ಮಾಜಿ ಸಚಿವ ಡಾ.ಕೆ.ಸುಧಾಕರ್‌ ಅವರು ಕಾಂಗ್ರೆಸ್‌ ನಾಯಕರ ಬಳಿ ಹೋಗಿ ಚಿಕ್ಕಬಳ್ಳಾಪುರ ಕ್ಷೇತ್ರದಿಂದ ಲೋಕಸಭೆ ಟಿಕೆಟ್‌ ಕೇಳಿದ್ದಾರೆ ಎಂದು ಶಾಸಕ ಪ್ರದೀಪ್‌ ಈಶ್ವರ್‌ ‘ಬಾಂಬ್‌’ ಸಿಡಿಸಿದ್ದಾರೆ. 

ಚಿಕ್ಕಬಳ್ಳಾಪುರ (ಜು.30): ಮಾಜಿ ಸಚಿವ ಡಾ.ಕೆ.ಸುಧಾಕರ್‌ ಅವರು ಕಾಂಗ್ರೆಸ್‌ ನಾಯಕರ ಬಳಿ ಹೋಗಿ ಚಿಕ್ಕಬಳ್ಳಾಪುರ ಕ್ಷೇತ್ರದಿಂದ ಲೋಕಸಭೆ ಟಿಕೆಟ್‌ ಕೇಳಿದ್ದಾರೆ ಎಂದು ಶಾಸಕ ಪ್ರದೀಪ್‌ ಈಶ್ವರ್‌ ‘ಬಾಂಬ್‌’ ಸಿಡಿಸಿದ್ದಾರೆ. ಶನಿವಾರ ಸುದ್ದಿಗಾರರ ಜೊತೆ ಮಾತನಾಡಿ, ಕಾಂಗ್ರೆಸ್‌ ಪಕ್ಷದ ಕೆಲ ನಾಯಕರನ್ನು ಸುಧಾಕರ್‌ ಭೇಟಿ ಮಾಡಿರುವುದು ನಿಜ. ಚಿಕ್ಕಬಳ್ಳಾಪುರದ ಕೆಲ ನಾಯಕರೇ ಕಾಂಗ್ರೆಸ್‌ ನಾಯಕರ ಬಳಿ ಅವರನ್ನು ಕರೆದೊಯ್ದಿದ್ದಾರೆ. ಕಾಂಗ್ರೆಸ್‌ ನಾಯಕರ ಬಳಿ ಹೋಗಿ ಎಂಪಿ ಟಿಕೆಟ್‌ ಕೇಳಿದ್ದಾರೆ. ಆದರೆ, ಕಾಂಗ್ರೆಸ್‌ ನಾಯಕರು ಒಪ್ಪಿಲ್ಲ ಎಂದರು.

ಧೈರ್ಯವಿದ್ದರೆ ಪ್ರದೀಪ್‌ ಅವರು ಸ್ವತಂತ್ರವಾಗಿ ಚುನಾವಣೆಯಲ್ಲಿ ಗೆದ್ದು ಬರಲಿ ಎಂಬ ಸುಧಾಕರ್‌ ಆರೋಪಕ್ಕೆ ಪ್ರತಿಕ್ರಿಯಿಸಿ, ‘ಎರಡು ತಿಂಗಳ ಹಿಂದೆಯೇ ನಾನು ನಿಮ್ಮನ್ನು ಸೋಲಿಸಿದ್ದೇನೆ. ಈಗ ಯಾಕೆ ಮತ್ತೆ ಸ್ಪರ್ಧಿಸಬೇಕು. ನೀವು ಬೇಕಾದರೆ, 5 ವರ್ಷ ಆದ ಮೇಲೆ ಪಕ್ಷೇತರರಾಗಿ ಬಂದು ಸ್ಪರ್ಧೆ ಮಾಡಿ. ಬೇರೆ ಕ್ಷೇತ್ರದಲ್ಲಿ ಸ್ಪರ್ಧೆ ಮಾಡಿದರೆ ವಿಧಾನಸೌಧಕ್ಕೆ ಬರುತ್ತೀರಾ?. ಚಿಕ್ಕಬಳ್ಳಾಪುರದಿಂದ ಸ್ಪರ್ಧೆ ಮಾಡಿದರೆ ಮತ್ತೆ 5 ವರ್ಷ ಸಫರ್‌ ಆಗುತ್ತೀರಾ’ ಎಂದು ಟಾಂಗ್‌ ನೀಡಿದರು.

ಪಿಯು ವಿದ್ಯಾರ್ಥಿಗಳಿಗೆ ಸಿಇಟಿ, ನೀಟ್‌ ಉಚಿತ ತರಬೇತಿ: ಶಾಸಕ ಪ್ರದೀಪ್‌ ಈಶ್ವರ್‌

ವರಮಹಾಲಕ್ಷ್ಮೀ ಹಬ್ಬಕ್ಕೆ ಸೀರೆ ವಿತರಣೆ: ನೂತನ ಶಾಸಕರಾಗಿ ಆಯ್ಕೆಯಾದ ಸಂದರ್ಭದಲ್ಲಿ ಶಾಸಕ ಪ್ರದೀಪ್‌ ಈಶ್ವರ್‌ ಹೇಳಿದಂತೆ ಪ್ರತಿ ವರ್ಷ ವರಮಹಾಲಕ್ಷ್ಮೀ ಹಬ್ಬಕ್ಕೆ ಕ್ಷೇತ್ರದ ಪ್ರತಿಯೊಂದು ಮನೆಗೆ ತಾಂಬೂಲ, ಅರಿಸಿಣ-ಕುಂಕುಮ, ಬಳೆ ಸಹಿತ ಸೀರೆಯನ್ನು ಉಡುಗೊರೆಯಾಗಿ ಇತ್ತಾಚೆಗೆ ವಿತರಣೆ ಮಾಡಿದರು. ಶಾಸಕ ಪ್ರದೀಪ್‌ ಈಶ್ವರ್‌ ಬೆಂಬಲಿಗರು ಗುರುವಾರ ಚಿಕ್ಕಬಳ್ಳಾಪುರ ನಗರದ ಕಂದವಾರ ಬಾಗಿಲಿನ ಶ್ರೀಲಕ್ಷ್ಮೀವೆಂಕಟೇಶ್ವರ ದೇವಾಲಯಕ್ಕೆ ತೆರಳಿ ಪೂಜೆ ಸಲ್ಲಿಸುವ ಮೂಲಕ ಸೀರೆ ವಿತರಣೆಗೆ ಚಾಲನೆ ನೀಡಿದರು.

ತುಮಕೂರು ಜಿಲ್ಲೆಗೆ ಮೆಟ್ರೋ ರೈಲು ತರುವ ಚಿಂತನೆ: ಸಚಿವ ಪರಮೇಶ್ವರ್‌

ಈ ವೇಳೆ ಮಾತನಾಡಿದ ಮುಖಂಡ ಕೆ.ಎಲ್‌.ಶ್ರೀನಿವಾಸ್‌, ನಗರವೂ ಸೇರಿ ಹಬ್ಬದ ಹೊತ್ತಿಗೆ ಕ್ಷೇತ್ರದ ಪ್ರತಿಯೊಂದು ಊರಿನ ಮನೆ ಮನೆಗೂ ತಾಂಬೂಲ ಸಹಿತ ಸೀರೆ ಬಳೆ ವಿತರಣೆ ಆಗಲಿದೆ. ಇದರಲ್ಲಿ ಯಾವುದೇ ರಾಜಕೀಯದ ಉದ್ದೇಶ ಇಲ್ಲ. ಏಕೆಂದರೆ ಭಾರತೀಯ ಸಂಸ್ಕೃತಿ ಸಂಸ್ಕಾರದಲ್ಲಿ ಹಬ್ಬಗಳಿಗೆ ಬಾಗೀನ ಕೊಡುವ ಪದ್ದತಿ ರೂಢಿಯಲ್ಲಿದೆ. ಈ ಸತ್ಸಂಪ್ರದಾಯವನ್ನು ಶಾಸಕರು ಮುಂದುವರೆಸಿಕೊಂಡು ಹೋಗುತ್ತಿದ್ದಾರೆ ಎಂದರು. ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಜಯರಾಂ,ರಘು, ಡ್ಯಾನ್ಸ್‌ ಶ್ರೀನಿವಾಸ್‌,ಪ್ರೆಸ್‌ ಸೂರಿ, ರಾಜಶೇಖರ್‌(ಬುಜ್ಜಿ), ಸುಧಾ ವೆಂಕಟೇಶ್‌, ಡೇರಿ ಗೋಪಿ, ಮಾಡ್ರನ್‌ ಶಿವಕುಮಾರ್‌, ಲಕ್ಷಣ್‌, ಚಿಕ್ಕಪ್ಪಯ್ಯ, ಜಯರಾಮ್‌, ವೆಂಕಟ್‌, ದೇವರಾಜ್‌, ಪರಿಶ್ರಮ ಅಕಾಡೆಮಿ ಸಿಬ್ಬಂದಿ ಇದ್ದರು.