* ಕಾಮಾಲೆ ಕಣ್ಣಿಂದ ನೋಡಿದರೆ ಸಾಧನೆ ಎಲ್ಲಿ ಕಾಣುತ್ತೆ?* ಹಾಲಿ ಶಾಸಕನ ಟಿಕೆಟ್ ತಪ್ಪಿಸಲು ಆತ ಯತ್ನ: ಪಟ್ಟಣ್* ಹೀಗೆ ಮಾಡಿ ಎಲ್ಲವನ್ನು ಹಾಳು ಮಾಡ್ತಿದ್ದಾರೆ
ಬೆಂಗಳೂರು(ಜ.30): ವಿಧಾನಸಭೆ ವಿರೋಧಪಕ್ಷದ ನಾಯಕ ಸಿದ್ದರಾಮಯ್ಯ(Siddaramaiah) ಅವರಿಗೆ ಎಲ್ಲದಕ್ಕೂ ಒಂದು ಪ್ರತಿಕ್ರಿಯೆ ನೀಡಬೇಕು ಎಂಬ ಚಟ ಹಾಗೂ ಹೆಚ್ಚು ಬಜೆಟ್ ಮಂಡಿಸಿದ್ದೇನೆ ಎಂಬ ಅಹಂ ಇದೆ. ಹೀಗಾಗಿ ಎಲ್ಲವನ್ನೂ ಕಾಮಾಲೆ ಕಣ್ಣಿನಿಂದ ನೋಡುವ ಅವರು ಬಸವರಾಜ ಬೊಮ್ಮಾಯಿ(Basavaraj Bommai) ಅವರ ಸರ್ಕಾರದ ಸಾಧನೆಗಳನ್ನು ವಿನಾಕಾರಣ ಟೀಕಿಸಿದ್ದಾರೆ ಎಂದು ಕಂದಾಯ ಸಚಿವ ಆರ್. ಅಶೋಕ್(R Ashok) ತಿರುಗೇಟು ನೀಡಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಸವರಾಜ ಬೊಮ್ಮಾಯಿ ಅವರು ತಮಗೆ ದೊರೆತ ಆರು ತಿಂಗಳಲ್ಲಿ ಉತ್ತಮವಾಗಿ ಕೆಲಸ ಮಾಡಿದ್ದಾರೆ. ಸಿದ್ದರಾಮಯ್ಯ ಐದು ವರ್ಷ ಆಡಳಿತ ನಡೆಸಿದರೂ ಯಾವುದೇ ಜನಪರ ಕೆಲಸ ಮಾಡಿಲ್ಲ. ಹೀಗಾಗಿಯೇ ಜನರು ಕಾಂಗ್ರೆಸ್(Congress) ಪಕ್ಷವನ್ನು ತಿರಸ್ಕರಿಸಿ ಕೇವಲ 78 ಸ್ಥಾನ ನೀಡಿದರು. ಅದರಲ್ಲೂ 17 ಮಂದಿ ಕಾಂಗ್ರೆಸ್ ಬಿಟ್ಟು ಹೊರ ಬಂದರು ಎಂದು ಕಿಡಿ ಕಾರಿದರು.
ಕಾಂಗ್ರೆಸ್ ಶಾಸಕರು ಪಕ್ಷ ಬಿಟ್ಟ ಬಗ್ಗೆ ಕಾಂಗ್ರೆಸ್ ಸತ್ಯ ಶೋಧನಾ ಸಮಿತಿಯಿಂದ ತನಿಖೆ ಮಾಡಿಸಬೇಕಿತ್ತು. ಸಮಿತಿ ಮಾಡಿ ಏಕೆ ಕಾಂಗ್ರೆಸ್ ಬಿಟ್ಟರು ಎಂಬುದು ತಿಳಿಯಬೇಕಿತ್ತು. ಇದೀಗ ಹಿರಿಯ ನಾಯಕ ಸಿ.ಎಂ. ಇಬ್ರಾಹಿಂ ಕೂಡ ಪಕ್ಷಕ್ಕೆ ವಿದಾಯ ಹೇಳಿದ್ದಾರೆ. ಈಗಲಾದರೂ ಕಾಂಗ್ರೆಸ್ ಬುದ್ಧಿ ಕಲಿಯಲಿ ಎಂದರು.
Padma Awards : ಗುಲಾಂ ನಬಿಗೆ ಪದ್ಮ ಪ್ರಶಸ್ತಿ, ಹಿರಿಯ ಕಾಂಗ್ರೆಸಿಗರಲ್ಲೇ ಮುಸುಕಿನ ಗುದ್ದಾಟ!
ಕಾಂಗ್ರೆಸ್ನಲ್ಲಿ ಸಿದ್ದರಾಮಯ್ಯ ಹಾಗೂ ಡಿ.ಕೆ. ಶಿವಕುಮಾರ್(DK Shivakumar) ಶೋ ನಡೆಯುತ್ತಿದೆ. ಅವರ ನಡುವೆ ಅಧಿಕಾರಕ್ಕಾಗಿ ಸ್ಪರ್ಧೆ ಏರ್ಪಟ್ಟಿದೆ. ಹೊಟೇಲ್ಗಳ ಮುಂದೆ ಇಂದಿನ ವಿಶೇಷ ಎಂದು ಬೋರ್ಡ್ ಇರುವ ಹಾಗೆಯೇ ಕಾಂಗ್ರೆಸ್ನಲ್ಲಿ ಸಿದ್ದರಾಮಯ್ಯ-ಡಿ.ಕೆ. ಶಿವಕುಮಾರ್ ನಡುವೆ ನಿತ್ಯ ಇಂದಿನ ವಿಶೇಷ ಎಂದು ವಿಶೇಷ ಶೋ ನಡೆಯುತ್ತದೆ ಎಂದು ವ್ಯಂಗ್ಯವಾಡಿದರು.
ಡಿಕೆಶಿ ಬಗ್ಗೆ ಸಿದ್ದು, ಪಟ್ಟಣ್ ಪಿಸುಮಾತು: ಭಾರಿ ಚರ್ಚೆ
ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರ ನಡವಳಿಕೆ ಕುರಿತು ಕಾಂಗ್ರೆಸ್ ಮುಖಂಡರ ನಡುವಿನ ಪಿಸು ಮಾತು ಬಹಿರಂಗಗೊಳ್ಳುವ ಘಟನೆ ಶನಿವಾರ ಮತ್ತೊಮ್ಮೆ ನಡೆದಿದೆ. ಈ ಬಾರಿ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಹಾಗೂ ಮಾಜಿ ಶಾಸಕ ಅಶೋಕ್ ಪಟ್ಟಣ್(Ashok Pattan) ನಡುವೆ ಹಾಲಿ ಶಾಸಕರಿಗೆ ಟಿಕೆಟ್ ತಪ್ಪಿಸುವ ಪ್ರಯತ್ನಗಳಿಗೆ ಶಿವಕುಮಾರ್ ಅವರು ಇಂಬು ನೀಡುತ್ತಿದ್ದಾರೆ ಎಂಬರ್ಥ ಬರುವ ಮಾತುಕತೆ ನಡೆದಿದ್ದು, ಚರ್ಚೆಗೆ ಒಳಗಾಗಿದೆ.
BJP Government: ಬೊಮ್ಮಾಯಿ 6 ತಿಂಗಳ ಸಾಧನೆ ಪಟ್ಟಿ ಪೊಳ್ಳು: ಸಿದ್ದು
ಶನಿವಾರ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ತಮ್ಮ ನಿವಾಸದಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯ ಆರಂಭಕ್ಕೂ ಮುನ್ನ ಮಾಜಿ ಶಾಸಕ ಅಶೋಕ್ ಪಟ್ಟಣ್ ಹಾಗೂ ಸಿದ್ದರಾಮಯ್ಯ ನಡುವೆ ಈ ಮಾತುಕತೆ ನಡೆದಿದೆ. ವಿಷಯ ಪ್ರಸ್ತಾಪಿಸುವ ಅಶೋಕ್ ಪಟ್ಟಣ್ ಅವರು, ‘ಪುಲಕೇಶಿ ನಗರ ಕ್ಷೇತ್ರದ ಶಾಸಕ ಅಖಂಡ ಶ್ರೀನಿವಾಸಮೂರ್ತಿ ಅವರಿಗೆ ಮಾಜಿ ಮೇಯರ್ ಸಂಪತ್ರಾಜ್ ಮತ್ತಿತರರು ಕಿರುಕುಳ(Harassment) ನೀಡುತ್ತಿದ್ದು, ಅವರಿಗೆ ಟಿಕೆಟ್ ನೀಡದಂತೆ ಒತ್ತಡ ನಿರ್ಮಾಣ ಮಾಡುತ್ತಿದ್ದಾರೆ’ ಎಂಬ ವಿಚಾರವನ್ನು ಸಿದ್ದರಾಮಯ್ಯ ಅವರ ಗಮನಕ್ಕೆ ತರುತ್ತಾರೆ. ಅದಕ್ಕೆ ಸಿದ್ದರಾಮಯ್ಯ ಅವರು ‘ಅವರು ಮಾಡಿದರೆ ಮಾಡಲಿ ಬಿಡಿ, ಅಖಂಡ ಹಾಲಿ ಸದಸ್ಯ, ಆತ ಸೋಲುತ್ತಾರೆ ಎಂದಾಗ ಮಾತ್ರ ಟಿಕೆಟ್ ತಪ್ಪುತ್ತದೆ’ ಎಂದು ಹೇಳುತ್ತಾರೆ.
ಇದಕ್ಕೆ ಪಟ್ಟಣ್ ಅವರು, ‘ಇದನ್ನೇ ನಾನು ಅಖಂಡ ಬೆಂಬಲಿಗರಿಗೆ ಹೇಳಿದೆ. ಆದರೆ ಅವರು ಕಿರುಕುಳದ ಬಗ್ಗೆ ಹೇಳುತ್ತಾರೆ. ಟಿಕೆಟ್ ತಪ್ಪಿಸುವುದಕ್ಕೆ ‘‘ಅವನ’’ ಬೆಂಬಲವಿದೆ ಅದು ಹೇಗೆ ಸಾಧ್ಯ?’ ಎಂದು ಅವರು ಹೇಳುತ್ತಾರೆ.
ಈ ಮಾತಿಗೆ ಸಿದ್ದರಾಮಯ್ಯ ಅವರು, ‘ಎಲ್ಲ ಹಾಳು ಮಾಡುತ್ತಾ ಇದ್ದಾರೆ ಹೀಗೆ ಮಾಡಿ... ಅಷ್ಟೇ’ ಎಂದು ಕೊಂಚ ಅಸಮಾಧಾನ ವ್ಯಕ್ತಪಡಿಸುತ್ತಾರೆ.
