Asianet Suvarna News Asianet Suvarna News

ಸಚಿವ ಪ್ರಿಯಾಂಕ್‌ ಖರ್ಗೆಗೆ ಬೆದರಿಕೆ ಪತ್ರ: ಎನ್ಕೌಂಟರ್ ಮಾಡೋದಾಗಿ ಧಮಕಿ

ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಸಚಿವ ಪ್ರಿಯಾಂಕ್‌ ಖರ್ಗೆಗೆ ಬೆದರಿಕೆ ಪತ್ರ ಬಂದಿದೆ. ಸದರಿ ಪತ್ರದಲ್ಲಿ ಎನ್ಕೌಂಟರ್ ಮಾಡೋದಾಗಿ ಪ್ರಿಯಾಂಕ್‌ ಖರ್ಗೆಯವರಿಗೆ ಧಮಕಿ.

Minister Priyank Kharge received a letter threatening his life on the eve of Lok Sabha elections gvd
Author
First Published Mar 29, 2024, 5:38 AM IST

ಕಲಬುರಗಿ (ಮಾ.29): ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಸಚಿವ ಪ್ರಿಯಾಂಕ್‌ ಖರ್ಗೆಗೆ ಬೆದರಿಕೆ ಪತ್ರ ಬಂದಿದೆ. ಸದರಿ ಪತ್ರದಲ್ಲಿ ಎನ್ಕೌಂಟರ್ ಮಾಡೋದಾಗಿ ಪ್ರಿಯಾಂಕ್‌ ಖರ್ಗೆಯವರಿಗೆ ಧಮಕಿ ಹಾಕಿದ್ದಲ್ಲದೆ ಇಡೀ ಪತ್ರದ (ಇನ್‌ಲ್ಯಾಂಡ್‌ ಲೇಟರ್‌) ತುಂಬಾ ಅವರ ಪರಿವಾರದ ಪುರುಷ, ಮಹಿಳಾ ಸದಸ್ಯರ ಹೆಸರು ಪ್ರಸ್ತಾಪಿಸಿ, ಅವರ ಜಾತಿಯನ್ನು ಹೇಳುತ್ತ ಅವಾಚ್ಯವಾಗಿ ನಿಂದಿಸಲಾಗಿದೆ. ಅಂಚೆ ಇಲಾಖೆ ಅಂತರ್‌ ದೇಸೀಯ ಪತ್ರ (ಇನ್‌ಲ್ಯಾಂಡ್‌ ಲೆಟರ್‌) ಬಳಸಿ ಅನಾಮಧೇಯರು ಇದೇ ಫೆ.15ರಂದು ಸದರಿ ಪತ್ರ ಬರೆದಿದ್ದಾರೆ. ಈ ಪತ್ರದಲ್ಲಿ ಪ್ರಿಯಾಂಕ್‌ರ ಸಚಿವಾಲಯದ ಕೋಣೆ ವಿಳಾಸವಿದೆ. 

ಹಿಂದುಗಡೆ ಅಸ್ಪಷ್ಟವಾಗಿರುವಂತಹ ಕೈ ಬರಹದ ಹೆಸರು ಇದ್ದು ಗುಲ್ಬರ್ಗ ಎಂದು ನಮೂದಾಗಿದೆ. ಅಂಚೆ ಇಲಾಖೆ ಸೀಲ್‌ ಕೂಡಾ ಕಲಬುರಗಿಯದ್ದೇ ಆಗಿರೋದು ಸ್ಪಷ್ಟವಾಗಿದೆ. ಈ ಪತ್ರ ಸಚಿವ ಖರ್ಗೆಯವರ ವಿಧಾನಸೌಧ ಕಚೇರಿಗೆ ಇದೇ ಮಾ.13ರಂದು ತಲುಪಿದೆ. ಈ ಪತ್ರ ತಲುಪುತ್ತಿದ್ದಂತೆಯೇ ಚುರುಕಾಗಿರುವ ಖರ್ಗೆಯವರ ಆರ್‌ಡಿಪಿಆರ್‌ ಸಚಿವಾಲಯದ ಸಿಬ್ಬಂದಿ ಸುದ್ದಿ ಸಚಿವರಿಗೂ ತಲುಪಿಸಿದ್ದಾರೆ. ನಂತರ ಸಚಿವರ ವಿಶೇಷ ಕರ್ತವ್ಯಾಧಿಕಾರಿ ಕೇಶವಮೂರ್ತಿಯವರು ಪತ್ರದೊಂದಿಗೆ ವಿಧಾನಸೌಧ ಪೊಲೀಸ್‌ ಠಾಣೆಗೆ ಹೋಗಿ ಸಚಿವರು, ಅವರ ಪೋಷಕರು, ಪರಿವಾರದ ಮಹಿಳಾ ಸದಸ್ಯರನ್ನು ಪ್ರಸ್ತಾಪಿಸಿ ಅವಾಚ್ಯವಾಗಿ ನಿಂದಿಸಲಾಗಿದೆ. ರಾಜ್ಯದ ಸಿಎಂ ಅವರನ್ನೂ ಪತ್ರದಲ್ಲಿ ನಿಂದಿಸಿರೋದರಿಂದ ತಕ್ಷಣ ತಪ್ಪಿತಸ್ಥರನನು ಪತ್ತೆಹಚ್ಚಿ ಕಾನೂನು ಕ್ರಮ ಕೈಗೊಳ್ಳುವಂತೆ ಕೋರಿ ಮಾ.13ರಂದೇ ಸಂಜೆ ದೂರು ದಾಖಲಿಸಿದ್ದಾರೆ.

ಡಿಎನ್ಎ ಟೆಸ್ಟ್ ಮಾಡಿಸಿದ್ರೆ ಕುಟುಂಬ ರಾಜಕಾರಣ ಬಯಲು: ಸಚಿವ ಪ್ರಿಯಾಂಕ್‌ ಖರ್ಗೆ

ಬಿಜೆಪಿ ವಿರುದ್ಧ ಗಂಭೀರ ಆರೋಪ: ಇಂದು ಕಾಂಗ್ರೆಸ್‌ ಕಚೇರಿಯಲ್ಲಿ ತುರ್ತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಆರ್‌ಡಿಪಿಆರ್‌ ಖಾತೆ ಸಚಿವ ಪ್ರಿಯಾಂಕ್‌ ಖರ್ಗೆಯವರು ತಮಗೆ ಬಂದಿರುವ ಜೀವ ಬೆದರಿಕೆ, ಎನ್‌ಕೌಂಟರ್‌ ಮಾಡೋದಾಗಿ ಧಮಕಿ ಇರುವಂತಹ ಇನ್‌ಲ್ಯಾಂಡ್‌ ಪತ್ರದ ಪ್ರತಿಗಳನ್ನು ಮಾಧ್ಯಮದವರಿಗೆ ತೋರಿಸಿದರಲ್ಲದೆ ಇದರ ಹಿಂದೆ ಬಿಜೆಪಿ ಹಾಗೂ ಸಂಘ ಪರಿವಾರದ ಮನುವಾದಿ ಮನಸ್ಸುಗಳೇ ಇವೆ ಎಂದು ಬಲವಾದಂತಹ ಶಂಕೆ ಹೊರಹಾಕಿದರು. ಗಲಭೆ ಸೃಷ್ಟಿ ಮಾಡಿ ಚುನಾವಣೆ ಮಾಡಬೇಕು ಅಂತಿದ್ದಾರೆ. ನನ್ನ ಹೆಣ ಬೀಳಿಸಿಯಾದ್ರೂ ಚುನಾವಣೆ ಗೆಲ್ಲುವ ಪ್ಲಾನ್ ಮಾಡುತ್ತಿದ್ದಾರೆ ಎಂದು ಬಿಜೆಪಿ ವಿರುದ್ಧ ಸಚಿವ ಪ್ರಿಯಾಂಕ್ ಖರ್ಗೆ ಗಂಭೀರ ಆರೋಪ ಮಾಡಿದರು.

ಮುಂಚೆ 3 ಬಾರಿ ಜೀವ ಬೆದರಿಕೆ ಕರೆಗಳು ಬಂದಿದ್ದು ದೂರು ದಾಖಲಿಸಿರುವೆ. ಈಗ ಜೀವ ಬೆದರಿಕೆಯ ಲಿಖಿತ ಪತ್ರವೇ ಬಂದಿದೆ. ಅದರಲ್ಲಿ ನನ್ನನ್ನು ಎನ್ಕೌಂಟರ್ ಮಾಡುವುದಾಗಿ ಬೆದರಿಕೆ ಹಾಕಲಾಗಿದೆ. ಪರಿವಾರದ ಸದಸ್ಯರ ಬಗ್ಗೆ ಅವಹೇಳನಕಾರಿಯಾಗಿ ಬರೆದಿದ್ದಾರೆ. ಜಾತಿ ಪ್ರಸ್ತಾಪಿಸಿ ನಿಂದಿಸಿದ್ದಾರೆಂದು ದೂರಿದರು. ನೀವೇ (ಬಿಜೆಪಿ) ಈ ಚುನಾವಣೆಯಲ್ಲಿ ಗೊಂದಲ ಸೃಷ್ಟಿ ಮಾಡುತ್ತಿದ್ದೀರಿ. ಗೊಂದಲ ಸೃಷ್ಟಿಸಿ ಕಾನೂನು ಸುವ್ಯವಸ್ಥೆ ಹಾಳು ಮಾಡುತ್ತಿದ್ದೀರಿ. ಗಲಭೆ ಸೃಷ್ಟಿ ಮಾಡಿ ಚುನಾವಣೆ ಮಾಡಬೇಕು ಅಂತಿದ್ದೀರಿ. ನನ್ನ ಸಾವು ಬಯಸುತ್ತಿದ್ದೀರಿ, ನನ್ನ ಹೆಣ ಬೀಳಿಸಿಯಾದರೂ ಚುನಾವಣೆ ಗೆಲ್ಲಬೇಕು ಎಂದು ಕುಳಿತಿದ್ದೀರಿ. 

ಅದಕ್ಕೇ ಸ್ಥಳೀಯ ಸಂಸದರು ಪದೇ ಪದೇ ಕಾನೂನು ಸುವ್ಯವಸ್ಥೆ ಹಾಳಗಿದೆ ಎಂದು ದೂರುತತಿದ್ದಾರೆ. ಇವೆಲ್ಲ ನೋಡಿದರೆ ಅವರ ಪ್ಲಾನ್‌ ಸುವ್ಯವಸ್ಥೆ ಹಾಳು ಮಾಡಿ ಚುನಾವಣೆ ಗೆಲ್ಲೋದೇ ಆಗಿರುವಂತಿದೆ ಎಂದು ದೂರಿದರು. ಪಂಚಾಮೃತದಿಂದ ಪೂಜೆ ಮಾಡಿದರೂ ನಿನ್ನ ಜಾತಿ ಬೇರೆಯಾಗುವುದಿಲ್ಲ. ಎಂತಹ ವೇಷ ಭೂಷಣ ಹಾಕಿದರೂ ನಿನ್ನ ಜಾತಿ ಬದಲಾಗುವುದಿಲ್ಲ. ಮಂತ್ರಿಯಾಗು, ರಾಜನಾಗೂ, ನಿನ್ನ ಸೊಕ್ಕು ನಿಮ್ಮ ಜಾತಿಯವರ ಓಣಿಯಲ್ಲಿ ನಡೆಯುತ್ತೆ ಎಂದು ಪತ್ರದಲ್ಲಿ ಅಶ್ಲೀಲ ಪದ ಬಳಸಿದ್ದಾರೆ. ಖಾಕಿಯಾದರೂ, ಖಾದಿಯಾದರೂ, ಯಾರಿಂದಲಾದರೂ ನಿನ್ನನ್ನು ಎನ್ಕೌಂಟರ್ ಮಾಡುವುದು ಸತ್ಯ ಎಂದು ಪತ್ರದಲ್ಲಿ ಬರೆಯಲಾಗಿದೆ ಎಂದು ಸುದ್ದಿಗಗಾರರ ಸಮ್ಮುಖದಲ್ಲಿ ತಮಗೆ ಬಂದ ಪತ್ರದ ಆಯ್ದ ಸಾಲುಗಳನ್ನು ಸಚಿವ ಪ್ರಿಯಾಂಕ್‌ ಓದಿದರು.

ಬಿಜೆಪಿಯವರಿಗೆ ಖರ್ಗೆ ಪರಿವಾರವನ್ನ, ಅದರಲ್ಲೂ ನನ್ನನ್ನು ರಾಜಕೀಯವಾಗಿ ಎದುರಿಸಲು ಆಗುತ್ತಿಲ್ಲ. ನನ್ನ ಹೆಸರು ಹೇಳದೆ ಅವರಿಗೆ ತಿಂದ ಅನ್ನ ಪಚನವಾಗುತ್ತಿಲ್ಲ. ವಿನಾಕಾರಣ ನನ್ನನ್ನು ಟೀಕಿಸಿ ಮಾತನಾಡುತ್ತಾರೆ. ನಾನು ಇದ್ದದ್ದು ಇದ್ದಹಾಗೆ ಹೇಳಿದರೆ ಅವರಿಗೆ ಕಿರಿಕಿರಿ ಆಗೋದಾದರೆ ವಿಷಯ ಸಂಬಂಧಿಸಿ ಮಾತನಾಡಲಿ, ಅದನ್ನು ಬಿಟ್ಟು ನನಗೆ ವೈಯಕ್ತಿಕವಾಗಿ ಟೀಕಿಸುತ್ತ ಚಾರಿತ್ರ್ಯ ವಧೆಗೆ ಬಿಜೆಪಿಗರು ಕಳೆದ 3 ವರ್ಷದಿಂದ ಅದೇ ಕೆಲಸ ಮಾಡುತ್ತಿದ್ದಾರೆಂದು ಉದಾಹರಣೆ ಸಮೇತ ವಿವರಿಸಿದರು. ಹೀಗಾಗೇ ವೈಯಕ್ತಿಕವಾಗಿ ನನ್ನ ಅವಹೇಳನ ಮಾಡಲು ಮುಂದಾಗಿ ಬೇರೆ ರೀತಿಯ ಪ್ಲಾನ್‌ ರೂಪಿಸುತ್ತಿರುವಂತಿದೆ. ವೈಯಕ್ತಿಕ ಟೀಕೆಗಳಿಗೆ ನಾನು ಹೆದರೋದಿಲ್ಲ. ಜನಾಶೀರ್ವಾದದಿಂದ ನಾನು ರಾಜಕೀಯದಲ್ಲಿ ಮೇಲೆ ಬಂದವನು. ಇವರೆಲ್ಲರ ಗೊಡ್ಡು ಬೆದರಿಕೆಗಳಿಗೆ ಸೊಪ್ಪು ಹಾಕೋನಲ್ಲವೆಂದು ಪ್ರಿಯಾಂಕ್‌ ಬಿಜೆಪಿಗೆ ತಿರುಗೇಟು ನೀಡಿದರು.

ಸಚಿವ ಪ್ರಿಯಾಂಕ್‌ ಖರ್ಗೆ ಮನೆಗೆ ಬಿಜೆಪಿ ಮುತ್ತಿಗೆ ಯತ್ನ

ಚಿಂಚೋಳಿ ಸಂಸದರು ಎಂದು ಕಲಬುರಗಿ ಸಂಸದ ಡಾ. ಉಮೇಶ ಜಾಧವ್‌ರಿಗೆ ಗೇಲಿ ಮಾಡಿದ ಖರ್ಗೆ, ನಾನು ಬಳೆ ತೊಟ್ಟುಕೊಂಡಿಲ್ಲ, ಆಖಾಡದಲ್ಲಿ ರೆಡಿಯಿದ್ದೇನೆ ಎಂದು ಸಂಸದ ಉಮೇಶ್ ಜಾದವ್ ಅವರೇ ಹೇಳುತ್ತಾರೆ. ನನಗೆ ಬಂದಿರುವ ಈ ಜೀವ ಬೆದರಿಕೆ ಪತ್ರಕ್ಕೆ ನಮ್ಮ ಸಂಸದರೇ ಉತ್ತರ ನೀಡಬೇಕು. ನೇರವಗಿ ಮನುವಾದಿಗಳೇ ಬೇದರಿಕೆ ಹಾಕುತ್ತಿದ್ದಾರೆ ಎಂದು ಪ್ರಿಯಾಂಕ್‌ ದೂರಿದರು. ಇಡಿ ಐಟಿ, ಇಲೆಕ್ಷನ್‌ ಕಮೀಷನ್‌ ಗಳೇ ಬಿಜೆಪಿಯಲ್ಲಿ ಸ್ಟಾರ್‌ ಪ್ರಚಾರರಾಗಿದ್ದಾರೆಂದ ಲೇವಡಿ ಮಾಡಿದ ಖರ್ಗೆ ವೈಯಕ್ತಿಕ ಸೇಡಿನ ರಾಜಕೀಯ, ವೈಯಕ್ತಿಕ ಪರಿವಾರದ ನಿಂದನೆ ಯಾರಿಗೂ ಶೋಭೆ ತಾರದು ಅನ್ನೋದನ್ ಬಿಜೆಪಿ ಅರಿಯಲಿ ಎಂದು ಖರ್ಗೆ ಹೇಳಿದರು.

Follow Us:
Download App:
  • android
  • ios