Asianet Suvarna News Asianet Suvarna News

ಗ್ಯಾರಂಟಿ ಯೋಜನೆ ವಿಫಲಗೊಳಿಸಲು ಅಕ್ಕಿ ನೀಡದ ಕೇಂದ್ರ ಸರ್ಕಾರ: ಸಚಿವ ತಿಮ್ಮಾಪುರ

ರಾಜ್ಯದ ಬಡವರಿಗೆ ನೀಡುವ ಅನ್ನಭಾಗ್ಯ ಯೋಜನೆಗಾಗಿ ಅಕ್ಕಿ ಪೂರೈಕೆಯಲ್ಲಿ ಕೇಂದ್ರ ಸರ್ಕಾರ ದ್ವೇಷದ ರಾಜಕೀಯ ಮಾಡುತ್ತಿದೆ ಎಂದು ಅಬಕಾರಿ ಸಚಿವ ಆರ್‌.ಬಿ.ತಿಮ್ಮಾಪುರ ಆರೋಪಿಸಿದರು. 

Minister RB Timmapur Slams On Central Govt Over Rice Issue gvd
Author
First Published Jul 1, 2023, 11:59 PM IST

ಲೋಕಾಪುರ (ಜು.01): ರಾಜ್ಯದ ಬಡವರಿಗೆ ನೀಡುವ ಅನ್ನಭಾಗ್ಯ ಯೋಜನೆಗಾಗಿ ಅಕ್ಕಿ ಪೂರೈಕೆಯಲ್ಲಿ ಕೇಂದ್ರ ಸರ್ಕಾರ ದ್ವೇಷದ ರಾಜಕೀಯ ಮಾಡುತ್ತಿದೆ ಎಂದು ಅಬಕಾರಿ ಸಚಿವ ಆರ್‌.ಬಿ.ತಿಮ್ಮಾಪುರ ಆರೋಪಿಸಿದರು. ಪಟ್ಟಣದ ತಾಪಂ ಮಾಜಿ ಸದಸ್ಯ ರಫೀಕ ಭೈರಕದಾರ ಇವರ ಮನೆಗೆ ಸೌಹಾರ್ದಯುತ ಭೇಟಿ ನೀಡಿ ಮುಸ್ಲಿಂ ಸಮಾಜ ಬಾಂಧವರಿಗೆ ಬಕ್ರೀದ್‌ ಹಬ್ಬದ ಶುಭಾಶಯಗಳನ್ನು ತಿಳಿಸಿ ಮಾತನಾಡಿ, ಹಸಿದವರಿಗೆ ಅನ್ನಭಾಗ್ಯ ನೀಡಲು ಕಾಂಗ್ರೆಸ್‌ ಪ್ರಾಮಾಣಿಕವಾಗಿ ಪ್ರಯತ್ನ ಮಾಡುತ್ತಿದೆ. ಮುಂದಿನ ದಿನಮಾನಗಳಲ್ಲಿ 10 ಕೆಜಿ ಅಕ್ಕಿ ನೀಡಲು ಬದ್ಧರಿದ್ದೇವೆ ಎಂದರು. ಕೇಂದ್ರದ ಬಿಜೆಪಿ ನೇತೃತ್ವದ ಸರ್ಕಾರ ಆಹಾರ ನಿಗಮದಿಂದ ರಾಜ್ಯಕ್ಕೆ ಅಗತ್ಯ ಪ್ರಮಾಣದ ಅಕ್ಕಿಯನ್ನು ನೀಡದೇ ಕಾಂಗ್ರೆಸ್‌ ಆಡಳಿತದ ಚುನಾವಣಾ ಭರವಸೆಯನ್ನು ವಿಫಲಗೊಳಿಸಲು ಸಂಚು ನಡೆಸುತ್ತಿದೆ. 

ಗ್ಯಾರಂಟಿ ಯೋಜನೆ ಜಾರಿಗೊಳಿಸುವುದು ಸರ್ಕಾರದ ಮೊದಲ ಆದ್ಯತೆಯಾಗಿದೆ ಎಂದರು. ಈ ವೇಳೆ ಕಾಂಗ್ರೆಸ್‌ ಮುಖಂಡರಾದ ಬಿಡಿಸಿಸಿ ಬ್ಯಾಂಕ್‌ ಮಾಜಿ ಉಪಾಧ್ಯಕ್ಷ ಶಿವಾನಂದ ಉದಪುಡಿ, ಗುರುರಾಜ ಉದಪುಡಿ, ಉದಯ ಸಾರವಾಡ, ರಾಜು ಭಾಗವಾನ, ವೆಂಕಣ್ಣ ಗಿಡ್ಡಪ್ಪನವರ, ವಿನಯ ತಿಮ್ಮಾಪುರ, ಎಂ.ಎಂ. ಹುಂಡೇಕಾರ, ಗೋವಿಂದಪ್ಪ ಕೌಲಗಿ, ಬೀರಪ್ಪ ಮಾಯಣ್ಣವರ, ಕೃಷ್ಣಾ ಹೂಗಾರ, ಸುಲ್ತಾನ ಕಲಾದಗಿ, ಬಸು ಹೊಸಕೊಟಿ, ರಂಗನಾಥ ಚಿಪ್ಪಲಕಟ್ಟಿ, ಅಸ್ಲಂ ಭೈರಕದಾರ, ನಬಿ ಇಂಗಳಗಿ, ಸೈಯದ ಗುದಗಿ, ಕುಮಾರ ಸಿರಗುಂಪಿ ಅನೇಕರು ಇದ್ದರು.

ಸಮಾಜ ಶೋಷಿತ ವರ್ಗದ ಬಗ್ಗೆ ವೈದ್ಯರಿಗೆ ಅಂತಃಕರಣ ಹೆಚ್ಚಾಗಬೇಕು: ವೈದ್ಯರ ದಿನಾಚರಣೆಯಲ್ಲಿ ಸಿಎಂ ಸಿದ್ದರಾಮಯ್ಯ ಕರೆ

ಬಡವರ ಅನ್ನಕ್ಕೆ ಕನ್ನ ಹಾಕಿದ್ದರಿಂದ ಪ್ರಧಾನಿ ಮೋದಿ ಇಮೇಜ್‌ ಡೌನ್‌: ಮೋದಿ ಇಮೇಜ್‌ ಡೆವಲಪಮೆಂಟ್‌ ಪ್ರಯತ್ನ ಬಿಜೆಪಿಯಲ್ಲಿ ನಡೆದಿದೆ. ಆದರೆ, ಮೋದಿ ಇಮೇಜ್‌ ಭಾರೀ ಡೌನ್‌ ಆಗಿದೆ. ಅದು ಬಿಜೆಪಿ ರಾಜ್ಯ ನಾಯಕರಿಗೆ ಗೊತ್ತಿಲ್ಲ. ಯಾವಾಗ ಬಡವರ ಅನ್ನಕ್ಕೆ ಕಣ್ಣು ಹಾಕಿದರೋ, ಬಡವರಿಗೆ ಅನ್ನ ಕೊಡಲು ಅಡೆತಡೆ ಮಾಡಿದರೋ, ಅದಾನಿ, ಅಂಬಾನಿ ಅಂತವರ ಸಾಲ ಕಡಿಮೆ ಮಾಡಿದಾಗಿನಿಂದ ಮೋದಿ ಇಮೇಜ್‌ ಭಾರೀ ಡೌನ್‌ ಆಗಿದೆ ಎಂದು ಸಚಿವ ಆರ್‌.ಬಿ.ತಿಮ್ಮಾಪುರ ಅವರು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಆದರೆ, ಇದೆಲ್ಲ ನಮ್ಮ ರಾಜ್ಯ ನಾಯಕರಿಗೆ ಪರಿವೇ ಇಲ್ಲ. ಹಾಗಾಗಿ ಮೋದಿ ಮುಂದಿಟ್ಟುಕೊಂಡು ಹೋದಲೆಲ್ಲ ಸೋಲೆ ಆಗುತ್ತದೆ. ಮೋದಿ ಕರ್ನಾಟಕದಲ್ಲಿ ಎಷ್ಟು ಓಡಾಡಿದ್ದಾರೆ? ಎಷ್ಟುಬಿಜೆಪಿ ಸೀಟ್‌ ಗೆದ್ದಿದೆ ಅವರೇ ಹೇಳಲಿ. ನಮ್ಮ ದೇಶದ ಪ್ರಧಾನಿ ಅಂದ್ರೆ ನಾನು ಮಾತನಾಡಬಾರದು. ಆದರೆ ಮೋದಿಯವರು ಸುಳ್ಳನ್ನು ಹುಟ್ಟು ಹಾಕಿ, ಸುಳ್ಳಿನಿಂದ ಬೆಳೆದವರು. ಅವರು ನಮ್ಮ ದೇಶದ ಪ್ರಧಾನಿ ಅನ್ನೋದು ನಮಗೆ ನೋವಿದೆ ಎಂದು ತಿಳಿಸಿದರು.

ಯತ್ನಾಳ ಹೇಳಿಕೆಗೆ ತಿರುಗೇಟು: ಕಾಂಗ್ರೆಸ್‌ನವರು ಜಂಗಿ ಕುಸ್ತಿ ಹಿಡಿದಿದ್ದಾರೆ ಎಂದು ಹೇಳಿರುವ ಶಾಸಕ ಯತ್ನಾಳ ಅವರ ಹೇಳಿಕೆಗೆ ತಿರುಗೇಟು ನೀಡಿದ ಸಚಿವ ತಿಮ್ಮಾಪುರ, ಯತ್ನಾಳ ಅವರು ತಮ್ಮ ಪಾರ್ಟಿಯ ಎಲ್ಲರ ಜೊತೆಗಿನ ಕುಸ್ತಿ ಈಗಾಗಲೇ ಮುಗಿಸಿದ್ದಾರೆ. ಯಡಿಯೂರಪ್ಪ ಜೊತೆಗೆ ಕುಸ್ತಿ ಹಿಡಿದಿದ್ರು, ಅದು ಸಹ ಇದೀಗ ಮುಗಿದಿದೆ ಎಂದು ವ್ಯಂಗ್ಯವಾಡಿದರು. ಶಾಸಕ ಯತ್ನಾಳ ಅವರು ತಮ್ಮ ಪಕ್ಷದ ನಾಯಕರ ಜೊತೆಗೆ ಒಂದೊಂದು ರೌಂಡ್‌ ಕುಸ್ತಿ ಮುಗಿಸಿಕೊಂಡು ಬರುತ್ತಿದ್ದಾರೆ. ಅದೇ ಪ್ರವೃತ್ತಿ ಕಾಂಗ್ರೆಸ್‌ನಲ್ಲಿದೆ ಎಂಬ ಭಾವನೆ ಯತ್ನಾಳ ಅವರಿಗಿದೆ. ತಾವು ಹೇಗೆ ನಡೆದುಕೊಂಡಿದ್ದಾರೋ ಹಾಗೇ ಜಗತ್ತು ಇದೆ ಅಂತ ಅಂದುಕೊಂಡಿದ್ದಾರೆ. ಆದರೆ ಅವರ ಭಾವನೆಗೆ ತಕ್ಕ ಹಾಗೆ ನಮ್ಮ (ಕಾಂಗ್ರೆಸ್‌) ಪಕ್ಷ ಇಲ್ಲ ಎಂದು ತಿಳಿಸಿದರು.

ಸಂಸದ ಮುನಿಸ್ವಾಮಿ ಹೇಳಿಕೆಗೆ ಕಿಮ್ಮತ್ತಿನ ಬೆಲೆ ಇಲ್ಲ: ಶಾಸಕ ನಂಜೇಗೌಡ

ಕಾಂಗ್ರೆಸ್‌ನವರು ಚಪ್ಪಲಿಲೇ ಹೊಡೆದಾಡ್ತಾರೆ ಎಂಬ ಯತ್ನಾಳ ಹೇಳಿಕೆಗೆ ಆಕ್ರೋಶ ವ್ಯಕ್ತಪಡಿಸಿದ ಸಚಿವರು, ಅವರ ಸಂಸ್ಕೃತಿ, ಸಂಸ್ಕಾರ ಹಂಗಿದೆ. ಅವರ ಮಾತು, ಅವರ ನಾಲಿಗೆಯಲ್ಲಿ ಬರುವ ಶಬ್ದಗಳು ಅವರ ಸಂಸ್ಕಾರ, ಸಂಸ್ಕೃತಿ ತೋರಿಸುತ್ತವೆ ಎಂದರು. ಬೊಮ್ಮಾಯಿ ಸೇರಿ ಹಲವು ಬಿಜೆಪಿ ತಂಡಗಳು ರಾಜ್ಯಾದ್ಯಂತ ಓಡಾಡುತ್ತಿದ್ದಾರೆ. ಮೋದಿ ಸಾಧನೆ ಬಗ್ಗೆ ಸಮಾವೇಶ ಮಾಡುತ್ತಿದ್ದಾರೆ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಖಾಲಿ ಇದಾರಲ್ಲ. ಹಾಗಾಗಿ ಅಡ್ಡಾಡ್ತಿದಾರೆ. ಮೋದಿ ಸಾಧನೆ ಏನು? ಅಂಬಾನಿ, ಅದಾನಿ ಸಾಲ ತೀರಿಸಿದ್ದು ಸಾಧನೆನಾ ಎಂದು ಪ್ರಶ್ನಿಸಿಸಿದರು.

Follow Us:
Download App:
  • android
  • ios