ಸಚಿವ ಸುಧಾಕರ್ ಮೆಡಿಕಲ್ ಕಾಲೇಜು ಕಿತ್ಕೊಂಡರು: ಸಂಸದ ಡಿ.ಕೆ.ಸುರೇಶ್
ಕನಕಪುರದಿಂದ ಚಿಕ್ಕಬಳ್ಳಾಪುರಕ್ಕೆ ಮೆಡಿಕಲ್ ಕಾಲೇಜು ಸ್ಥಳಾಂತರಗೊಂಡ ವಿಚಾರ ತಾಯಿ ಮತ್ತು ಮಕ್ಕಳ ಆಸ್ಪತ್ರೆ ಕಟ್ಟಡ ಹಸ್ತಾಂತರ ಸಮಾರಂಭದಲ್ಲಿ ಪ್ರಸ್ತಾಪಗೊಂಡು ಡಿಕೆ ಸಹೋದರರು ಹಾಗೂ ಆರೋಗ್ಯ ಸಚಿವ ಕೆ.ಸುಧಾಕರ್ ನಡುವೆ ಮಾತಿನ ಸಮರಕ್ಕೆ ಕಾರಣವಾಯಿತು.
ಕನಕಪುರ (ಫೆ.13): ಕನಕಪುರದಿಂದ ಚಿಕ್ಕಬಳ್ಳಾಪುರಕ್ಕೆ ಮೆಡಿಕಲ್ ಕಾಲೇಜು ಸ್ಥಳಾಂತರಗೊಂಡ ವಿಚಾರ ತಾಯಿ ಮತ್ತು ಮಕ್ಕಳ ಆಸ್ಪತ್ರೆ ಕಟ್ಟಡ ಹಸ್ತಾಂತರ ಸಮಾರಂಭದಲ್ಲಿ ಪ್ರಸ್ತಾಪಗೊಂಡು ಡಿಕೆ ಸಹೋದರರು ಹಾಗೂ ಆರೋಗ್ಯ ಸಚಿವ ಕೆ.ಸುಧಾಕರ್ ನಡುವೆ ಮಾತಿನ ಸಮರಕ್ಕೆ ಕಾರಣವಾಯಿತು. ಇನ್ಪೋಸಿಸ್ ಸಂಸ್ಥೆ ವತಿಯಿಂದ 50 ಕೋಟಿ ವೆಚ್ಚದಲ್ಲಿ ನಿರ್ಮಾಣಗೊಂಡಿರುವ ಆಸ್ಪತ್ರೆ ಹಸ್ತಾಂತರ ಸಮಾರಂಭದಲ್ಲಿ ಮಾತನಾಡಿದ ಸಂಸದ ಡಿ.ಕೆ.ಸುರೇಶ್, ನಮ್ಮ ಜೊತೆಯೇ ಇದ್ದ ಸ್ನೇಹಿತರಾದ ಸಚಿವ ಸುಧಾಕರ್ ಅವರು ಅನಿವಾರ್ಯ ಕಾರಣದಿಂದ ನಮ್ಮ ಮೇಲೆ ಮುನಿಸಿಕೊಂಡು ನಮ್ಮಿಂದ ದೂರವಾದರು.
ಅಲ್ಲದೆ, ತಾಲೂಕಿಗೆ ಮಂಜೂರಾಗಿದ್ದ ಮೆಡಿಕಲ್ ಕಾಲೇಜನ್ನು ನಮ್ಮಿಂದ ಕಿತ್ತುಕೊಂಡು ಹೋಗಿದ್ದು ಬಹಳ ಬೇಸರ ತರಿಸಿದೆ. ಇನ್ನು ಕೆಲವೇ ದಿನಗಳಲ್ಲಿ ನಮಗೆ ಅವಕಾಶ ದೊರೆಯಲಿದೆ. ಆ ಸಮಯದಲ್ಲಿ ಸುಧಾಕರ್ ಅವರ ಕೈಯಿಂದಲೇ ಆಸ್ಪತ್ರೆಗೆ ಶಂಕುಸ್ಥಾಪನೆ ಮಾಡಿಸುತ್ತೇವೆ ಎಂದು ಹೇಳಿದರು. ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮಾತನಾಡಿ, ಕನಕಪುರಕ್ಕೆ ಮೆಡಿಕಲ್ ಕಾಲೇಜನ್ನು ಸಚಿವ ಸಂಪುಟದಲ್ಲಿ ಪಾಸ್ ಮಾಡಿಸಿ, ಬಜೆಟ್ನಲ್ಲಿ ಹಣ ಬಿಡುಗಡೆ ಮಾಡಿಸಿ, ಟೆಂಡರ್ ಪ್ರಕ್ರಿಯೆ ಸಹ ನಡೆದಿತ್ತು. ಅಂತಹ ಸಮಯದಲ್ಲಿ ಅದನ್ನು ವಾಪಸ್ ಪಡೆದಿದ್ದು ನೋವಾಗಿ, ಗಾಯವಾಗಿ ಉಳಿದಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಚುನಾವಣೆಯಲ್ಲಿ ಸ್ಪರ್ಧೆಸಲು ಜಡ್ಜ್ ಹುದ್ದೆಗೆ ರಾಜೀನಾಮೆ ನೀಡಿದ ರಾಠೋಡ್
ಕಾಲೇಜು ಕಿತ್ಕೊಂಡಿಲ್ಲ: ಸಮಾರಂಭ ಉದ್ಘಾಟಿಸಿ ಮಾತನಾಡಿದ ಸುಧಾಕರ್, ನಮ್ಮ ಸಂಸದರು ಆಗಾಗ ಮೆಡಿಕಲ್ ಕಾಲೇಜು ಕಿತ್ತುಕೊಂಡು ಹೋದರೆಂದು ಹೇಳುತ್ತಲೇ ಇರುತ್ತಾರೆ. ಕನಕಪುರಕ್ಕೆ ಮಂಜೂರಾಗಿದ್ದ ಮೆಡಿಕಲ್ ಕಾಲೇಜನ್ನು ನಾನು ತೆಗೆದುಕೊಂಡು ಹೋಗಲಿಲ್ಲ. ಸಿದ್ದರಾಮಯ್ಯನವರು ಮುಖ್ಯಮಂತ್ರಿ ಆಗಿದ್ದಾಗಲೇ ಚಿಕ್ಕಬಳ್ಳಾಪುರಕ್ಕೆ ಮೆಡಿಕಲ್ ಕಾಲೇಜು ಮಂಜೂರಾಗಿತ್ತು. ಯಡಿಯೂರಪ್ಪನವರು ಬಂದ ಮೇಲೆ ಹಣ ಬಿಡುಗಡೆ ಮಾಡಿದರು. ಮುಂದಿನ ದಿನಗಳಲ್ಲಿ ಕನಕಪುರದಲ್ಲೂ ಮೆಡಿಕಲ್ ಕಾಲೇಜು ಸ್ಥಾಪನೆಯಾಗಲಿದ್ದು, ಈ ವಿಚಾರವಾಗಿ ಮುಖ್ಯಮಂತ್ರಿಗಳೊಂದಿಗೆ ಚರ್ಚೆ ನಡೆಸಿದ್ದೇವೆ ಎಂದು ತಿರುಗೇಟು ನೀಡಿದರು. ಮೊದಲ ಬಾರಿಗೆ ಕನಕಪುರಕ್ಕೆ ಬಂದಿದ್ದೇನೆ. ಹಾಗಾಗಿ, ಸುಮ್ಮನೆ ಹೋಗಬಾರದೆಂದು ಕನಕಪುರಕ್ಕೆ ನಮ್ಮ ಕ್ಲಿನಿಕ್ ಹಾಗೂ ಮಹಿಳೆಯರಿಗಾಗಿ ಆಯುಷ್ಮತಿ ಕ್ಲಿನಿಕ್ನ್ನು ಮಂಜೂರು ಮಾಡುತ್ತಿದ್ದೇನೆ ಎಂದರು.