ಮಾಜಿ ಸಚಿವ, ವಿಧಾನ ಪರಿಷತ್‌ ಸದಸ್ಯ ಎಂಟಿಬಿ ನಾಗರಾಜ್ ಅವರಿಗೆ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದಲ್ಲಿ ಸ್ಪರ್ಧಿಸಲು ಟಿಕೆಟ್ ನೀಡಲು ಪಕ್ಷದಲ್ಲಿ ಚರ್ಚೆ ಮಾಡುತ್ತೇವೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ತಿಳಿಸಿದರು. 

ಹೊಸಕೋಟೆ (ಜ.08): ಮಾಜಿ ಸಚಿವ, ವಿಧಾನ ಪರಿಷತ್‌ ಸದಸ್ಯ ಎಂಟಿಬಿ ನಾಗರಾಜ್ ಅವರಿಗೆ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದಲ್ಲಿ ಸ್ಪರ್ಧಿಸಲು ಟಿಕೆಟ್ ನೀಡಲು ಪಕ್ಷದಲ್ಲಿ ಚರ್ಚೆ ಮಾಡುತ್ತೇವೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ತಿಳಿಸಿದರು. 2024ರಲ್ಲಿ ನಡೆಯಲಿರುವ ಲೋಕಸಭಾ ಚುನಾವಣೆಗೆ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದಿಂದ ಎಂಟಿಬಿ ನಾಗರಾಜ್‌ಗೆ ಟಿಕೆಟ್ ಕೊಡ್ತೀರಾ? ಎಂಬ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ರಾಘವೇಂದ್ರ ಟಿಕೆಟ್ ಹಂಚಿಕೆ ವಿಚಾರವಾಗಿ ಪಕ್ಷದಲ್ಲಿ ಚರ್ಚೆ ಮಾಡಿದ ಬಳಿಕ ಸೂಕ್ತ ಅಭ್ಯರ್ಥಿಯನ್ನೆ ಆಯ್ಕೆ ಮಾಡುತ್ತೇವೆ. 

Add Asianetnews Kannada as a Preferred SourcegooglePreferred

ಬಳಿಕ ಅಭ್ಯರ್ಥಿ ಘೋಷಣೆ ಮಾಡ್ತೇವೆ ಎಂದರು. ಹೈಕಮಾಂಡ್ ನಿರ್ಧಾರಕ್ಕೆ ಬದ್ದ: ಲೋಕಸಭಾ ಚುನಾವಣಾ ಬಗ್ಗೆ ಮಾಜಿ ಸಚಿವ ಎಂಟಿಬಿ ನಾಗರಾಜ್ ಪ್ರತಿಕ್ರಿಯಿಸಿ, ಲೋಕಸಭಾ ಚುನಾವಣೆಗೆ ನನ್ನ ಸ್ಪರ್ಧೆ ಬಗ್ಗೆ ಪಕ್ಷದ ವರಿಷ್ಠರು, ಹೈಕಮಾಂಡ್ ಯಾವುದೇ ನಿರ್ಧಾರ ತೆಗೆದುಕೊಂಡರೂ ನಾನು ಅವರ ನಿರ್ಧಾರಕ್ಕೆ ಬದ್ದನಾಗಿರುತ್ತೇನೆ ಎಂದು ಲೋಕಸಭಾ ಚುನಾವಣೆ ಸ್ಪರ್ಧೆ ಬಗ್ಗೆ ಇಂಗಿತ ವ್ಯಕ್ತಪಡಿಸಿದರು.

ಬಿಜೆಪಿಗೆ ಎಂಟಿಬಿ ನಾಗರಾಜ್ ಕೇವಲ ವ್ಯಕ್ತಿಯಲ್ಲ, ಶಕ್ತಿ: ಬಿ.ವೈ.ವಿಜಯೇಂದ್ರ

ಲೋಕಸಭೆಗೆ ಸ್ಪರ್ಧೆ ಹೈಕಮಾಂಡ್‌ಗೆ ಬಿಟ್ಟಿದ್ದು: ನನ್ನ ಸ್ಪರ್ಧೆ ವಿಚಾರವಾಗಿ ಹೈಕಮಾಂಡ್ ಯಾವ ನಿರ್ಧಾರ ತೆಗೆದುಕೊಳ್ಳುತ್ತೋ ಆ ನಿರ್ಧಾರಕ್ಕೆ ನಾನು ಬದ್ದ ಎಂದು ಮಾಜಿ ಸಚಿವ ಹಾಗೂ ಎಂಎಲ್ಸಿ ಎಂಟಿಬಿ ನಾಗರಾಜ್‌ ಹೇಳಿದರು. ಲೋಕಸಭೆ ಚುನಾವಣೆ ಕೆಲವೇ ತಿಂಗಳು ಬಾಕಿ ಇದ್ದು, ನೀವು ಚುನಾವಣೆಗೆ ಸ್ಪರ್ಧಿಸ್ತೀರಾ? ಎಂಬ ಮಾಧ್ಯಮದವರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಬಿಜೆಪಿ ಪಕ್ಷದಲ್ಲಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ನೇತೃತ್ವದಲ್ಲಿ ಹೊಸ ತಂಡ ರಚನೆ ಆಗಿದೆ. ನಾನು ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರಕ್ಕೆ ಸ್ಪರ್ಧೆ ಮಾಡ್ತೇನೆ ಎಂದು ಎಲ್ಲೂ ಹೇಳಿಲ್ಲ. ಆದರೆ ಇನ್ನು ಯರ‍್ಯಾರು ಆಕಾಂಕ್ಷಿಗಳಿದ್ದಾರೋ ಕಾದು ನೋಡಬೇಕಿದೆ.

ತಾಲೂಕು ಬಿಜೆಪಿ ಅಧ್ಯಕ್ಷ ಹುಲ್ಲೂರು ಕೆ.ಸತೀಶ್ ಮಾತನಾಡಿ, ಎಂಟಿಬಿ ನಾಗರಾಜ್ ಬಿಜೆಪಿ ಸರ್ಕಾರದಲ್ಲಿ ಬೆಂಗಳೂರು ಗ್ರಾಮಾಂತರ ಹಾಗೂ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಉಸ್ತುವಾರಿ ಸಚಿವರಾಗಿ ಜನರ ಸಮಸ್ಯೆಗಳಿಗೆ ಸ್ಪಂದಿಸಿದ್ದಾರೆ. ಆದ್ದರಿಂದ ಕಾರ್ಯಕರ್ತರಿಂದಲೂ ಅವರ ಸ್ಪರ್ಧೆಗೆ ಸಾಕಷ್ಟು ಒತ್ತಡ ಇದೆ. ಹೈಕಮಾಂಡ್‌ನಲ್ಲೂ ಎಂಟಿಬಿ ನಾಗರಾಜ್ ಅವರ ಹೆಸರೇ ಪ್ರಥಮವಾಗಿದೆ. ಆದ್ದರಿಂದ ಎಂಟಿಬಿ ನಾಗರಾಜ್ ಅವರ ಸ್ಪರ್ಧೇ ಬಹುತೇಕ ಖಚಿತ ಎಂದರು.

ಬಿಜೆಪಿ ವರಿಷ್ಠರ ಎದುರು ಇಲ್ಲಿನ ಅಡ್ಜಸ್ಟ್‌ಮೆಂಟ್‌ ಎಲ್ಲ ಹೇಳಿದ್ದೇನೆ: ಶಾಸಕ ಬಸನಗೌಡ ಯತ್ನಾಳ

ಎರಡೆರಡು ಬಾರಿ ಸರ್ವೆ: ಈಗಾಗಲೆ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಹೈಕಮಾಂಡ್ ಒಂದು ಬಾರಿ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಒಂದು ಬಾರಿ ಸರ್ವೇ ಮಾಡಿಸಿದ್ದು ಎಂಟಿಬಿ ನಾಗರಾಜ್ ಅವರ ಪರವಾಗಿ ಒಲವಿದೆ. ಅಷ್ಟೇ ಅಲ್ಲದೆ, ವಿಪಕ್ಷ ನಾಯಕ ಆರ್.ಅಶೋಕ್ ಅವರು ಕೂಡ ಸರ್ವೆ ಮಾಡಿಸುತ್ತಿದ್ದು ಎಂಟಿಬಿ ನಾಗರಾಜ ಅವರ ಸ್ಪರ್ಧೆಗೆ ಒಲವು ಮೂಡಿದೆ. ಆದ್ದರಿಂದ ರಾಜಕೀಯವಾಗಿ ತಮ್ಮದೇ ಆದ ಬದ್ಧತೆಯನ್ನು ಹೊಂದಿರುವ ಎಂಟಿಬಿ ನಾಗರಾಜ್ ಅವರ ಸ್ಪರ್ಧೆ ಮಾಡುವುದು ಒಳಿತು ಎಂದು ನಮ್ಮ ಅಭಿಪ್ರಾಯ ಎಂದು ತಾಲೂಕು ಬಿಜೆಪಿ ಅಧ್ಯಕ್ಷ ಹುಲ್ಲೂರು ಕೆ.ಸತೀಶ್ ತಿಳಿಸಿದರು.