Asianet Suvarna News Asianet Suvarna News

ಮಾಧುಸ್ವಾಮಿ ಇಲಾಖೆ ಕುಂಟುತ್ತಿರಬೇಕು: ಸಚಿವ ಎಸ್‌ಟಿಎಸ್‌ ತಿರುಗೇಟು

ತಮ್ಮ ಬಗ್ಗೆ ಕಾನೂನು ಸಚಿವ ಜೆ.ಸಿ. ಮಾಧುಸ್ವಾಮಿ ಆಡಿದ್ದಾರೆ ಎನ್ನಲಾದ ಮಾತಿನ ಆಡಿಯೋ ವೈರಲ್‌ ಆಗುತ್ತಿದ್ದಂತೆಯೇ ಸಹಕಾರ ಸಚಿವ ಎಸ್‌.ಟಿ.ಸೋಮಶೇಖರ್‌ ಅವರು ತಮ್ಮ ಸಹೋದ್ಯೋಗಿಗೇ ತಿರುಗೇಟು ನೀಡಿದ್ದಾರೆ. ‘ಮಾಧುಸ್ವಾಮಿ ಅವರು ತಮ್ಮನ್ನು ತಾವೇ ಮೇಧಾವಿ ಎಂದು ತಿಳಿದಿದ್ದಾರೆ. 

Minister St Somashekhar Slams To Jc Madhuswamy At Mysuru gvd
Author
Bangalore, First Published Aug 15, 2022, 4:15 AM IST

ಬೆಂಗಳೂರು/ಮೈಸೂರು (ಆ.15): ತಮ್ಮ ಬಗ್ಗೆ ಕಾನೂನು ಸಚಿವ ಜೆ.ಸಿ. ಮಾಧುಸ್ವಾಮಿ ಆಡಿದ್ದಾರೆ ಎನ್ನಲಾದ ಮಾತಿನ ಆಡಿಯೋ ವೈರಲ್‌ ಆಗುತ್ತಿದ್ದಂತೆಯೇ ಸಹಕಾರ ಸಚಿವ ಎಸ್‌.ಟಿ.ಸೋಮಶೇಖರ್‌ ಅವರು ತಮ್ಮ ಸಹೋದ್ಯೋಗಿಗೇ ತಿರುಗೇಟು ನೀಡಿದ್ದಾರೆ. ‘ಮಾಧುಸ್ವಾಮಿ ಅವರು ತಮ್ಮನ್ನು ತಾವೇ ಮೇಧಾವಿ ಎಂದು ತಿಳಿದಿದ್ದಾರೆ. ಆ ಮನೋಭಾವದಿಂದ ಹೊರಬರಬೇಕು’ ಎಂದು ತೀಕ್ಷ್ಣವಾಗಿ ಹೇಳಿದ್ದಾರೆ. 

ಭಾನುವಾರ ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಸೋಮಶೇಖರ್‌, ಬಹುಶಃ ಮಾಧುಸ್ವಾಮಿ ಅವರ ಸಣ್ಣ ನೀರಾವರಿ ಇಲಾಖೆ ಕುಂಟತ್ತಿರಬೇಕಷ್ಟೇ. ಸರ್ಕಾರ ಉತ್ತಮವಾಗಿಯೇ ಆಡಳಿತ ನಡೆಸುತ್ತಿದೆ. ಇದನ್ನು ಯಾರೂ ಬೊಟ್ಟು ಮಾಡಿ ತೋರಿಸಬೇಕಿಲ್ಲ ಎಂದು ಹರಿಹಾಯ್ದರು. ‘ತಾನೊಬ್ಬನೇ ಬುದ್ಧಿವಂತ, ಮೇಧಾವಿ ಎಂದು ಮಾಧುಸ್ವಾಮಿ ಅವರು ತಿಳಿದಂತಿದೆ. ಸಂಪುಟದಲ್ಲಿ ಅನೇಕ ಅನುಭವಿಗಳು ಮತ್ತು ಹಿರಿಯ ಸಚಿವರಿದ್ದಾರೆ. ಮೊದಲು ಅಂತಹ ಮನೋಭಾವದಿಂದ ಅವರು ಹೊರಬರಬೇಕು’ ಎಂದರು. 

ಸಚಿವ ಸೋಮಶೇಖರ್‌ ಬಿಜೆಪಿ ಚೇಲಾ: ಎಂ.ಲಕ್ಷ್ಮಣ್‌

‘ಸರ್ಕಾರ ಉತ್ತಮವಾಗಿ ಆಡಳಿತ ನಡೆಸುತ್ತಿದೆ. ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿಯಾಗಿ 1 ವರ್ಷವಾಗುತ್ತಿದ್ದು, ಆ.28ರಂದು ವಿವಿಧೆಡೆ ಕಾರ್ಯಕ್ರಮ ಆಯೋಜಿಸಲಾಗಿದೆ. ಪ್ರತಿ ಗುರುವಾರ ಸಚಿವ ಸಂಪುಟ ಸಭೆ ನಡೆಯುತ್ತದೆ. ರಾಜ್ಯದ ಅನೇಕ ಯೋಜನೆಗಳನ್ನು ಜಾರಿಗೊಳಿಸಲಾಗುತ್ತಿದೆ. ಇದನ್ನು ಅವರೇ ಮಾಧ್ಯಮಗಳ ಮುಂದೆ ಹೇಳಬೇಕು. ಆದರೆ ಸರ್ಕಾರವನ್ನು ನಾವೇ ತಳ್ಳುತ್ತಿದ್ದೇವೆ ಎಂಬ ರೀತಿ ಅವರು ಹೇಳಿಕೆ ನೀಡಿದ್ದರೆ, ಅದು ಸರಿಯಲ್ಲ’ ಎಂದು ಅವರು ಹೇಳಿದರು. ‘ಅವರು ಸಂಪುಟ ಸಭೆಯಲ್ಲಿ ಪಾಲ್ಗೊಂಡು ಸರ್ಕಾರದ ಯೋಜನೆಗಳನ್ನು ನೋಡುವುದಿಲ್ಲವೇ? ನಾಳೆ ಸ್ವಾತಂತ್ರ್ಯ ಅಮೃತ ಮಹೋತ್ಸವ ಕಾರ್ಯಕ್ರಮದಲ್ಲಿಯೂ ಯೋಜನೆಗಳನ್ನು ಘೋಷಿಸುತ್ತಾರೆ.

ಸರ್ಕಾರ ನಡೆಸುತ್ತಿಲ್ಲ, ಮ್ಯಾನೇಜ್‌ ಮಾಡುತ್ತಿದ್ದೇವೆ: ‘ನಾವು ಸರ್ಕಾರ ನಡೆಸುತ್ತಿಲ್ಲ, ಮ್ಯಾನೇಜ್‌ ಮಾಡುತ್ತಿದ್ದೇವೆ ಅಷ್ಟೇ’ ಎಂದು ಸಚಿವ ಜೆ.ಸಿ. ಮಾಧುಸ್ವಾಮಿ ಆಡಿದ್ದಾರೆ ಎನ್ನಲಾದ ಮಾತಿನ ಆಡಿಯೋ ರಾಜಕೀಯ ಬಿರುಗಾಳಿ ಎಬ್ಬಿಸಿದೆ. ‘ಈ ಮೂಲಕ ಮಾಧುಸ್ವಾಮಿ ಸತ್ಯ ಒಪ್ಪಿಕೊಂಡಿದ್ದಾರೆ. ಇದನ್ನು ಬಹಿರಂಗವಾಗಿಯೂ ಒಪ್ಪಿಕೊಳ್ಳಲು ಸಿದ್ಧರಿದ್ದಾರಾ’ ಎಂದು ವಿಧಾನಸಭೆ ವಿರೋಧಪಕ್ಷದ ನಾಯಕ ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ. ಜೆ.ಸಿ. ಮಾಧುಸ್ವಾಮಿ ಅವರು ಸಹಕಾರ ಬ್ಯಾಂಕ್‌ಗಳಲ್ಲಿನ ರೈತರ ಸಾಲದ ಕುರಿತ ಅವ್ಯವಹಾರದ ಬಗ್ಗೆ ಸಾಮಾಜಿಕ ಕಾಯಕರ್ತರೊಂದಿಗೆ ನಡೆಸಿದ್ದಾರೆ ಎನ್ನಲಾದ ಸಂಭಾಷಣೆ ವೈರಲ್‌ ಆಗಿದೆ.

ಸಿದ್ದರಾಮಯ್ಯ ಸರ್ಕಾರದ ದಿಂಬು, ಹಾಸಿಗೆ ಹಗರಣ ಮುಚ್ಚಿ ಹಾಕಲಿಲ್ವಾ?: ಸಿದ್ದು ವಿರುದ್ಧ ಎಸ್‌ಟಿಎಸ್‌ ಗರಂ

ಅದರಲ್ಲಿ ‘ಸಾಲದ ಬಗ್ಗೆ ಸಹಕಾರ ಸಚಿವ ಸೋಮಶೇಖರ್‌ಗೂ ಹೇಳಿದೆ. ಅವೇನೂ ಕ್ರಮ ಜರುಗಿಸ್ತಾ ಇಲ್ಲ.. ಏನು ಮಾಡೋದು? ಸರ್ಕಾರವನ್ನು ನಾವು ನಡೆಸುತ್ತಿಲ್ಲ. ಮ್ಯಾನೇಜ್‌ ಮಾಡುತ್ತಿದ್ದೇವೆ. ಇನ್ನೆಂಟು ತಿಂಗಳು ತಳ್ಳಿದರೆ ಸಾಕು ಎಂದು ತಳ್ಳುತ್ತಿದ್ದೇವೆ’ ಎಂದು ಹೇಳಿದ್ದು ಕೇಳಿಬರುತ್ತದೆ. ಈ ಬಗ್ಗೆ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಸಿದ್ದರಾಮಯ್ಯ, ‘ಸಚಿವ ಮಾಧುಸ್ವಾಮಿ ಸತ್ಯ ಹೇಳಿದ್ದಾರೆ. ಅದು ವೈರಲ್‌ ಆಗುತ್ತದೆ ಎಂದು ಗೊತ್ತಿರಲಿಲ್ಲ ಎನಿಸುತ್ತದೆ. ಸರ್ಕಾರದ ಬಗೆಗಿನ ಸತ್ಯ ಒಪ್ಪಿಕೊಂಡಿರುವ ಅವರು ಬಹಿರಂಗವಾಗಿಯೂ ಆ ಸತ್ಯ ಒಪ್ಪಿಕೊಳ್ಳುತ್ತಾರಾ’ ಎಂದು ಪ್ರಶ್ನಿಸಿದರು.

Follow Us:
Download App:
  • android
  • ios