ದೇಶದಲ್ಲಿ ಸಿಲಿಂಡರ್ ಅಭಾವಕ್ಕೆ ಪ್ರಧಾನಿ ನರೇಂದ್ರ ಮೋದಿ ಮತ್ತು ಅಮೇರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನಡುವಿನ ಆತ್ಮೀಯ ಸ್ನೇಹವೇ ಇಂದಿನ ಪರಿಸ್ಥಿತಿಗೆ ಪ್ರಮುಖ ಕಾರಣವಾಗಿದೆ ಎಂದು ಸಚಿವ ಎನ್ ಎಸ್ ಬೋಸರಾಜು ಅವರು ಹೇಳಿದರು.

ಕೊಪ್ಪಳ (ಮಾ.20): ದೇಶದಲ್ಲಿ ಸಿಲಿಂಡರ್ ಅಭಾವಕ್ಕೆ ಟ್ರಂಪ್ ಮೋದಿ ಸ್ನೇಹವೇ ಕಾರಣ ಎಂದು ಸಚಿವ ಎನ್ ಎಸ್ ಬೋಸರಾಜು ಅವರು ಹೇಳಿದರು. ತಾಲೂಕಿನ ಮುನಿರಾಬಾದ್‌ನಲ್ಲಿ ಸುದ್ದಿಗಾರರ ಜೊತೆ ಮಾತನಾಡಿ, ದೇಶದಲ್ಲಿ ಉಂಟಾಗಿರುವ ಎಲ್‌ಪಿಜಿ ಸಿಲಿಂಡರ್ ಅಭಾವದ ಬಗ್ಗೆ ಕೇಂದ್ರ ಸರ್ಕಾರದ ವಿದೇಶಾಂಗ ನೀತಿಯನ್ನು ತೀವ್ರವಾಗಿ ಟೀಕಿಸಿ, ಪ್ರಧಾನಿ ನರೇಂದ್ರ ಮೋದಿ ಮತ್ತು ಅಮೇರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನಡುವಿನ ಆತ್ಮೀಯ ಸ್ನೇಹವೇ ಇಂದಿನ ಪರಿಸ್ಥಿತಿಗೆ ಪ್ರಮುಖ ಕಾರಣವಾಗಿದೆ.

ದೇಶದ ಹಲವು ರಾಜ್ಯಗಳಲ್ಲಿ ಈಗಾಗಲೇ ಎಲ್‌ಪಿಜಿ ಸಿಲಿಂಡರ್ ಕೊರತೆ ಉಂಟಾಗಿದ್ದು, ಈ ಸಂಬಂಧ ಮುಖ್ಯಮಂತ್ರಿ ಕೇಂದ್ರ ಸರ್ಕಾರಕ್ಕೆ ಪತ್ರ ಬರೆದಿದ್ದಾರೆ ಎಂದರು. ನಾವು ಏನಾದರೂ ಮೋದಿ ವಿರುದ್ದ ಮಾತನಾಡಿದರೆ, ಮೋದಿ ವಿರುದ್ಧ ಮಾತನಾಡುತ್ತಿದ್ದೀರಿ ಎಂದು ಹೇಳುತ್ತಾರೆ. ಮೋದಿಯವರು ಟ್ರಂಪ್ ಜೊತೆ ಅತಿಯಾಗಿ ಹತ್ತಿರವಾಗಿರುವುದರಿಂದ, ಅಮೇರಿಕಾ ನಮ್ಮ ಮೇಲೆ ಪ್ರಭಾವ ಬೀರುತ್ತಿದೆ.

ಟ್ರಂಪ್ ಜೊತೆಗಿನ ಈ ಸ್ನೇಹದಿಂದಲೇ ಭಾರತಕ್ಕೆ ಇಂತಹ ಸಂಕಷ್ಟ ಎದುರಾಗಿದೆ ಎಂದರು. ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿದ್ದಾಗ ಅಮೇರಿಕಾ, ರಷ್ಯಾ ಸೇರಿದಂತೆ ಹಲವಾರು ದೇಶಗಳ ಜೊತೆ ಉತ್ತಮ ಸಂಬಂಧ ಇತ್ತು. ಚೀನಾ ಮತ್ತು ಪಾಕಿಸ್ತಾನ ಹೊರತುಪಡಿಸಿ, ಬೇರೆ ರಾಷ್ಟ್ರಗಳ ಜೊತೆ ಸಹಕಾರ ಉತ್ತಮವಾಗಿತ್ತು. ಆದರೆ ಈಗಿನ ವಿದೇಶಾಂಗ ನೀತಿಯಿಂದ ದೇಶದ ಸ್ಥಿತಿ ಹದಗೆಟ್ಟಿದೆ ಎಂದು ಆರೋಪಿಸಿದರು.

ಮೋದಿ ಅವರು ಟ್ರಂಪ್ ಅವರನ್ನು ಬೆಂಬಲಿಸುವ ರೀತಿಯಲ್ಲಿ ನಡೆದುಕೊಂಡಿದ್ದು, ಅವರ ಚುನಾವಣೆಯಲ್ಲಿಯೂ ಭಾಗವಹಿಸಿದ್ದರು. ಮೊದಲಿನಂತೆ ಸಮತೋಲನದ ವಿದೇಶಾಂಗ ನೀತಿ ಇದ್ದಿದ್ದರೆ, ಇಂತಹ ಪರಿಸ್ಥಿತಿ ಎದುರಾಗುತ್ತಿರಲಿಲ್ಲ ಎಂದು ಹೇಳಿದರು.

ಈಗ ರಿಪೇರಿ ಕಾರ್ಯ ನಡೆದಿದೆ

ಬಸಾಪುರ ಬಳಿ ತುಂಗಭದ್ರಾ ಎಡದಂಡೆ ನಾಲೆ ಒಡೆದಿದೆ. ಅಧಿಕಾರಿಗಳ ನಿರ್ಲಕ್ಷ್ಯ ಎದ್ದು ಕಾಣುತ್ತಿದೆ. ಈ ಕುರಿತು ಪರಿಶೀಲಿಸಿ ವರದಿ ನೀಡಲು ಸೂಚಿಸಲಾಗಿದೆ ಎಂದು ತುಂಗಭದ್ರಾ ಕಾಲುವೆ ಒಡೆದಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಬೋಸರಾಜ್ ಹೇಳಿದರು. ಕುಡಿವ ನೀರಿಗಾಗಿ ಬಿಟ್ಟ ನೀರು, ಈಗ ರಿಪೇರಿ ಕಾರ್ಯ ನಡೆದಿದೆ. ತಜ್ಞರು ಹಳೆಯ ಅಧಿಕಾರಿ ಸ್ಥಳಕ್ಕೆ ಭೇಟಿ ನೀಡಲಿದ್ದಾರೆ. ನಾಳೆಗೆ ಕಾಲುವೆಯಿಂದ ನೀರು ಬಿಡಲು ಸಿದ್ದತೆ ಮಾಡಲಾಗಿದೆ. ಕಾಲುವೆಯ ಒಡೆದ ಸ್ಥಳದಲ್ಲಿ ಮರಳು ಬ್ಯಾಗ್ ಹಾಕಿ 1000-1500 ಕ್ಯೂಸೆಕ್ ಬಿಡಲು ಸಿದ್ದತೆ ನಡೆಸಲಾಗಿದೆ.

ಇನ್ನೊಂದು ವಾರದಲ್ಲಿ ಕಾಲುವೆ ರಿಪೇರಿ ಕಾಮಗಾರಿ ಪೂರ್ಣಗೊಳಿಸಲಾಗುವುದು. ಕಾಲುವೆ ಅಧುನಿಕರಣಕ್ಕೆ 450 ಕೋಟಿ ರೂಪಾಯಿ ಯೋಜನೆ ಇದೆ. ಈಗ 250 ಕೋಟಿ ರೂಪಾಯಿ ಯೋಜನೆಗೆ ಟೆಂಡರ್ ಕರೆಯಲಾಗುತ್ತಿದೆ. ಕಾಲುವೆ ಅಧುನಿಕರಣಕ್ಕಾಗಿ ಈ ಭಾಗದ ಜನಪ್ರತಿನಿಧಿಗಳು ಸಿಎಂ ಭೇಟಿಯಾಗಲಿವೆ. ಕಾಲುವೆ ಒಡೆದು ಹಾಳಾಗಿರುವ ಕೃಷಿ ಭೂಮಿಗೆ ಪರಿಹಾರ ನೀಡಲು ಸಮಿಕ್ಷೆ ನಡೆಸಲಾಗುತ್ತಿದ್ದು, ನಿಯಮದಲ್ಲಿ ಪರಿಹಾರ ನೀಡಲಾಗುವುದು ಎಂದು ಹೇಳಿದರು.