ಜೆಡಿಎಸ್‌, ಬಿಜೆಪಿ ಮೈತ್ರಿ ಕುರಿತಂತೆ ಯಾವುದೇ ಚರ್ಚೆ ಆಗಿಲ್ಲ. ಇವೆಲ್ಲ ಗಾಳಿ ಸುದ್ದಿ, ರಾಜಕಾರಣದಲ್ಲಿ ಊಹಾಪೋಹ ಸರ್ವೇಸಾಮಾನ್ಯ. ನನ್ನ ಮುಂದೆ ಆ ವಿಚಾರವನ್ನು ಯಾರೂ ಪ್ರಸ್ತಾಪ ಮಾಡಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಸ್ಪಷ್ಟಪಡಿಸಿದರು. 

ಚನ್ನಪಟ್ಟಣ (ಜೂ.14): ಜೆಡಿಎಸ್‌, ಬಿಜೆಪಿ ಮೈತ್ರಿ ಕುರಿತಂತೆ ಯಾವುದೇ ಚರ್ಚೆ ಆಗಿಲ್ಲ. ಇವೆಲ್ಲ ಗಾಳಿ ಸುದ್ದಿ, ರಾಜಕಾರಣದಲ್ಲಿ ಊಹಾಪೋಹ ಸರ್ವೇಸಾಮಾನ್ಯ. ನನ್ನ ಮುಂದೆ ಆ ವಿಚಾರವನ್ನು ಯಾರೂ ಪ್ರಸ್ತಾಪ ಮಾಡಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಸ್ಪಷ್ಟಪಡಿಸಿದರು. ನಗರದ ತಾಪಂ ಕಚೇರಿ ಆವರಣದಲ್ಲಿನ ಮರುವಿನ್ಯಾಸಗೊಳಿಸಿರುವ ತಮ್ಮ ಶಾಸಕರ ಕಚೇರಿಯಲ್ಲಿ ಪೂಜೆ ಸಲ್ಲಿಸಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಳೆದ ಬಾರಿಯೂ ನನಗೆ ಚುನಾವಣೆ ಎದುರಿಸುವ ಆಸಕ್ತಿ ಇರಲಿಲ್ಲ. 

ಆದರೆ ಕಾರ್ಯಕರ್ತರ ಒತ್ತಾಸೆ ಹಾಗೂ ಅವರ ಹಿತದೃಷ್ಟಿಯಿಂದ ರಾಜಕಾರಣದಲ್ಲಿದ್ದೇನೆ ಎಂದು ಮಾರ್ಮಿಕವಾಗಿ ನುಡಿದರು. ಎಂಪಿನೇ ಬೇಡ ಅನ್ನುತ್ತಿದ್ದಾರೆ. ನನ್ನ ವಿಚಾರ ಬಿಡಿ, ಹಾಲಿ ಸಂಸದರ ಕತೆ ಕೇಳಿ, ಅವರು, ಭ್ರಷ್ಟಾಚಾರ ಮಧ್ಯೆ ಚುನಾವಣೆಯೇ ಬೇಡ ಎನ್ನುತ್ತಿದ್ದಾರೆ. ಅವರಂಥವರೇ ಚುನಾವಣೆ ಬೇಡ ಎಂದು ಹೇಳುತ್ತಿರುವಾಗ ಇನ್ನು ನಮ್ಮದೆಲ್ಲ ಯಾವ ಲೆಕ್ಕ ಎಂದು ಸಂಸದ ಡಿ.ಕೆ.ಸುರೇಶ್‌ ಹೆಸರೇಳದೇ ಸಂಸದರ ರಾಜಕೀಯ ವೈರಾಗ್ಯದ ಕುರಿತು ಪ್ರಸ್ತಾಪಿಸಿದದರು.

ಒಳ ಒಪ್ಪಂದ ಕುರಿತ ಸಿ.ಟಿ.ರವಿ ಹೇಳಿಕೆ ಬಗ್ಗೆ ತನಿಖೆ ಆಗುತ್ತಾ?: ಎಚ್‌.ಡಿ.ಕುಮಾರಸ್ವಾಮಿ

ಗ್ಯಾರೆಂಟಿ ಬಗ್ಗೆ ಮಾತನಾಡಲು ಸಮಯವಿದೆ: ಚುನಾವಣೆ ಪೂರ್ವದಲ್ಲಿ ಕಾಂಗ್ರೆಸ್‌ ಘೋಷಿಸಿದ್ದ ಐದು ಗ್ಯಾರೆಂಟಿಗಳ ಬಗ್ಗೆ ಈಗಲೇ ಮಾತನಾಡುವುದು ಸರಿಯಲ್ಲ. ಸರ್ಕಾರದ ಐದು ಗ್ಯಾರಂಟಿ ಯೋಜನೆ ಬಗ್ಗೆ ಚರ್ಚೆ ಮಾಡಲು ಇನ್ನೂ ಸಮಯ ಇದೆ. ಕಾಂಗ್ರೆಸ್‌ನವರು ಕೊಟ್ಟಮಾತನ್ನು ಉಳಿಸಿಕೊಳ್ಳುತ್ತೆವೆ ಅನ್ನುತ್ತಿದ್ದಾರೆ. ಅದರೆ ಫಲಾನುಭವಿಗಳಿಗೆ ಹೇಗೆ ತಲುಪಿಸುತ್ತಾರೆ ಅನ್ನೋದು ಮುಖ್ಯ ಎಂದರು. ಮೊದಲಿಗೆ ಸರ್ಕಾರ ಬಾಡಿಗೆದಾರರಿಗೆ ಉಚಿತ ವಿದ್ಯುತ್‌ ಇಲ್ಲ ಎಂದು ಹೇಳಿತ್ತು, ಆ ಮೇಲೆ ಕೊಡುತ್ತೇವೆ ಅಂದರು, ಈಗ ಮಾಲೀಕರು ಬಾಡಿಗೆದಾರರಿಗೆ ಅಗ್ರಿಮೆಂಟ್‌ ಕೊಡುತ್ತಿಲ್ಲ. ಈ ವಿಚಾರದಲ್ಲಿ ನಾನಾ ಸಮಸ್ಯೆಗಳು ಉದ್ಭವ ಆಗುತ್ತಿವೆ. 

ಘೋಷಣೆ ಮಾಡಿದಾಗ ನನಗೂ ಫ್ರೀ, ನಿನಗೂ ಫ್ರೀ ಅಂದರು, ಈಗ ಅದನ್ನ ಯಾವ ರೀತಿ ನಿಭಾಹಿಸುತ್ತಾರೆ ನೋಡಬೇಕು ಎಂದು ವ್ಯಂಗ್ಯವಾಡಿದರು. ಚನ್ನಪಟ್ಟಣದಲ್ಲಿ ಕಾಡಾನೆ ಹಾವಳಿ ಹೆಚ್ಚಾಗಿರುವ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಅದರ ಬಗ್ಗೆ ಅ​ಧಿಕಾರಿಗಳೊಂದಿಗೆ ಚರ್ಚೆ ಮಾಡುತ್ತೇನೆ. ಕಾಡಾನೆ ಗ್ರಾಮಗಳಿಗೆ ಪ್ರವೇಶಿಸದಂತೆ ತಡೆಯಲು ತಡೆಗೋಡೆ ನಿರ್ಮಾಣ ಮಾಡಬೇಕು. ತಡೆಗೋಡೆ ನಿರ್ಮಿಸಲು ಕೆಲವೊಂದು ತಕರಾರು ಇದೆ. ಈ ಹಿಂದೆ ನಾನೇ ಖುದ್ದಾಗಿ ಸರ್ವೇ ಮಾಡಿದ್ದೇ. ಅ​ಕಾರಿಗಳನ್ನು ಜತೆಗೆ ಕರೆದೊಯ್ದು ಸ್ಥಳ ಪರಿಶೀಲನೆ ನಡೆಸಿದ್ದೆ. ಎಲ್ಲವನ್ನೂ ಹಂತಹಂತವಾಗಿ ಸರಿಪಡಿಸುವ ಕೆಲಸ ಮಾಡುತ್ತೇನೆ ಎಂದರು.

ಬಿಜೆಪಿ ವಿರುದ್ಧ ಕಾಂಗ್ರೆಸ್‌ ಯಾವ ಸಾಕ್ಷ್ಯ ನೀಡಿತ್ತು?: ಬಿಜೆಪಿ ವಿರುದ್ಧ 40 ಪರ್ಸೆಂಟ್‌ ಭ್ರಷ್ಟಾಚಾರ ಆರೋಪ ಮಾಡಿದ್ದಾಗ ಕಾಂಗ್ರೆಸ್‌ನವರು ಯಾವ ಸಾಕ್ಷ್ಯ ಮುಂದಿಟ್ಟದ್ದರು ಎಂದು ಕೇಳುವ ಮೂಲಕ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರಿಗೆ ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ತಿರುಗೇಟು ನೀಡಿದರು. 640 ಕೋಟಿ ಭ್ರಷ್ಟಾಚಾರದ ಆರೋಪಕ್ಕೆ ಸಂಬಂ​ಸಿದಂತೆ ಡಿಸಿಎಂ ಡಿ.ಕೆ.ಶಿವಕುಮಾರ್‌ ಲೋಕಾಯುಕ್ತಕ್ಕೆ ದೂರು ನೀಡಲಿ ಎಂದು ಹೇಳಿಕೆ ನೀಡಿದ್ದಾರೆ. ಈಗ ನನಗೆ ಸಲಹೆ ನೀಡಲು ಬರುವ ಅವರು, ಬಿಜೆಪಿ ವಿರುದ್ಧ 40 ಪರ್ಸೆಂಟ್‌ ಭ್ರಷ್ಟಾಚಾರದ ಡಂಗೂರ ಹೊಡೆದರಲ್ಲ ಅವಾಗ ನೀವು ಯಾವ ಸಾಕ್ಷಿ ಇಟ್ಟಿದ್ದಿರಿ, ಅವರಾರ‍ಯರೋ ಗುತ್ತಿಗೆದಾರರು ದೂರು ಕೊಟ್ಟರಲ್ಲ ಅವರು ಸಾಕ್ಷ್ಯ ಇಟ್ಟಿದ್ದರಾ, 

ಎಚ್‌ಡಿಕೆಗೆ ಯಾವ ಹುದ್ದೆಗೆ ಎಷ್ಟು ರೇಟ್‌ ಅಂತ ಗೊತ್ತಿದೆ: ಸಚಿವ ಚಲುವರಾಯಸ್ವಾಮಿ

ಬಿಜೆಪಿ ವಿರುದ್ಧದ ಭ್ರಷ್ಟಾಚಾರ ಪ್ರಕರಣಕ್ಕೆ ಸಂಬಂ​ಸಿದಂತೆ ಲೋಕಾಯುಕ್ತಕ್ಕೆ ದೂರು ನೀಡಿದ್ದರಾ ಎಂದು ಪ್ರಶ್ನಿಸಿದರು. ಈಗ ರಾಜ್ಯದಲ್ಲಿ ಅವರದೇ ಸರ್ಕಾರ ಅಧಿ​ಕಾರದಲ್ಲಿ ಇದೆ. 40 ಪರ್ಸೆಂಟ್‌ ಕಮಿಷನ್‌ ವಿಚಾರವನ್ನು ನೀವೇ ಹೊರತೆಗೆಯಿರಿ. ಹಿಂದಿನ ಸರ್ಕಾರದ ಅಕ್ರಮಗಳ ತನಿಖೆ ಮಾಡ್ತೀವಿ ಅಂತ ಹೇಳುತ್ತಿದ್ದಾರೆ. ಎಷ್ಟರಮಟ್ಟಿಗೆ ತನಿಖೆ ಮಾಡ್ತಾರೋ ನೋಡೋಣ. ಹಗರಣದ ಬಗ್ಗೆ ತನಿಖೆ ನಡೆಸಿ. ಮಹಾನಗರ ಪಾಲಿಕೆಯಲ್ಲಿ 675 ಕೋಟಿ ಎಲ್‌ಒಸಿ ಹಣವನ್ನ ಯಾಕೆ ರಿಲೀಸ್‌ ಮಾಡಿಲ್ಲ. ಅದನ್ನ ಯಾಕೆ ಇಟ್ಟುಕೊಂಡಿದ್ದೀರಿ ? ಅದರ ಬಗ್ಗೆ ನೀವು ಮೊದಲು ಜನತೆಗೆ ಹೇಳಿ ಎಂದು ವಾಗ್ದಾಳಿ ನಡೆಸಿದರು.