Asianet Suvarna News Asianet Suvarna News

ಪ್ರತಿಭಟನೆ ಮಾಡಲು ಶಾಸಕರಿಗೆ ಯಾವುದೇ ನೈತಿಕತೆ ಇಲ್ಲ: ಸಚಿವ ಎಂಟಿಬಿ ನಾಗರಾಜ್‌ ಆಕ್ರೋಶ

ಕ್ಷೇತ್ರದಲ್ಲಿ ಪ್ರತಿಯೊಂದು ಅಭಿವೃದ್ಧಿ ಕಾರ್ಯಕ್ಕೂ ವಿರೋಧ ಮಾಡುವ ಶಾಸಕ ಶರತ್‌ ಬಚ್ಚೇಗೌಡರು ಕ್ಷೇತ್ರದಲ್ಲಿ ತಮ್ಮ ಅಭಿವೃದ್ಧಿಯನ್ನು ಸಹಿಸಲಾಗದೆ ಹತಾಶರಾಗಿ ಕ್ಷುಲ್ಲಕ ಪ್ರತಿಭಟನೆಗಳಿಂದ ಜನರ ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಪೌರಾಡಳಿತ ಸಚಿವ ಎಂಟಿಬಿ ನಾಗರಾಜ್‌ ತಿಳಿಸಿದರು. 

MLAs have no Morals to Protest Says Minister MTB Nagaraj At Hoskote gvd
Author
First Published Feb 16, 2023, 10:22 PM IST

ಹೊಸಕೋಟೆ (ಫೆ.16): ಕ್ಷೇತ್ರದಲ್ಲಿ ಪ್ರತಿಯೊಂದು ಅಭಿವೃದ್ಧಿ ಕಾರ್ಯಕ್ಕೂ ವಿರೋಧ ಮಾಡುವ ಶಾಸಕ ಶರತ್‌ ಬಚ್ಚೇಗೌಡರು ಕ್ಷೇತ್ರದಲ್ಲಿ ತಮ್ಮ ಅಭಿವೃದ್ಧಿಯನ್ನು ಸಹಿಸಲಾಗದೆ ಹತಾಶರಾಗಿ ಕ್ಷುಲ್ಲಕ ಪ್ರತಿಭಟನೆಗಳಿಂದ ಜನರ ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಪೌರಾಡಳಿತ ಸಚಿವ ಎಂಟಿಬಿ ನಾಗರಾಜ್‌ ತಿಳಿಸಿದರು. ನಗರದಲ್ಲಿ ಸರ್ಕಾರಿ ಅ​ಧಿಕಾರಿಗಳನ್ನು ದುರ್ಬಳಕೆ ಮಾಡಿಕೊಂಡು ಕಾಂಗ್ರೆಸ್‌ ಕಾರ್ಯಕರ್ತರಿಗೆ ತೊಂದರೆ ಕೊಡುತ್ತಿದ್ದಾರೆ ಎಂದು ಶಾಸಕ ಶರತ್‌ ಬಚ್ಚೇಗೌಡರ ನೇತೃತ್ವದಲ್ಲಿ ಹಮ್ಮಿಕೊಂಡಿದ್ದ ಪ್ರತಿಭಟನೆಗೆ ಪ್ರತಿಕ್ರಿಯಿಸಿದ ಸಚಿವರು, ನಾನು ವಿಧಾನಸಭಾ ಉಪ ಚುನಾವಣೆಯಲ್ಲಿ ಸೋೕತರೂ ಕೈಕಟ್ಟಿಕುಳಿತಿಲ್ಲ. 

ಬಿಜೆಪಿ ಸರ್ಕಾರದಲ್ಲಿ ವಿಧಾನ ಪರಿಷತ್‌ ಸದಸ್ಯನಾಗಿ, ಪೌರಾಡಳಿತ ಸಚಿವನಾಗಿ ಕ್ಷೇತ್ರಾದ್ಯಂತ ಅಭಿವೃದ್ಧಿ ಕಾರ್ಯಗಳನ್ನು ಕೈಗೊಂಡಿದ್ದೇನೆ. ಶಾಸಕ ಶರತ್‌ ಅವರ ದುರಾಡಳಿತ ನೋಡಿ ಸಾವಿರಾರು ಸಂಖ್ಯೆಯಲ್ಲಿ ಕಾಂಗ್ರೆಸ್‌ ಕಾರ್ಯಕರ್ತರು ಪ್ರತಿ ದಿನ ಬಿಜೆಪಿ ಪಕ್ಷಕ್ಕೆ ಸೇರ್ಪಡೆಗೊಳ್ಳುತ್ತಿದ್ದಾರೆ. ಇದರಿಂದ ಹತಾಶರಾಗಿರುವ ಶಾಸಕರು ಪ್ರತಿಭಟನೆ ಹೆಸರಿನಲ್ಲಿ ತಾಲೂಕಿನ ಜನರ ​ದಿಕ್ಕು ತಪ್ಪಿಸುವ ಕೆಲಸ ಮಾಡಲು ಯತ್ನಿಸುತ್ತಿದ್ದಾರೆಂದು ಆರೋಪಿಸಿದರು.

ಜಾತ್ರೆಯಲ್ಲಿ ಪೀಪಿ ಊದಿದಕ್ಕೆ ದಲಿತನ ಮೇಲೆ ಹಲ್ಲೆ: 7 ಮಂದಿಗೆ ಗಾಯ

ಒತ್ತುವರಿ ತೆರವು ತಪ್ಪ?: ಕಾಚರಕನಹಳ್ಳಿ ಗ್ರಾಮದಲ್ಲಿ ಸರ್ಕಾರಿ ಜಾಗವನ್ನು ಒತ್ತುವರಿ ಮಾಡಿಕೊಂಡು ತಡೆಗೋಡೆ ನಿರ್ಮಾಣ ಮಾಡಿಕೊಂಡಿದ್ದನ್ನು ತಹಸೀಲ್ದಾರ್‌ ಅವರು ಕಾನೂನು ರೀತಿಯಾಗಿ ತೆರವು ಮಾಡಿದರೆ ಅದು ತಪ್ಪು ಕೆಲಸವಾ? ಅದು ಸಚಿವರ ಕುಮ್ಮಕ್ಕಾಗುತ್ತ? ಹಾಗಿದ್ದರೆ ಅ​ಧಿಕಾರಿಗಳು ಅವರ ಕೆಲಸ ಮಾಡಬಾರದ? ಶಾಸಕರು ಹೇಳಿದ್ದನ್ನು ಮಾತ್ರ ಮಾಡಬೇಕಾ? ವಿನಾಕಾರಣ ಈ ರೀತಿ ಸುಳ್ಳು ಹೇಳಿ ಪ್ರತಿಭಟನೆ ಮಾಡುವುದರಿಂದ ಯಾವುದೇ ಪ್ರಯೋಜನವಿರುವುದಿಲ್ಲ. ಅದರಿಂದ ಯಾವ ಉಪಯೋಗವೂ ಇರುವುದಿಲ್ಲ. ಶಾಸಕ ಶರತ್‌ ಬಚ್ಚೇಗೌಡರ ಸುಳ್ಳು ಮಾತನ್ನು ಕೇಳಿ ಹಿರಿಯ ರಾಜಕಾರಣಿಗಳು, ಅನುಭವಿಗಳೂ ಆಗಿರುವ ಮಾಜಿ ಸ್ವೀಕರ್‌ ರಮೇಶ್‌ ಕುಮಾರ್‌ ಅವರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದು, ನಾಚಿಕೆಗೇಡಿವ ವಿಚಾರ ಎಂದು ಹೇಳಿದರು.

ಶಾಸಕರ ಚಿಕ್ಕಪ್ಪರಿಂದಲೆ ಅಕ್ರಮ ಗಣಿಗಾರಿಕೆ: ಸಚಿವ ಎಂಟಿಬಿ ನಾಗರಾಜ್‌ ಅವರ ಬೆಂಬಲಿಗರು ಅಕ್ರಮವಾಗಿ ಗ್ರಾವೆಲ್‌ ಗಣಿಗಾರಿಕೆ ಮಾಡುತ್ತಿರುವ ಆರೋಪ ಮಾಡಲು ಶಾಸಕ ಶರತ್‌ ಬಚ್ಚೇಗೌಡರಿಗೆ ಯಾವುದೇ ನೈತಿಕತೆ ಇಲ್ಲ. ನಮ್ಮ ಬೆಂಬಲಿಗರು ಯಾರಾದರೂ ಗಣಿಗಾರಿಕೆ ಮಾಡುತ್ತಿರುವ ದಾಖಲೆ ಇದ್ದರೆ ತೋರಿಸಲಿ. ಆದರೆ, ಶಾಸಕ ಶರತ್‌ ಬಚ್ಚೇಗೌಡ ಅವರ ಚಿಕ್ಕಪ್ಪ ಭೈರೇಗೌಡರೇ ಭೀರಹಳ್ಳಿ ಗ್ರಾಮದಲ್ಲಿ ರಾಯಲ್ಟಿಕಟ್ಟದಂತಹ ಜಾಗಗಳಲ್ಲಿ ಅಕ್ರಮ ಗಣಿಗಾರಿಕೆ ಮಾಡಿ ಕೋಟ್ಯಂತರ ಹಣ ಸಂಪಾದನೆ ಮಾಡಿದ್ದಾರೆ. ಅಷ್ಟೇ ಅಲ್ಲದೆ ಅವರ ಅಕ್ರಮ ಗಣಿಗಾರಿಕೆಯಿಂದ ಅಲ್ಲಿನ ಸಾಕಷ್ಟುಬಡವರ ಮನೆಗಳು ಬಿರುಕು ಬಿಟ್ಟು ಸಮಸ್ಯೆಗಳು ಉಂಟಾಗಿವೆ. ನಾನೇ ಆ ಬಡವರಿಗೆ ಸೀಟು, ಸಿಮೆಂಟ್‌ ಕೊಟ್ಟು ಮನೆಗಳ ರಿಪೇರಿ ಕೆಲಸ ಮಾಡಿಸಿಕೊಟ್ಟಿದ್ದೇನೆ ಎಂದು ಸಚಿವ ಎಂಟಿಬಿ ನಾಗರಾಜ್‌ ಆಕ್ರೋಶ ವ್ಯಕ್ತಪಡಿಸಿದರು.

ಕಾಂಗ್ರೆಸ್ಸಿನದು ಟಿಪ್ಪು ಸಂತಾನ: ನಳಿನ್‌ಕುಮಾರ್‌ ಕಟೀಲ್‌ ವಾಗ್ದಾಳಿ

ರಸ್ತೆ ಅಭಿವೃದ್ಧಿಗೂ ವಿರೋಧ: ವಳಗೆರೆಪುರ ಗ್ರಾಮದಲ್ಲಿ ಸಾರ್ವಜನಿಕರ ಉದ್ದೇಶಕ್ಕಾಗಿ ರಸ್ತೆ ಮಾಡಿದರೆ ಕೇವಲ ಒಂದು ಕುಟುಂಬದ ಸದಸ್ಯರ ಮಾತನ್ನು ಕೇಳಿಕೊಂಡು ಹತ್ತು ಕುಟುಂಬ ಓಡಾಟಕ್ಕೆ ತೊಂದರೆ ಕೊಡ್ತಿರಾ? ಪ್ರಮುಖವಾಗಿ ರಸ್ತೆಗೆ ಎಂದು ಹಲವಾರು ದಶಕಗಳ ಹಿಂದೆ ದಾಖಲೆ ಮಾಡಲಾಗಿದೆ. ಈಗ ಅವರೆಲ್ಲರಿಗೂ ಪರಸ್ಪರ ಮನಸ್ತಾಪ ಇರಬಹುದು. ಅದನ್ನೆ ರಾಜಕೀಯ ದಾಳವನ್ನಾಗಿ ಮಾಡಿಕೊಂಡು ಒಂದು ಕುಟುಂಬದ ಪರ ನಿಂತು ರಸ್ತೆ ನಿರ್ಮಾಣಕ್ಕೂ ಪ್ರತಿಭಟನೆ ಮಾಡೋಕೆ ನಿಮಗೆ ಯಾವ ನೈತಿಕತೆ ಇದೆ ಎಂದು ಸಚಿವ ಎಂಟಿಬಿ ನಾಗರಾಜ್‌ ಪ್ರಶ್ನಿಸಿದರು.

Follow Us:
Download App:
  • android
  • ios