Asianet Suvarna News Asianet Suvarna News

Karnataka Cabinet: ಮುಧೋಳಕ್ಕೆ ‘ಮಂತ್ರಿಗಿರಿ’ ಮೀಸಲು..!

ಈ ಬಾರಿ ಕೂಡಾ ಎಸ್ಸಿ ಮೀಸಲು ಕ್ಷೇತ್ರದಿಂದ ತಿಮ್ಮಾಪುರ ಅವರಿಗೆ ಸಚಿವ ಸ್ಥಾನ ದೊರೆಯುವುದು ಖಚಿತ ಎನ್ನಲಾಗುತ್ತಿದೆ. ಒಟ್ಟಿನಲ್ಲಿ ಮುಧೋಳ ಮತಕ್ಷೇತ್ರ ಮೀಸಲು(ಎಸ್ಸಿ) ಕ್ಷೇತ್ರವಾದ ನಂತರ ಸಚಿವ ಸ್ಥಾನ ದೊರೆಯುತ್ತಾ ಇರುವುದರಿಂದಲ್ಲೇ ಆ ಕ್ಷೇತ್ರ ರಾಜ್ಯದ ಗಮನ ಸೆಳೆಯುತ್ತಿದೆ.

Minister Seat for Mudhol Constituency is Fixed grg
Author
First Published May 18, 2023, 7:09 AM IST

ವಿಶ್ವನಾಥ ಮುನ್ನೋಳ್ಳಿ

ಮುಧೋಳ(ಮೇ.18):  ಬಾಗಲಕೋಟೆ ಜಿಲ್ಲೆಯ ಪ್ರತಿಷ್ಠಿತ ಹಾಗೂ ಜಿದ್ದಾಜಿದ್ದಿನ ಕ್ಷೇತ್ರವಾಗಿರುವ ಮುಧೋಳ ಮೀಸಲು(ಎಸ್ಸಿ) ರಾಜ್ಯದಲ್ಲಿ ಯಾವುದೇ ಸರ್ಕಾರ ರಚನೆಯಾದರೂ ಈ ಕ್ಷೇತ್ರಕ್ಕೆ ಮಂತ್ರಿ ಸ್ಥಾನ ಫಿಕ್ಸ್‌ ಅನ್ನುವಂತಾಗಿದೆ. ಇದೇ ಕಾರಣಕ್ಕೆ ಈ ಕ್ಷೇತ್ರವನ್ನು ಶಾಶ್ವತ ಸಚಿವ ಸ್ಥಾನದ ಕ್ಷೇತ್ರ ಎಂದು ಕರೆಯುವುದುಂಟು. ಇದೀಗ ಈ ಕ್ಷೇತ್ರದ ಶಾಸಕ ಆರ್‌.ಬಿ.ತಿಮ್ಮಾಪುರ ಅವರಿಗೂ ಸಚಿವ ಸ್ಥಾನ ಸಿಗುವ ನಿರೀಕ್ಷೆಗಳು ಇವೆ. ಹೀಗಾಗಿ ಅವರ ಅಭಿಮಾನಿಗಳಲ್ಲಿ ಸಂತಸ ಮನೆ ಮಾಡಿದೆ.

1952ರಿಂದ 15 ಸಾರ್ವತ್ರಿಕ ವಿಧಾನಸಭಾ ಚುನಾವಣೆ ಎದುರಿಸಿರುವ ಮುಧೋಳ ಕ್ಷೇತ್ರದಲ್ಲಿ ಇಲ್ಲಿವರೆಗೂ ಕಾಂಗ್ರೆಸ್‌ ಪಕ್ಷವೇ ಪಾರಮ್ಯ ಮೆರೆದಿದೆ. ನಾಲ್ಕು ಬಾರಿ ಮಾತ್ರ ಬಿಜೆಪಿ ಅಧಿಕಾರಕ್ಕೆ ಬಂದಿದೆ. ಉಳಿದಂತೆ ಬೇರೆ ಪಕ್ಷಗಳು ಅಧಿಕಾರ ಅನುಭವಿಸಿವೆ. 1957ರಲ್ಲಿ ಕಾಂಗ್ರೆಸ್‌ನಿಂದ ಹೀರಾಲಾಲ್‌ ಪ್ರಥಮ ಬಾರಿಗೆ ಗೆಲವು ಕಂಡಿದ್ದರು. 2023ರಲ್ಲಿ ಆರ್‌.ಬಿ.ತಿಮ್ಮಾಪುರ ಅವರು ಗೆಲವು ಸಾಧಿಸಿದ್ದಾರೆ.

ಹಿಂದೂ ಮಂತ್ರ ಜಪ ಬಿಟ್ಟರೆ ಬಿಜೆಪಿಗರಿಗೆ ಬೇರೇನೂ ಗೊತ್ತಿಲ್ಲ: ತಿಮ್ಮಾಪೂರ

1978ರಲ್ಲಿ ಮೀಸಲು ಕ್ಷೇತ್ರ:

1978ರಲ್ಲಿ ಮುಧೋಳ ವಿಧಾನಸಭೆ ಮತಕ್ಷೇತ್ರ ಎಸ್ಸಿ ಮೀಸಲು ಕ್ಷೇತ್ರವಾಯಿತು. ಮೊದಲ ಬಾರೀ ಮೀಸಲಿ ಕ್ಷೇತದಿಂದ ಜಯವಂತ ಕಾಳೆ ಕಾಂಗ್ರೆಸ್‌ನಿಂದ ಸ್ಪರ್ಧಿಸಿ ಗೆಲವು ಕಂಡರು. ನಂತರ ಅಂದರೆ 1983ರ ಚುನಾವಣೆಯಲ್ಲಿ ಕಟ್ಟೀಮನಿ ಅಶೋಕ ಅವರು ಕಾಂಗ್ರೆಸ್‌ನಿಂದ ಜಯ ಸಾಧಿಸಿದರು. ಹೀಗೆ ಮೀಸಲು ಕ್ಷೇತ್ರವಾದ ನಂತರ ಹಾವು ಏಣಿಯಾಟ ಮುಂದುವರೆಯಿತು. ಆದರೆ, 1985ರ ಚುನಾವಣೆಯಲ್ಲಿ ಜನತಾ ಪಾರ್ಟಿಯಿಂದ ಸ್ಪರ್ಧಿಸಿದ್ದ ಭೀಮಪ್ಪ ಜಮಖಂಡಿ ಕಾಂಗ್ರೆಸ್‌ ಗೆಲುವಿನ ಓಟಕ್ಕೆ ಕಡಿವಾಣ ಹಾಕಿದರು. ನಂತರ ನಡೆದ 1989ರ ಚುನಾವಣೆಯಲ್ಲಿ ಆರ್‌.ಬಿ.ತಿಮ್ಮಾಪುರ ಅವರು ಕಾಂಗ್ರೆಸ್‌ನಿಂದ ಸ್ಪರ್ಧೆ ಮಾಡಿ ವಿಜಯಮಾಲೆ ತಮ್ಮದಾಗಿಸಿಕೊಂಡು ಅತೀ ಚಿಕ್ಕ ವಯಸ್ಸಿನಲ್ಲೇ ಶಾಸಕ ಸ್ಥಾನ ಪಡೆದ ಕೀರ್ತಿಗೆ ಪಾತ್ರರಾದರು. 1994ರ ಚುನಾವಣೆಯಲ್ಲಿ ಜೆಡಿಯು ಮೂಲಕ ಸ್ಪರ್ಧೆ ಮಾಡಿದ್ದ ಗೋವಿಂದ ಕಾರಜೋಳ ಅವರು ಗೆದ್ದು ಬೀಗಿದರು. ತದನಂತರ 1999ರಲ್ಲಿ 439 ಮತಗಳ ಅಂತರದಿಂದ ಗೋವಿಂದ ಕಾರಜೋಳ ಅವರನ್ನು ತಿಮ್ಮಾಪುರ ಅವರು ಸೋಲಿಸಿ ವಿಧಾನಸಭೆ ಪ್ರವೇಶ ಮಾಡಿದರು. ಇದಾದ ನಂತರ ಅಂದರೆ 2004ರಿಂದ ಮುಧೋಳ ಮೀಸಲು ಕ್ಷೇತ್ರದಲ್ಲಿ ಬಿಜೆಪಿ ಅಧಿಪತ್ಯ ಸ್ಥಾಪನೆಗೊಂಡಿರು.

ಸಚಿವ ಸ್ಥಾನ ಪಕ್ಕಾ:

ಗೋವಿಂದ ಎಂ. ಕಾರಜೋಳ 2004ರಿಂದ ಮುಧೋಳ ಕ್ಷೇತ್ರದಿಂದ ಸತತವಾಗಿ ಆಯ್ಕೆಯಾದರು. ಆದರೆ, 2023ರಲ್ಲಿ ಸೋಲುಂಡರು. 2004ರಲ್ಲಿ ವಿರೋಧ ಪಕ್ಷದ ನಾಯಕರಾಗಿಯೂ ಕಾರ್ಯ ನಿರ್ವಹಣೆ ಮಾಡಿದರು. 2006-2007ರಲ್ಲಿ ಆಹಾರ ಮತ್ತುನಾಗರಿಕ ಸರಬರಾಜು ಖಾತೆ ಸಚಿವರಾದರು. 2008ರಲ್ಲಿ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬಂದ ಬಳಿಕ ಸಣ್ಣ ನೀರಾವರಿ ಖಾತೆ ಸಚಿವರಾದರು. ಕನ್ನಡ ಮತ್ತು ಸಂಸ್ಕೃತಿ, ಮಾಹಿತಿ ಹಾಗೂ ಪ್ರವಾಸೋದ್ಯಮ ಸಚಿವರಾದರು. ಸಮಾಜ ಕಲ್ಯಾಣ ಸಚಿವರಾಗಿಯೂ ಕಾರ್ಯ ನಿರ್ವಹಿಸಿದರು.2018ರ ಚುನಾವಣೆಯಲ್ಲಿ ಜಯಗಳಿಸಿದರು. 2019ರಲ್ಲಿ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬಂದ ಬಳಿಕ ಉಪ ಮುಖ್ಯಮಂತ್ರಿಯಾದರು. ಲೋಕೋಪಯೋಗಿ, ಸಮಾಜ ಕಲ್ಯಾಣ ಇಲಾಖೆ ಸಚಿವರಾದರು. ನಂತರ ಬಂದ ಸರ್ಕಾರದಲ್ಲಿ ಜಲಸಂಪನ್ಮೂಲ ಸಚಿವರಾದರು.

Bagalkote: ವೇದಿಕೆಯಲ್ಲೇ ಎಡವಿದ ಸಿದ್ದರಾಮಯ್ಯ: ಬೀಳುತ್ತಿದ್ದ ಮಾಜಿ ಸಿಎಂರನ್ನ ಹಿಡಿದ ಬೆಂಬಲಿಗರು

ಆರ್‌.ಬಿ.ತಿಮ್ಮಾಪುರ ಮುಧೋಳ ಕ್ಷೇತ್ರದಿಂದ ಮೊದಲ ಬಾರಿಗೆ 1989ರಲ್ಲಿ ಶಾಸಕರಾಗಿದ್ದರು. 1999ರಲ್ಲಿ ಗೆಲುವು ಸಾಧಿಸಿದ್ದ ತಿಮ್ಮಾಪುರಗೆ ಕೆಎಚ್‌ಡಿಸಿಯ ನಿಗಮ ಮಂಡಳಿಯ ಅಧ್ಯಕ್ಷ ಸ್ಥಾನ ನೀಡಲಾಗಿತ್ತು. 2013ರ ವಿಧಾನಸಭೆ ಚುನಾವಣೆಯಲ್ಲಿ ಸೋತರು. ಆದರೂ ಅವನ್ನು ವಿಪ ಸದಸ್ಯರನ್ನಾಗಿ ಸಚಿವ ಸ್ಥಾನ ನೀಡಲಾಯಿತು. 3 ಬಾರಿ ಮುಧೋಳ ಕ್ಷೇತ್ರದಿಂದ ಆಯ್ಕೆಯಾದ ತಿಮ್ಮಾಪುರ ಅವರು ಎಸ್‌.ಎಂ.ಕೃಷ್ಣ, ಸಿದ್ದರಾಮಯ್ಯ ಹಾಗೂ ಸಮ್ಮಿಶ್ರ ಸರ್ಕಾರದ ಕುಮಾರಸ್ವಾಮಿ ಸಂಪುಟದಲ್ಲಿ ಅಬಕಾರಿ ಸಚಿವರಾಗಿದ್ದರು. 

ಈ ಬಾರಿ ಕೂಡಾ ಎಸ್ಸಿ ಮೀಸಲು ಕ್ಷೇತ್ರದಿಂದ ತಿಮ್ಮಾಪುರ ಅವರಿಗೆ ಸಚಿವ ಸ್ಥಾನ ದೊರೆಯುವುದು ಖಚಿತ ಎನ್ನಲಾಗುತ್ತಿದೆ. ಒಟ್ಟಿನಲ್ಲಿ ಮುಧೋಳ ಮತಕ್ಷೇತ್ರ ಮೀಸಲು(ಎಸ್ಸಿ) ಕ್ಷೇತ್ರವಾದ ನಂತರ ಸಚಿವ ಸ್ಥಾನ ದೊರೆಯುತ್ತಾ ಇರುವುದರಿಂದಲ್ಲೇ ಆ ಕ್ಷೇತ್ರ ರಾಜ್ಯದ ಗಮನ ಸೆಳೆಯುತ್ತಿದೆ.

Follow Us:
Download App:
  • android
  • ios