Asianet Suvarna News Asianet Suvarna News

ಚುನಾವಣೆಯಲ್ಲಿ ಜೆಡಿಎಸ್‌ ಸೋತಿದೆ ಹೊರತು ಸತ್ತಿಲ್ಲ: ಶಾಸಕ ರಾಜುಗೌಡ ಪಾಟೀಲ

ಲೋಕಸಭೆ ಚುನಾವಣೆ ಹಿನ್ನೆಲೆ ಎನ್‌ಡಿಎ ಜೊತೆ ಮೈತ್ರಿ ಮಾಡಿಕೊಂಡಿರುವುದು ಸ್ವಾಗತಾರ್ಹ. ಪಕ್ಷದ ವರಿಷ್ಠರು ಒಳ್ಳೆಯ ಹೆಜ್ಜೆ ಇಟ್ಟಿದ್ದಾರೆ. ಜಾತ್ಯತೀತ ತತ್ವಗಳನ್ನು ಉಳಿಸಿಕೊಂಡು ತಾವು ಮೈತ್ರಿ ಮಂದುವರೆಸಿಕೊಂಡು ಹೋಗುತ್ತೇವೆ. ರಾಜ್ಯದ ಹಿತದೃಷ್ಟಿಯಿಂದ ಬಿಜೆಪಿ- ಜೆಡಿಎಸ್‌ ಮೈತ್ರಿಯಾಗಿದೆ. ಕಾಂಗ್ರೆಸ್ ಮಟ್ಟ ಹಾಕಲು ಈ ದೋಸ್ತಿ ಅನಿವಾರ್ಯವಾಗಿತ್ತು: ದೇವರ ಹಿಪ್ಪರಗಿ ಶಾಸಕ ರಾಜುಗೌಡ ಪಾಟೀಲ 

MLA Rajugouda Patil Talks Over JDS grg
Author
First Published Oct 10, 2023, 7:36 AM IST

ವಿಜಯಪುರ(ಅ.10):  ಫಿನಿಕ್ಸ್ ಪಕ್ಷಿಯಂತೆ ಜೆಡಿಎಸ್‌ ಮತ್ತೆ ಮುಂದೆ ಬರಲಿದೆ. ಮುಂದಿನ ದಿನಗಳಲ್ಲಿ ಜೆಡಿಎಸ್‌ಗೆ ಉತ್ತಮ ಭವಿಷ್ಯ ಇದೆ ಎಂದು ದೇವರ ಹಿಪ್ಪರಗಿ ಶಾಸಕ ರಾಜುಗೌಡ (ಭೀಮನಗೌಡ) ಪಾಟೀಲ ಕುದರಿ ಸಾಲವಾಡಗಿ ತಿಳಿಸಿದರು. ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ಜೆಡಿಎಸ್‌ ಸೋತಿದೆ ಹೊರತು ಸತ್ತಿಲ್ಲ. ನಾವು 19 ಸ್ಥಾನ ಗೆದ್ದಿದ್ದೇವೆ. ಪಕ್ಷದ ಪುನಶ್ಚೇತನಕ್ಕೆ ಮುಂದಾಗಿದ್ದೇವೆ. ನಾವು ಮತ್ತೆ ಮುಂದೆ ಬರಲಿದ್ದೇವೆ, ಅದರಲ್ಲಿ ಸಂದೇಹ ಬೇಡ ಎಂದು ತಿಳಿಸಿದರು.

ಲೋಕಸಭೆ ಚುನಾವಣೆ ಹಿನ್ನೆಲೆ ಎನ್‌ಡಿಎ ಜೊತೆ ಮೈತ್ರಿ ಮಾಡಿಕೊಂಡಿರುವುದು ಸ್ವಾಗತಾರ್ಹ. ಪಕ್ಷದ ವರಿಷ್ಠರು ಒಳ್ಳೆಯ ಹೆಜ್ಜೆ ಇಟ್ಟಿದ್ದಾರೆ. ಜಾತ್ಯತೀತ ತತ್ವಗಳನ್ನು ಉಳಿಸಿಕೊಂಡು ತಾವು ಮೈತ್ರಿ ಮಂದುವರೆಸಿಕೊಂಡು ಹೋಗುತ್ತೇವೆ. ರಾಜ್ಯದ ಹಿತದೃಷ್ಟಿಯಿಂದ ಬಿಜೆಪಿ- ಜೆಡಿಎಸ್‌ ಮೈತ್ರಿಯಾಗಿದೆ. ಕಾಂಗ್ರೆಸ್ ಮಟ್ಟ ಹಾಕಲು ಈ ದೋಸ್ತಿ ಅನಿವಾರ್ಯವಾಗಿತ್ತು ಎಂದು ಹೇಳಿದರು.

ಬಿಎಸ್‌ವೈ ಮೂಲೆಗುಂಪು ಮಾಡಿ ಮೋದಿ ಫೋಟೊ ಹಿಡಿದು ಹೋದರೆ ಮತ ಸಿಗಲ್ಲ: ಎಂಪಿ ರೇಣುಕಾಚಾರ್ಯ

ಅ.15 ಅಥವಾ 16ರಂದು ಸಭೆ ನಡೆಸಿ ಮುಂದಿನ ನಿರ್ಣಯ ಕೈಗೊಳ್ಳುವುದಾಗಿ ಹೇಳಿರುವ ಜೆಡಿಎಸ್‌ ರಾಜ್ಯಾಧ್ಯಕ್ಷ ಸಿ.ಎಂ. ಇಬ್ರಾಹಿಂ ಕುರಿತು ಪ್ರತಿಕ್ರಿಯೆ ನೀಡಿರುವ ಶಾಸಕರು, ಜೆಡಿಎಸ್‌ ರಾಜ್ಯಾಧ್ಯಕ್ಷ ಸಿ.ಎಂ. ಇಬ್ರಾಹಿಂ ಸೇರಿದಂತೆ ಎಲ್ಲರನ್ನು ವಿಶ್ವಾಸಕ್ಕೆ ತಗೆದುಕೊಂಡು ಮೈತ್ರಿ ಮಾಡಿಕೊಳ್ಳಲು ವರಿಷ್ಠರು ನಿರ್ಧರಿಸಿದ್ದರು. ಎನ್‌ಡಿಎ ಜೊತೆ ಮೈತ್ರಿ ಮಾಡಿಕೊಂಡಿದ್ದಕ್ಕೆ ಜೆಡಿಎಸ್‌ನಲ್ಲಿ ಯಾವುದೇ ಅಸಮಾಧಾನವಿಲ್ಲ ಎಂದು ಹೇಳಿದರು.

ವಿಜಯಪುರ ಲೋಕಸಭೆ ಕ್ಷೇತ್ರದ ಟಿಕೆಟ್‌ ಜೆಡಿಎಸ್‌ಗೆ ಕೇಳಲಾಗುತ್ತದೆ. ಆದರೆ, ಇನ್ನೂ ಟಿಕೆಟ್‌ ಹಂಚಿಕೆ ಬಗ್ಗೆ ಪಕ್ಷದ ವರಿಷ್ಠರು ನಿರ್ಧರಿಸಿಲ್ಲ ಎಂದು ಹೇಳಿದರು.

ಕಳೆದ ವಿಧಾನಸಭೆ ಚುನಾವಣೆಯಲ್ಲಿ ಸಂದರ್ಭದಲ್ಲಿ ಪಕ್ಷ ಸೋತರೆ ಜೆಡಿಎಸ್‌ ವಿರ್ಸಜನೆ ಮಾಡಲಾಗುತ್ತದೆ ಎಂದು ಜೆಡಿಎಸ್‌ ವರಿಷ್ಠ ಎಚ್‌.ಡಿ. ಕುಮಾರಸ್ವಾಮಿ ಅವರು ಎಲ್ಲೂ ಹೇಳಿಲ್ಲ. ಆದರೆ ಇದನ್ನು ಕಾಂಗ್ರೆಸ್ಸಿನವರು ಅಪಪ್ರಚಾರ ಮಾಡುತ್ತಿದ್ದಾರೆ ಎಂದು ಅವರು ನುಡಿದರು.

ನಾಳೆ ಜೆಡಿಎಸ್‌ ಪುನಶ್ಚೇತನ ಪರ್ವ

ಜಿಲ್ಲೆಯಲ್ಲಿ ಜೆಡಿಎಸ್‌ ಪುನಶ್ಚೇತನ ಪರ್ವ ಹಾಗೂ ಸಂಘಟನೆಗಾಗಿ ಅ.11ರಂದು ಬೆಳಗ್ಗೆ 11 ಗಂಟೆಗೆ ನಗರದ ಕಿತ್ತೂರ ರಾಣಿ ಚೆನ್ಮಮ ಮಂಗಲ ಕಾರ್ಯಾಲಯದ ಸಭಾಂಗಣದಲ್ಲಿ ವಿಜಯಪುರ- ಬಾಗಲಕೋಟೆ ಅವಳಿ ಜಿಲ್ಲೆಗಳ ಜೆಡಿಎಸ್‌ ಕೋರ್‌ ಕಮಿಟಿ ಸಭೆ ನಡೆಯಲಿದೆ ಎಂದು ದೇವರ ಹಿಪ್ಪರಗಿ ಜೆಡಿಎಸ್‌ ಶಾಸಕ ರಾಜುಗೌಡ ತಿಳಿಸಿದರು.

ಅಂದು ಬೆಳಗ್ಗೆ 9-30 ಗಂಟೆಗೆ ಜ್ಞಾನಯೋಗಾಶ್ರಮಕ್ಕೆ ತೆರಳಲಾಗುವುದು. ಅಲ್ಲಿಂದ ಸಿದ್ದೇಶ್ವರ ದೇವಸ್ಥಾನಕ್ಕೆ ತೆರಳಿ ವಿಶೇಷ ಪೂಜೆ ಸಲ್ಲಿಸಲಾಗುವುದು. ನಂತರ ಕುಂಭ ಮೇಳದೊಂದಿಗೆ ರಾಣಿ ಚೆನ್ನಮ್ಮ ಮಂಗಲ ಕಾರ್ಯಾಲಯದ ಸಭಾಂಗಣದಲ್ಲಿ ಜೆಡಿಎಸ್‌ ಪುನಶ್ಚೇತನ ಪರ್ವ ಕಾರ್ಯಕ್ರಮದ ಉದ್ಘಾಟನೆ ನಡೆಯಲಿದೆ ಎಂದು ಹೇಳಿದರು.

ಈ ಕಾರ್ಯಕ್ರಮದಲ್ಲಿ ಜೆಡಿಎಸ್‌ ಕೋರ್‌ ಕಮಿಟಿ ಅಧ್ಯಕ್ಷ ಜಿ.ಟಿ.ದೇವೇಗೌಡ ಭಾಗವಹಿಸಲಿದ್ದಾರೆ. ಸಭೆಯಲ್ಲಿ ಕೋರ್‌ ಕಮಿಟಿ 21 ಸದಸ್ಯರು ಭಾಗಿಯಾಗಲಿದ್ದಾರೆ ಎಂದು ಹೇಳಿದರು.

ವಿಜಯಪುರ ಜಿಲ್ಲಾ ಜೆಡಿಎಸ್‌ ಅಧ್ಯಕ್ಷ ಬಸನಗೌಡ ಮಾಡಗಿ ಅವರು ಮಾತನಾಡಿ, ವಿಜಯಪುರದಲ್ಲಿ ಅ.11ರಂದು ನಡೆಯಲಿರುವ ಕೋರ್‌ ಕಮಿಟಿ ಸಭೆಗೆ ಸುಮಾರು 10 ಸಾವಿರ ಜನರು ಸೇರುವ ನಿರೀಕ್ಷೆ ಇದೆ. ಈ ಕಾರ್ಯಕ್ರಮದಲ್ಲಿ ಪಕ್ಷದ ಧುರೀಣ, ಜನಪ್ರತಿನಿಧಿಗಳು ಹಾಗೂ ಎಲ್ಲ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮ ಯಶಸ್ವಿಗೊಳಿಸಬೇಕು ಎಂದು ಮನವಿ ಮಾಡಿಕೊಂಡರು.

ಕಿಂಗ್‌ಮೇಕರ್ ಎಂದುಕೊಂಡಿದ್ದ ಕುಮಾರಸ್ವಾಮಿ: ಯೋಗೇಶ್ವರ್

ಜೆಡಿಎಸ್ ಮುಖಂಡೆ ಸುನಿತಾ ಚವ್ಹಾಣ, ಅಪ್ಪುಗೌಡ ಪಾಟೀಲ ಮನಗೂಳಿ, ಬಸವರಾಜ ಹೊನವಾಡ, ವಿಜಯಪುರ ತಾಲೂಕು ಅಧ್ಯಕ್ಷ ನಿಂಗನಗೌಡ ಸೋಲಾಪುರ, ಪ್ರಧಾನ ಕಾರ್ಯದರ್ಶಿ ರಾಜು ಹಿಪ್ಪರಗಿ, ಸಂಜು ಹಿರೇಮಠ, ಎಸ್‌.ಸಿ. ಘಟಕದ ಜಿಲ್ಲಾ ಅಧ್ಯಕ್ಷ ಸುಭಾಷ ನಾಯಕ, ಅಲ್ಪ ಸಂಖ್ಯಾತ ಘಟಕದ ಅಧ್ಯಕ್ಷ ಪೀರಪಾಶಾ ಗಚ್ಚಿನಮಹಲ್‌, ನಗರ ಅಧ್ಯಕ್ಷ ಮಲ್ಲಿಕಾರ್ಜುನ ತೊರವಿ, ಮುಖಂಡ ಭೀಮರಾಯ ಇಬ್ರಾಹಿಂಪುರ ಪತ್ರಿಕಾಗೋಷ್ಠಿಯಲ್ಲಿ ಇದ್ದರು.

ಕಳೆದ ವಿಧಾನಸಭೆ ಚುನಾವಣೆಯಲ್ಲಿ ಜೆಡಿಎಸ್‌ ಸ್ಪಷ್ಟ ಬಹುಮತದೊಂದಿಗೆ ಅಧಿಕಾರಕ್ಕೆ ಬಂದರೆ ಪಂಚರತ್ನ ಭರವಸೆ ಈಡೇರಿಸಲಾಗುವುದು. ಒಂದೊಮ್ಮೆ ಪಂಚರತ್ನ ಭರವಸೆಗಳನ್ನು ಈಡೇರಿಸಲು ಆಗದಿದ್ದರೆ ಪಕ್ಷ ವಿಸರ್ಜನೆ ಮಾಡಲಾಗುವುದು ಎಂದು ಹೆಚ್.ಡಿ. ಕುಮಾರಸ್ವಾಮಿ ಹೇಳಿದ್ದರು. ಆದರೆ, ಇದನ್ನು ಕಾಂಗ್ರೆಸ್ ತಿರುಚಿ ಅಪಪ್ರಚಾರ ಮಾಡುತ್ತಿದೆ. ಯಾವುದೇ ಕಾರಣಕ್ಕೂ ಜೆಡಿಎಸ್‌ ಪಕ್ಷದ ವಿಸರ್ಜನೆ ಆಗುವುದಿಲ್ಲ ಎಂದು ಸ್ಪಷ್ಟಪಡಿಸಿದರು.

Follow Us:
Download App:
  • android
  • ios