ಸಿದ್ದರಾಮಯ್ಯ ಅವರೆ ನಿಮಗೆ ಬಿಜೆಪಿಯ ಕೆಲ ನಾಯಕರ ಜೊತೆ ಹೊಂದಾಣಿಕೆ ಇಲ್ಲ ಅಂದರೆ ನೀವು ಮಾಡ್ತಿದ್ದ ಆರೋಪಗಳ ಬಗ್ಗೆ ತನಿಖೆಗೆ ಆದೇಶ ಮಾಡಿ ಎಂದು ಸಂಸದ ಪ್ರತಾಪ್‌ ಸಿಂಹ ಸವಾಲು ಹಾಕಿದರು.

ಮೈಸೂರು (ಜೂ.14): ಸಿದ್ದರಾಮಯ್ಯ ಅವರೆ ನಿಮಗೆ ಬಿಜೆಪಿಯ ಕೆಲ ನಾಯಕರ ಜೊತೆ ಹೊಂದಾಣಿಕೆ ಇಲ್ಲ ಅಂದರೆ ನೀವು ಮಾಡ್ತಿದ್ದ ಆರೋಪಗಳ ಬಗ್ಗೆ ತನಿಖೆಗೆ ಆದೇಶ ಮಾಡಿ ಎಂದು ಸಂಸದ ಪ್ರತಾಪ್‌ ಸಿಂಹ ಸವಾಲು ಹಾಕಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಿಮ್ಮ ವಿರುದ್ಧ ಅವರು, ಅವರ ವಿರುದ್ಧ ನೀವು ಸಮಯ ಬಂದಾಗ ಮಾತ್ರ ಟೀಕೆ ಮಾಡಿಕೊಳ್ತಿರಾ? ನನಗೆ ತುರಿಕೆ ಆದಾಗ ನೀನು ನನ್ನ ಬೆನ್ನು ಕೆರಿ, ನಿನಗೆ ತುರಿಕೆ ಆದಾಗ ನಾನು ಬೆನ್ನು ಕೆರಿತೀನಿ ಅನ್ನೋ ರೀತಿ ನಿಮ್ಮ ಒಪ್ಪಂದ ನಾ ಎಂದು ಪ್ರಶ್ನಿಸಿದರು.

ಸಿದ್ದರಾಮಯ್ಯ ಅವರೇ ನಿಮ್ಮ ಬಗ್ಗೆ ಬಿಜೆಪಿಯ ಕೆಲವು ಅತಿರಥ ಮಹಾರಥರು ಮಾತಾಡದೆ ಇರಬಹದು. ಕೆಲವರು ಶಾಮೀಲು ಆಗಿರಬಹುದು. ಬಿಜೆಪಿ ಕಾರ್ಯಕರ್ತ ಯಾವತ್ತೂ ನಿಮ್ಮ ಜೊತೆ ಶಾಮೀಲು ಆಗಿಲ್ಲ. ಆಗುವುದು ಇಲ್ಲ. ಚುನಾವಣೆಯಲ್ಲಿ ಬಿಜೆಪಿಯ ಕೆಲವು ಮುಖಂಡರು ಸೋತಿರಬಹುದು. ನಮ್ಮ ಕಾರ್ಯಕರ್ತರು ಸೋತಿಲ್ಲ ಎಂದರು.

ಚಾಮರಾಜನಗರ ಜಿಲ್ಲೆಗೆ ಅಗತ್ಯವಿರುವಷ್ಟು ನೆರವು ನೀಡಲು ನಮ್ಮ ಸರ್ಕಾರ ಬದ್ಧ: ಸಚಿವ ಮಹದೇವಪ್ಪ

ಶ್ವೇತಪತ್ರ ಹೊರಡಿಸಿ: ರಾಜ್ಯದ ಹಣಕಾಸು ಸ್ಥಿತಿ ಹೇಗಿದೆ. ಇದಕ್ಕೆ ಶ್ವೇತಪತ್ರ ಹೊರಡಿಸಿ. ರಾಜ್ಯದ ಯಾವ ಸಿಎಂ ಎಷ್ಟುಸಾಲ ಮಾಡಿದ್ದಾರೆ ಎಂಬುದನ್ನು ಅಧಿಕೃತವಾಗಿ ಹೇಳಿ. ಕಾಂಗ್ರೆಸ್‌ನವರು ಬಿಜೆಪಿ ಸರ್ಕಾರ ಮೇಲಿನ 40 ಪರ್ಸೆಂಟ್‌ ಆರೋಪದ ಬಗ್ಗೆ ಯಾಕೆ ದೂರು ಕೊಟ್ಟಿರಲಿಲ್ಲ. ಕಾಂಟ್ರಾಕ್ಟ್ ಮಾಡದ ಕೆಂಪಣ್ಣನ ಬರೆದ ಪತ್ರ ಇಟ್ಟುಕೊಂಡು ಕಾಂಗ್ರೆಸ್‌ ನಾಯಕರು ಊರಿಗೆಲ್ಲ ತಮಟೆ ಹೊಡೆದರು ಎಂದು ಅವರು ಹೇಳಿದರು. ಬಿಜೆಪಿ ಅಧಿಕಾರದಲ್ಲಿ ಇದ್ದಾಗ ಸಿದ್ದರಾಮಯ್ಯ ವಿರುದ್ಧ ಮೇಲೆ ರೀ ಡೂ, ಅರ್ಕಾವತಿ ಡಿ ನೋಟಿಫೀಕೇಷ್‌, ಕೆಂಪಣ್ಣ ಆಯೋಗ ವರದಿ ಅಬ್ಬರಿಸುತ್ತಿದ್ದರು. ಆದರೆ, ನಮ್ಮವರು ಒಂದು ದಿನವೂ ಹಾವಿನ ಪೆಟ್ಟಿಗೆಯಿಂದ ಹಾವು ಹೊರಗೆ ಬಿಡಲೇ ಇಲ್ಲ. 

ಸಿದ್ದರಾಮಯ್ಯ ಕೂಡ ಬಿಜೆಪಿ ಮೇಲೆ ಪಿಎಸ್‌ಐ ಹಗರಣ, ಬಿಟ್‌ ಕಾಯಿನ್‌ ಅಂತಾ ಅಬ್ಬರಿಸುತ್ತಿದ್ದರು. ಈಗ ಈ ಬಗ್ಗೆ ತುಟಿ ಬಿಚ್ಚುತ್ತಿಲ್ಲ ಎಂದರು. ಎಷ್ಟೆಕಷ್ಟವಾದರೂ ಗ್ಯಾರಂಟಿ ಜಾರಿ ಮಾಡ್ತಿವಿ ಅಂತಿರಲ್ಲ ಸಿದ್ದರಾಮಯ್ಯ ಅವರೇ ಅದಕ್ಕೆ ದುಡ್ಡು ಎಲ್ಲಿಂದ ತರುತ್ತೀರಾ ಅದನ್ನು ಮೊದಲು ಹೇಳಿ? ಜನರ ಸುಲಿಗೆ ಮಾಡಿ ಉಚಿತ ಯೋಜನೆ ಜಾರಿ ಮಾಡುವುದು ಕಾಂಗ್ರೆಸ್‌ ಸಂಸ್ಕೃತಿ ನಾ? ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ್‌, ಎಂ.ಬಿ. ಪಾಟೀಲ್‌ ತಮ್ಮ ಸ್ವಂತ ಆಸ್ತಿ ಮಾರಿ ಉಚಿತ ಗ್ಯಾರಂಟಿ ಮಾಡುತ್ತಾರಾ? ಉಚಿತ ಗ್ಯಾರಂಟಿ ಯೋಜನೆಗೆ ಸಂಪನ್ಮೂಲ ಕ್ರೂಢೀಕರಣ ಹೇಗೆ ಅಂತಾ ಕೇಳಿದರೆ ಪ್ರಶ್ನೆ ಕೇಳಿದವರೆ ಮನುವಾದಿಗಳು ಅಂದರೆ ಏನರ್ಥ ಎಂದು ಅವರು ಕಿಡಿಕಾರಿದರು.

ಐದು ವರ್ಷದ ನಂತರ ನಿಮಗೆ ರಾಜಕೀಯ ಭವಿಷ್ಯ ಇಲ್ಲ. ಆದರೆ, ಕರ್ನಾಟಕಕ್ಕೆ ಭವಿಷ್ಯ ಇರುತ್ತದೆ. ಅದಕ್ಕೆ ಕಲ್ಲು ಹಾಕ ಬೇಡಿ. ಬಿಜೆಪಿ ಬಗ್ಗೆ ಜನರಿಗೆ ಅಸಮಾಧಾನ ಇದ್ದ ಕಾರಣ ಜನ ಬಿಜೆಪಿ ತಿರಸ್ಕರಿಸಿದ್ದಾರೆ. ನಿಮ್ಮ ಗ್ಯಾರಂಟಿ ನೋಡಿ ಜನ ನಿಮಗೆ ಮತ ಹಾಕಿದ್ದಾರೆ. ಕೆಲ ಮುಖಂಡರಿಂದ ಬಿಜೆಪಿಯವರು ಮಣ್ಣು ತಿಂದಿದ್ದು ಆಗಿದೆ. ನೀವು ಈಗ ಮಣ್ಣು ತಿನ್ನುತ್ತಿರಾ? ಸುಮ್ಮನೆ ಬಿಜೆಪಿ, ಮನುವಾದ, ಆರ್‌ಎಸ್‌ಎಸ್‌ ಅಂತಾ ವಿಷಯಾಂಥರ ಮಾಡಬೇಡಿ ಎಂದು ಅವರು ಆಗ್ರಹಿಸಿದರು.

ವಿದ್ಯುತ್‌ ಬಿಲ್‌ ಏರಿಕೆ: ವಿದ್ಯುತ್‌ ಬಿಲ್‌ ಏರಿಕೆ ಮಾಡಿದ್ದು ಬಿಜೆಪಿ ಸರ್ಕಾರ ಎಂಬ ಕಾಂಗ್ರೆಸ್‌ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಬಿಜೆಪಿ ಗೋ ಹತ್ಯೆ ನಿಷೇಧ, ಮತಾಂತರ ನಿಷೇಧ ಕಾಯ್ದೆ ಜಾರಿ ಮಾಡಿತ್ತು ಇದನ್ನು ಮುಂದುವರಿಸೋ ಮಾತಾಡಿ. ರಾಜ್ಯದ ಜನರ ದಾರಿ ತಪ್ಪಿಸಬೇಡಿ. ಕೆಇಆರ್‌ಸಿ ದರ ಏರಿಕೆಗೆ ಶಿಫಾರಸು ಮಾಡಿದೆ. ಅದನ್ನು ತಡೆಯೋ, ತಿರಸ್ಕರಿಸೋ ಹಕ್ಕು ರಾಜ್ಯ ಸರ್ಕಾರಕ್ಕೆ ಇದೆ ಎಂದು ತಿರುಗೇಟು ನೀಡಿದರು. ಕಳೆದ ಸರ್ಕಾರ ಮಾಡಿದ್ದ ಗುತ್ತಿಗೆದಾರ ಹಣ ಬಿಡುಗಡೆ ಆದೇಶಕ್ಕೆ ತಡೆ ಹಾಕುತ್ತೀರಿ. ಆದರೆ ವಿದ್ಯುತ್‌ ಬಿಲ್‌ ಆದೇಶಕ್ಕೆ ಯಾಕೆ ತಡೆ ಹಾಕಲ್ಲ? 

ಎಲ್ಲಿಂದ ನಿಮಗೆ ಕಮಾಯಿ ಆಗುತ್ತೆ? ಎಲ್ಲಿಂದ ನಿಮಗೆ ವ್ಯಾಪಾರ ಆಗುತ್ತೆ. ಆ ವಿಚಾರದ ಬಗ್ಗೆ ಮಾತ್ರ ನಿಮ್ಮ ಆಸಕ್ತಿನಾ? ಕಾಂಗ್ರೆಸ್‌ ನವರು ಲೂಟಿ ಮಾಡಲು ಬಂದಿದ್ದಾರೆ. ತಮ್ಮ ಜನವಿರೋಧಿ ಮುಖ ಮರೆ ಮಾಚಲು ಬಿಜೆಪಿ ಮೇಲೆ ಆರೋಪ ಮಾಡಬೇಡಿ. ಈ ಸರ್ಕಾರ ಒಂದಷ್ಟುಜನರ ಸುಲಿಗೆ, ಲೂಟಿ ಮಾಡಲು ಬಂದಿದೆ ಎಂದು ಅವರು ದೂರಿದರು. ವಿದ್ಯುತ್‌ ಬಿಲ್‌ ಅನ್ನು ಯದತದ್ವ ಏರಿಕೆ ಮಾಡಿ ಈ ಮೂಲಕ ಒಂದಷ್ಟುಜನರ ದರೋಡೆ ಮಾಡಿ ಇನ್ನೊಬ್ಬರಿಗೆ ಕೊಡುವ ನಿಮ್ಮ ನಾಟಕದ ವಿರುದ್ಧ ಜನಾಂದೋಲನ ಮಾಡುತ್ತೇವೆ ಎಂದರು.

ಜೆಡಿಎಸ್‌-ಬಿಜೆಪಿ ಮೈತ್ರಿ ಕೇವಲ ವದಂತಿ: ಎಚ್‌.ಡಿ.ಕುಮಾರಸ್ವಾಮಿ

ಟೋಲ್‌ ಹೆಚ್ಚಳಕ್ಕೆ ಸಮರ್ಥನೆ: ಬೆಂಗಳೂರು- ಮೈಸೂರು ಹೆದ್ದಾರಿ ಟೋಲ್‌ ಹೆಚ್ಚಳ ಕುರಿತು ಪ್ರತಿಕ್ರಿಯಿಸಿದ ಸಂಸದ ಪ್ರತಾಪ್‌ ಸಿಂಹ ಅವರು, ಟೋಲ್‌ಗಳಲ್ಲಿ ಫಾಸ್ಟ್‌ ಟ್ಯಾಗ್‌ ವರ್ಕ್ ಆಗ್ತಿದೆ. ಯಾವ ಸಮಸ್ಯೆ ಇಲ್ಲ. ಸಿಸ್ಟಮ್‌ ಸಮಸ್ಯೆ ಇಲ್ಲ. ಟೋಲ್‌ ಸಂಗ್ರಹದ ಆರಂಭದಲ್ಲಿ ಇತ್ತು. ಈಗ ಈ ಸಮಸ್ಯೆ ಇಲ್ಲ. ಫಾಸ್ಟ್‌ ಟ್ಯಾಗ್‌ ಇರದೆ ಇದ್ದರೆ ಡಬಲ್‌ ಚಾಜ್‌ರ್‍ ಕಟ್ಟುವುದು ಕಡ್ಡಾಯ. ಇಡೀ ದೇಶದಲ್ಲಿ ಆರ್ಥಿಕ ವರ್ಷ ಶುರುವಾದಾಗ ಟೋಲ್‌ ಹೆಚ್ಚಳ ಸಹಜ. ಈ ಹೈವೆಗೆ ಏಪ್ರಿಲ್‌ನಲ್ಲಿ ಟೋಲ್‌ ಹೆಚ್ಚಳ ಆಗಬೇಕಿತ್ತು. ಆಗ ಆಗಿರಲಿಲ್ಲ ಈಗ ಶೇ.22 ಏರಿಕೆ ಆಗಿದೆ ಎಂದು ಸಮರ್ಥಿಸಿಕೊಂಡರು.

ದೇಶದ ಎಲ್ಲಾ ಟೋಲ್‌ಗಳಲ್ಲಿ ಪ್ರತಿ ಹಣಕಾಸು ವರ್ಷದ ಆರಂಭದಲ್ಲಿ ಟೋಲ್‌ ದರ ಏರಿಸಲಾಗುತ್ತದೆ. ಹಾಗೆಯೇ ಮೈಸೂರು- ಬೆಂಗಳೂರು ಎಕ್ಸ್‌ಪ್ರೆಸ್‌ವೇ ಟೋಲ್‌ ಶುಲ್ಕ ಸಹ ಹೆಚ್ಚಾಗಿದೆ. ಕಾಂಗ್ರೆಸ್‌ ಸರ್ಕಾರಕ್ಕೆ ಶಕ್ತಿ ಇದ್ದರೆ ರಾಜ್ಯ ವ್ಯಾಪ್ತಿಯಲ್ಲಿನ ಎಲ್ಲಾ ರಾಷ್ಟ್ರೀಯ ಹೆದ್ದಾರಿಗಳ ನಿರ್ಮಾಣ ವೆಚ್ಚ ಭರಿಸಿ, ಟೋಲ್‌ ತೆಗೆದು ಹಾಕಲಿ ಎಂದು ಅವರು ಸವಾಲು ಹಾಕಿದರು.