2018ರಲ್ಲಿ ಮೈಲಾರಲಿಂಗೇಶ್ವರ ದೇವಸ್ಥಾನದ ಮೇಲೆ ಹೆಲಿಕಾಪ್ಟರ್ ಹಾರಿಸಿ ದೋಷಕ್ಕೆ ಒಳಗಾಗಿದ್ದ ಡಿ.ಕೆ. ಶಿವಕುಮಾರ್, ಬಳಿಕ ದೇವಸ್ಥಾನಕ್ಕೆ ಬೆಳ್ಳಿಯ ಹೆಲಿಕಾಪ್ಟರ್ ಕಾಣಿಕೆಯಾಗಿ ನೀಡಿದ್ದರು. ಈಗ ಮುಖ್ಯಮಂತ್ರಿಯಾಗುತ್ತಿರುವ ಹಿನ್ನೆಲೆ ಈ ಘಟನೆ ಮತ್ತೆ ಮುನ್ನೆಲೆಗೆ ಬಂದಿದೆ.

ಹೂವಿನಹಡಗಲಿ (ಜೂ.2): ನಿಯೋಜಿತ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ(DK Shivakumar) ಅವರು 2018 ರಲ್ಲಿ ಸಮ್ಮಿಶ್ರ ಸರ್ಕಾರದಲ್ಲಿ ಸಚಿವರಾಗಿದ್ದ ಸಂದರ್ಭದಲ್ಲಿ ಮೈಲಾರದ ಮೈಲಾರಲಿಂಗೇಶ್ವರ(Mylaralingeshwar) ಸುಕ್ಷೇತ್ರಕ್ಕೆ ಹೆಲಿಕಾಪ್ಟರ್‌ನಲ್ಲಿ ಆಗಮಿಸಿದ್ದ ಸಂದರ್ಭದಲ್ಲಿ ದೇವಾಲಯದ ಗೋಪುರದ ಮೇಲೆ ಹಾಯ್ದು ಬಂದಿದ್ದರಿಂದ ದೋಷ ಉಂಟಾಗಿದೆ ಎಂದು ಹೇಳಿ ಬಳಿಕ ದೇವಾಲಯಕ್ಕೆ ಬೆಳ್ಳಿಯ ಹೆಲಿಕಾಪ್ಟರ್‌ ಕಾಣಿಕೆಯಾಗಿ ನೀಡಿ ದೋಷ ಪರಿಹಾರ ಮಾಡಿಕೊಂಡಿದ್ದರು.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಮೈಲಾರ ಲಿಂಗೇಶ್ವರನ ಕೋಪಕ್ಕೆ ಗುರಿಯಾಗಿದ್ದ ಡಿಕೆ!

ಇದೀಗ ಮುಖ್ಯಮಂತ್ರಿಯಾಗುತ್ತಿರುವ ಸಂದರ್ಭದಲ್ಲಿ ಈ ಹಿಂದೆ ಮೈಲಾರ ಲಿಂಗೇಶ್ವರನ ಕೋಪಕ್ಕೆ ಗುರಿಯಾಗಿದ್ದ ಡಿ.ಕೆ. ಶಿವಕುಮಾರ ಅವರು ದೋಷ ಪರಿಹಾರ ಮಾಡಿಕೊಂಡಿರುವ ಪ್ರಸಂಗ ಮುನ್ನೆಲೆಗೆ ಬಂದಿದೆ.

2018ರಲ್ಲಿ ಸಚಿವರಾಗಿದ್ದ ಡಿ.ಕೆ. ಶಿವಕುಮಾರ ಹೆಲಿಕಾಪ್ಟರ್‌ನಲ್ಲಿ ಮೈಲಾರಲಿಂಗೇಶ್ವರ ಮೈಲಾರ ಸುಕ್ಷೇತ್ರಕ್ಕೆ ಬಂದಿದ್ದರು. ಆ ಕಾಪ್ಟರ್‌ ದೇವಸ್ಥಾನದ ಗೋಪುರದ ಮೇಲೆ ಹಾಯ್ದು ಬಂದಿದ್ದು, ಕಾರ್ಣಿಕ ಹೇಳುವ ಡೆಂಕಣ ಮರಡಿಯ ಪಕ್ಕದ ಜಮೀನು ಹಾಗೂ ದೇವಸ್ಥಾನದ ಗೋಪುರದ ಮೇಲೆ ಹೆಲಿಕಾಪ್ಟರ್‌ ಹಾರಿ ಹೋಗಿತ್ತು. ಇದರಿಂದ ದೋಷ ಉಂಟಾಗಿದೆ. ಪರಿಹಾರಕ್ಕಾಗಿ ದೇವರಿಗೆ ಹರಕೆ ಹೊತ್ತು ಕನಸು ನನಸು ಮಾಡಿಕೊಳ್ಳಬೇಕೆಂದು ಡಿ.ಕೆ. ಶಿವಕುಮಾರ್ ಅವರಿಗೆ ಮನವರಿಕೆ ಮಾಡಲಾಯಿತು.

ಈ ದೋಷದಿಂದ ಡಿ.ಕೆ. ಶಿವಕುಮಾರ ಅವರು ಹಲವು ಕಷ್ಟ ನಷ್ಟ ಅನುಭವಿಸುವಂತೆ ಆಗಿತ್ತು. ತೊಂದರೆ, ಆತಂಕವೂ ಎದುರಾಗಿತ್ತು. ಜೈಲುವಾಸವನ್ನೂ ಅನುಭವಿಸಬೇಕಾಯಿತು. ಈ ಪ್ರಮಾದದ ಹಿನ್ನೆಲೆಯಲ್ಲಿ ಡಿ.ಕೆ. ಶಿವಕುಮಾರ್, 2020ರ ಡಿಸೆಂಬರ್‌ 18ರಂದು ಮತ್ತೆ ಮೈಲಾರಕ್ಕೆ ಭೇಟಿ ನೀಡಿ ದೇವಸ್ಥಾನದ ಧರ್ಮದರ್ಶಿ ವೆಂಕಪ್ಪಯ್ಯ ಒಡೆಯರ್‌(Venkappaiah wadeyar) ಸಲಹೆಯಂತೆ ಪೂಜೆ ಸಲ್ಲಿಸಿದ್ದರು. ದೇವಸ್ಥಾನಕ್ಕೆ ಒಂದು ಕೆಜಿ ತೂಕದ ಬೆಳ್ಳಿಯ ಹೆಲಿಕಾಪ್ಟರ್‌ನ್ನು ತಪ್ಪು ಕಾಣಿಕೆಯನ್ನಾಗಿ ದೇಣಿಗೆ ನೀಡಿದ್ದರು. ಸಂಕಷ್ಟ ಪರಿಹಾರಕ್ಕೆ ಬೆಳ್ಳಿಯ ಹೆಲಿಕಾಪ್ಟರನ್ನೇ ಕಾಣಿಕೆಯಾಗಿ ಅರ್ಪಿಸಿದ್ದರು. ಮೈಲಾರ ಲಿಂಗೇಶ್ವರನ ಆಶೀರ್ವಾದದಿಂದಲೇ ಡಿ.ಕೆ. ಶಿವಕುಮಾರಗೆ ಸಿಎಂ ಪಟ್ಟ ಪಾಪ್ತಿಯಾಗಿದೆ ಎಂದು ಭಕ್ತರು ಹೇಳಿಕೊಳ್ಳುತ್ತಿದ್ದಾರೆ.

ರೆಡ್ಡಿಗೂ ಸಂಕಷ್ಟ: ಹಿಂದೆ ಬಳ್ಳಾರಿ ಜಿಲ್ಲಾ ಉಸ್ತುವಾರಿ ಮಂತ್ರಿಯಾಗಿದ್ದ ಜನಾರ್ದನ ರೆಡ್ಡಿ ಕೂಡ ಮೈಲಾರ ಲಿಂಗೇಶ್ವರ ದೇವಸ್ಥಾನದ ಮೇಲೆ ಹೆಲಿಕಾಪ್ಟರ್‌ನಲ್ಲಿ ಬಂದಿದ್ದರು ಎಂಬ ಕಾರಣಕ್ಕೆ ಸಾಲು ಸಾಲು ಸಂಕಷ್ಟ ಅನುಭವಿಸಿದ್ದರು.