Asianet Suvarna News Asianet Suvarna News

ಯತ್ನಾಳ್ ಗಂಡಸ್ತನಕ್ಕೆ ಸವಾಲ್‌ ಹಾಕಿದ ಸಚಿವ ಶಿವಾನಂದ ಪಾಟೀಲ..!

ಗಂಡಸಾಗಿದ್ದರೆ ಯತ್ನಾಳ್ ಅವರು ವಿಜಯಪುರ ನಗರದಿಂದ ಪಕ್ಷೇತರರಾಗಿ ನಿಲ್ಲಲಿ. ನಾನೂ ಪಕ್ಷೇತರನಾಗಿ ನಿಲ್ಲುತ್ತೇನೆ. ನನಗಿಂತ‌ ಅವರು ಒಂದು ಮತ ಹೆಚ್ಚಿಗೆ ಪಡೆದರೂ ರಾಜಕೀಯ ನಿವೃತ್ತಿ ಪಡೆಯುವೆ. ಇಲ್ಲದಿದ್ದರೆ, ಅವರು ನಿವೃತ್ತರಾಗಲಿ ಎಂದು ಸವಾಲು ಹಾಕಿದ ಸಚಿವ ಶಿವಾನಂದ ಪಾಟೀಲ 

Minister Shivanand Patil Challenge to BJP MLA Basanagouda Patil Yatnal grg
Author
First Published Apr 14, 2024, 6:00 AM IST

ಬಾಗಲಕೋಟೆ(ಏ.14):  ನನ್ನ ಮಗಳ ಚುನಾವಣೆಗೆ ಸಕ್ಕರೆ ಕಾರ್ಖಾನೆಗಳಿಂದ ನಾನು ಹಣ ಕೇಳಿದ ಕುರಿತು ದಾಖಲೆ ಇದ್ದರೆ ಬಿಡುಗಡೆ ಮಾಡಿ. ಅವರು ಆರೋಪ ಸಾಬೀತುಪಡಿಸಿದರೆ ರಾಜಕಾರಣ ಬಿಡುತ್ತೇನೆ. ಒಂದು ವೇಳೆ ಸಾಬೀತು ಮಾಡದಿದ್ದರೆ ಅವರು ರಾಜಕಾರಣ ಬಿಡುತ್ತಾರಾ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ್‌ ಆರೋಪಕ್ಕೆ ಸಚಿವ ಶಿವಾನಂದ ಪಾಟೀಲ ಸವಾಲು ಹಾಕಿದರು.

ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರತಿ ಕಾರ್ಖಾನೆ ಮಾಲೀಕರಿಂದ ₹50 ಲಕ್ಷ ಹಣ ಕೇಳುತ್ತಿದ್ದಾರೆ ಎಂದು ಆರೋಪಿಸಿದ್ದೀರಿ. ರಾಜ್ಯದಲ್ಲಿ 74 ಕಾರ್ಖಾನೆಯವರು ಕಬ್ಬು ನುರಿಸಿದ್ದಾರೆ. ಅದರಲ್ಲಿ ಒಬ್ಬರೇ ಒಬ್ಬರು ನಾನು ಹಣ ಕೇಳಿದ್ದರ ಕುರಿತು ಹೇಳಿದರೆ ನಾನು ರಾಜಕೀಯದಿಂದ ನಿವೃತ್ತಿ ಹೊಂದುತ್ತೇನೆ. ಹಣ ಕೇಳಿದ್ದರ ಕುರಿತು ಹೇಳಬೇಕಾಗಿದ್ದು ಕಾರ್ಖಾನೆಯವರೇ ಹೊರತು ಇವರಲ್ಲ. ಹಣ ಕೇಳಿರುವುದನ್ನು ಅವರು ಸಾಬೀತು ಮಾಡಬೇಕು. ಇಲ್ಲವೇ ಅವರು ‌ರಾಜಕೀಯದಿಂದ ನಿವೃತ್ತರಾಗಬೇಕು ಎಂದು ಕಿಡಿ ಕಾರಿದರು.

ಬಾಗಲಕೋಟೆ ಬಿಜೆಪಿಯಲ್ಲಿ ಬಂಡಾಯ: ಪದಾಧಿಕಾರಿಗಳ ನೇಮಕ ವಿಚಾರದಲ್ಲಿ ನಾಯಕರು ಅಸಮಾಧಾನ

ಗಂಡಸಾಗಿದ್ದರೆ ಯತ್ನಾಳ್ ಅವರು ವಿಜಯಪುರ ನಗರದಿಂದ ಪಕ್ಷೇತರರಾಗಿ ನಿಲ್ಲಲಿ. ನಾನೂ ಪಕ್ಷೇತರನಾಗಿ ನಿಲ್ಲುತ್ತೇನೆ. ನನಗಿಂತ‌ ಅವರು ಒಂದು ಮತ ಹೆಚ್ಚಿಗೆ ಪಡೆದರೂ ರಾಜಕೀಯ ನಿವೃತ್ತಿ ಪಡೆಯುವೆ. ಇಲ್ಲದಿದ್ದರೆ, ಅವರು ನಿವೃತ್ತರಾಗಲಿ ಎಂದು ಮತ್ತೊಂದು ಸವಾಲು ಕೂಡ ಹಾಕಿದರು.

ಬೇರೆಯವರ ತರ ಚಿಲ್ಲರೆ ರಾಜಕಾರಣ ಮಾಡಲು ನನಗೆ ಬರುವುದಿಲ್ಲ. ಬಿಜೆಪಿಯನ್ನು ಹೆಚ್ಚು ಬೈದವರು ಯಾರಾದರೂ ಇದ್ದರೆ, ಅದು ಯತ್ನಾಳ್‌. ನನಗೂ ಮರ್ಯಾದೆ ಇದೆ, ಅವರಿಗೂ ಒಂದು ಮರ್ಯಾದೆ ಇದೆ. ಆದರೆ, ಅವರು ಕೆಲವು ಸಾರಿ ಮರ್ಯಾದೆ ಬಿಟ್ಟು ಮಾತನಾಡುತ್ತಾರೆ. ಅವರು ಅಂತಹ ಪದ ಬೇಕಾದರೆ ವಿಜಯೇಂದ್ರ, ಯಡಿಯೂರಪ್ಪಗೆ ಮಾತಾಡಿಕೊಳ್ಳಲಿ. ನಮ್ಮಂತವರಿಗೆ ಮಾತನಾಡುವ ಯೋಗ್ಯತೆ ಅವರಿಗೆ ಇಲ್ಲ. ಆ ಯೋಗ್ಯತೆ ಅವರಿಗೆ ಬರೋದು ಇಲ್ಲ. ಯತ್ನಾಳ ಹೊಂದಾಣಿಕೆ ರಾಜಕಾರಣ ಮಾಡುತ್ತ ಬಂದವರು. ಸಮಯ ಬಂದಾಗ ಅವರು ಯಾರು? ಏನು? ಅಂತ ಹೇಳುವೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ದಳಕ್ಕೆ ಯತ್ನಾಳ ಹೋಗಿರಲಿಲ್ವಾ?: 

ಬೇರೆ ಬೇರೆ ಪಕ್ಷಕ್ಕೆ ಹೋಗಿ ಬಂದ ಶಿವಾನಂದ ಪಾಟೀಲ್ ಕಾಂಗ್ರೆಸ್‌ನಲ್ಲಿದಾರೆ. ಅವರ ಸಹೋದರನ ಮಗ ಬಿಜೆಪಿಗೆ ಹೋಗಿದ್ದಾನೆ ಎಂಬ ಯತ್ನಾಳ್ ಹೇಳಿಕೆಗೆ ತಿರುಗೇಟು ನೀಡಿದ ಸಚಿವರು, ನನ್ನ ಸ್ವಂತ ಮಗನೇ ಬೇರೆ ಪಕ್ಷಕ್ಕೆ ಹೋದರೆ ನನಗೆ ಬೇಡ ಎನ್ನುವ ಅಧಿಕಾರ ಇದೆಯಾ? ನನ್ನ ಅಣ್ಣನ ಪುತ್ರ ಅಷ್ಟೇ ಅಲ್ಲ, ನನ್ನ ಮಗ, ಮಗಳು ಸಹ ಹೋದರೆ ಏನು ಮಾಡಲು ಆಗುತ್ತೆ. ಯತ್ನಾಳ್ ಜನತಾ ದಳಕ್ಕೆ ಹೋಗಿರಲಿಲ್ವಾ? ಮುಸಲ್ಮಾನರ ಮನೆಯಲ್ಲಿ ತಿಂದು ಬಂದಿಲ್ವಾ? ಎಂದು ಪ್ರಶ್ನಿಸಿದರು.

ಹುನಗುಂದ ಕ್ಷೇತ್ರಕ್ಕೆ ಸಂಯುಕ್ತಾ ಪಾಟೀಲ ಭೇಟಿ ಕುರಿತು ಪ್ರತಿಕ್ರಿಯಿಸಿದ ಸಚಿವರು, ಏ.15 ರಂದು ಸಮಾವೇಶ ಇದೆ. ಪ್ರಚಾರದ ಕುರಿತು ಒಂದು ವೇಳಾಪಟ್ಟಿ ಸಿದ್ಧಪಡಿಸಿದ್ದೇವೆ. ನಡುವೆ ಹಬ್ಬಗಳು ಬಂದಿದ್ದರಿಂದ ಹುನಗುಂದಕ್ಕೆ ಭೇಟಿ ನೀಡಲು ಸಾಧ್ಯವಾಗಿಲ್ಲ. ಈಗ ವೇಳಾಪಟ್ಟಿಯಂತೆ ಭೇಟಿ ನೀಡಲಿದ್ದೇವೆ ಎಂದರು. ಎಲ್ಲ ಕ್ಷೇತ್ರಗಳಿಗೂ ಎರಡೆರಡು ಸಾರಿ ಭೇಟಿಯಾಗಿದೆ. ಹುನಗುಂದಗೆ ಒಂದು ಬಾರಿನೂ ಆಗಿಲ್ಲ ಎಂಬ ಪ್ರಶ್ನೆಗೆ ಉತ್ತರಿಸಿ, ಅಲ್ಲಿನ ಶಾಸಕರು ಯಾವ ಸಮಯ, ಸಂದರ್ಭ ಕೊಡುತ್ತಾರೆ ಅದಕ್ಕೆ ಅನುಗುಣವಾಗಿಯೇ ಹೋಗಬೇಕಲ್ವ? ಅದರಲ್ಲೇನು ತಪ್ಪಿಲ್ಲ ಎಂದು ಹೇಳಿದರು. 

ಜನರನ್ನು ಭಾವನಾತ್ಮಕವಾಗಿ ಬ್ಲ್ಯಾಕ್‌ಮೇಲ್‌ ಮಾಡಿದ್ದೇ ಬಿಜೆಪಿ ಸಾಧನೆ: ಕಾಂಗ್ರೆಸ್ ವಾಗ್ದಾಳಿ

ನಾನೂ ಈ ಪಕ್ಷಕ್ಕೆ ಅನಿವಾರ್ಯ ಅಲ್ಲ

ವೀಣಾ ಕಾಶಪ್ಪನವರ ಮುನಿಸು ಹುನಗುಂದಗೆ ಭೇಟಿ ಕೊಡದೇ ಇರಲು ಒಂದು ಕಾರಣನಾ? ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಪದೇ ಪದೇ ವೀಣಾ ಬಗ್ಗೆ ಎಷ್ಟು ಬಾರಿ ಕೇಳ್ತಿರಿ ಎಂದು ಶಿವಾನಂದ ಪಾಟೀಲರು ಗರಂ ಆದರು. ವೀಣಾ ಬಿಟ್ಟು ಬಿಡಿ, ಕಾಂಗ್ರೆಸ್ ಇದು ಸಮುದ್ರ. ಕಾಂಗ್ರೆಸ್ ಇತಿಹಾಸದಲ್ಲಿ ಒಬ್ಬ ಪ್ರಧಾನಿಗೆ ಟಿಕೆಟ್ ಕೊಟ್ಟಿಲ್ಲ. ನಾನೂ ಈ ಪಕ್ಷಕ್ಕೆ ಅನಿವಾರ್ಯ ಅಲ್ಲ. ಸುಮ್ಮ ಸುಮ್ಮನೆ ನೀವು ಅದನ್ನ ಬಹಳ ದೊಡ್ಡದು ಮಾಡ್ತಿದೀರಿ. ಗಂಡನ ಬಿಟ್ಟು ಹೆಂಡ್ತಿ ಇರ್ತಾಳೆನ್ರಿ ಎಂದು ಮರು ಪ್ರಶ್ನೆ ಹಾಕಿದರು.

ಯತ್ನಾಳ ಏನಂದು ಆರೋಪ ಮಾಡಿದ್ದರು?

ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನಲ್ಲಿ ಇತ್ತೀಚೆಗೆ ಬಿಜೆಪಿ ಪ್ರಚಾರ ಸಭೆಯಲ್ಲಿ ಮಾತನಾಡಿದ್ದ ವಿಜಯಪುರ ಶಾಸಕ ಬಸನಗೌಡ ಪಾಟೀಲ ಯತ್ನಾಳ, ಸಕ್ಕರೆ ಸಚಿವ ಶಿವಾನಂದ ಪಾಟೀಲ ಅವರು ತಮ್ಮ ಪುತ್ರಿ ಸಂಯುಕ್ತಾ ಪಾಟೀಲ ಚುನಾವಣೆಯಲ್ಲಿ ಸ್ಪರ್ಧೆ ಮಾಡಿದ್ದಾಳೆ. ಹೀಗಾಗಿ ₹50 ಲಕ್ಷ ಹಣವನ್ನು ಪ್ರತಿಯೊಂದು ಕಾರ್ಖಾನೆಯವರು ನೀಡಬೇಕು ಎಂದು ವಸೂಲಿ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದರು. ಮಾತ್ರವಲ್ಲ, ನನಗೂ ಒಬ್ಬ ಏಜೆಂಟ್‌ ಕರೆ ಮಾಡಿ ಕೇಳಿದ. ಆದರೆ, ನಾನು ಕೊಡೋದಿಲ್ಲ ಹೋಗು ಎಂದು ಹೇಳಿದ್ದೆ ಎಂದಿದ್ದರು.

Follow Us:
Download App:
  • android
  • ios