ಕೇವಲ ಹಿಜಾಬ್, ಹಲಾಲ್ ರಾಜಕಾರಣದಿಂದ ಜನರನ್ನು ಮರುಳು ಮಾಡಲು ಯತ್ನಿಸಿದ ಬಿಜೆಪಿಗೆ ರಾಜ್ಯದ ಪ್ರಬುದ್ಧ ಜನರು ತಕ್ಕ ಉತ್ತರ ಕೊಟ್ಟು ಕೂರಿಸಿದ್ದಾರೆ ಎಂದು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ಟೀಕಿಸಿದ್ದಾರೆ. 

ಕಲಬುರಗಿ (ಜು.31): ತಮ್ಮ ಹಿಂದಿನ ಪ್ರಣಾಳಿಕೆಯ ಭರವಸೆಗಳನ್ನು ಈಡೇರಿಸದೆ ಮಂಕುಬೂದಿ ಎರಚಿದ ಬಿಜೆಪಿ ತಮ್ಮ ಬಜೆಟ್ ನಲ್ಲಿನ ಘೋಷಣೆಗಳನ್ನೂ ಸಹ ಬಾಕಿ ಉಳಿಸಿ ಹೋಗಿರುವ ಸಂಗತಿ ಜನರ ಮುಂದಿದೆ, ಕೇವಲ ಹಿಜಾಬ್, ಹಲಾಲ್ ರಾಜಕಾರಣದಿಂದ ಜನರನ್ನು ಮರುಳು ಮಾಡಲು ಯತ್ನಿಸಿದ ಬಿಜೆಪಿಗೆ ರಾಜ್ಯದ ಪ್ರಬುದ್ಧ ಜನರು ತಕ್ಕ ಉತ್ತರ ಕೊಟ್ಟು ಕೂರಿಸಿದ್ದಾರೆ ಎಂದು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ಟೀಕಿಸಿದ್ದಾರೆ.

Add Asianetnews Kannada as a Preferred SourcegooglePreferred

ತಮ್ಮ ಎಕ್ಸ್ ಖಾತೆಯಲ್ಲಿ ಬಿಜೆಪಿ ವಿರುದ್ದ ಹರಿಹಾಯ್ದಿರುವ ಖರ್ಗೆ, ರಾಜ್ಯದ ಜನತೆ ಬಿಜೆಪಿಯನ್ನು ಹೀನಾಯವಾಗಿ ತಿರಸ್ಕರಿಸಿ ಪ್ರಗತಿಪರ ಕಾಂಗ್ರೆಸ್ ಸರ್ಕಾರವನ್ನು ಬೆಂಬಲಿಸಲು ಬಿಜೆಪಿಯ ಡೋಂಗಿತನದ ಆಡಳಿತ, ಸುಳ್ಳುಗಳೇ ಕಾರಣ. ಅಧಿಕಾರದಾಹಿ ಬಿಜೆಪಿ ಜನಾದೇಶಕ್ಕೆ ವಿರುದ್ಧವಾಗಿ, ಶಾಸಕರನ್ನು ಖರೀದಿಸಿ ಹಿಂಬಾಗಿಲ ಮೂಲಕ ಅಧಿಕಾರ ಪಡೆದು ಜನರ ಕಣ್ಣಿಗೆ ಮಣ್ಣೆರಚುವ ಕೆಲಸವನ್ನು ಮಾತ್ರ ಮಾಡಿತ್ತು.

ಹಿಂದೆ ಕಾಂಗ್ರೆಸ್ ಸರ್ಕಾರ ಅಸ್ತಿತ್ವದಲ್ಲಿದ್ದಾಗ ವೈಟ್ ಟ್ಯಾಪಿಂಗ್, ಡಿಕೆ ರವಿ, ಗಣಪತಿ ಆತ್ಮಹತ್ಯೆ, ಪರೇಶ್ ಮೇಸ್ತ ಸಾವು ಮುಂತಾದ ಪ್ರಕರಣಗಳಿಗೆ ಸಾವಿರ ಸುಳ್ಳುಗಳ ಸರಮಾಲೆ ಕಟ್ಟಿ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಕಡಿಮೆ ಸೀಟು ಪಡೆಯುವಂತೆ ಮಾಡಿದ್ದರು. ಆ ಪ್ರಕರಣಗಳ ಸತ್ಯಾಸತ್ಯತೆ ಈಗ ಜನತೆಯ ಮುಂದಿದೆ.

ಗ್ರಾಮೀಣ ರಸ್ತೆ ಅಭಿವೃದ್ಧಿಗೆ 'ಪ್ರಗತಿಪಥ' ಯೋಜನೆ: ಸಚಿವ ಪ್ರಿಯಾಂಕ್ ಖರ್ಗೆ

ಈಗ ವಿರೋಧ ಪಕ್ಷದಲ್ಲಿ ಕುಳಿತು ಮತ್ತೊಮ್ಮೆ ಸುಳ್ಳು ಆರೋಪಗಳು, ಪ್ರತಿಭಟನೆ, ಪಾದಯಾತ್ರೆಯ ಮೂಲಕ ಮತ್ತೊಮ್ಮೆ ಜನರ ಕಣ್ಣಿಗೆ ಮಣ್ಣೆರಚಲು ಹೊರಟಿದೆ. ಜನತೆ ಬಿಜೆಪಿಗರ ಸುಳ್ಳುಗಳನ್ನು ನಂಬಬಾರದು ಎನ್ನುವುದಕ್ಕೆ ಹಿಂದಿನ ಪ್ರಕರಣಗಳ ಸತ್ಯಾಂಶಗಳು & ಈ ಅಂಕಿ ಅಂಶಗಳೇ ಸಾಕ್ಷಿಯಾಗಿವೆ ಎಂದು ಪ್ರಿಯಾಂಕ್ ಹರಿಹಾಯ್ದಿದ್ದಾರೆ.