ಕೇಂದ್ರ ಸಚಿವ ವಿ. ಸೋಮಣ್ಣ ಅವರು, ಜಿಎಸ್‌ಟಿ ಕಡಿತವನ್ನು 'ದೀಪಾವಳಿ ಉಡುಗೊರೆ' ಎಂದು ಶ್ಲಾಘಿಸಿದ್ದಾರೆ. ಇದೇ ವೇಳೆ, ಕಿತ್ತೂರು ರಾಣಿ ಚೆನ್ನಮ್ಮ ಜಯಂತಿಯನ್ನು ಕೇಂದ್ರ ಮಟ್ಟದಲ್ಲಿ ಆಚರಿಸುವ ಬಗ್ಗೆ ಮಾಹಿತಿ ನೀಡಿದ ಅವರು, ರಾಜ್ಯ ಸರ್ಕಾರದ ಆಡಳಿತ ವೈಫಲ್ಯ  ಕುರಿತು ತೀವ್ರ ವಾಗ್ದಾಳಿ ನಡೆಸಿದರು.

ನವದೆಹಲಿ: ಕೇಂದ್ರ ಸಚಿವ ವಿ. ಸೋಮಣ್ಣ ಅವರು ನವದೆಹಲಿಯಲ್ಲಿ ಪತ್ರಕರ್ತರೊಂದಿಗೆ ಮಾತನಾಡಿ ದೀಪಾವಳಿ ಹಬ್ಬದ ಶುಭಾಶಯಗಳನ್ನು ಕೋರಿ, ಜಿಎಸ್‌ಟಿ ಕಡಿತದಿಂದ ಜನರಿಗೆ ದೊರೆಯುತ್ತಿರುವ ಪ್ರಯೋಜನಗಳ ಕುರಿತು ಸಂತೋಷ ವ್ಯಕ್ತಪಡಿಸಿದರು. ಮೋದಿಯವರ ನೇತೃತ್ವದ ಕೇಂದ್ರ ಸರ್ಕಾರವು 299 ಪದಾರ್ಥಗಳ ಮೇಲೆ ಜಿಎಸ್‌ಟಿ ಕಡಿತ ಮಾಡುವ ಮೂಲಕ ಜನಸಾಮಾನ್ಯರಿಗೆ ದೀಪಾವಳಿಯ ಸಿಹಿ ಸುದ್ದಿ ನೀಡಿದೆ. ಇದು ಪ್ರಧಾನಮಂತ್ರಿ ನರೇಂದ್ರ ಮೋದಿಯವರಿಂದ ಪ್ರಜೆಗೆ ನೀಡಲಾದ ನಿಜವಾದ ದೀಪಾವಳಿ ಉಡುಗೊರೆ” ಎಂದರು.

ಸಚಿವ ಸೋಮಣ್ಣ ಮುಂದುವರಿದು ಮಾತನಾಡಿ, ಅಕ್ಟೋಬರ್ 23ರಂದು ಕಿತ್ತೂರು ರಾಣಿ ಚೆನ್ನಮ್ಮ ಜಯಂತೋತ್ಸವವನ್ನು ಸಂಸತ್ ಆವರಣದಲ್ಲಿ ಆಚರಿಸಲಾಗುತ್ತಿದೆ. ಸಂಸತ್ ಪ್ರಾಂಗಣದಲ್ಲಿ ಚೆನ್ನಮ್ಮ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡುವ ಕಾರ್ಯಕ್ರಮವೂ ಆಯೋಜನೆಗೊಂಡಿದೆ. ಅಕ್ಟೋಬರ್ 24ರಂದು ಮೊದಲ ಬಾರಿಗೆ ಕಿತ್ತೂರು ರಾಣಿ ಚೆನ್ನಮ್ಮ ಜನ್ಮದಿನವನ್ನು ಕೇಂದ್ರ ಸರ್ಕಾರದ ಮಟ್ಟದಲ್ಲಿ ಆಚರಿಸಲಾಗುತ್ತಿದೆ ಎಂದು ತಿಳಿಸಿದ್ದಾರೆ. ಮುಂದಿನ ವರ್ಷದಿಂದ ಈ ಕಾರ್ಯಕ್ರಮವನ್ನು ಇನ್ನೂ ದೊಡ್ಡ ಪ್ರಮಾಣದಲ್ಲಿ ಹಾಗೂ ರಾಷ್ಟ್ರ ಮಟ್ಟದಲ್ಲಿ ನಡೆಸುವ ಯೋಜನೆ ಇದೆ ಎಂದರು.

ರಾಜ್ಯ ಸರ್ಕಾರದ ವಿರುದ್ಧ ಟೀಕೆ

ರಾಜ್ಯ ರಾಜಕಾರಣದ ಕುರಿತು ಮಾತನಾಡಿದ ವಿ. ಸೋಮಣ್ಣ ಅವರು ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರವನ್ನು ಗುರಿಯಾಗಿಸಿಕೊಂಡರು. “ಸಿದ್ದರಾಮಯ್ಯ ಸರ್ಕಾರಕ್ಕೆ ತಾವು ಏನು ಮಾಡುತ್ತಿದ್ದಾರೆ ಎಂಬ ಅರಿವೇ ಇಲ್ಲ. ಸಿಎಂ ಹಾಗೂ ಡಿಸಿಎಂ ಇಬ್ಬರೂ ಬೆಳಿಗ್ಗೆ ಎದ್ದು ನಾಟಕ ಮಾಡುವುದರಲ್ಲಿ ತೊಡಗಿದ್ದಾರೆ. ಜನರ ಸಮಸ್ಯೆಗಳ ಕಡೆ ಗಮನ ಕೊಡಬೇಕಾದ ಸಮಯದಲ್ಲಿ ರಾಜಕೀಯ ಪ್ರದರ್ಶನದಲ್ಲಿ ಮುಳುಗಿದ್ದಾರೆ,” ಎಂದು ಅವರು ವಾಗ್ದಾಳಿ ನಡೆಸಿದರು. ಆರ್‌ಎಸ್‌ಎಸ್ ಕುರಿತು ಸ್ಪಷ್ಟ ಅಭಿಪ್ರಾಯ ವ್ಯಕ್ತಪಡಿಸಿ, “ಆರ್‌ಎಸ್‌ಎಸ್ ಏಳಿಗೆಯನ್ನು ಕೆಲವರು ಸಹಿಸುತ್ತಿಲ್ಲ. ಆದರೆ ಸೂರ್ಯ ಮತ್ತು ಚಂದ್ರ ಇರುವ ತನಕ ಆರ್‌ಎಸ್‌ಎಸ್ ಇರುತ್ತದೆ. ನಾಟಕ ಬಿಟ್ಟು ರಾಜ್ಯದ ಅಭಿವೃದ್ಧಿಯ ಕಡೆ ಗಮನಹರಿಸಲು ಕಾಂಗ್ರೆಸ್ ನಾಯಕರು ಮುಂದಾಗಬೇಕು,” ಎಂದು ಹೇಳಿದರು.

ಮಳೆ, ನೆರೆ ಮತ್ತು ಸರ್ಕಾರದ ನಿರ್ಲಕ್ಷ್ಯ

ರಾಜ್ಯದಲ್ಲಿ ಮಳೆ ಹಾಗೂ ನೆರೆ ಪರಿಸ್ಥಿತಿ ತೀವ್ರಗೊಂಡಿದ್ದರೂ ಸರ್ಕಾರ ಸ್ಪಂದಿಸುವ ಮನೋಭಾವ ತೋರಿಸಿಲ್ಲ ಎಂದು ವಿ. ಸೋಮಣ್ಣ ಟೀಕಿಸಿದರು. ಮಳೆಯಿಂದ ರಾಜ್ಯದ ಹಲವೆಡೆ ಜನರು ನಲುಗುತ್ತಿದ್ದಾರೆ. ಆದರೆ ಸರ್ಕಾರ ಕೇವಲ ಮಾತಿನಲ್ಲಿ ಮಾತ್ರ ಸೀಮಿತವಾಗಿದೆ. ಬೆಂಗಳೂರನ್ನು ನಿರ್ಲಕ್ಷ್ಯ ಮಾಡುವುದು ಸರಿಯಲ್ಲ. ಡಿಕೆ ಶಿವಕುಮಾರ್ ಅವರು ಕೆಲಸಕ್ಕಿಂತ ಹೇಳಿಕೆಗಳಲ್ಲೇ ಹೆಚ್ಚು ತೊಡಗಿದ್ದಾರೆ ಎಂದು ಅವರು ವ್ಯಂಗ್ಯವಾಡಿದರು.

ಸೋಮಣ್ಣ ಅವರು ತಮ್ಮ ಹಿಂದಿನ ಆಡಳಿತಾವಧಿಯನ್ನು ಉಲ್ಲೇಖಿಸಿ, ಎ-ಖಾತಾ, ಬಿ-ಖಾತಾ ಸಮಸ್ಯೆಗಳಿಗೆ ಪರಿಹಾರ ನಮ್ಮ ಕಾಲದಲ್ಲೇ ಮಾಡಿದ್ದೇವೆ. ಬೆಂಗಳೂರಿನ ಅಭಿವೃದ್ಧಿಗೆ ನಾವು ದಾರಿ ತೋರಿಸಿದ್ದೇವೆ. ಈಗಿನ ಕಾಂಗ್ರೆಸ್ ಸರ್ಕಾರವು ಜನರನ್ನು ಸುಲಿಗೆ ಮಾಡುವ ಕ್ರಮಗಳನ್ನು ಮಾತ್ರ ಕೈಗೊಂಡಿದೆ,” ಎಂದು ಆರೋಪಿಸಿದರು. ಬೆಂಗಳೂರಿನ ಜನರಿಂದ ಕಾಂಗ್ರೆಸ್ ಸರ್ಕಾರ ಕೈಗೊಳ್ಳುತ್ತಿರುವ ಸುಲಿಗೆ ಕ್ರಮಗಳ ಕುರಿತು ಶೀಘ್ರದಲ್ಲೇ ಒಂದು ಸಂಪೂರ್ಣ ಪುಸ್ತಕವನ್ನು ಬಿಡುಗಡೆ ಮಾಡುವ ಯೋಜನೆ ಇದೆ ಎಂದು ಘೋಷಿಸಿದರು.

ವಿಪಕ್ಷದ ನಿಷ್ಠೆ ಮತ್ತು ಮುಂದಿನ ಹೋರಾಟ

ಸೋಮಣ್ಣ ಅವರು ತಮ್ಮ ಪಕ್ಷದ ಹೋರಾಟದ ನಿಲುವಿನ ಬಗ್ಗೆ ಮಾತನಾಡಿ, “ರಾಜ್ಯದಲ್ಲಿ ವಿಪಕ್ಷಗಳ ಹೋರಾಟ ನಡೆಯುತ್ತಿದೆ. ನಾನು ಹಿರಿಯ ನಾಯಕರ ಮಾರ್ಗದರ್ಶನದಂತೆ ಕೆಲಸ ಮುಂದುವರಿಸುತ್ತಿದ್ದೇನೆ,” ಎಂದರು. ಅವರು ಕೊನೆಯಲ್ಲಿ, “ಜನರ ಸಮಸ್ಯೆಗಳ ಪರಿಹಾರ, ರಾಜ್ಯದ ಅಭಿವೃದ್ಧಿ ಮತ್ತು ನೈತಿಕ ರಾಜಕಾರಣವೇ ನಮ್ಮ ಆದ್ಯತೆ,” ಎಂದು ಹೇಳಿದರು.