ಬರುವ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲು ಯಾವ ಮಟ್ಟಕ್ಕಾದರೂ ಇಳಿಯಬಹುದು. ಹೀಗಾಗಿ ಪಕ್ಷದ ಕಾರ್ಯಕರ್ತರು ಎಚ್ಚರಿಕೆಯಿಂದ ಇರಬೇಕೆಂದು ಕಾರ್ಮಿಕ ಸಚಿವರು ಹಾಗೂ ಬೀದರ್ ಲೋಕಸಭೆ ಕ್ಷೇತ್ರದ ಅಭ್ಯರ್ಥಿ ಆಯ್ಕೆಯ ವೀಕ್ಷಕ ಸಂತೋಷ ಲಾಡ್‌ ನುಡಿದರು. 

ಬೀದರ್‌ (ನ.08): ಬರುವ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲು ಯಾವ ಮಟ್ಟಕ್ಕಾದರೂ ಇಳಿಯಬಹುದು. ಹೀಗಾಗಿ ಪಕ್ಷದ ಕಾರ್ಯಕರ್ತರು ಎಚ್ಚರಿಕೆಯಿಂದ ಇರಬೇಕೆಂದು ಕಾರ್ಮಿಕ ಸಚಿವರು ಹಾಗೂ ಬೀದರ್ ಲೋಕಸಭೆ ಕ್ಷೇತ್ರದ ಅಭ್ಯರ್ಥಿ ಆಯ್ಕೆಯ ವೀಕ್ಷಕ ಸಂತೋಷ ಲಾಡ್‌ ನುಡಿದರು. ಅವರು ಬರುವ ಲೋಕಸಭೆ ಚುನಾವಣೆಯ ಬೀದರ್‌ ಕ್ಷೇತ್ರದ ಅಭ್ಯರ್ಥಿ ಆಯ್ಕೆ ಕುರಿತು ಪಕ್ಷದ ಮುಖಂಡರೊಂದಿಗೆ ಚರ್ಚಿಸಲು ನಗರದ ಎ.ಕೆ. ಕಾಂಟಿನೆಂಟಲ್‌ನಲ್ಲಿ ನಡೆದ ಪಕ್ಷದ ಪ್ರಮುಖರ ಸಭೆಯಲ್ಲಿ ಮಾತನಾಡಿ, ಪ್ರಧಾನಿ ಮೋದಿ ಅವರ ಮನ್‌ ಕೀ ಬಾತ್‌, ವಾಟ್ಸಪ್‌, ಫೇಸ್ಬುಕ್‌ ಸೇರಿದಂತೆ ಇನ್ನಿತರ ಪ್ರಚಾರ ಮಾಡಲು ಸುಮಾರು 15 ಸಾವಿರ ಜನರು ವಿವಿಧ ರೀತಿಯಲ್ಲಿ ಹಾಗೂ ವಿವಿಧ ಏಜೆನ್ಸಿಗಳಾಗಿ ಕೆಲಸ ಮಾಡುತ್ತಿದ್ದಾರೆ. 

ಹೀಗಾಗಿ ಬರುವ ದಿನಗಳಲ್ಲಿ ನಮ್ಮ ಪಕ್ಷದ ಕಾರ್ಯಕರ್ತರು ಬಹಳ ಎಚ್ಚರಿಕೆಯಿಂದ ಇದ್ದು, ನಮ್ಮ ಸರ್ಕಾರದ ಯೋಜನೆಗಳನ್ನು ಜನರ ಮನೆ ಬಾಗಿಲಿಗೆ ತೆಗೆದುಕೊಂಡು ಹೋಗಿ ತಿಳಿಸುವ ಕೆಲಸ ಮಾಡಬೇಕಿದೆ ಎಂದರು. ಡಾ. ಅಂಬೇಡ್ಕರ್‌ ಅವರು ಸಂವಿಧಾನದಲ್ಲಿ ಹಿಂದು ಸೇರಿದಂತೆ ಎಲ್ಲರಿಗೂ ಸಮಾನ ಅಧಿಕಾರ ನೀಡಿದ್ದಾರೆ. ಅವರು ಎಲ್ಲ ಮಹಿಳೆಯರಿಗೆ ಸಮಾನ ಆಸ್ತಿ ನೀಡಬೇಕೆಂಬುವದನ್ನು ಆಗಲೇ ಹೇಳಿದ್ದಾರೆ, ಅದನ್ನು ಕಾಂಗ್ರೆಸ್‌ ಪಕ್ಷ ಮಾಡಿದೆ. ಬಿಜೆಪಿಯವರು ಹಿಂದುಗಳಿಗಾಗಿ ಏನು ಮಾಡಿಲ್ಲ ಕೇವಲ ಹಿಂದು ಎಂಬ ಶಬ್ದ ಮಾತ್ರ ಬಳಸುತ್ತಾರೆ ಎಂದು ಅಣಕಿಸಿದರು.

ಶಿವಾಜಿ ಮಹಾರಾಜರನ್ನು ಮುಸ್ಲಿಂ ವಿರೋಧಿಯಾಗಿದ್ದರು ಎಂದು ಬಿಂಬಿಸಲಾಗುತ್ತಿದೆ. ಇಂತಹ ಸುಳ್ಳು ಹೇಳುವವರಿಗೆ ಹಾಗೂ ಧರ್ಮ ಧರ್ಮದ ಮಧ್ಯೆ ಕೋಮುವಾದ ಬೆಳೆಸುವ ಬಿಜೆಪಿ ಪಕ್ಷಕ್ಕೆ ಪಾಠ ಕಲಿಸಬೇಕಾಗಿದೆ ಎಂದರು. ಪಕ್ಷದ ಆದೇಶದಂತೆ ಬೀದರ್‌ ಲೋಕಸಭೆಯ ಆಭ್ಯರ್ಥಿ ಆಯ್ಕೆ ಕುರಿತು ಪಕ್ಷದ ಪ್ರಮುಖರೊಂದಿಗೆ ಚರ್ಚೆ ಮಾಡಿ, ಅಭಿಪ್ರಾಯ ಪಡೆದು, ಪಕ್ಷದ ವರಿಷ್ಠರಿಗೆ ಮಾಹಿತಿ ಮುಟ್ಟಿಸಲು ಬಂದಿದ್ದೇನೆ. ಹೀಗಾಗಿ ಎಲ್ಲರೂ ಮುಕ್ತವಾಗಿ ಚರ್ಚೆ ನಡೆಸಿ, ತಮ್ಮ ಅಭಿಪ್ರಾಯಗಳನ್ನು ತಿಳಿಸಿರಿ ಎಂದರು.

ಕಾಂಗ್ರೆಸ್ ವಿರುದ್ಧ ತೆಲಂಗಾಣದಲ್ಲಿ ಪ್ರಚಾರ: ಕೋಡಿಹಳ್ಳಿ ಚಂದ್ರಶೇಖರ್

ಸಭೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ, ಪೌರಾಡಳಿತ ಸಚಿವ ರಹೀಮ್‌ ಖಾನ್‌, ಶಾಸಕರಾದ ಅರವಿಂದ ಅರಳಿ, ಭೀಮರಾವ್‌ ಪಾಟೀಲ್‌, ಬಿ.ಆರ್‌. ಪಾಟೀಲ್‌, ಪಕ್ಷದ ಜಿಲ್ಲಾಧ್ಯಕ್ಷ ಬಸವರಾಜ ಜಾಬಶೆಟ್ಟಿ, ವಿಜಯಸಿಂಗ್‌, ನರಸಿಂಗರಾವ್‌ ಸೂರ್ಯವಂಶಿ, ಕೆ. ಪುಂಡಲೀಕರಾವ್‌, ಗೀತಾ ಚಿದ್ರಿ, ಮೀನಾಕ್ಷಿ ಸಂಗ್ರಾಮ, ಗುರಮ್ಮ ಸಿದ್ದಾರೆಡ್ಡಿ, ಸುಭಾಷ ರಾಠೋಡ, ಅಮೃತರಾವ್‌ ಚಿಮಕೋಡೆ, ನಗರಸಭೆ ಅಧ್ಯಕ್ಷ ಮಹ್ಮದ ಗೌಸ್‌, ಸಾಗರ ಖಂಡ್ರೆ, ಫರೀದ ಖಾನ್, ಜಿಲ್ಲೆಯ ಬ್ಲಾಕ್ ಕಾಂಗ್ರೆಸ್‌ ಅಧ್ಯಕ್ಷರು ಇದ್ದರು.