ ಬೆಳವಣಿಗೆಗಳಿಂದಕಾಂಗ್ರೆಸ್ ಪಾಲಿಗೆ ದೊಡ್ಡ ತಲೆನೋವು ತಂದೊಡ್ಡಿದೆ.

ಉತ್ತರ ಕನ್ನಡ (ಏ.2) : ವಿಧಾನಸಭೆ ಚುನಾವಣೆಗೆ ಇನ್ನು ಕೇವಲ ಬೆರಳೆಣಿಕೆಯ ದಿನಗಳು ಮಾತ್ರ ಉಳಿದಿವೆ. ಈ ನಡುವೆ ಉತ್ತರಕನ್ನಡ ಜಿಲ್ಲೆಯಲ್ಲಿ ಕಾಂಗ್ರೆಸ್ ಪಾಲಿಗೆ ದೊಡ್ಡ ತಲೆನೋವು ಕಾಣಿಸಿಕೊಂಡಿದೆ. ಟಿಕೆಟ್‌ಗಾಗಿ ಕಾಂಗ್ರೆಸ್‌ನಲ್ಲಿ ನಾಮಧಾರಿ ಹಾಗೂ ಹವ್ಯಕ ಬ್ರಾಹ್ಮಣ ಸಮುದಾಯದ ನಡುವೆ ಪೈಪೋಟಿ ಪ್ರಾರಂಭಗೊಂಡಿದ್ದು, ಯಾರಿಗೆ ಟಿಕೆಟ್ ನೀಡುವುದು ಎಂದು ಪಕ್ಷದ ರಾಜ್ಯಮಟ್ಟದ ಮುಖಂಡರಿಗೆ ದೊಡ್ಡ ಪ್ರಶ್ನೆಯಾಗಿ ಕಾಣಿಸಿಕೊಂಡಿದೆ. ಈ ಕುರಿತ ಒಂದು ಸ್ಟೋರಿ ಇಲ್ಲಿದೆ ನೋಡಿ.....

ಉತ್ತರಕನ್ನಡ(Uttara kannada) ಜಿಲ್ಲೆಯಲ್ಲಿ ಟಿಕೆಟ್ ನೀಡುವ ವಿಚಾರಕ್ಕೆ ರಾಜ್ಯ ಕಾಂಗ್ರೆಸ್(Congress) ಮುಖಂಡರಿಗೆ ಕಾಣಿಸಿದೆ ತಲೆನೋವು ಟಿಕೆಟ್‌ಗಾಗಿ ಹವ್ಯಕ ಬ್ರಾಹ್ಮಣ ಹಾಗೂ ನಾಮಧಾರಿ ಮುಖಂಡರ ನಡುವೆ ಭಾರೀ ಪೈಪೋಟಿ.

ಶಿರಸಿ: ಬಿಜೆಪಿ ಆಂತರಿಕ ಸಮೀಕ್ಷೆ: ಕಾರ್ಯಕರ್ತರಿಂದಲೂ ರೂಪಾಲಿ ನಾಯ್ಕ್ ಪರ ಬ್ಯಾಟಿಂಗ್

ಒಂದು ಸಮುದಾಯವನ್ನು ಕಡೆಗಣಿಸಿದರೆ ಕಾಂಗ್ರೆಸ್‌ಗೆ ತಪ್ಪಲ್ಲ‌ ಸಂಕಷ್ಟ

ಹೌದು, ವಿಧಾನಸಭಾ ಚುನಾವಣೆ(Karnataka assembly election) ಸಮೀಪಿಸುತ್ತಿದ್ದಂತೆ ರಾಜ್ಯ ರಾಜಕಾರಣದಲ್ಲಿ ಸಾಕಷ್ಟು ಬದಲಾವಣೆಗಳಾಗುತ್ತಿವೆ.. ಉತ್ತರಕನ್ನಡ‌ ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷದಲ್ಲಿ ಪ್ರಮುಖ ಸಮುದಾಯಗಳಾದ ಹವ್ಯಕ ಬ್ರಾಹ್ಮಣ(Havyak brahmana) ಹಾಗೂ ನಾಮಧಾರಿ ಸಮುದಾಯ(Namadhari community)ದಿಂದ ಟಿಕೆಟ್‌ಗಾಗಿ ಬೇಡಿಕೆ ಕಾಣಿಸಿಕೊಂಡಿದ್ದು, ಇದು ರಾಜ್ಯ ಕಾಂಗ್ರೆಸ್ ಮುಖಂಡರ ಪಾಲಿಗೆ ತಲೆನೋವಾಗಿ ಪರಿಣಮಿಸಿದೆ. 

ಮೊನ್ನೆಯಷ್ಟೇ ಕಾಂಗ್ರೆಸ್‌ನ ಮೊದಲ ಪಟ್ಟಿ ಬಿಡುಗಡೆಗೊಂಡಿತ್ತು. ಪ್ರಥಮ ಹಂತದಲ್ಲಿ ಹಳಿಯಾಳ ಕ್ಷೇತ್ರದಲ್ಲಿ ಆರ್.ವಿ.ದೇಶ್‌ಪಾಂಡೆ(RV Deshpandey), ಕಾರವಾರ ಕ್ಷೇತ್ರದಲ್ಲಿ ಸತೀಶ್ ಸೈಲ್(Satish sail) ಹಾಗೂ ಭಟ್ಕಳ ಕ್ಷೇತ್ರದಲ್ಲಿ ಮಾಂಕಾಳು ವೈದ್ಯ(Mankalu vaidya)ರಿಗೆ ಟಿಕೆಟ್ ನೀಡಲಾಗಿದೆ. ಇದರಲ್ಲಿ ಆರ್.ವಿ. ದೇಶ್‌ಪಾಂಡೆ ಗೌಡ ಸಾರಸ್ವತ ಬ್ರಾಹ್ಮಣ (ಜಿಎಸ್‌ಬಿ) ಸಮುದಾಯಕ್ಕೆ ಸೇರಿದರೆ, ಸತೀಶ್ ಸೈಲ್ ಕೊಂಕಣ ಮರಾಠ ಹಾಗೂ ಮಾಂಕಾಳು ವೈದ್ಯ ಮೀನುಗಾರ ಸಮುದಾಯಕ್ಕೆ ಸೇರಿದ ಅಭ್ಯರ್ಥಿಯಾಗಿದ್ದಾರೆ. ಆದರೆ, ಉಳಿದಂತೆ ಕುಮಟಾ, ಯಲ್ಲಾಪುರ ಹಾಗೂ ಶಿರಸಿ ಕ್ಷೇತ್ರದಲ್ಲಿ ಎರಡನೇ ಹಂತದಲ್ಲಿ ಅಭ್ಯರ್ಥಿ ಘೋಷಣೆಗೆ ಬಾಕಿಯಿದೆ. ಮೊನ್ನೆಯಷ್ಟೇ ಕಾಂಗ್ರೆಸ್‌ ಅನ್ನು ಒತ್ತಾಯಿಸಿದ ನಾಮಧಾರಿ ಸಮುದಾಯದ ಪ್ರಣವಾನಂದ ಸ್ವಾಮೀಜಿ, ಜಿಲ್ಲೆಯಲ್ಲಿ ನಾಮಧಾರಿ ಸಮುದಾಯ ಬಲಿಷ್ಠವಾಗಿದ್ದು, 2-3 ಕ್ಷೇತ್ರದಲ್ಲಿ ಟಿಕೆಟ್ ನೀಡಬೇಕೆಂದು ಒತ್ತಾಯಿಸಿದ್ದಾರೆ. 

ಟಿಕೆಟ್ ನೀಡದಿದ್ದಲ್ಲಿ ಚುನಾವಣೆ ಮೇಲೆ ಪರಿಣಾಮ ಬೀರುವುದಾಗಿ ಎಚ್ಚರಿಕೆ ನೀಡಿದ್ದಾರೆ. ಅಲ್ಲದೇ, ಡಿ.ಕೆ.ಶಿವಕುಮಾರ್(DK Shivakumar) ಹಾಗೂ ಸಿದ್ಧರಾಮಯ್ಯ(Siddaramaiah)ರನ್ನು ಭೇಟಿಯಾಗಿ ಒತ್ತಾಯಿಸಿರುವ ಸ್ವಾಮೀಜಿ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ(Mallikarjun kharge) ಅವರನ್ನು ಭೇಟಿಯಾಗುವ ಯೋಜನೆ ಕೂಡಾ ಹಾಕಿದ್ದಾರೆ. 

ಯಲ್ಲಾಪುರ ವಿಧಾನಸಭಾ ಕ್ಷೇತ್ರ

  • ಹವ್ಯಕ ಬ್ರಾಹ್ಮಣ- 29,211
  • ನಾಮಧಾರಿ- 24,716
  • ಮುಸ್ಲಿಂ- 23,617
  • ಮರಾಠ-21,654
  • ಲಿಂಗಾಯತ್- 19,614
  • ಗೌಳಿ- 13,365
  • ಕ್ರಿಶ್ಚಿಯನ್- 6,383
  • ಎಸ್‌ಸಿ/ಎಸ್‌ಟಿ- 12,326
  • ಇತರರು- 28,588

ಕುಮಟಾ ವಿಧಾನಸಭಾ ಕ್ಷೇತ್ರ

  • ನಾಮಧಾರಿ-41,667
  • ಶೇರುಗಾರ್ (ನಾಯ್ಕ್)-4,236
  • ನಾಡವರು (ನಾಯಕ್)-3,788
  • ಹಾಲಕ್ಕಿ ಒಕ್ಕಲಿಗ-24,225
  • ಬ್ರಾಹ್ಮಣ ಹವ್ಯಕ-22,436
  • ಮೀನುಗಾರರು-24,367
  • ಎಸ್‌ಸಿ/ಎಸ್‌ಟಿ-16,346
  • ಮುಸ್ಲಿಂ-17,899
  • ಕ್ರಿಶ್ಚಿಯನ್-4,016
  • ಪಟಗಾರ್-11,636
  • ಗೌಡ ಸಾರಸ್ವತ ಬ್ರಾಹ್ಮಣ (ಜಿಎಸ್‌ಬಿ)-4,348
  • ಗಾಣಿಗ ಶೆಟ್ಟಿ-3,878
  • ಇತರರು- 6,958

ಶಿರಸಿ ವಿಧಾನಸಭಾ ಕ್ಷೇತ್ರ

  • ನಾಮಧಾರಿ-48,145
  • ಹವ್ಯಕ ಬ್ರಾಹ್ಮಣ-42,786
  • ಒಕ್ಕಲಿಗ ಗೌಡ- 18,714
  • ಎಸ್‌ಸಿ/ಎಸ್‌ಟಿ-18,225
  • ಮುಸ್ಲಿಂ-23,416
  • ಕ್ರಿಶ್ಚಿಯನ್-6,317
  • ಮಡಿವಾಳ-8,366
  • ದೈವಜ್ಞ ಬ್ರಾಹ್ಮಣ- 5,517
  • ಇತರರು- 25,971

ಅಂದಹಾಗೆ, ಜಿಲ್ಲೆಯ ಕರಾವಳಿ ಭಾಗದಲ್ಲಿ ನಾಮಧಾರಿ ಸಮುದಾಯ ಬಲವಾಗಿದ್ರೆ, ಮಲೆನಾಡು ಭಾಗದಲ್ಲಿ ಬ್ರಾಹ್ಮಣ ಸಮುದಾಯ ಬಲಿಷ್ಠವಾಗಿದೆ. ಯಲ್ಲಾಪುರ ಕ್ಷೇತ್ರದಲ್ಲಂತೂ ಬಿಜೆಪಿಯಿಂದ ಕಾಂಗ್ರೆಸ್‌ಗೆ ಜಂಪ್ ಮಾಡಿದ ವಿ‌.ಎಸ್‌.ಪಾಟೀಲ್ ಹಾಗೂ ಶ್ರೀನಿವಾಸ ಭಟ್ ಧಾತ್ರಿ ಟಿಕೆಟ್ ಆಕಾಂಕ್ಷಿಯಾಗಿದ್ದು, ಬಹುಪಾಲು ವಿ‌.ಎಸ್‌. ಪಾಟೀಲ್‌ಗೆ ಟಿಕೆಟ್ ದೊರೆಯುವ ಸಾಧ್ಯತೆಗಳಿವೆ. ಇದರಿಂದ ನಾಮಧಾರಿ ಹಾಗೂ ಬ್ರಾಹ್ಮಣ ಸಮುದಾಯಕ್ಕೆ ಟಿಕೆಟ್ ದೊರೆಯುವುದು ಅಸಾಧ್ಯ.

ಇನ್ನು ಉಳಿದಿರುವುದು ಶಿರಸಿ ಹಾಗೂ ಕುಮಟಾ ಕ್ಷೇತ್ರ ಮಾತ್ರ. ಕುಮಟಾ ಕ್ಷೇತ್ರದಲ್ಲಿ ಮಾಜಿ ಶಾಸಕಿ ಶಾರದಾ ಶೆಟ್ಟಿ ಹಾಗೂ ನಾಮಧಾರಿ ಸಮುದಾಯದ ಮಂಜುನಾಥ್ ನಾಯ್ಕ್, ರತ್ನಾಕರ್ ನಾಯ್ಕ್, ಆರ್.ಎಚ್.ನಾಯ್ಕ್ ಈ ಬಾರಿ ಮತ್ತೆ ಟಿಕೆಟ್ ಆಕಾಂಕ್ಷಿಯಾಗಿದ್ದಾರೆ‌. ಆದರೆ, ಕಾಂಗ್ರೆಸ್‌ನ ಹಿರಿಯ ಮುಖಂಡೆ ಮಾರ್ಗರೇಟ್ ಆಳ್ವಾ‌ ತನ್ನ ಪುತ್ರ ನಿವೇದಿತ್ ಆಳ್ವ ಅವರಿಗೆ ಟಿಕೆಟ್ ಒದಗಿಸಲು ಹೈಲೆವೆಲ್‌ನಲ್ಲಿ ಇನ್‌ಫ್ಲುಯೆನ್ಸ್ ನಡೆಸುತ್ತಿದ್ದಾರೆ. ಇಲ್ಲಿಯೂ ನಾಮಧಾರಿ ಸಮುದಾಯಕ್ಕೆ ಟಿಕೆಟ್ ತಪ್ಪಿದಲ್ಲಿ ಪಕ್ಷದವರೇ ಅಭ್ಯರ್ಥಿಯನ್ನು ಸೋಲಿಸುತ್ತಾರೆ. ಅದು ಬಿಟ್ರೆ ಕೊನೆಗೆ ಉಳಿದಿರುವುದು ಶಿರಸಿ- ಸಿದ್ಧಾಪುರ ಕ್ಷೇತ್ರ ಮಾತ್ರ. ಈ ಕ್ಷೇತ್ರದಲ್ಲಿ ನಾಮಧಾರಿ ಸಮುದಾಯದಿಂದ ಮಾಜಿ ಶಾಸಕ ಭೀಮಣ್ಣ ನಾಯ್ಕ್, ಬ್ರಾಹ್ಮಣ ಸಮುದಾಯದಿಂದ ವೆಂಕಟೇಶ್ ಹೆಗಡೆ ಹೊಸಬಾಳೆ, ಕಡವೆ ಶ್ರೀಪಾದ ಹೆಗಡೆ ಹಾಗೂ ದೀಪಕ್ ದೊಡ್ಡೂರು ರೇಸ್‌ನಲ್ಲಿದ್ದಾರೆ. 

ಶಿರಸಿ ಮಲೆನಾಡು ಭಾಗವಾಗಿದ್ದು, ಹವ್ಯಕ ಬ್ರಾಹ್ಮಣ ಸಮುದಾಯದ ಮತ ಇಲ್ಲಿ ನಾಮಧಾರಿ ಸಮುದಾಯಕ್ಕೆ ಹೆಚ್ಚುವರಿ ಬಲಾಬಲವಾಗಿದೆ. ಈ ಎಲ್ಲಾ ಕಾರಣದಿಂದ ಹವ್ಯಕ ಬ್ರಾಹ್ಮಣರಿಗೆ ಎರಡು ಟಿಕೆಟ್ ನೀಡಬೇಕೆಂದು ಬ್ರಾಹ್ಮಣ ಸಮುದಾಯ ಒತ್ತಾಯಿಸಿದೆ.

ಶಿರಸಿಯಲ್ಲಿ ಈವರೆಗೆ ಸೋಲನ್ನೇ ಕಾಣದ ಕಾಗೇರಿ ಗೆಲುವಿನ ಓಟ ಮುಂದುವರಿಸ್ತಾರಾ?

ಒಟ್ಟಿನಲ್ಲಿ ಕಾಂಗ್ರೆಸ್‌ನಲ್ಲಿ ಟಿಕೆಟ್‌ಗಾಗಿ ಹವ್ಯಕ ಬ್ರಾಹ್ಮಣ ಹಾಗೂ ನಾಮಧಾರಿ ಸಮುದಾಯಗಳು ರೇಸ್‌ಗಿಳಿದಿದ್ದು, ಕಾಂಗ್ರೆಸ್ ರಾಜ್ಯ ಮುಖಂಡರು ಹಾಗೂ ಹೈ ಕಮಾಂಡ್ ಮೇಲೆ ಭಾರೀ ಒತ್ತಡಗಳನ್ನು ಮುಂದುವರಿಸಿವೆ. ಈ ಎರಡು ಸಮುದಾಯಗಳ ಒತ್ತಾಯ ಹಾಗೂ ಎದುರಾಳಿ ಅಭ್ಯರ್ಥಿಗಳನ್ನು ಕಂಡು ಕಾಂಗ್ರೆಸ್ ಪಕ್ಷದ ಹೈ ಕಮಾಂಡ್ ಯಾವ ನಿರ್ಧಾರ ಕೈಗೊಳ್ಳುತ್ತೆ, ಯಾರಿಗೆ ಟಿಕೆಟ್ ನೀಡುತ್ತೆ‌ ಹಾಗೂ ಯಾವ ರೀತಿಯಲ್ಲಿ ಸಮಾಧಾನ ಮಾಡುತ್ತೆ ಎಂದು ಕಾದು ನೋಡಬೇಕಷ್ಟೇ. 

ಭರತ್‌ರಾಜ್ ಕಲ್ಲಡ್ಕ ಜತೆ ಕ್ಯಾಮೆರಾಮ್ಯಾನ್ ಗಿರೀಶ್ ನಾಯ್ಕ್, ಏಷಿಯಾನೆಟ್ ಸುವರ್ಣ ನ್ಯೂಸ್ ಕಾರವಾರ

ಗೌಡರ ನಿವಾಸದಲ್ಲಿ ಹಾಸನ ಟಿಕೆಟ್‌ ಪರಿಹಾರಕ್ಕೆ ಮುಹೂರ್ತ! ನಡೆಯಲಿದೆ ನಿರ್ಣಾಯಕ ಸಂಧಾನ!